Advertisement

ಈಗ್ಲೋ ಆಗ್ಲೋ ಬೀಳುವಂತಿದೆ ಮಾದರಿ ಶಾಲೆ

05:34 PM Jun 02, 2018 | Team Udayavani |

ಕಡೂರು: 125 ವರ್ಷಗಳ ಹಿಂದೆ ಸ್ಥಾಪನೆಯಾದ ಪಟ್ಟಣದ ಶಾಸಕರ ಮಾದರಿ ಕನ್ನಡ ಶಾಲೆಯೊಂದು ಕೊಠಡಿ ಕೊರತೆ ಹಾಗೂ ನೂತನ ಕಟ್ಟಡದ ಅಪೂರ್ಣ ಕಾಮಗಾರಿಯಿಂದಾಗಿ ಮಕ್ಕಳ ಭವಿಷ್ಯಕ್ಕೆ ಸಮಸ್ಯೆಯಾಗಿದೆ.

Advertisement

ಕಡೂರಿನ ಹೃದಯಭಾಗದಲ್ಲಿರುವ ಶಾಸಕರ ಮಾದರಿ ಹಿರಿಯ ಪ್ರಾಥಮಿಕ ಶಾಲೆಯ ಪರಿಸ್ಥಿತಿಯಿದು. ಪಟ್ಟಣದ ಬಿಇಒ ಕಚೇರಿ ಬಳಿಯಿರುವ ಈ ಶಾಲೆ ಸ್ಥಾಪನೆಯಾಗಿದ್ದು, 1893 ರಲ್ಲಿ. ಈ ಶಾಲೆಯಲ್ಲಿ ಮೊದಲಿದ್ದುದು 5 ರಿಂದ 7 ನೇ ತರಗತಿಗಳು ಮಾತ್ರ. ನಂತರ 1 ನೇ ತರಗತಿಯೂ ಆರಂಭವಾಗಿದೆ. ಕೇವಲ ಬಾಲಕರಿಗಾಗಿದ್ದ ಶಾಲೆಯಲ್ಲಿ ಹೆಣ್ಣುಮಕ್ಕಳೂ ಇದೀಗ ಓದುತ್ತಿದ್ದಾರೆ. ಸುಮಾರು 175 ಕ್ಕೂ ಹೆಚ್ಚಿನ ಮಕ್ಕಳು ಇಲ್ಲಿ ವ್ಯಾಸಂಗ ಮಾಡುತ್ತಿದ್ದಾರೆ.

ಇದೇ ಶಾಲೆಯಲ್ಲಿ ಭಾರತದ ಸರ್ವೋಚ್ಚ ನ್ಯಾಯಾಲಯದ ನಿವೃತ್ತ ಮುಖ್ಯ ನ್ಯಾಯಮೂರ್ತಿ ಎಚ್‌.ಎಲ್‌.ದತ್ತು, ಕಡೂರು ಶಾಸಕರಾಗಿದ್ದ ಕೆ.ಎಂ.ಕೃಷ್ಣಮೂರ್ತಿ ಮುಂತಾದವರು ವಿದ್ಯಾಭ್ಯಾಸ ಮಾಡಿದ್ದಾರೆ. ಇಲ್ಲಿ ಓದಿದ ಅನೇಕರು
ಇಂದು ಉನ್ನತ ಹುದ್ದೆಗಳಲ್ಲಿ, ವ್ಯಾಪಾರ ವಹಿವಾಟುಗಳಲ್ಲಿ ತೊಡಗಿಸಿಕೊಂಡಿದ್ದಾರೆ. 

ಈ ಶಾಲೆಯ ಪುನರುತ್ಥಾನಕ್ಕೆ ಹಿಂದಿನ ಶಾಸಕ ವೈ.ಎಸ್‌.ವಿ ದತ್ತ ಅಸಕ್ತಿ ತೋರಿದ ಫಲವಾಗಿ ಆಗ ಶಿಕ್ಷಣ ಸಚಿವರಾಗಿದ್ದ ಕಿಮ್ಮನೆ ರತ್ನಾಕರ ಅವರು ಈ ಶಾಲೆಗೆ ಭೇಟಿ ನೀಡಿ ಸಚಿವರ ವಿಶೇಷ ಅನುದಾನದಡಿಯಲ್ಲಿ 75 ಲಕ್ಷ ರೂ.  ಗಳನ್ನು ಸ್ಥಳದಲ್ಲಿಯೇ ಮಂಜೂರು ಮಾಡಿದ್ದರು. (2014-15) ಈ ಶಾಲೆಗೆ ಹೊಸ ಸುಸಜ್ಜಿತ ಕಟ್ಟಡ ಮಾಡಲು ನೀಲನಕ್ಷೆ ತಯಾರಾಯಿತು. ಮೊದಲ ಕಂತು 25 ಲಕ್ಷ ಬಿಡುಗಡೆಯಾಗಿ ಅದರಲ್ಲಿ ನೂತನ ಕಟ್ಟಡದ ತಳಪಾಯ ನಿರ್ಮಾಣವಾಯಿತು.
 
ಚಿಕ್ಕಮಗಳೂರಿನ ನಿರ್ಮಿತಿ ಕೇಂದ್ರ ಈ ಕಟ್ಟಡದ ನಿರ್ಮಾಣದ ಜವಾಬ್ದಾರಿ ಹೊತ್ತಿದೆ. ನಂತರ 10 ಕೊಠಡಿಗಳ ಎರಡು ಅಂತಸ್ತಿನ ಕಟ್ಟಡ ತಲೆಯೆತ್ತಿತು. ಆ ನಂತರ ಕಾಮಗಾರಿ ಸಂಪೂರ್ಣ ಸ್ಥಗಿತವಾಯಿತು.

ಪೂರ್ಣಗೊಂಡ ಕಟ್ಟಡಕ್ಕೆ ಗಿಲಾಯಿ ಮಾಡಲಿಲ್ಲ. ಕಿಟಕಿ, ಬಾಗಿಲುಗಳು ಅಳವಡಿಕೆಯಾಗಲಿಲ್ಲ. ಕಾರ್ಯ ಸ್ಥಗಿತಗೊಂಡು 10 ತಿಂಗಳೇ ಕಳೆದಿದೆ. ಶಾಲೆಯ ಮುಖ್ಯೋಪಾದ್ಯಾಯರು ಈ ವಿಚಾರವಾಗಿ ನಿರ್ಮಿತಿ ಕೇಂದ್ರಕ್ಕೆ ಪತ್ರ ಬರೆದಿದ್ದಾರೆ. ಜಿಲ್ಲಾಧಿ ಕಾರಿಗಳ ಗಮನಕ್ಕೂ ತಂದಿದ್ದಾರೆ. ಆದರೂ ಕಟ್ಟಡದ ಕಾಮಗಾರಿ ಮಾತ್ರ ಆರಂಭವಾಗಿಲ್ಲ. ಸರಿಯಾದ ಸಮಯದಲ್ಲಿ ಕಾಮಗಾರಿ ಮುಗಿದಿದ್ದರೆ ಇಷ್ಟು ಹೊತ್ತಿಗೆ ಹೊಸ ಕಟ್ಟಡದಲ್ಲಿ ಶಾ ಲೆ ಕಂಗೊಳಿಸಬೇಕಿತ್ತು. ಆದರೆಹೊಸ ಕಟ್ಟಡ ಎದ್ದು ನಿಂತಿದ್ದರೂ ಅದನ್ನು ಬಳಸಲಾಗದೆ ಹಳೇ ಕಟ್ಟಡದಲ್ಲಿಯೇ ಶಾಲೆ ನಡೆಯುತ್ತಿದೆ. ಕಟ್ಟಡ ಸಂಪೂರ್ಣ ಶಿಥಿಲವಾಗಿದ್ದು, ಅಪಾಯದ ಪರಿಸ್ಥಿತಿಯಿದೆ. ಇದರ ಬಗ್ಗೆ ಪಾಲಕರು ಅಸಮಾಧಾನ ವ್ಯಕ್ತಪಡಿಸುತ್ತಾರೆ.

Advertisement

ಒಟ್ಟಾರೆಯಾಗಿ ತಾಲೂಕಿಗೆ ಒಂದೇ ಶಾಸಕರ ಮಾದರಿ ಶಾಲೆಯಾಗಿರುವ ಈ ಶಾಲೆಯ ಕಟ್ಟಡ ಕಾಮಗಾರಿಯನ್ನು ಶೀಘ್ರ ಮುಗಿಸಿಕೊಡಬೇಕೆಂಬುದು ಸಾರ್ವಜನಿಕರ ಒತ್ತಾಯವಾಗಿದೆ. ಶಾಲೆಯ ನಿವೇಶನದ ವಿಸೀ¤ರ್ಣ 180 ಮೀಟರ್‌ ಉದ್ದ ಮತ್ತು 90 ಮೀಟರ್‌ ಅಗಲವಿದೆ. ಇದೇ ಶಾಲೆಯ ಆವರಣದಲ್ಲಿ ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಚೇರಿ, ಹಿಂದುಳಿದ ವರ್ಗಗಳ ಮತ್ತು ಸಮಾಜ ಕಲ್ಯಾಣ ಇಲಾಖೆಯ ಹಾಸ್ಟೆಲ್‌, ಸಮೂಹ ಸಂಪನ್ಮೂಲ ಕೇಂದ್ರ, ನಿವೃತ್ತ ನೌಕರರ ಸಂಘದ ಕಟ್ಟಡಗಳಿವೆ. ಇದೇ ಆವರಣದಲ್ಲಿ ಸಾರ್ವಜನಿಕ ಗಣಪತಿ ಪೆಂಡಾಲ್‌ ಕಟ್ಟಡವೂ ಇದೆ. ಗಣಪತಿ ಸಮಿತಿಯವರಿಗೆ ಬರುವ ಬಾಡಿಗೆಯ ಹಣದಲ್ಲಿ ಈ ಶಾಲೆಗೆ ಆಂಚು, ಕಟ್ಟಡ.ಕೊಠಡಿ ನಿರ್ಮಿಸಲು ಸಹಕಾರ ನೀಡಬಹುದಿತ್ತು ಎಂದು ಸಾರ್ವಜನಿಕರು ಒತ್ತಾಯ ಮಾಡಿದ್ದಾರೆ ಶಾಲೆಗೆ ಅನುದಾನ ಬಂದಿರುವುದು ಕಟ್ಟಡ
ಕಟ್ಟಲು ಬಳಕೆ ಮಾಡಿರುವುದು ಎಲ್ಲಾ ಶಾಲಾಭಿವೃದ್ಧಿ ಸಮಿತಿಯವರು ಮತ್ತು ಮುಖ್ಯ ಶಿಕ್ಷಕರು. ಇದರ ಬಗ್ಗೆ ನನಗೆ ಹೆಚ್ಚಿನ ಮಾಹಿತಿ ಇಲ್ಲ. ಕಟ್ಟಡ ನಿರ್ಮಾಣದ ಏಜೆಂಟರು ಯಾರೆಂಬುದು ಸಹ ನಮಗೆ ಮಾಹಿತಿ ಇಲ್ಲ. ಮುಖ್ಯ ಶಿಕ್ಷಕರ ಬಳಿ ಎಲ್ಲಾ ಮಾಹಿತಿ ಇದ್ದು ಕೂಡಲೇ ಅವರನ್ನು ಸಂಪರ್ಕಿಸಿ ಕಟ್ಟಡದ ಕಾಮಗಾರಿಯ ಬೇಗ ಮುಗಿಸಿ ಮಕ್ಕಳಿಗೆ ಕಟ್ಟಡ ನೀಡಲು ಸೂಚಿಸುತ್ತೇನೆ ಸತ್ಯನಾರಾಯಣ, ಕ್ಷೇತ್ರಶಿಕ್ಷಣಾಧಿಕಾರಿ

ಶಿಕ್ಷಣ ಸಚಿವರ ವಿಶೇಷ ಅನುದಾನದಿಂದ ಹೊಸಕಟ್ಟಡ ನಿರ್ಮಾಣವಾಗುತ್ತಿದೆ. ಪೂರ್ಣಗೊಂಡ ನಂತರ
ಶಾಲೆಯ ಶತಮಾನೋತ್ಸವವನ್ನು ಹಳೆಯ ವಿದ್ಯಾರ್ಥಿಗಳನ್ನು ಒಗ್ಗೂಡಿಸಿಕೊಂಡು ಶಾಸಕರ ಮುಂದಾಳತ್ವದಲ್ಲಿ ಆಚರಿಸುವ ಉದ್ದೇಶವಿದೆ
ಚಂದ್ರಶೇಖರ್‌, ಮುಖ್ಯೋಪಾದ್ಯಾಯರು.

ಈ ಶಾಲೆಯ ಹೊಸಕಟ್ಟಡ ನಿರ್ಮಾಣ ಕಾಮಗಾರಿ ಕೆಲಸ ಸ್ವಲ್ಪ ಬಾಕಿ ಉಳಿದಿದ್ದು,ಅನುದಾನದ ಕೊರತೆಯಿಂದ ನಿಂತಿತ್ತಾದರೂ ಇದೀಗ ಅನುದಾನ ಬಂದಿರುವುದರಿಂದ ಶೀಘ್ರವೇ ಕೆಲಸ ಆರಂಭಿಸಲಿದ್ದೇವೆ. ಇನ್ನು ಎರಡು ತಿಂಗಳಲ್ಲಿ
ಮುಗಿಯಲಿದೆ  
ಗಂಗಾಧರ್‌, ನಿರ್ಮಿತಿ ಕೇಂದ್ರದ ಇಂಜಿನಿಯರ್‌

ಶಾಲೆಯು ನೂರಾರು ವರ್ಷಗಳಿಂದ ಉತ್ತಮವಾಗಿ ನಡೆಯುತ್ತಿದ್ದು, ಇದೀಗ ಕೊಠಡಿಗಳು ಶಿಥಿಲವಾಗಿ ಮಕ್ಕಳು ಮಳೆ ಬಂದರೆ ಭಯದಲ್ಲಿರುತ್ತಾರೆ ಅಧಿಕಾರಿಗಳು ಕೂಡಲೇ ಎಚ್ಚೆತ್ತುಕೊಂಡು ನೂತನ ಕಟ್ಟಡಕ್ಕೆ ಶಾಲೆಯನ್ನು ವರ್ಗಾವಣೆ ಮಾಡಲಿ 
ರಾಧಿಕಾ,ಪೋಷಕರು

ಎ.ಜೆ. ಪ್ರಕಾಶಮೂರ್ತಿ

Advertisement

Udayavani is now on Telegram. Click here to join our channel and stay updated with the latest news.

Next