Advertisement

ಕನ್ನಡ ಬಳಕೆ ಸಮರ್ಥವಾಗಿ ಅನುಷ್ಠಾನ: ಡಿಸಿಎಂ

12:58 PM Nov 02, 2020 | Suhan S |

ರಾಮನಗರ: ರಾಜ್ಯದಲ್ಲಿ ಕನ್ನಡಕ್ಕೆ ಆದ್ಯತೆ ಕೊಡಲಾಗಿದ್ದು, ಶಿಶು ವಿಹಾರಗಳಲ್ಲಿ ಕಡ್ಡಾಯವಾಗಿ ಕನ್ನಡ ಭಾಷೆ ಕಲಿಸಬೇಕಾಗಿದೆ. ಇದು ಸರ್ಕಾರದ ನಿರ್ಧಾರ ಎಂದು ಡಿಸಿಎಂ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಡಾ.ಸಿ.ಎನ್‌. ಅಶ್ವತ್ಥನಾರಾಯಣ ಹೇಳಿದರು.

Advertisement

ನಗರದ ಜಿಲ್ಲಾ ಕ್ರೀಡಾಂಗಣದಲ್ಲಿ ಜಿಲ್ಲಾಡಳಿತ ಹಮ್ಮಿಕೊಂಡಿದ್ದ 65 ನೇ ಕರ್ನಾಟಕ ರಾಜ್ಯೋತ್ಸವ ಕಾರ್ಯಕ್ರಮದಲ್ಲಿ ಧ್ವಜಾರೋಹಣ ನೆರವೇರಿಸಿ ಮಾತನಾಡಿದರು. ರಾಷ್ಟ್ರೀಯ ಶಿಕ್ಷಣ ನೀತಿಯಲ್ಲಿ ಮಕ್ಕಳಿಗೆ ಮೂರು ಭಾಷೆಯ ಕಲಿಕೆ ಇರಬೇಕಿದೆ. 3 ರಿಂದ 6 ವಯೋಮಾನದ ಮಕ್ಕಳಲ್ಲಿ 15 ಭಾಷೆಗಳನ್ನು ಕಲಿಯುವ ಸಾಮಾರ್ಥ್ಯವಿರುತ್ತದೆ. ಹೀಗಾಗಿ ಮೂರು ಭಾಷಾ ಕಲಿಕೆ ಒತ್ತಡ ಇರಲಾರದು. ಶಿಶುವಿಹಾರಗಳಿಂದಲೇ ಕನ್ನಡ ಭಾಷಾ ಕಲಿಕೆ ಕಡ್ಡಾಯ ಮಾಡಲಾಗಿದೆ. ರಾಜ್ಯದಲ್ಲಿ ಕನ್ನಡ ಭಾಷಾ ಬಳಕೆಯನ್ನು ಸಮರ್ಥವಾಗಿ ಅನುಷ್ಠಾನ ಮಾಡಲಾಗುವುದು ಎಂದರು.

ತಂತ್ರಜ್ಞಾನದ ಬಳಕೆ: ಕನ್ನಡಿಗೇತರಿಗೆ ಕನ್ನಡ ಭಾಷೆಯನ್ನು ತಂತ್ರಜ್ಞಾನದ ಮೂಲಕ ಕಲಿಸುವ ನಿಟ್ಟಿನಲ್ಲಿ ಸರ್ಕಾರ ಮುಂದಾಗಿದೆ. ಭಾಷಾಂತರ ಹಾಗೂ ಹಲವಾರು ಭಾಷೆಗಳ ಕಲಿಕೆಗೆ ಈಗಾಗಲೆ ತಂತ್ರಜ್ಞಾನ ಬಳಕೆಯಲ್ಲಿದೆ. ತಂತ್ರಜ್ಞಾನದ ಮೂಲಕ ಭಾಷಾ ಕಲಿಕೆ ಸುಲಭವಾಗಿದೆ ಹೀಗಾಗಿ ಈ ಪ್ರಯತ್ನ ಎಂದು ಡಿಸಿಎಂ ಡಾ.ಸಿ.ಎನ್‌.ಅಶ್ವಥನಾರಾಯಣ ಹೇಳಿದರು.

ಹೋರಾಟಗಾರರನ್ನು ಸ್ಮರಿಸೋಣ : ಏಕೀಕರಣಕ್ಕೆ ಹಲವಾರು ಮಹಾನ್‌ ಲೇಖಕರು, ಸಂಘ, ಸಂಸ್ಥೆಗಳು, ಪತ್ರಕರ್ತರು ಹಾಗೂ ಹೋರಾಟಗಾರರು ಶ್ರಮಿಸಿದ್ದಾರೆ. ಕನ್ನಡ ನಾಡು, ನುಡಿ, ಭಾಷೆ ಹಾಗೂ ಸಂಸ್ಕೃತಿ ಯನ್ನು ಉಳಿಸಿ ಬೆಳೆಸುವ ಜವಾಬ್ದಾರಿ ಎಲ್ಲರ ಮೇಲಿದೆ. ಏಕೀಕರಣಕ್ಕೆ ಹೋರಾಡಿದ ಆಲೂರು ವೆಂಕಟರಾಯರು, ಆಚಾರ್ಯ ಬಿ.ಎಂ.ಶ್ರೀಕಂಠಯ್ಯ, ಅ.ನ. ಕೃಷ್ಣರಾಯರು, ಮಂಗಳವೇಡೆ ಶ್ರೀನಿವಾಸರಾಯರು, ಎಸ್‌. ನಿಜಲಿಂಗಪ್ಪ, ಕೆ.ಎಸ್‌. ಪಾಟೀಲ, ಗೋರೂರು ರಾಮಸ್ವಾಮಿ ಅಯ್ಯಂಗಾರ, ಕಡಿದಾಳ ಮಂಜಪ್ಪ, ಕೆಂಗಲ್‌ ಹನುಮಂತಯ್ಯ, ಎಚ್‌.ಎಸ್‌. ದೊರೆಸ್ವಾಮಿ, ಪಾಟೀಲ ಪುಟ್ಟಪ್ಪ ಸೇರಿದಂತೆ ಹಲವು ಮಹನೀಯರು ಸ್ಮರಣೀಯರು ಎಂದರು.

ಕರ್ನಾಟಕವೆಂಬುದು ಕೇವಲ ಒಂದು ಭೂ ಪ್ರದೇಶಕ್ಕೆ ಸೀಮಿತವಲ್ಲ. ತನ್ನ ಭೌಗೋಳಿಕ ನೆಲೆ ಮತ್ತು ಶ್ರೀಮಂತ ಪರಂಪರೆಯಿಂದಾಗಿ ದೇಶದಲ್ಲಿ ಹೆಮ್ಮೆಯ ಸ್ಥಾನವನ್ನು ರಾಜ್ಯ ಹೊಂದಿದೆ. ಕರ್ನಾಟಕವೆಂದರೆ ಒಂದು ಸಂಸ್ಕೃತಿ, ಒಂದು ಜೀವನ ಪದ್ಧತಿ ಎಂದರು. ಆರಕ್ಷಕ ತಂಡಗಳು, ಗೃಹ ರಕ್ಷಕ ದಳದ ಸಿಬ್ಬಂದಿಯಿಂದ ಪಥ ಸಂಚಲನ ನಡಯಿತು. ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆಯಲಿಲ್ಲ. ಈ ಬಾರಿ ಜಿಲ್ಲಾಡಳಿತದ ವತಿಯಿಂದ ಯಾರಿಗೂ ಪ್ರಶಸ್ತಿ ನೀಡಲಿಲ್ಲ.

Advertisement

ಜಿಲ್ಲಾಧಿಕಾರಿ ಎಂ.ಎಸ್‌.ಅರ್ಚನಾ, ಎಸ್ಪಿ ಗಿರೀಶ್‌, ರಾಮನಗರ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಮುರುಳೀಧರ್‌, ಜಿಲ್ಲಾ ಬಿಜೆಪಿ ಅಧ್ಯಕ್ಷ ಹುಲುವಾಡಿ ದೇವರಾಜ್‌ ಉಪಸ್ಥಿತರಿದ್ದರು.

ಕರ್ನಾಟಕ ಏಕೀಕರಣದ ಹೋರಾಟಗಾರರನ್ನು ಸ್ಮರಿಸೋಣ :

ಮಾಗಡಿ: ಕರ್ನಾಟಕದ ಏಕೀಕರಣಕ್ಕಾಗಿ ಹೋರಾಡಿದ ಮಹನೀಯರ ಸ್ಮರಣೆ ಮಾಡುವುದು ನಮ್ಮೆಲ್ಲರ ಆದ್ಯ ಕರ್ತವ್ಯ ವಾಗಬೇಕು ಎಂದು ಮಾನಸ ಪೂರ್ವ ಪ್ರಾಥಮಿಕ ಮತ್ತು ಶ್ರೀವಿದ್ಯಾನಿಧಿ ಪ್ರಾಥಮಿಕ ಹಾಗೂ ಕೆಂಪೇಗೌಡ ಪ್ರೌಢ ಶಾಲಾ ಪ್ರಾಂಶುಪಾಲ ಆರ್‌.ಶ್ರೀನಿವಾಸ್‌ ತಿಳಿಸಿದರು.

ಪಟ್ಟಣದಲ್ಲಿ ಒಕ್ಕಲಿಗರ ಸಂಘದ ವತಿಯಿಂದ ನಡೆಯುತ್ತಿರುವ ಮಾನಸ ಪೂರ್ವ ಪ್ರಾಥಮಿಕ ಮತ್ತು ಶ್ರೀವಿದ್ಯಾನಿಧಿ ಪ್ರಾಥಮಿಕ ಕೆಂಪೇಗೌಡ ಪ್ರೌಢ ಶಾಲೆಯಲ್ಲಿಏರ್ಪಡಿಸಿದ್ದ 65 ನೇ ಕರ್ನಾಟಕ ರಾಜ್ಯೋತ್ಸವದಲ್ಲಿ ಭುವನೇಶ್ವರಿಗೆ ಪುಷ್ಪ ನಮನ ಸಲ್ಲಿಸಿ ಮಾತನಾಡಿದರು.

ಸಂಗೊಳ್ಳಿ ರಾಯಣ್ಣ, ಕಿತ್ತೂರು ರಾಣಿ ಚೆನ್ನಮ್ಮ, ಆಲೂರು ವೆಂಕಟರಾಯ ಸೇರಿದಂತೆ ಅನೇಕರ ಹೋರಾಟದ ಫ‌ಲವೇ ಅಖಂಡ ಕರ್ನಾಟಕವಾಯಿತು. ಆದರೂ ಹಿಪ್ಪಾಣಿ, ಕಾಸರಗೋಡು ಪ್ರಾಂತ್ಯ ಕರ್ನಾಟಕಕ್ಕೆ ಸೇರಲಿಲ್ಲ. ಅಲ್ಲಿನ ಕನ್ನಡಿಗರೂ ಇಂದಿಗೂ ನೂರಾರು ಸಮಸ್ಯೆಗಳನ್ನು ಎದುರಿಸುತ್ತಿದ್ದಾರೆ ಎಂದು ತಿಳಿಸಿದರು.

ಪೋಷಕ ಬೋಧಕ ಸಮಿತಿ ಅಧ್ಯಕ್ಷ ಟಿ.ಎಂ.ಶ್ರೀನಿವಾಸ್‌ ಮಾತನಾಡಿ, ಅತ್ಯಂತ ಪ್ರಾಚೀನವಾದ ಕನ್ನಡ ಕನ್ನಡ ಭಾಷೆಗೆ ತನ್ನದೇ ಆದ ಇತಿಹಾಸವಿದೆ. ಕರ್ನಾಟಕ ಕಲೆ, ಸಾಹಿತ್ಯ ಸಂಗೀತ, ಸಂಸ್ಕೃತಿಗೆ ಹೆಸರಾಗಿದೆ. ಕನ್ನಡಿಗರಲ್ಲಿ ಸ್ವಾಭಿಮಾನದ ಕಿಚ್ಚಿದೆ. ಹರಿದು ಹಂಚಿ ಹೋಗಿದ್ದ ಕನ್ನಡ ನಾಡನ್ನು ಕಟ್ಟಿದ ಕವಿ ಪುಂಗವರ ಸ್ಮರಣೆ ಮಾಡಬೇಕು. ಕೇವಲ ನವೆಂಬರ್‌ ಉತ್ಸವವಾಗದೆ ನಿತ್ಯೋತ್ಸವವಾಗಿ ಮೊಳಗಬೇಕಿದೆ. ಸರ್ವಜನಾಂಗದ ತೋಟದಲ್ಲಿ ಕನ್ನಡಿಗರು ಆಗ್ರಸ್ಥಾನದಲ್ಲಿರಬೇಕು ಎಂದು ತಿಳಿಸಿದರು.

ಉಪಪ್ರಾಂಶುಪಾಲ ಅರ್ಜುನ್‌, ಶಿಕ್ಷಕಿ ಧನಲಕ್ಷ್ಮೀ, ಶಿಕ್ಷಕರಾದ ಬಿ.ಎನ್‌.ನಾಗರಾಜು, ಶ್ರೀನಿವಾಸ್‌, ದಾಕ್ಷಾಯಿಣಿ, ಜಗದಾಂಬ, ಕೋಮಲಾ, ಚೈತ್ರ, ರಂಜಿತಾ, ಶೃತಿ, ಶೈಲಜಾ, ಕುಮಾರ್‌, ವೆಂಕಟೇಶ್‌, ರೇಣುಕಪ್ಪ, ಪ್ರವೀಣ್‌, ಗಾಯಿತ್ರಿದೇವಿ, ಅಲೀಂ ಉಲ್ಲಾ ಬೇಗ್‌, ಲೋಕೇಶ್‌, ಶಿವಯೋಗಿ, ರಶ್ಮಿ, ಲತಾ, ತಿಮ್ಮಮ್ಮ, ಸುಧಾ, ಅರಸನಾಳ್‌, ರಂಗೇಗೌಡ, ಚಂದ್ರಕಲಾ, ಸುಭ್ರಮಣ್ಯ, ಮಂಜುಳಾ, ಉಷಾ, ಮಾನಸಾ ಜಯಶ್ರೀ, ಎಚ್‌.ಕುಮಾರ್‌, ರಂಗೇಗೌಡ ಇದ್ದರು.

Advertisement

Udayavani is now on Telegram. Click here to join our channel and stay updated with the latest news.

Next