Advertisement

ಶೈಕ್ಷಣಿಕ ಪ್ರಗತಿಗೆ ಪೂರಕವಾದ ಅನ್ವೇಷಣೆ ಹೆಚ್ಚಾಗಲಿ

04:49 PM Oct 10, 2021 | Team Udayavani |

ತುಮಕೂರು: ಶೈಕ್ಷಣಿಕ ಪ್ರಗತಿಗೆ ಪೂರಕವಾದ ಹೊಸ ಅನ್ವೇಷಣೆಗಳು ಹೆಚ್ಚಾಗಬೇಕು ಎಂದು ಪ್ರಾಥಮಿಕ ಮತ್ತು ಪ್ರೌಢ ಶಾಲಾ ಸಚಿವ ಬಿ.ಸಿ. ನಾಗೇಶ್‌ ಅಭಿಪ್ರಾಯಪಟ್ಟರು. ಜಿಲ್ಲಾಡಳಿತ, ಜಿಪಂ, ಸಾರ್ವಜನಿಕ ಶಿಕ್ಷಣ ಇಲಾಖೆ, ಜಿಲ್ಲಾ ಮತ್ತು ತರಬೇತಿ ಸಂಸ್ಥೆ, ಕೇರಿಂಗ್‌ ವಿತ್‌ ಕಲರ್‌, ಇಂಡಿಯಾ ಲಿಟರಸಿ ಪ್ರಾಜೆಕ್ಟ್, ಮಂತ್ರ ಫಾರ್‌ ಚೇಂಜ್‌ ಸಹಯೋಗದೊಂದಿಗೆ ನಗರದ ಜಿಪಂ ಸಭಾಂಗಣದಲ್ಲಿ ನಡೆದ್ದ ಶೈಕ್ಷಣಿಕ ಸಂಪನ್ಮೂಲಗಳ ಲೋಕಾರ್ಪಣೆ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಅವರು, ಮುಂದಿನ ಮೂರು ವರ್ಷಗಳಲ್ಲಿ ವಿಶೇಷ ದೃಷ್ಟಿಕೋನದಲ್ಲಿ ಜಿಲ್ಲೆಯನ್ನು ಶೈಕ್ಷಣಿಕವಾಗಿ ಅಭಿವೃದ್ಧಿ ಪಡಿಸಲು ಮೂರು ಶೈಕ್ಷಣಿಕ ಸಂಸ್ಥೆಗಳ ನೆರವಿನೊಂದಿಗೆ ಶೈಕ್ಷಣಿಕ ಸಂವರ್ಧನಾ ಕಾರ್ಯಕ್ರಮ ಆಯೋಜಿಸಲಾಗಿದೆ ಎಂದರು.

Advertisement

ಬಹುತೇಕ ಸರ್ಕಾರಿ ಶಾಲೆಗಳು ಅದರಲ್ಲೂ ಶತಮಾನದ ಶಾಲೆಗಳು ಹಳೇ ವಿದ್ಯಾರ್ಥಿಗಳ ನೆರವಿನಿಂದಲೇ ಅಭಿವೃದ್ಧಿಗೊಂಡಿವೆ. ಅಭಿವೃದ್ಧಿಗೊಂಡಿರುವ ಕಟ್ಟಡಗಳು ಹಳೇ ವಿದ್ಯಾರ್ಥಿಗಳ ಉತ್ಸಾಹವನ್ನು ಸಾರಿ ಹೇಳುತ್ತವೆ. ಅಷ್ಟು ಸುಂದರವಾಗಿ ಕಟ್ಟಡಗಳನ್ನು ನಿರ್ಮಾಣ ಮಾಡಿದ್ದಾರೆ. ಈ ತರಹದ ಅಭಿವೃದ್ಧಿಸಾಧನೆಗಳ ಕೆಲಸಗಳು ಸಾಕಷ್ಟು ನಡೆಯುತ್ತಿದ್ದು, ಇಂತಹ ಕೆಲಸಗಳಿಗೆ ಪ್ರೋತ್ಸಾಹ ನೀಡುವ ಕೆಲಸವಾಗಬೇಕು ಎಂದರು.

ಇದನ್ನೂ ಓದಿ:- ಐಸಿಸಿ ಟಿ20 ವಿಶ್ವಕಪ್ ಗೆದ್ದ ತಂಡಕ್ಕೆ ಸಿಗಲಿದೆ ಭಾರೀ ಮೊತ್ತದ ಬಹುಮಾನ

ಬ್ರಿಟಿಷ್‌ ಶಿಕ್ಷಣ ವ್ಯವಸ್ಥೆಗೆ ತಲಾಂಜಲಿ: ಭಾರತದ ವಿಶೇಷ ಗುಣ ಮತ್ತೂಮ್ಮೆ ಆಚೆ ಬರುತ್ತಿದೆ. ಪುರಾತನ ಕಾಲದಲ್ಲಿ ಎಲ್ಲ ಗುರುಕುಲಗಳು ಸ್ವಾವಲಂಬನೆಯಾಗಿ ನಡೆಯುತ್ತಿದ್ದವು. ಬ್ರಿಟಿಷರು ಗುರುಕುಲಗಳನ್ನು ಸ್ಥಗಿತಗೊಳಿಸುವ ನಿಟ್ಟಿನಲ್ಲಿ ಗುರುಕುಲಗಳಿಗೆ ಆರ್ಥಿಕ ಸಂಪನ್ಮೂಲ ಒದಗಿಸಬಾರದು ಎಂದು ಆದೇಶ ಹೊರಡಿಸಿದರು.

ಬ್ರಿಟಿಷರ ಆದೇಶದ ಬಳಿಕವೂ ಗ್ರಾಮಗಳಹಾಗೂ ಸ್ಥಳೀಯ ಸಂಪನ್ಮೂಲಗಳ ನೆರವಿ ನಿಂದ ಗುರುಕುಲಗಳು ನಡೆಯುತ್ತಿದ್ದವು. ಇದನ್ನು ಗಮನಿಸಿದ ಬ್ರಿಟಿಷ್‌ ಆಡಳಿತ ಗುರುಕುಲಗಳನ್ನು ನಿಲ್ಲಿಸಿದರು. ಅಂದಿನಿಂದ ಬ್ರಿಟಿಷ್‌ ಶಿಕ್ಷಣ ವ್ಯವಸ್ಥೆ ಜಾರಿಗೆ ಬಂದಿತ್ತು. ಈ ಬ್ರಿಟಿಷ್‌ ಶಿಕ್ಷಣ ವ್ಯವಸ್ಥೆಗೆ ಹೊಸ ರಾಷ್ಟ್ರೀಯ ಶಿಕ್ಷಣ ನೀತಿ ತಿಲಾಂಜಲಿ ಹಾಡಿದೆ ಎಂದರು.

Advertisement

ವಿಧಾನ ಪರಿಷತ್‌ ಸದಸ್ಯ ಚಿದಾನಂದ್‌ ಗೌಡ ಮಾತನಾಡಿ, ಒಂದೇ ಸೂರಿನಡಿ ಗುಣಾತ್ಮಕ, ಮೌಲ್ಯಾಧಾರಿತ, ಕೌಶಲ್ಯಯುತ ಶಿಕ್ಷಣ ಸಿಗಬೇಕೆಂಬ ಉದ್ದೇಶದಿಂದ ನೂತನ ರಾಷ್ಟ್ರೀಯ ಶಿಕ್ಷಣ ನೀತಿ ಜಾರಿಗೆ ತರಲಾಗಿದೆ. ಈ ಹೊಸ ಶಿಕ್ಷಣ ನೀತಿಯನ್ನು ಎಲ್ಲರೂ ಹೃದಯತುಂಬಿ ಸ್ವಾಗತಿಸಿ, ನೂತನ ಶಿಕ್ಷಣ ನೀತಿಯ ಸಮಗ್ರ ಅನುಷ್ಠಾನಕ್ಕೆ ಕೈಜೋಡಿಸೋಣ ಎಂದರು.

ಕೌಶಲ್ಯಾಧಾರಿತ ಶಿಕ್ಷಣ ಪದ್ಧತಿ: ಶಾಸಕ ಜಿ.ಬಿ. ಜ್ಯೋತಿಗಣೇಶ್‌ ಮಾತನಾಡಿ, ಕೌಶಲ್ಯಾಧಾರಿತ ಶಿಕ್ಷಣ ಪದ್ಧತಿ ಹೊಸ ರಾಷ್ಟ್ರೀಯ ಶಿಕ್ಷಣ ನೀತಿಯ ಆಶಯ ವಾಗಿದೆ. ಶಿಕ್ಷಕರು ಈ ಹೊಸ ಶಿಕ್ಷಣವ್ಯವಸ್ಥೆಗೆ ಒಗ್ಗಿ ಕೊಂಡು ಭೋದನೆಯಲ್ಲ.  ತೊಡಗಬೇಕು. ರಾಷ್ಟ್ರೀಯ ಶಿಕ್ಷಣ ಪದ್ಧತಿಯಿಂದ ಭವಿಷ್ಯದಲ್ಲಿ ಅಂಕಗಳ ಆಧಾರದಲ್ಲಿ ಉದ್ಯೋಗ ನೀಡುವ ವ್ಯವಸ್ಥೆ ಕಣ್ಮರೆಯಾಗಲಿದೆ. ಅಭ್ಯರ್ಥಿಗಳ ಕೌಶಲ್ಯಧಾರಿತವಾಗಿ ಉದ್ಯೋಗ ನೀಡುವ ವ್ಯವಸ್ಥೆ ಬರಲಿದೆ ಎಂದು ಅಭಿಪ್ರಾಯ ಪಟ್ಟರು.

ಡಯಟ್‌ ಸಂಸ್ಥೆಯ ಪ್ರಾಂಶುಪಾಲ ಮಂಜುನಾಥ್‌ ಮಾತನಾಡಿ, ಪ್ರಾಥಮಿಕ ಮತ್ತು ಪ್ರೌಢ ಶಾಲೆ ವಿದ್ಯಾರ್ಥಿಗಳ ಶೈಕ್ಷಣಿಕ ಗುಣಮಟ್ಟ ಉತ್ತಮಪಡಿಸಲುಹಾಗೂ ಶಿಕ್ಷಕರ ಮತ್ತು ಶೈಕ್ಷಣಿಕ ಅಧಿಕಾರಿಗಳ ಸಾಮರ್ಥ್ಯವನ್ನು ಅಭಿವೃದ್ಧಿ ಪಡಿಸುವ ಮೂಲಕ ಜಿಲ್ಲೆಯ ಶೈಕ್ಷಣಿಕ ಪ್ರಗತಿಯಲ್ಲಿ ಬದಲಾವಣೆ ತರುವನಿಟ್ಟಿನಲ್ಲಿ ಸ್ವಯಂ ಸೇವಾ ಸಂಸ್ಥೆಗಳೊಂದಿಗೆ ಮೂರು ವರ್ಷಗಳ ಅವಧಿಗೆ ಜಿಲ್ಲಾ ಶೈಕ್ಷಣಿಕ ಸಂವರ್ಧನಾ ಕಾರ್ಯಕ್ರಮ ಅನುಷ್ಠಾನಗೊಳಿಸಲು ನಾಲ್ಕು ಸಂಸ್ಥೆಗಳೊಂದಿಗೆ ಒಡಂಬಡಿಕೆ ಮಾಡಿಕೊಳ್ಳಲಾಗಿದೆ.

ಈಕಾರ್ಯಕ್ರಮ ರಾಜ್ಯದಲ್ಲಿ ಇದೇ ಪ್ರಥಮ ಪ್ರಯತ್ನವಾಗಿದೆ ಎಂದರು. ಕೇರಿಂಗ್‌ ವಿತ್‌ ಕಲರ್‌ ಸಂಸ್ಥೆಯ ರಾಜೀವ್‌ ಅಲನೂರ್‌ ಮಾತನಾಡಿ, ಶೈಕ್ಷಣಿಕಾ ಸಂವರ್ಧನಾ ಕಾರ್ಯಕ್ರಮದಿಂದ ಉತ್ತಮ ಭೋದನೆ, ತರಬೇತಿನೀಡುವ ಮೂಲಕ ವಿದ್ಯಾರ್ಥಿಗಳನ್ನು ಶೈಕ್ಷಣಿಕವಾಗಿ ಬಲವರ್ಧನೆಗೊಳಿಸಿ ಅನುಭವಾತ್ಮಕ ಕಲಿಕಾ ವಾತಾರವಣ ನಿರ್ಮಿಸಲಾಗುವುದು ಎಂದರು.

ಓದುವ ಹವ್ಯಾಸ ಬೆಳೆಸಲು ಸಹಕಾರಿ: ಇಂಡಿಯಾ ಲಿಟರಸಿ ಪ್ರಾಜೆಕ್ಟ್‌ನ ಪ್ರಮೋದ್‌ ಶ್ರೀಧರ್‌ ಮೂರ್ತಿ ಮಾತನಾಡಿ, ಮಕ್ಕಳಲ್ಲಿ ಓದುವ ಹವ್ಯಾಸ ಬೆಳೆಸಲು ಈ ಕಾರ್ಯಕ್ರಮ ರೂಪಿಸಲಾಗಿದೆ. ಹತ್ತನೇ ತರಗತಿಯ ನಂತರದ ವಿದ್ಯಾರ್ಥಿಗಳ ಶೈಕ್ಷಣಿಕ ಭವಿಷ್ಯದ ಬಗ್ಗೆ ಮಾರ್ಗದರ್ಶನ ನೀಡಲಾಗುವುದು ಎಂದರು. ಮಂತ್ರ ಫಾರ್‌ ಚೇಂಜ್‌ನ ರಫಿಕ್, ಐಐಎಂಬಿ ಸಂಸ್ಥೆಯ ಪ್ರೊ. ಗೋಪಾಲನಾಯ್ಕ ಮಾತನಾಡಿದರು.

ಸಾರ್ವಜನಿಕ ಶಿಕ್ಷಣ ಇಲಾಖೆ ಉಪ ನಿರ್ದೇಶಕ ಸಿ. ನಂಜಯ್ಯ, ಜಿಲ್ಲಾಧಿಕಾರಿ ವೈ.ಎಸ್‌. ಪಾಟೀಲ್‌, ಜಿಪಂ ಸಿಇಒ ಡಾ.ಕೆ. ವಿದ್ಯಾ ಕುಮಾರಿ, ಶಿಕ್ಷಣ ಅಧಿಕಾರಿ ರಂಗದಾಸಪ್ಪ, ಕ್ಷೇತ್ರ ಶಿಕ್ಷಣಾಧಿಕಾರಿಗಳು, ಸಿಆರ್‌ಸಿ, ಬಿಆರ್‌ಸಿ ಮತ್ತಿತರರು ಇದ್ದರು.ಶಿಕ್ಷಕರ ತರಬೇತಿ ನಿರ್ವಹಣೆ ಹಾಗೂ ಕಲಿಕೆಯನ್ನು ಉತ್ತೇಜಿಸಲು ಟೀಚೋಪಿಯಾ ಆ್ಯಪ್‌ ಬಿಡುಗಡೆಗೊಳಿಸಿ, 1000 ಶಾಲೆಗಳಿಗೆ ವಿಜ್ಞಾನ ಪ್ರಯೋಗದ ಕಿಟ್‌ ವಿತರಣೆ ಮಾಡಲಾಯಿತು. ಶಿಕ್ಷಣ ತಜ್ಞ ಗುರುರಾಜ್‌ ಕರಜಗಿ ಅವರಿಂದ ಹೊಸ ಶಿಕ್ಷಣ ನೀತಿ ಬಗ್ಗೆ ಉಪನ್ಯಾಸ ನೀಡಿದರು.

ಶಿಕ್ಷಕರ ವರ್ಗಾವಣೆಗೆ ನ್ಯಾಯಾಲಯದ ಆದೇಶ ತಡೆ_

ಪ್ರಾಥಮಿಕ ಹಾಗೂ ಮಾಧ್ಯಮಿಕ ಶಾಲಾ ವಿದ್ಯಾರ್ಥಿಗಳಿಗೆ ಕೌತುಕಗಳ ಬಗ್ಗೆ ತಿಳಿಯಲು ಅನುಕೂಲವಾಗುವ ನಿಟ್ಟಿನಲ್ಲಿ ಸೈನ್ಸ್‌ಕಿಟ್‌ಗಳನ್ನು ವಿತರಿಸುತ್ತಿರುವುದು ಶ್ಲಾಘನೀಯ. ಎಲ್ಲ ಶಿಕ್ಷಕರು ಇದರ ಸದುಪಯೋಗ ಪಡಿಸಿಕೊಳ್ಳಬೇಕು ಎಂದು ಪ್ರಾಥಮಿಕ ಮತ್ತು ಪ್ರೌಢ ಹಾಗೂ ಸಕಾಲ ಸಚಿವ ಬಿ.ಸಿ. ನಾಗೇಶ್‌ ತಿಳಿಸಿದರು.  ನಗರದಲ್ಲಿ ಪತ್ರಕರ್ತರೊಂದಿಗೆ ಮಾತನಾಡಿದ ಅವರು, ಶಿಕ್ಷಕರ ವರ್ಗಾವಣೆ ವಿಚಾರವಾಗಿ ಪ್ರತಿಕ್ರಿಯಿಸಿ, ಸರ್ಕಾರದ ಮಟ್ಟದಲ್ಲಿ ಶಿಕ್ಷಕರ ವರ್ಗಾವಣೆ ಬಗ್ಗೆ ವಿವಿಧ ಹಂತಗಳಲ್ಲಿ

ಸೂಕ್ತ ಕ್ರಮ ಕೈಗೊಳ್ಳಲಾಗಿದೆ. ಈ ವೇಳೆಗೆ ವರ್ಗಾವಣೆ ಪ್ರಕ್ರಿಯೆ ನಡೆಯಬೇಕಿತ್ತು. ಆದರೆ, ನ್ಯಾಯಲಯದಿಂದ ತಡೆ ಆದೇಶ ಇರುವ ಕಾರಣ ವಿಳಂಬವಾಗಿದೆ ಎಂದರು. ರಾಜ್ಯದಲ್ಲಿ 1ರಿಂದ 6ನೇ ತರಗತಿಗಳ ಪ್ರಾರಂಭಕ್ಕೆ ದಸರಾ ನಂತರ ಮುಖ್ಯಮಂತ್ರಿಗಳ ಜೊತೆಗೆ ಚರ್ಚಿಸಿ ಕೋವಿಡ್‌ ಮಾರ್ಗಸೂಚಿಗಳ ಅನುಸಾರ ಶಾಲಾರಂಭಕ್ಕೆ ಕ್ರಮ ಕೈಗೊಳ್ಳಲಾಗುವುದು. ಜಿಲ್ಲೆಯ ಕರಿಕೆರೆಯಲ್ಲಿ ಸ್ವಾತಂತ್ರ್ಯ ದಿನಾಚರಣೆಯಂದು ನಡೆದ ವಿದ್ಯುತ್‌ ಅವಘಡದಿಂದ ಮೃತ ಪಟ್ಟ ಶಾಲಾ ಬಾಲಕನ ಕುಟುಂಬಕ್ಕೆ ಸರ್ಕಾರದಿಂದ 5 ಲಕ್ಷ ರೂ. ಪರಿಹಾರ ಘೋಷಿಸಲಾಗಿದೆ ಎಂದರು.

Advertisement

Udayavani is now on Telegram. Click here to join our channel and stay updated with the latest news.

Next