Advertisement

ಶಿಕ್ಷಣಕ್ಕೆ ನಿಜಾಮರ ಕಾಲದಿಂದಲೂ ಅನುದಾನ

09:56 AM Aug 24, 2017 | Team Udayavani |

ಕಲಬುರಗಿ: ಹೈದ್ರಾಬಾದ ಕರ್ನಾಟಕದಲ್ಲಿ ಹೈದ್ರಾಬಾದ ನಿಜಾಮನ ಕಾಲದಿಂದಲೂ ಖಾಸಗಿ ಶಿಕ್ಷಣ ಸಂಸ್ಥೆಗಳಿಗೆ ಅನುದಾನ ಹಾಗೂ ಶಿಕ್ಷಕರಿಗೆ ವೇತನ ಅನುದಾನ ನೀಡಿರುವ ಇತಿಹಾಸವಿದೆ ಎಂದು ಹಿರಿಯ ಸಾಹಿತಿ ಹಾಗೂ ಈಶಾನ್ಯ ವಲಯ ಶಿಕ್ಷಕರ ವೇದಿಕೆ ಗೌರವ ಅಧ್ಯಕ್ಷ ಪ್ರೊ| ವಸಂತ ಕುಷ್ಟಗಿ ಹೇಳಿದರು. ಇಲ್ಲಿನ ಕನ್ನಡ ಭವನದಲ್ಲಿ ಬುಧವಾರ ಈಶಾನ್ಯ ವಲಯ ಶಿಕ್ಷಕರ ವೇದಿಕೆ, ಹೈಕ ಖಾಸಗಿ ಶಾಲೆಗಳ ಒಕ್ಕೂಟದ ಆಶ್ರಯದಲ್ಲಿ ಹಮ್ಮಿಕೊಂಡಿದ್ದ ಜಿಲ್ಲಾ ಸಮಾವೇಶ ಉದ್ಘಾಟಿಸಿ ಅವರು ಮಾತನಾಡಿದರು. ಇವತ್ತು ಸರಕಾರ ಹೈಕ ಭಾಗದ ಖಾಸಗಿ ಶಾಲೆಗಳಿಗೆ ಅನುದಾನವನ್ನು ನೀಡಲು ಮೀನಾಮೇಷ ಎಣಿಸುತ್ತಿದೆ. ಆದರೆ, ನಿಜಾಮ ಕೆಲವು ಅಪವಾದಗಳ ಮಧ್ಯೆ ಶಿಕ್ಷಣಕ್ಕೆ ಬಹಳಷ್ಟು ಕೊಡುಗೆ ನೀಡಿದ್ದಾನೆ. ಶಿಕ್ಷಕರಿಗೆ 10 ರೂ. ಸಂಬಳ ನೀಡುವುದಲ್ಲದೆ, ಶಾಲೆಯ ನಿರ್ವಹಣೆಗಾಗಿ 5 ರೂ.ಗಳನ್ನು ನೀಡುತ್ತಿದ್ದ. ಇದರಿಂದಾಗಿ ಈ ಭಾಗದಲ್ಲಿ ಶಿಕ್ಷಣವನ್ನು ನೀಡುವ ಪ್ರಯತ್ನವನ್ನು ಮಾಡಿರುವುದು ನಿಜಕ್ಕೂ ಶ್ಲಾಘನೀಯ. ಆದ್ದರಿಂದ ಈ ಪ್ರದೇಶದಲ್ಲಿ ಇಂದು ಶಾಲೆಗಳು ಹಾಗೂ ಶಿಕ್ಷಣ ಕ್ಷೇತ್ರದಲ್ಲಿ ವ್ಯವಹಾರಗಳು ನಮ್ಮನ್ನು ತುಂಬಾ ಹಿಂದಕ್ಕೆ ತಳ್ಳುತ್ತಿವೆ. ಆದ್ದರಿಂದ ಕೆಲವು ಒಳ್ಳೆಯ ಸಂಸ್ಥೆಗಳಿಗೆ ಹೈದ್ರಾಬಾದ ಕರ್ನಾಟಕ ಅಭಿವೃದ್ಧಿ ಪ್ರದೇಶ ಮಂಡಳಿಯಿಂದ ಅನುದಾನವನ್ನು ನೀಡಬೇಕು ಎಂದರು. ದೇವದುರ್ಗದ ಬಸವೇಶ್ವರ ಶಿಕ್ಷಣ ಸಂಸ್ಥೆಯ ಅಧ್ಯಕ್ಷೆ ಲತಾ ದೇವರು ಮಾತನಾಡಿ, ಹೈಕ ಭಾಗದಲ್ಲಿ ಶಿಕ್ಷಣ ಕ್ಷೇತ್ರದಲ್ಲಿ ಜನರಿಗೆ ಉತ್ತಮ ಸೇವೆ ನೀಡುವ ನಿಟ್ಟಿನಲ್ಲಿ ಸಾಕಷ್ಟು ಪರಿಶ್ರಮವನ್ನು ಪಡುತ್ತಿವೆ. ಶಿಕ್ಷಕರಿಗೆ ಉದ್ಯೋಗ ನೀಡುವ ನಿಟ್ಟಿನಲ್ಲೂ ಮತ್ತು ಮಕ್ಕಳಿಗೆ ಉತ್ತಮ ಶಿಕ್ಷಣ ನೀಡಲು ಹರಸಾಹಸ ನಡೆಯುತ್ತಿದೆ. ಆದ್ದರಿಂದ ಸರಕಾರ ಕೂಡಲೇ ಹೆಚ್‌ಕೆಡಿಬಿಯಿಂದ ಅನುದಾನವನ್ನು ನೀಡಬೇಕು. ಕೊನೆಯ ಪಕ್ಷ ಸೌಕರ್ಯಗಳನ್ನು ನೀಡಲು ಮುಂದಾಗಬೇಕು. ಈ ಭಾಗದ ಅಭಿವೃದ್ಧಿಗಾಗಿ ಬರುವ ಹಣದಲ್ಲಿ ಶಿಕ್ಷಣ ಕ್ಷೇತ್ರಕ್ಕೂ ಒಂದಷ್ಟು ಅನುದಾನವನ್ನು ನೀಡಬೇಕು ಎಂದರು. ವೇದಿಕೆ ಅಧ್ಯಕ್ಷ ಹಾಗೂ ಕಾರ್ಯಕ್ರಮದ ರೂವಾರಿ ಪ್ರೋ| ಎಂ.ಬಿ.ಅಂಬಲಗಿ ಮಾತನಾಡಿ, ಇಂದು ಈ ಭಾಗದ ಶಿಕ್ಷಣ ಸಂಸ್ಥೆಗಳು ಕವಲು ದಾರಿಯಲ್ಲಿವೆ. ಸರಕಾರದ ಜೊತೆಯಲ್ಲಿ ಈ ಸಂಸ್ಥೆಗಳು ಉತ್ತಮವಾಗಿ ಶಿಕ್ಷಣ ನೀಡಲು ಅನುದಾನ ಅವಶ್ಯಕತೆ ಇದೆ ಎನ್ನುವುದನ್ನು ಹಲವಾರು ಬಾರಿ ಮುಖ್ಯಮಂತ್ರಿಗಳಿಗೆ ಹಾಗೂ ಶಿಕ್ಷಣ ಸಚಿವರಿಗೆ ಮನವರಿಕೆ ಮಾಡಿ ಕೊಟ್ಟಿದ್ದು, ಈ ತಿಂಗಳ 29ರಂದು ಮತ್ತೂಮ್ಮೆ ಹೈಕದ ಎಲ್ಲಾ ಖಾಸಗಿ ಸಂಸ್ಥೆಗಳ ಅಧ್ಯಕ್ಷರು ಹಾಗೂ ಕಾರ್ಯದರ್ಶಿಗಳೊಂದಿಗೆ ನಿಯೋಗದಲ್ಲಿ ಹೋಗಿ ಮುಖ್ಯಮಂತ್ರಿಗಳಿಗೂ ಹಾಗೂ ಸಚಿವ ತನ್ವೀರಸೇಠ್ಠ್  ಅವರಿಗೂ ಮನವಿ ನೀಡಲಾಗುವುದು ಎಂದರು. ಇದೇ ವೇಳೆ ಪ್ರಮುಖವಾದ ಮೂರು ನಿರ್ಣಯಗಳನ್ನು ಕೈಗೊಳ್ಳಲಾಯಿತು. ಈ ಭಾಗದಲ್ಲಿನ ಎಲ್ಲಾ ಖಾಸಗಿ ಸಂಸ್ಥೆಗಳಿಗೆ ಮೂಲ ಸೌಕರ್ಯ ಅಭಿವೃದ್ಧಿಗೆ ಅನುದಾನ ನೀಡಬೇಕು. ಖಾಸಗಿ ಅನುದಾನ ರಹಿತ ಶಾಲೆಗಳ ಮಕ್ಕಳಿಗೆ ಬಿಸಿಯೂಟ, ಸೈಕಲ್‌, ಬೂಟು, ಶಾಕ್ಸಗಳನ್ನು ನೀಡಬೇಕು ಅಲ್ಲದೆ, ಶಿಕ್ಷಕರಿಗೆ ಸಮರ್ಪಕ ವೇತನ ನೀಡಲು ಅನುದಾನವನ್ನು ಬಿಡುಗಡೆ ಮಾಡಬೇಕು ಎಂದು ನಿರ್ಣಯಿಸಲಾಯಿತು. ಸಭೆಯಲ್ಲಿ ರಾಯಚೂರು, ಬಳ್ಳಾರಿ, ದೇವದುರ್ಗ, ಯಾದಗಿರಿ, ಬೀದರ, ಕಲಬುರಗಿ, ಕೊಪ್ಪಳ ಜಿಲ್ಲೆಯ ಖಾಸಗಿ ಸಂಸ್ಥೆಗಳ ಆಡಳಿತ ಮಂಡಳಿ ಸದಸ್ಯರು ಭಾಗವಹಿಸಿದ್ದರು. ರಾಜ್ಯಸಭೆ ಸದಸ್ಯ ಬಸವರಾಜ ಪಾಟೀಲ ಸೇಡಂ, ನೋಬಲ್‌ ಸಂಸ್ಥೆಯ ಅನ್ವರ ಉಲ್‌ ಹಕ್‌, ಬೀದರ ಬಸವತೀರ್ಥ ವಿದ್ಯಾಪೀಠದ ಕೇಶವರಾವ ತಳಘಟಕರ್‌, ಕೋಸಗಿ ಶಿಕ್ಷಣ ಸಂಸ್ಥೆಯ ಡಾ| ವಿಜಯಲಕ್ಷ್ಮಿ ಕೋಸಗಿ, ಬೀದರನ ಜನಸೇವಾ ಪ್ರತಿಷ್ಠಾನದ ರೇವಣಸಿದ್ದಪ್ಪ ಜಲಾದೆ, ನಿವೃತ್ತ ಶಿಕ್ಷಣ ಇಲಾಖೆ ಅಧಿಕಾರಿ ಅಡಿವೆಪ್ಪ ಚಿಂಚೋಳಿ, ಕುರಿಕೋಟಾದ ಬಸವೇಶ್ವರ ಸಂಸ್ಥೆಯ ಚನ್ನವೀರಪ್ಪ ಸಲಗರ, ಲಿಂಗನಗೌಡ ಸಿರಗುಪ್ಪಾ, ಬಳ್ಳಾರಿಯ ನ್ಯಾಷನಲ್‌ ಸಂಸ್ಥೆಯ ಗೊಮ್ಮಟೇಶ್ವರ ಗೋಗಿ, ಯಾದಗಿರಿಯ ಶಿವಣ್ಣಗೌಡ ಪಾಟೀಲ, ಗಂಗಾವತಿಯ ಮನೋಜ ಹಿರೇಮಠ, ಧರ್ಮಣ್ಣ ಧನ್ನಿ, ಶಾಂತಕುಮಾರ ಬೆಳಮಗಿ ಇದ್ದರು. ಪರಮೇಶ್ವರ ಬನಸೋಡೆ ಕಾರ್ಯಕ್ರಮ ನಿರೂಪಿಸಿದರು. ನಿತೀನ ಕೋಸಗಿ ವಂದಿಸಿದರು.

Advertisement
Advertisement

Udayavani is now on Telegram. Click here to join our channel and stay updated with the latest news.

Next