Advertisement

Economic power; ವಿಶ್ವದ 3ನೇ ಬೃಹತ್‌ ಆರ್ಥಿಕತೆಯತ್ತ ಭಾರತ

11:57 PM Dec 27, 2023 | Team Udayavani |

ಭಾರತದ ಆರ್ಥಿಕತೆ ಇಡೀ ವಿಶ್ವವೇ ನಿಬ್ಬೆರಗಾಗುವಂತೆ ದಾಪುಗಾಲಿಡುತ್ತಿದೆ. ಜಾಗತಿಕವಾಗಿ ವಿಶ್ವದ ಬಲಾಡ್ಯ ರಾಷ್ಟ್ರಗಳು ಆರ್ಥಿಕ ಹಿಂಜರಿಕೆ, ಜಾಗತಿಕ ವಿಪ್ಲವಗಳ ಸಂಕಷ್ಟದಲ್ಲಿ ಸಿಲುಕಿ ಚೇತರಿಸಿಕೊಳ್ಳಲು ಹೆಣಗಾಡುತ್ತಿರುವಾಗ ಭಾರತ ಅತ್ಯಂತ ಸಶಕ್ತ ಮತ್ತು ಸುಸ್ಥಿರ ಆರ್ಥಿಕ ಶಕ್ತಿಯಾಗಿ ಹೊರಹೊಮ್ಮಿದೆ. ಭಾರತದ ಈ ಆರ್ಥಿಕ ಬೆಳವಣಿಗೆಗೆ ಸರಕಾರ ಅನುಷ್ಠಾನಕ್ಕೆ ತಂದ ವಿವಿಧ ಯೋಜನೆಗಳು ಮತ್ತು ಆರ್‌ಬಿಐನ ಕಠಿನ ನಿಲುವುಗಳೇ ಪ್ರಧಾನ ಕಾರಣಗಳಾಗಿವೆ. ಭಾರತದ ಆರ್ಥಿಕ ಬೆಳವಣಿಗೆಗೆ ಐಎಂಎಫ್ ಕೂಡ ಪ್ರಶಂಸೆ ವ್ಯಕ್ತಪಡಿಸಿದ್ದು ಮುಂದಿನ ದಿನಗಳಲ್ಲಿ ಇನ್ನಷ್ಟು ಪ್ರಗತಿಪಥದಲ್ಲಿ ದೇಶದ ಆರ್ಥಿಕತೆ ಸಾಗಲಿದೆ ಎಂಬ ಆಶಾವಾದ ವ್ಯಕ್ತಪಡಿಸಿದೆ. ಸದ್ಯದ ಪರಿಸ್ಥಿತಿಯನ್ನು ಅವಲೋಕಿಸುವಾಗ 2030ರ ವೇಳೆಗೆ ಭಾರತ ವಿಶ್ವದ ಮೂರನೇ ಅತೀ ದೊಡ್ಡ ಆರ್ಥಿಕತೆಯಾಗುವ ಸರಕಾರದ ಗುರಿಯನ್ನು ತಲುಪುವ ಲಕ್ಷಣಗಳು ಗೋಚರಿಸುತ್ತಿವೆ. ಹಾಗೆಂದು ಕೇಂದ್ರ ಸರಕಾರವಾಗಲೀ, ಆರ್‌ಬಿಐ ಆಗಲೀ ತಮ್ಮ ನೀತಿನಿರೂಪಣೆಗಳಲ್ಲಿ ದಿಢೀರ್‌ ಬದಲಾವಣೆ ಮಾಡಲು ಮುಂದಾಗಿಲ್ಲ. ಅಂತಾರಾಷ್ಟ್ರೀಯ ಮತ್ತು ದೇಶೀಯ ಮಟ್ಟದಲ್ಲಿನ ಸಂಭಾವ್ಯ ಬೆಳವಣಿಗೆಗಳತ್ತ ಎಚ್ಚರಿಕೆಯ ನೋಟ ಹರಿಸುತ್ತಲೇ ಮುಂದಡಿ ಇಡುತ್ತಿವೆ.

Advertisement

ಹತ್ತು ವರ್ಷಗಳ ಹಿಂದೆ ಜಗತ್ತಿನಲ್ಲಿ ದುರ್ಬಲ ಆರ್ಥಿಕ ರಾಷ್ಟ್ರವೆಂದೇ ಬಿಂಬಿತವಾಗಿದ್ದ ಭಾರತ ಈಗ ರಾಜಕೀಯ ಮತ್ತು ಆರ್ಥಿಕ ಸ್ಥಿರತೆ, ಮೂಲ ಸೌಕರ್ಯ ಅಭಿವೃದ್ಧಿ, ಡಿಜಿಟಲೀಕರಣ, ಬದಲಾದ ಕಾಲಕ್ಕನುಗುಣವಾಗಿ ಬದಲಾದ ನೀತಿ ನಿರೂಪಣೆ, ಕೇಂದ್ರ ಸರಕಾರದ ದೂರದೃಷ್ಟಿಯ ಯೋಜನೆಗಳಾದ ಮೇಕ್‌ ಇನ್‌ ಇಂಡಿಯಾ, ಆತ್ಮ ನಿರ್ಭರ ಭಾರತ, ಮಾರುಕಟ್ಟೆ ವಿಸ್ತರಣೆಯ ಪರಿಣಾಮವಾಗಿ ಜಾಗತಿಕವಾಗಿ ಅತ್ಯಂತ ವೇಗವಾಗಿ ಬೆಳೆಯುತ್ತಿರುವ ಆರ್ಥಿಕತೆಯಾಗಿ ಹೊರಹೊಮ್ಮಿದೆ. ಅಂತಾರಾಷ್ಟ್ರೀಯ ಹಣಕಾಸು ನಿಧಿ (ಐಎಂಎಫ್) ಇತ್ತೀಚಿನ ವಾರ್ಷಿಕ ಆರ್ಥಿಕ ಸಮಾಲೋಚನ ವರದಿಯಲ್ಲಿ ಭಾರತದ ಆರ್ಥಿಕ ಪ್ರಗತಿಯನ್ನು ಮುಕ್ತಕಂಠದಿಂದ ಶ್ಲಾ ಸಿದೆ. ಈ ಸುಸ್ಥಿರ ಬೆಳವಣಿಗೆಯಿಂದ ವಿಶ್ವದ ಆರ್ಥಿಕತೆಗೆ ಭಾರತದಿಂದ ಶೇ. 16ಕ್ಕಿಂತ ಹೆಚ್ಚಿನ ಕೊಡುಗೆಯನ್ನು ನಿರೀಕ್ಷಿಸಿದೆ. ಅಲ್ಲದೆ ರಚನಾತ್ಮಕ ಸುಧಾರಣೆಗಳು ಹಾಗೂ ಹೆಚ್ಚಿನ ಮಾನವ ಸಂಪನ್ಮೂಲದ ಕೊಡುಗೆಗಳೊಂದಿಗೆ ಭಾರತವು ಇನ್ನೂ ಹೆಚ್ಚಿನ ಬೆಳವಣಿಗೆಯನ್ನು ದಾಖಲಿಸುವ ಸಾಮರ್ಥ್ಯದ ಬಗ್ಗೆ ತನ್ನ ವರದಿಯಲ್ಲಿ ವಿಶ್ಲೇಷಿಸಿದೆ.

ಪ್ರಸಕ್ತ ಹಣಕಾಸು ವರ್ಷದ ಎರಡನೇ ತ್ತೈಮಾಸಿಕದಲ್ಲಿ ಭಾರತದ ನೈಜ ಜಿಡಿಪಿ (ದೇಶದ ಆಂತರಿಕ ಉತ್ಪನ್ನ) ರೂ. 41.74 ಲಕ್ಷ ಕೋಟಿ ಇದೆ. ವರ್ಷದ ಹಿಂದೆ ಇದೇ ತ್ತೈಮಾಸಿಕದಲ್ಲಿ ರೂ. 38.78 ಲಕ್ಷ ಕೋಟಿಯಾಗಿತ್ತು. ತನ್ಮೂಲಕ ಜಿಡಿಪಿಯ ಪ್ರಗತಿ ದರ ಶೇ. 7.6ರಷ್ಟು ದಾಖಲಾಗಿದೆ. ಜಾಗತಿಕ ಪ್ರಕ್ಷುಬ್ಧ ವಾತಾವರಣದ ಬಿಸಿಯ ನಡುವೆಯೂ ದೇಶದ ಆರ್ಥಿಕತೆ ಸ್ಥಿತಿಸ್ಥಾಪಕತ್ವ ಮತ್ತು ಶಕ್ತಿಯನ್ನು ಕಾಯ್ದುಕೊಂಡಿರುವುದು ಪ್ರಶಂಸ ನಾರ್ಹ. ಭಾರತವು ವಿಶ್ವದಲ್ಲಿಯೇ ವೇಗವಾಗಿ ಬೆಳೆಯು ತ್ತಿರುವ ಆರ್ಥಿಕತೆ ಎಂಬ ಹಿರಿಮೆಗೆ ಪಾತ್ರವಾಗಿದೆ. ಸತತ ಆರು ತಿಂಗಳುಗಳಿಂದ ರೂ.1.60 ಲಕ್ಷ ಕೋಟಿಗೂ ಮೀರಿದ ಜಿಎಸ್‌ಟಿ ಸಂಗ್ರಹಣೆಯಾಗುತ್ತಿರುವುದು, ಐತಿಹಾಸಿಕ ಗರಿಷ್ಠ ಮಟ್ಟ ತಲುಪಿದ ಷೇರು ಮಾರುಕಟ್ಟೆ ಇದೆಲ್ಲವೂ ಆರ್ಥಿಕತೆಯ ದೃಷ್ಟಿಯಿಂದ ಶುಭ ಸಂಕೇತ ಗಳಾಗಿವೆ. ಇದರಿಂದಾಗಿ ವಿದೇಶಿ ನೇರ ಬಂಡವಾಳ ಹೂಡಿಕೆ ವೃದ್ಧಿಯಾಗಲಿದೆ. ಇದೇ ಸಂದರ್ಭದಲ್ಲಿ ಭಾರತದ ಆರ್ಥಿಕ ಬೆಳವಣಿಗೆಯ ಅಂದಾಜನ್ನು
ಆರ್‌ಬಿಐ ಶೇ. 0.5ರಷ್ಟು ಹೆಚ್ಚಿಸಿದೆ. ಪ್ರಸಕ್ತ ಹಣಕಾಸು ವರ್ಷದಲ್ಲಿ ಜಿಡಿಪಿ ಶೇ. 7ರ ಬೆಳವಣಿಗೆ ಕಾಣಲಿದೆ ಎಂದು ಹೇಳಿದೆ. ದೇಶದ ಒಟ್ಟಾರೆ ಆರ್ಥಿಕತೆ, ಜಿಡಿಪಿ, ಜಿಎಸ್‌ಟಿ ಸಂಗ್ರಹ, ನಿಯಂತ್ರಣದಲ್ಲಿರುವ ಹಣದುಬ್ಬರ ನಿರು ದ್ಯೋಗ ಪ್ರಮಾಣದಲ್ಲಿ ಇಳಿಕೆಯಾಗಿರುವುದು ಆರ್ಥಿಕತೆಗೆ ಪೂರಕವಾಗುವ ಲಕ್ಷಣಗಳಾಗಿವೆ.

2014ರಲ್ಲಿ ಭಾರತವು ವಿಶ್ವದ 10ನೇ ಅತೀದೊಡ್ಡ ಆರ್ಥಿಕತೆಯಾಗಿತ್ತು. ಕೇವಲ 8 ವರ್ಷಗಳ ಅವಧಿಯಲ್ಲಿ 5ನೇ ಅತೀದೊಡ್ಡ ಆರ್ಥಿಕತೆಯಾಗಿ ಹೊರಹೊಮ್ಮಿದೆ. ಈ ವರ್ಷದ ನವೆಂಬರ್‌ 9ರ ವರೆಗೆ ನೇರ ತೆರಿಗೆ ಸಂಗ್ರಹ ಶೇ. 21.82ರಷ್ಟು ಹೆಚ್ಚಳವಾಗಿದೆ. ಮಾಸಿಕ ಜಿಎಸ್‌ಟಿ ಸಂಗ್ರಹ ರೂ. 1.6 ಲಕ್ಷ ಕೋಟಿಗೆ ಸ್ಥಿರಗೊಂಡಿದೆ. ಜಿಎಸ್‌ಟಿ
ರಿಟರ್ನ್ಸ್ ಸಲ್ಲಿಕೆ 2023ರ ಎಪ್ರಿಲ್‌ಗೆ ಹೋಲಿಸಿದರೆ ಶೇ. 65 ಹೆಚ್ಚಾಗಿದೆ. ತೆರಿಗೆ ರಿಟರ್ನ್ಸ್ ಸಂಖ್ಯೆ 1.13 ಕೋಟಿಗೆ ಏರಿಕೆಯಾಗಿದೆ. ಜಿಎಸ್‌ಟಿ ನೋಂದಣಿ ಸಂಖ್ಯೆ 1.06 ಕೋಟಿಯಿಂದ 1.40 ಕೋಟಿಗೆ ಏರಿದೆ. ಎಪ್ರಿಲ್‌ನಲ್ಲಿ ಜಿಎಸ್‌ಟಿ ಸಂಗ್ರಹ ರೂ. 1.87 ಲಕ್ಷ ಕೋಟಿಯಾಗಿತ್ತು. ಕಳೆದ ಕೆಲವು ತಿಂಗಳುಗಳಿಂದೀಚೆಗೆ ಆಟೋಮೊಬೈಲ್‌ ಕ್ಷೇತ್ರ ಮಹತ್ತರ ಪ್ರಗತಿಯನ್ನು ದಾಖಲಿಸುತ್ತಿದೆ. ಬ್ಯಾಂಕ್‌ಗಳ ಆರ್ಥಿಕ ಸ್ಥಿತಿ ಉತ್ತಮವಾಗಿದೆ. ನಿರುದ್ಯೋಗ ದರವು 2017-2018ರಲ್ಲಿ ಶೇ. 17.8 ರಷ್ಟಿತ್ತು. ಅದು ಈಗ ಶೇ. 10ಕ್ಕೆ ಇಳಿದಿದೆ. ಕಳೆದ 5 ವರ್ಷಗಳಲ್ಲಿ 13.5 ಕೋಟಿ ಜನರು ಬಹು ಆಯಾಮದ ಬಡತನ ವಲಯದಿಂದ ಹೊರಬಂದಿದ್ದಾರೆ. ಉದ್ಯಮಸ್ನೇಹಿ ಸೂಚ್ಯಂಕದಲ್ಲಿ 2014ರಲ್ಲಿ 142ನೇ ಸ್ಥಾನದಲ್ಲಿದ್ದ ಭಾರತ 2022ರಲ್ಲಿ 63ನೇ ಸ್ಥಾನವನ್ನು ಅಲಂಕರಿಸಿದೆ.

ಭಾರತದಲ್ಲಿ ಹಣದುಬ್ಬರ ನಿಯಂತ್ರಣಕ್ಕೆ ಬರುತ್ತಿದ್ದರೂ ಆಹಾರ ಹಣದುಬ್ಬರವು ತೀವ್ರವಾಗಿ ಕಾಡುತ್ತಿದ್ದು ಹಣದುಬ್ಬರ ಏರಿಳಿತವಾಗುತ್ತಿದೆ. ಇದಕ್ಕೆ ಎಲ್‌ನಿನೋ (ಹವಾಮಾನ ವೈಪರೀತ್ಯ) ಮತ್ತು ಜಾಗತಿಕ ಒತ್ತಡಗಳಿಂ ದಾದ ರಿಬೌಂಡ್‌ ಪ್ರಮುಖ ಕಾರಣವಾಗಿದೆ. ಆದುದ ರಿಂದ ಬಡ್ಡಿದರ ಇಳಿಕೆಯ ವಿಚಾರದಲ್ಲಿ ಆರ್‌ಬಿಐ ಎದುರು ಕೆಲವು ಸವಾಲುಗಳು ಉಳಿದುಕೊಂಡಿವೆ. ಬಡ್ಡಿ ದರ ಕಡಿತದ ಮೊದಲು ಹಣದುಬ್ಬರವನ್ನು ಶೇ.4 ರ ಗುರಿಯ ಮಟ್ಟಕ್ಕೆ ತರುವತ್ತ ಆರ್‌ಬಿಐ ತನ್ನ ಗಮನವನ್ನು ಕೇಂದ್ರೀಕರಿಸಿದೆ. ಆದುದರಿಂದ ರೆಪೊ ದರವನ್ನು ಸತತ 5ನೇ ಬಾರಿಗೆ ಶೇ. 6.5 ಯಥಾಸ್ಥಿತಿಯಲ್ಲಿರಿಸಿದೆ. ದೇಶದಲ್ಲಿ ಚಿಲ್ಲರೆ ಹಣದುಬ್ಬರವು ಸತತ 50 ತಿಂಗಳುಗಳಿಂದ ಶೇ. 4ಕ್ಕಿಂತ ಹೆಚ್ಚಾಗಿಯೇ ಇದೆ. ಈ ನಿಟ್ಟಿನಲ್ಲಿ ರೆಪೊ ದರ ಯಥಾಸ್ಥಿತಿಯಲ್ಲಿರಿಸಿರುವುದು ವಿತ್ತೀಯ ನೀತಿಯ ಸಮರ್ಪಕ ನಿರ್ಣಯವೇ ಆಗಿದೆ.

Advertisement

ಜಾಗತಿಕ ಮಟ್ಟದಲ್ಲಿ ಹಣದುಬ್ಬರವು ಭಾರೀ ಆತಂಕದ ಛಾಯೆಯನ್ನು ಸೃಷ್ಟಿಸಿದೆ ಮತ್ತು ಜಾಗತಿಕ ಮಟ್ಟದಲ್ಲಿ ಬಡ್ಡಿದರ ಇಳಿಕೆಯ ಪ್ರಕ್ರಿಯೆ ಇನ್ನೂ ಪ್ರಾರಂಭವಾಗಿಲ್ಲ. ಅಮೆರಿಕದ ಫೆಡ್‌ ರಿಸರ್ವ್‌ ಶೇ. 3.2ರಷ್ಟಿರುವ ಬಡ್ಡಿದರವನ್ನು ಶೇ. 2ಕ್ಕೆ ಇಳಿಸಲು ಪಣತೊಟ್ಟಿದೆ. ಯುರೋಪಿಯನ್‌ ಸೆಂಟ್ರಲ್‌ ಬ್ಯಾಂಕ್‌ ತನ್ನ ಇತ್ತೀಚಿನ ಸಭೆಯಲ್ಲಿ ಬಡ್ಡಿದರವನ್ನು ಶೇ. 0.25ರಷ್ಟು ಏರಿಸಿದೆ. ಬ್ಯಾಂಕ್‌ ಆಫ್ ಇಂಗ್ಲೆಂಡ್‌ ಕೂಡ ರೆಪೊ ದರವನ್ನು 15 ವರ್ಷಗಳ ಗರಿಷ್ಠ ಮಿತಿಯಲ್ಲಿ ಮುಂದುವರಿಸಿದೆ.

ಜಾಗತಿಕವಾಗಿ ರಷ್ಯಾ-ಉಕ್ರೇನ್‌, ಹಮಾಸ್‌ ಉಗ್ರರು ಮತ್ತು ಇಸ್ರೇಲ್‌ ನಡುವಣ ಯುದ್ಧ ಮುಂದುವರಿ ದಿರುವುದು ಹಾಗೂ ಜಾಗತಿಕ ಮಾರುಕಟ್ಟೆ ಮತ್ತು ಪೂರೈಕೆಯ ಜಾಲ ಅತಂತ್ರ ಸ್ಥಿತಿಯನ್ನು ಎದುರಿಸುತ್ತಿ ರುವುದು ಈ ಅನಿಶ್ಚಿತತೆಗಳಿಗೆ ಪ್ರಮುಖ ಕಾರಣ. ಆದುದರಿಂದ ಬಡ್ಡಿದರ ಕಡಿತ ಶೀಘ್ರವೇ ಸಿಂಧುವಲ್ಲ ಎಂಬುದು ಆರ್‌ಬಿಐನ ದೃಢ ನಿರ್ಧಾರ. ಅಲ್ಪಾವಧಿಯಲ್ಲಿ ಆಹಾರ ವಸ್ತುಗಳ ಬೆಲೆ ಏರಿಕೆಯು ಡಿಸೆಂಬರ್‌ನಲ್ಲಿ ಹಣದುಬ್ಬರ ಪ್ರಮಾಣ ಹೆಚ್ಚಾಗಲು ಕಾರಣವಾಗುವ ಸಾಧ್ಯತೆ ಗೋಚರವಾಗುತ್ತಿದೆ. ಆರ್‌ಬಿಐ ಎಚ್ಚರಿಕೆಯ ಹೆಜ್ಜೆ ಇಡಲು ಇದೂ ಒಂದು ಪ್ರಮುಖ ಕಾರಣ. ಪ್ರಸ್ತುತ ಅರ್ಥವ್ಯವಸ್ಥೆಯಲ್ಲಿ ಬೇಡಿಕೆ ಚಿಗುರಿಸಿ, ಹಣದುಬ್ಬರವನ್ನು ನಿಯಂತ್ರಿಸುವುದೊಂದೇ ಈಗ ಎಂಪಿಸಿ, ಆರ್‌ಬಿಇ ಮತ್ತು ಸರಕಾರದ ಮುಂದಿರುವ ಸವಾಲಾಗಿದೆ. ಮುಂದಿನ ಮಳೆಗಾಲ ಉತ್ತಮವಾಗಿರಬಹುದೆಂಬ ನಿರೀಕ್ಷೆಯಲ್ಲಿ ಹಣದುಬ್ಬರವನ್ನು ಶೇ.5.4ಕ್ಕೆ ಮಿತಿಗೊಳಿಸಲು ಆರ್‌ಬಿಐ ತೀರ್ಮಾನಿಸಿದೆ. ದೇಶದ ಆರ್ಥಿಕ ನೀತಿಗಳು ಮತ್ತು ಪಾರದರ್ಶಕ ಆಡಳಿತ ಆರ್ಥಿಕ ಅಭಿವೃದ್ಧಿಗೆ ಪೂರಕವಾಗುತ್ತಿದೆ.
2030ರ ವೇಳೆಗೆ ವಿಶ್ವದ 3ನೇ ಆರ್ಥಿಕತೆಯಾಗುವ ಗುರಿ ಹೊಂದಿರುವ ಭಾರತಕ್ಕೆ ದೇಶದ ಆಸ್ತಿಯಾಗಿರುವ ಯುವ ಶಕ್ತಿ, ಬಲವಾದ ಮೂಲ ಸೌಕರ್ಯ, ಡಿಜಿಟಲಿಕರಣ, ಗುರಿಯತ್ತ ಸಾಗುತ್ತಿರುವ ಹಣದುಬ್ಬರ, ಸ್ಥಿತಿ ಸ್ಥಾಪಕತ್ವ ಹೊಂದಿರುವ ಹಣಕಾಸು ವಲಯ, ವಿದೇಶಿ ಬಂಡವಾಳದ ಒಳಹರಿವು ಭಾರತದ ಆರ್ಥಿಕ ಶಕ್ತಿಗೆ ಉತ್ತೇಜನ ನೀಡುವ ಧನಾತ್ಮಕ ಅಂಶಗಳಾಗಿ ಬಲು ನಿರೀಕ್ಷೆಯ ಗುರಿ ತಲುಪಲು ಪೂರಕವಾಗಲಿವೆ. ಇದೇ ಸಂದರ್ಭದಲ್ಲಿ ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ಕಚ್ಚಾ ತೈಲ ಬೆಲೆಯ ಏರಿಳಿತ, ಜಾಗತಿಕ ಆರ್ಥಿಕ ಬೆಳವಣಿಗೆ, ಬಾಹ್ಯ ಅಪಾಯಗಳು, ಹವಾಮಾನ ವೈಪರೀ ತ್ಯಗಳು ಕೃಷಿ ವಲಯಕ್ಕೆ ತಂದೊಡ್ಡಬಹುದಾದ ಆಘಾತಗಳ ಬಗೆಗೆ ಒಂದಿಷ್ಟು ನಿಗಾ ಇರಿಸುವ ಆವಶ್ಯಕತೆ ಇದೆ. ಅಸುರಕ್ಷಿತ ವೈಯಕ್ತಿಕ ಬ್ಯಾಂಕ್‌ ಸಾಲಗಳ ಬಗೆಗಿನ ಕಾಳಜಿ, ಕೃಷಿ ಭೂಮಿ ಮತ್ತು ಉತ್ಪನ್ನ ಮಾರುಕಟ್ಟೆ ಸುಧಾ ರಣೆ, ಉದ್ಯೋಗ ಸೃಷ್ಟಿಯ ಜತೆಗೆ ಕೌಶಾಲಾಭಿವೃದ್ಧಿಯ ಬಗೆಗಿನ ಸೂಕ್ತ ನೀತಿ ಹಾಗೂ ಪಾರದರ್ಶಕ ವ್ಯವಸ್ಥೆ ಆರ್ಥಿಕಾಭಿವೃದ್ಧಿಗೆ ಬಲ ತುಂಬಬಹುದು. ಭಾರತವನ್ನು ಆರ್ಥಿಕವಾಗಿ ಸೂಪರ್‌ ಪವರ್‌ ಆಗಿಸಲು ಮಹಿಳಾಶಕ್ತಿ, ಯುವಶಕ್ತಿ, ಕೃಷಿಕರು ಮತ್ತು ಬಡವರ ಕಲ್ಯಾಣಕ್ಕಾಗಿ ಸರಕಾರ ದೃಢ ಹೆಜ್ಜೆ ಇರಿಸಿರುವುದು ಪ್ರಶಂಸನೀಯ ಬೆಳವಣಿಗೆಯಾಗಿದೆ.

ಚೇರ್ಕಾಡಿ ಸಚ್ಚಿದಾನಂದ ಶೆಟ್ಟಿ

Advertisement

Udayavani is now on Telegram. Click here to join our channel and stay updated with the latest news.

Next