Advertisement

ಕಡಜದ ಕುಟುಕು

07:16 PM Jan 11, 2020 | mahesh |

ಮೂಲೆಯ ದಿವಾನ್‌ ಮೇಲೆ ಒಣಗಿದ್ದ ಬಟ್ಟೆಗಳ ರಾಶಿ ಗುಡ್ಡದಂತೆ ಕಂಗೊಳಿಸುತ್ತಿತ್ತು. ಹೀಗೆಯೇ ಬಿಟ್ಟರೆ ಇದು ಎವರೆಸ್ಟ್‌ ಶಿಖರವಾಗಿ ವಿಶ್ವದಾಖಲೆ ಸೃಷ್ಟಿಸುತ್ತದೆ ಎಂದು ಗೊಣಗುತ್ತ, ಎಲ್ಲರ ಮೇಲೆ ರೇಗಾಡುತ್ತ ಬಟ್ಟೆ ಮಡಚಲು ಕುಳಿತೆ ಅಷ್ಟೇ; ಇಂಜಕ್ಷನ್‌ ಅಲ್ಲ, ದೊಡ್ಡ ದಬ್ಬಳ ಚುಚ್ಚಿದಷ್ಟು ನೋವು. ಅದೂ ಹಿಂಭಾಗದಲ್ಲಿ! ಅಸಾಧ್ಯ ನೋವು. ಉರಿಗೆ ಕಣ್ಣಲ್ಲಿ ನೀರು ಬಂತು. ಎಲ್ಲಿ ಏನು ಎಂದು ಅತ್ತಿತ್ತ ನೋಡುವಷ್ಟರಲ್ಲಿ ಮತ್ತೂಮ್ಮೆ ಅದೇ ಜಾಗಕ್ಕೆ ಕುಟುಕು ! ಅದರೊಂದಿಗೇ ಬಟ್ಟೆಯ ರಾಶಿಯ ಮಧ್ಯದಿಂದ ಕಡಜವೊಂದು “ಗುಂಯ್‌’ ಎಂದು ಸದ್ದು ಮಾಡುತ್ತ ಹೊರಬಂದು ಹಾರಾಡತೊಡಗಿತ್ತು.ನನಗೆ ನಡೆದ ಘಟನೆ ಏನೆಂದು ಮನದಟ್ಟಾಗಿತ್ತು.

Advertisement

“ಹಾ’ ಎಂದು ಆರ್ತನಾದ ಮಾಡಿದೆ. ಮನೆಯವರೆಲ್ಲ ಓಡಿ ಬಂದರು. “ಬಟ್ಟೆ ಮಡಚುವ ಕೆಲಸಕ್ಕೆ ಇಷ್ಟು ಅಳು-ಕೂಗಾಟವೆ?’ ಎಂದು ಗಂಡ ಸಮಾಧಾನಿಸಿದ. ನಾನು ನರಳಾಡುತ್ತಲೇ ವಿಷಯ ತಿಳಿಸಿದೆ. ಅರ್ಧ ಕನಿಕರ, ಅರ್ಧ ಹಾಸ್ಯ ಬೆರೆತ ದನಿಯಲ್ಲಿ “ಅಯ್ಯೋ ಪಾಪವೆ! ಕಚ್ಚುವುದು ಕಚ್ಚಿತು, ಎಂಥ ಜಾಗದಲ್ಲಿ’ ಎಂದು ವಿಶ್ಲೇಷಣೆಗೆ ಶುರುವಾಯಿತು! “ಎರಡು ಸಲ ಕಚ್ಚಿದೆ ಬೇರೆ’ ಎಂಬ ಒಗ್ಗರಣೆ!
ಅಷ್ಟರಲ್ಲಿ ಮಕ್ಕಳ ಆಗಮನ. “ಯಾವಾಗಲೂ ಬೈಯುವ ನಿನ್ನ ಮೇಲೆ ಕಡಜಕ್ಕೂ ಬೇಸರವಾಗಿ ಹೀಗೆ ಮಾಡಿದೆ’ ಎಂದು ಅವರು ಅಭಿಪ್ರಾಯಿಸಿದರು.

ಅಷ್ಟರಲ್ಲಿ ಭೂಮಿಯೇ ನಡುಗುವಂತೆ ಮನೆ ಸಹಾಯಕಿ ಮಂಜು ಧಾವಿಸಿದಳು. ಆಕೆಯ ಪೂರ್ಣ ಹೆಸರು ಮಂಜುಳಾ. “ಏನಾಯಿತು?’ ಎಂದು ವಿಚಾರಿಸತೊಡಗಿದವಳೇ, ಕಡಜ ಕಚ್ಚಿದ ವಿಷಯವನ್ನು ಅರಿತು ಗಾಬರಿಯಿಂದ ಕಣ್ಣು, ಉಸಿರು, ನಾಲಿಗೆ ಎಲ್ಲ ಪರೀಕ್ಷಿಸಿದಳು. “ಕಡಜವಾದರೂ ಎಲ್ಲಿ ಎತ್ತ ಎಂದು ನೋಡಿ ಕಚ್ಚಬಾರದಿತ್ತೆ?’ ಎಂದು ಕಡಜದ ವರ್ತನೆಯನ್ನು ಭಾಗಶಃ ಸಮರ್ಥಿಸಿದಳು. ಜೊತೆಗೆ, ಅವಳ ಯಾರೋ ಸಂಬಂಧಿಕರು ಈ ಕಡಜ ಕಚ್ಚಿ ಕೆಲಸಮಯದಲ್ಲೇ ನಂಜು ತಲೆಗೇರಿ ಸಾಯುವ ಸ್ಥಿತಿಗೆ ಬಂದಿದ್ದರು- ಎಂಬ ಬೆಚ್ಚಿ ಬೀಳಿಸುವ ಮಾಹಿತಿಯನ್ನು ಸಾಭಿನಯವಾಗಿ ನೀಡಿದಳು. ಅಲ್ಲಿಯವರೆಗೆ, “ಇರಲಿ ಕಡಜ ತಾನೇ’ ಎಂಬ ಉಡಾಫೆಯಲ್ಲಿದ್ದ ನಮ್ಮ ಮನೆಯ ಸದಸ್ಯರಿಗೆ ಪರಿಸ್ಥಿತಿಯ ಗಂಭೀರತೆ ಅರಿವಾಯಿತು. ಮಂಜು ತಾನೇ ವೈದ್ಯಳಂತೆ ನನ್ನನ್ನು ಬೋರಲು ಮಲಗಲು ಹೇಳಿದಳು. ಬಳಿಕ, “ಈ ಕಡಜಕ್ಕೆ ತಕ್ಕ ಶಾಸ್ತಿ ಮಾಡ್ತೀನಿ’ ಎಂಬಂತೆ ಒಳಗೆ ನಡೆದಳು. ಮಂಜು ಕೈಯಲ್ಲಿ ಕತ್ತಿ ಹಿಡಿದುಕೊಂಡು ಬಂದಳು. ಅದರ ಅಲಗು ಫ‌ಳ ಫ‌ಳ ಹೊಳೆಯುತ್ತಿತ್ತು. “ಅಷ್ಟು ಪುಟ್ಟ ಕಡಜ ಓಡಿಸಲು ಇಷ್ಟು ದೊಡ್ಡ ಕತ್ತಿಯೇ, ಗುಬ್ಬಿಗೆ ಬ್ರಹ್ಮಾಸ್ತ್ರವೇ’ ಎಂಬ ಅನುಮಾನ ನನ್ನನ್ನು ಕಾಡಿತು.

ಕಡಜವನ್ನು ಸವರಬೇಕಾದ ಅವಳ ಕೈಯ ಕತ್ತಿ ನನ್ನ ಹಿಂಭಾಗವನ್ನು ಬಲವಾಗಿ ತೀಡಿತ್ತು. ನನಗೆ ಗಾಬರಿ! ಇವಳೇನು ನನ್ನನ್ನು ಕತ್ತರಿಸುತ್ತಾಳೆಯೇ ಎಂದು ಬೆಚ್ಚಿದೆ. “ಕಡಿದ ಜಾಗಕ್ಕೆ ಕತ್ತಿ ಹಾಕಿ ಉಜ್ಜಬೇಕಕ್ಕಾ. ಆಗ್ಲೆ ಮುಳ್ಳಿದ್ದರೆ ಹೊರಗೆ ಬರೋದು. ಅದು ಇದ್ರೆ ನೋವು, ಉರಿ-ಊತ ಕಡೆ ಆಗಾದಿಲ್ಲ. ನೀನು ಹಿಂಗೆ ವದರಾಡಿ ಕೊಸರಾಡಿದ್ರೆ ನಂಗೊತ್ತಿಲ್ಲ, ಏನೂ ಆಗಬಹುದು. ನನ್ನ ಕೈ ಮತ್ತು ಕತ್ತಿ ಸರ್ಯಾಗಿ ಕೆಲ್ಸ ಮಾಡ್ತಾವೆ’ ಎಂಬ ವಾರ್ನಿಂಗ್‌ ಕೊಟ್ಟಳು. ನನ್ನ ಹಿಂಭಾಗವು ಕಡಜದ ಕುಟುಕಿನ ಜೊತೆಗೆ ಕತ್ತಿಯ ಏಟಿಗೆ ಈಡಾಗುವ ಸಾಧ್ಯತೆಯನ್ನು ನೆನೆದು ಕಂಗಾಲಾದೆ.

ಈ ಕತ್ತಿ ವರಸೆ ನಡೆಸುವಾಗಲೇ ಮನೆಯವರಿಗೆ, “ಹೊರಗೆ ಕಡಜದ ಗೂಡಿದ್ದರೆ ಹುಡುಕಿ ತೆಗೆಯಿರಿ. ಮಕ್ಕಳು ಆಡುವ ಜಾಗದಲ್ಲಿದ್ದರೆ ಕಷ್ಟ’ ಎಂಬ ಆರ್ಡರ್‌ ಬೇರೆ ನೀಡಿದ್ದಳು. ಅಷ್ಟರಲ್ಲಿ ತಂದೆ, ಮನೆಯ ಸಂಕಷ್ಟವನ್ನೆಲ್ಲ ಮರೆತು ಮಕ್ಕಳಿಗೆ ಪಾಠ ಶುರು ಮಾಡಿದ್ದ: “ಇರುವೆ-ಜೇನುಹುಳಗಳಂತೆ ಸಹಜೀವನ ಇವುಗಳದ್ದು! ಮರದ ಎಲೆ-ತೊಗಟೆ ಮತ್ತು ಎಂಜಲು ಬಳಸಿ ಗೂಡುಕಟ್ಟುತ್ತವೆ. ರೈತರಿಗೆ ಇವುಗಳಿಂದ ಬಹಳ ಸಹಾಯವಾಗುತ್ತದೆ, ಎಷ್ಟು ಆರ್ಟಿಸ್ಟಿಕ್‌ ಆಗಿದೆ ಗೂಡು’ ಅಂತ.

Advertisement

ನಾನು ನೋವಿನಿಂದ ಮುಲುಗುತ್ತಿದ್ದೆ. ಮಂಜು ಎಲ್ಲ ರೀತಿಯ ಉಪಚಾರ ಮಾಡಿ ಕಡೆಗೆ, “ನಿಂಗೆ ಯಾಕೆ ಕಚ್ಚಿದ್ದು ಅಂತ ಬಾಳ ಯೇಚೆ° ಮಾಡಿದೆ. ಆಗ ನೆನಪಾಯ್ತು. ಆ ದಿನ ನೀನು ಜೇನುಹುಳ ಗೂಡು ಕಟ್ಟೈತೆ ಅಂತ ನನ್ನ ಹತ್ರ ಬೈದೆ ನೋಡು! ಅದನ್ನು ಇದು ಕೇಳಸ್ಕೊಂಡೈತೆ. ಮನುಸ್ಯರಾದ್ರೆ ಬೇರೆಯವ್ರಿಗೆ ಬೈದ್ರೆ ಖುಶಿ ಪಡ್ತಾರೆ. ಇವು ಹಂಗಲ್ಲ. ಅದೂ ಇದೂ ಒಂದೇ ಜಾತಿ. ಹಾಗಾಗಿ, ಈ ರೀತಿ ಸೇಡು ತೀರಿಸಿಕೊಂಡೈತೆೆ’ ಎಂದು ಸಮಾಧಾನ ಮಾಡಿ, ನನ್ನನ್ನು ಬಿಡುಗಡೆ ಮಾಡಿದಳು.

ಆಮೇಲೆ ಕಡಜ ಕಚ್ಚಿದ ಜಾಗವನ್ನು ಚೆನ್ನಾಗಿ ಸೋಪು ನೀರಲ್ಲಿ ತೊಳೆದು, ಮೇಲೆ ಐಸ್‌ ಇಟ್ಟು ಮಾತ್ರೆ ನುಂಗಿ¨ªಾಯಿತು. ಆದರೂ ಎರಡು ದಿನಗಳ ಕಾಲ ನೋವು-ಉರಿ ಇತ್ತು. ಎಲ್ಲಕ್ಕಿಂತ ಮಿಗಿಲಾಗಿ ಕೂರಲು ಕೂಡ ಕಷ್ಟವಾಗುತ್ತಿತ್ತು. ಯೋಗಾಸನದ ಕಲಿತದ್ದು ಅನುಕೂಲವೇ ಆಯಿತೆನ್ನಿ.

ಸಮಸ್ಯೆ ಇಷ್ಟಕ್ಕೇ ಮುಗಿಯಲಿಲ್ಲ. ನಮ್ಮ ಮಂಜು ಯಾನೆ ಶ್ರೀಮತಿ ಮಂಜುಳಾರವರು ಊರಿನ ತುಂಬ, “ಅಕ್ಕನಿಗೆ ಕಡಜ ಕಡಿದಿದೆ’ ಎಂದು ಸುದ್ದಿ ಹರಡಿದ್ದಳು. ಅದಾದರೂ ಅಡ್ಡಿಯಿರಲಿಲ್ಲ. ಜೊತೆಗೆ ಕರಾರುವಕ್ಕಾಗಿ ಎಲ್ಲಿ ಕಚ್ಚಿದೆ ಎಂದು ಪ್ರಚಾರ ಮಾಡಿದ್ದಳು! ಅಪಪ್ರಚಾರದಲ್ಲಿ ಅವಳು ವಾಟ್ಸಾಪ್‌, ಫೇಸ್‌ಬುಕ್‌ಗಿಂತಲೂ ಮಿಗಿಲು. ಮರುದಿನ ವಾಕಿಂಗ್‌ಗೆ ಹೋದಾಗ‌ ಎಲ್ಲರೂ ಕಾಳಜಿಯಿಂದ ವಿಚಾರಿಸುವವರೇ! ನನಗೇಕೋ ಅವರ ಅನುಕಂಪದ ದೃಷ್ಟಿ ನನ್ನ ಹಿಂಭಾಗದತ್ತಲೇ ಇದೆ ಅನ್ನಿಸಿ ಮುಜುಗರವಾಗಿತ್ತು. ಆ ದಿನ ಸಂಜೆ, ಹಲ್ಲು ಕೀಳಿಸಲು ಮನೆಯ ಹತ್ತಿರದ ಪುಟ್ಟ ಹುಡುಗಿ ತಾಯಿಯೊಂದಿಗೆ ನನ್ನ ಕ್ಲಿನಿಕ್‌ಗೆ ಬಂದಿದ್ದಳು. “ಇಂಜೆಕ್ಷನ್‌ ಕೊಡುವಾಗ ಸಣ್ಣ ಸೊಳ್ಳೆ ಕಚ್ಚಿದ ಹಾಗಾಗುತ್ತೆ’ ಎಂದು ವಾಡಿಕೆಯಂತೆ ತಿಳಿಸಿದೆ. ಕೂಡಲೇ, “ನಿಮ್ಮ ಬಮ್‌ಗೆ ಬಿಗ್‌ ಬೀ ಕಚ್ಚಿ ತುಂಬ ಪೇನ್‌ ಆಯ್ತಲ್ಲ, ಅಷ್ಟಾಗಲ್ಲ ಅಲ್ವಾ!’ ಎನ್ನಬೇಕೆ? “ಇಲ್ಲ’ ಎಂದು ಅವಳಿಗೆ ಸಮಾಧಾನ ಹೇಳಿದೆ. ಒಟ್ಟಿನಲ್ಲಿ ಕಡಜವೂ ಮಂಜುವೂ ಸೇರಿ ನನ್ನ ಮರ್ಯಾದೆಯನ್ನು ಮೂರಾಬಟ್ಟೆ ಮಾಡಿದ್ದರು.

ಹೊಸವರ್ಷದಲ್ಲಂತೂ ಕಡಜ ಕಚ್ಚಿದರೂ ಅಡ್ಡಿಯಿಲ್ಲ , ಅದನ್ನು ಮಂಜುವಿಗೆ ಹೇಳುವುದೇ ಇಲ್ಲ ಎಂಬ ನಿರ್ಣಯವನ್ನು ತಳೆದಿದ್ದೇನೆ.

ಕೆ. ಎಸ್‌. ಚೈತ್ರಾ

Advertisement

Udayavani is now on Telegram. Click here to join our channel and stay updated with the latest news.

Next