Advertisement

ವಿಜೃಂಭಣೆಯ ಐತಿಹಾಸಿಕ ನಾಡ ಹಬ್ಬ ದಸರಾ ಜಂಬೂ ಸವಾರಿ

11:48 PM Oct 24, 2023 | Team Udayavani |

ಮೈಸೂರು: ವಿಶ್ವವಿಖ್ಯಾತ ಮೈಸೂರು ದಸರಾ ಉತ್ಸವವು ಮಂಗಳವಾರ ಸಂಭ್ರಮ, ಸಡಗರ, ವಿಜ್ರಂಭಣೆಯ ವಿಜಯದಶಮಿ ಮೆರವಣಿಗೆಯೊಂದಿಗೆ ಸಂಪನ್ನಗೊಂಡಿತು.

Advertisement

ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಮಂಗಳವಾರ ಮಧ್ಯಾಹ್ನ ಅರಮನೆಯ ಬಲರಾಮ ದ್ವಾರದಲ್ಲಿ ನಂದಿಧ್ವಜಕ್ಕೆ ಪೂಜೆ ನೆರವೇರಿಸಿದರು. ಅನಂತರ ದಸರಾ ಮೆರವಣಿಗೆಯು ಅರಮನೆ ಆವರಣದಿಂದ ಮಧ್ಯಾಹ್ನ 2.30 ಗಂಟೆಗೆ ಆರಂಭವಾಯಿತು. ಮೆರವಣಿಗೆಯಲ್ಲಿ ರಾಜ್ಯದ ನಾನಾ ಜಿಲ್ಲೆಗಳ ಸ್ತಬ್ಧಚಿತ್ರಗಳು, ಕಲಾತಂಡಗಳು ಸಾಗಿದವು. ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಅರಮನೆ ಆವರಣದಲ್ಲಿ ಸಂಜೆ 5 ಗಂಟೆ 9 ನಿಮಿಷಕ್ಕೆ ಅಭಿಮನ್ಯು ಆನೆಯು 750 ಕೆ.ಜಿ. ತೂಕದ ಚಿನ್ನದ ಅಂಬಾರಿಯಲ್ಲಿ ಹೊತ್ತಿದ್ದ ಶ್ರೀ ಚಾಮುಂಡೇಶ್ವರಿ ದೇವಿಯ ವಿಗ್ರಹಕ್ಕೆ ಪುಷ್ಪಾರ್ಚನೆ ಸಲ್ಲಿಸಿದರು. ಡಿಸಿಎಂ ಡಿ.ಕೆ. ಶಿವಕುಮಾರ್‌, ಜಿಲ್ಲಾ ಉಸ್ತುವಾರಿ ಸಚಿವ ಡಾ| ಎಚ್‌.ಸಿ. ಮಹದೇವಪ್ಪ, ಸಚಿವ ಶಿವರಾಜ ತಂಗಡಗಿ, ಯದುವೀರ ಕೃಷ್ಣದತ್ತ ಚಾಮರಾಜ ಒಡೆಯರ್‌, ಮೇಯರ್‌ ಶಿವಕುಮಾರ್‌, ಜಿಲ್ಲಾಧಿಕಾರಿ ಡಾ| ಕೆ.ವಿ.ರಾಜೇಂದ್ರ, ಮೈಸೂರು ನಗರ ಪೊಲೀಸ್‌ಆಯುಕ್ತ ರಮೇಶ್‌ ಬಾನೋತ್‌ ಅವರು ಶ್ರೀ ಚಾಮುಂಡೇಶ್ವರಿ ದೇವಿಗೆ ಪುಷ್ಪಾರ್ಚನೆ ಮಾಡಿದರು.

ದೇವಿಗೆ ಪುಷ್ಪಾರ್ಚನೆ ಸಲ್ಲುತ್ತಿದ್ದಂತೆ ರಾಷ್ಟ್ರಗೀತೆ ಮೊಳಗಿತು. ಅರಮನೆ ಆವರಣದಲ್ಲಿ 21 ಕುಶಾಲತೋಪುಗಳನ್ನು ಹಾರಿಸಲಾಯಿತು. ಅಭಿಮನ್ಯು ಆನೆಯ ಮೇಲೆ ಕುಳಿತಿದ್ದ ಮಾವುತ ವಸಂತ ಸೆಲ್ಯೂಟ್‌ ಹೊಡೆದರು. ನೆರೆದಿದ್ದ ಲಕ್ಷಾಂತರ ಜನರು ಶ್ರೀ ಚಾಮುಂಡೇಶ್ವರಿ ದೇವಿಗೆ ಭಕ್ತಿಯಿಂದ ಕೈಮುಗಿದು ಭಾವಪರವಶರಾದರು. ಶ್ರೀ ಚಾಮುಂಡೇಶ್ವರಿ ದೇವಿಗೆ ಜೈ ಎಂದು ಘೋಷಣೆಗಳನ್ನು ಕೂಗಿದರು. ಶ್ರೀ ಚಾಮುಂಡೇಶ್ವರೀ ದೇವಿಯ ವಿಗ್ರಹ ಹೊತ್ತ ಅಭಿಮನ್ಯು ಆನೆಯು ನಿಧಾನವಾಗಿ ಹೆಜ್ಜೆ ಹಾಕುತ್ತಾ ಬನ್ನಿಮಂಟಪದ ಕಡೆ ಸಾಗಿತು. ಅಭಿಮನ್ಯು ಜತೆ ಕುಮ್ಕಿ ಆನೆಗಳಾದ ವಿಜಯ ಮತ್ತು ವರಲಕ್ಷ್ಮೀ ಹೆಜ್ಜೆ ಹಾಕಿತು. ಅಂಬಾರಿ ಆನೆಯ ಜತೆಗೆ 200 ಮಂದಿ ರಾಜ ವೈಭವದ ದಿರಿಸಿನೊಂದಿಗೆ ಸಾಗಿದ್ದು ಈ ಬಾರಿಯ ವಿಶೇಷವಾಗಿತ್ತು.

ಚಾಮುಂಡಿಬೆಟ್ಟದಲ್ಲಿ ನಾಡದೇವತೆ ಶ್ರೀ ಚಾಮುಂಡೇಶ್ವರಿ ದೇವಿಯ ಅಗ್ರಪೂಜೆಯೊಂದಿಗೆ ಅ. 15ರಂದು ಉದ್ಘಾಟನೆಗೊಂಡಿತ್ತು. ಚಲನಚಿತ್ರ ಸಾಹಿತಿ, ಸಂಗೀತ ನಿರ್ದೇಶಕ ಡಾ| ಹಂಸಲೇಖ ಅವರು ದಸರಾ ಉತ್ಸವವನ್ನು ಉದ್ಘಾಟಿಸಿದ್ದರು. ಮಂಗಳವಾರ ವಜ್ರಮುಷ್ಠಿ ಕಾಳಗದ ಬಳಿಕ ಒಡೆಯರ್‌ ಅವರು ಅರಮನೆ ಅಂಗಳದಲ್ಲಿ ವಿಜಯಯಾತ್ರೆ ವಿಧಿವಿಧಾನ ನೆರವೇರಿಸಿದರು. ಅರಮನೆ ಕರಿಕಲ್ಲು ತೊಟ್ಟಿಯಲ್ಲಿ ವಜ್ರಮುಷ್ಠಿ ಕಾಳಗ ಮುಗಿದ ಅನಂತರ ಭುವನೇಶ್ವರಿ ಅಮ್ಮನವರ ದೇಗುಲಕ್ಕೆ ವಿಜಯಯಾತ್ರೆ ಹೊರಟರು. ಬಳಿಕ ಬನ್ನಿಮರಕ್ಕೆ ಸಂಪ್ರದಾಯದಂತೆ ವಿಶೇಷ ಪೂಜೆ ಸಲ್ಲಿಸಿದರು.

ಮುಹೂರ್ತ ಮೀರಿದ ಅನಂತರ ಪುಷ್ಪಾರ್ಚನೆ

Advertisement

ದಸರಾ ಉತ್ಸವದ ವಿಜಯದಶಮಿ ಮೆರವಣಿಗೆಯಲ್ಲಿ ಮಂಗಳವಾರ ಮುಹೂರ್ತದ ಸಮಯ ಮೀರಿದ ಅನಂತರ ಶ್ರೀ ಚಾಮುಂಡೇಶ್ವರೀ ದೇವಿಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಪುಷ್ಪಾರ್ಚನೆ ಸಲ್ಲಿಸಿದ ಪ್ರಸಂಗ ನಡೆಯಿತು. ವಿಜಯದಶಮಿ ಮೆರವಣಿಗೆಯಲ್ಲಿ ಶ್ರೀ ಚಾಮುಂಡೇಶ್ವರೀ ದೇವಿಗೆ ಸಂಜೆ 4.40ರಿಂದ 5 ಗಂಟೆವರೆಗೆ ಸಲ್ಲುವ ಶುಭ ಮೀನ ಲಗ್ನದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಪುಷ್ಪಾರ್ಚನೆ ನೆರವೇರಿಸಬೇಕಿತ್ತು. ಆದರೆ, ಸಿದ್ದರಾಮಯ್ಯ ಅವರು ಶ್ರೀ ಚಾಮುಂಡೇಶ್ವರೀ ದೇವಿಗೆ ಪುಷ್ಪಾರ್ಚನೆ ಸಲ್ಲಿಸಿದಾಗ ಸಮಯ ಸಂಜೆ 5 ಗಂಟೆ 9 ನಿಮಿಷ ಆಗಿತ್ತು.

2ನೇ ಬಾರಿಗೆ ಅಂಬಾರಿ ಹೊತ್ತು ಸಾಗಿದ ಅಭಿಮನ್ಯು

ತನ್ನ ಹೆಗಲ ಮೇಲೆ 750 ಕೆ.ಜಿ. ತೂಕದ ಚಿನ್ನದ ಅಂಬಾರಿ ಹೊತ್ತ ಅಭಿಮನ್ಯು ಯಾವುದೇ ಬಿಂಕ-ಬಿಗುಮಾನ, ಅಂಜಿಕೆಯಿಲ್ಲದೆ ಗಾಂಭೀರ್ಯದಿಂದ ದಾರಿಯುದ್ದಕ್ಕೂ ಜನರತ್ತ ಸೊಂಡಿಲೆತ್ತಿ ನಮಿಸುತ್ತ ಸಂಜೆ 7.25ರ ಹೊತ್ತಿಗೆ ಬನ್ನಿಮಂಟಪ ತಲುಪಿದ. ಈ ಮೂಲಕ ಅಭಿಮನ್ಯು 2ನೇ ಬಾರಿಗೆ ಯಶಸ್ವಿಯಾಗಿ ಅಂಬಾರಿ ಹೊತ್ತು ಸಾಗಿದ. ರಾಜ್ಯದ ವಿವಿಧ ಜಿಲ್ಲೆ, ಹೊರ ರಾಜ್ಯ ಸೇರಿ ದೇಶ ವಿದೇಶಗಳಿಂದ ಲಕ್ಷಾಂತರ ಮಂದಿ ಜಂಬೂ ಸವಾರಿ ವೀಕ್ಷಣೆ ಮಾಡಿದರು. ರಸ್ತೆಯ ಬದಿಯಲಿದ್ದ ಕಟ್ಟಡ, ಮರಗಳನ್ನೂ ಏರಿ ಮೆರವಣಿಗೆ ವೀಕ್ಷಿಸಿದರು.

ವಿವಿಧ ಜಿಲ್ಲೆಗಳ 49 ಸ್ತಬ್ಧಚಿತ್ರಗಳು

ವಿಜಯದಶಮಿ ಮೆರವಣಿಗೆಯಲ್ಲಿ ರಾಜ್ಯದ ನಾನಾ ಜಿಲ್ಲೆಗಳಿಂದ ಆಗಮಿಸಿದ್ದ 49 ಸ್ತಬ್ಧಚಿತ್ರಗಳು ಸಾಗಿದವು. ರಾಜ್ಯದ ವಿವಿಧ ಜಿಲ್ಲೆಗಳ ನೂರಕ್ಕೂ ಹೆಚ್ಚು ಕಲಾ ತಂಡಗಳು ತಮ್ಮ ಕಲೆಯನ್ನು ಪ್ರದರ್ಶಿಸಿದವು. ಅರಮನೆ ಆವರಣದಿಂದ ಹೊರಟ ಜಂಬೂ ಸವಾರಿಯು ಕೋಟೆ ಆಂಜನೇಯ ಸ್ವಾಮಿ ದೇವಸ್ಥಾನ, ಕೆ.ಆರ್‌. ಸರ್ಕಲ್‌, ಸಯ್ನಾಜಿರಾವ್‌ ರಸ್ತೆ, ಬಂಬೂ ಬಜಾರ್‌ ಮೂಲಕ ಸುಮಾರು ಐದು ಕಿ.ಮೀ. ದೂರದ ಬನ್ನಿಮಂಟಪವನ್ನು ತಲುಪಿತು. ದಾರಿಯ ಉದ್ದಕ್ಕೂ ರಸ್ತೆಯ ಎರಡು ಬದಿಗಳಲ್ಲಿದ್ದ ಜನರು ವೈಭವದ ರಾಜ್ಯದ ನಾಡ ಹಬ್ಬ ವಿಜಯ ದಶಮಿ ಮೆರವಣಿಗೆಯನ್ನು ಕಣ್ತುಂಬಿಕೊಂಡರು. ಮೆರವಣಿಗೆಯು ವೇಳೆ ಪೊಲೀಸರು ಬಿಗಿ ಬಂದೋಬಸ್ತ್  ಅನ್ನು ಕೈಗೊಂಡಿದ್ದರು.

 ಕೂಡ್ಲಿ ಗುರುರಾಜ

Advertisement

Udayavani is now on Telegram. Click here to join our channel and stay updated with the latest news.

Next