Advertisement

ದುಗ್ಗೊಟ್ಟು ಡಂಪಿಂಗ್‌ ಯಾರ್ಡ್‌, ತ್ಯಾಜ್ಯ ಭೂ ಭರ್ತಿ!

11:33 PM Dec 21, 2022 | Team Udayavani |

ಕಾರ್ಕಳ: ಕಸ ನಿರ್ವಹಣೆ ಜವಾಬ್ದಾರಿಯನ್ನು ಆಡಳಿತ ಸಂಸ್ಥೆ ಸಮರ್ಥವಾಗಿ ನಿಭಾಯಿಸಿದ್ದೆ ಆದಲ್ಲಿ ಅರ್ಧ ಸಮಸ್ಯೆಗಳು ಬಗೆಹರಿ ಯುತ್ತವೆ. ನಿರ್ವಹಣೆಯಲ್ಲಿ ಆಗುವ ವೈಫ‌ಲ್ಯವು ಸಮಸ್ಯೆಗಳ ಸರಮಾಲೆಗಳನ್ನೇ ಸೃಷ್ಟಿಸುತ್ತದೆ. ಮುಡಾರು ಗ್ರಾ.ಪಂ. ವ್ಯಾಪ್ತಿಯ ದುಗ್ಗೊಟ್ಟು ಡಂಪಿಂಗ್‌ ಯಾರ್ಡ್‌ ನಲ್ಲಿ ಇದೇ ಆಗಿದ್ದು, ಪರಿಸರದ ನಾಗರಿಕರಿಗೆ ರೋಗ ಹರಡುವ ಕೇಂದ್ರವಾಗಿ ಯಾರ್ಡ್‌ ಮಾರ್ಪಟ್ಟಿದೆ.

Advertisement

ದುಗ್ಗೊಟ್ಟುವಿನಲ್ಲಿ ಮುಡಾರು ಗ್ರಾ.ಪಂ.ನ ತ್ಯಾಜ್ಯ ಸಂಗ್ರಹ ಡಂಪಿಂಗ್‌ ಯಾರ್ಡ್‌ ಇದೆ. ಆವರಣವೂ ಇದೆ. ಆವರಣದೊಳಗೆ ಸೂಚಿತ ಪ್ರದೇಶದಲ್ಲಿ ಕಸ ಹಾಕದೆ ಹೊರ ಭಾಗದಲ್ಲಿ ತ್ಯಾಜ್ಯ ತಂದು ಎಸೆಯಲಾಗುತ್ತಿದೆ. ಕಸ, ತ್ಯಾಜ್ಯ ಎಲ್ಲೆಂದರಲ್ಲಿ ಸುರಿಯುತ್ತಿರುವುದರಿಂದ ಆಗುತ್ತಿರುವ ಸಮಸ್ಯೆಗಳು ಸುತ್ತಮುತ್ತಲಿನ ನಾಗರಿಕರ ನೆಮ್ಮದಿ ಕೆಡಿಸಿದೆ. ಸಾರ್ವಜನಿಕರೋ ಕೋಳಿ ಮಾರಾಟ ಗಾರರೋ ಇನ್ಯಾರೋ ಕೋಳಿ ಮಾಂಸ ಇನ್ನಿತರ ತ್ಯಾಜ್ಯಗಳನ್ನು ಇಲ್ಲಿ ತಂದು ಎಸೆದು ಹೋಗುತ್ತಿದ್ದಾರೆ.

ಪಂ. ಡಂಪಿಂಗ್‌ ಯಾರ್ಡ್‌ ಇದು
ಕಸ ವಿಲೆವಾರಿ ವೈಜ್ಞಾನಿಕವಾಗಿ ವಿಲೇವಾರಿ ನಡೆಯುತ್ತಿದೆ. ಎಸ್‌ಎಲ್‌ಆರ್‌ಎಂ ಘಟಕದಲ್ಲಿ ಸಗ್ರಿಗೇಟ್‌ ಮಾಡಲು ಸಾಧ್ಯವಾಗದನ್ನು ಮಡ್ಡು, ಮಣ್ಣು ಮಿಶ್ರಿತ ಅಂಶಗಳುಳ್ಳ ಇಂತಹವುಗಳನ್ನು ಪ್ರತ್ಯೇಕವಾಗಿ ಇಂತಿಷ್ಟು ಎಂದು ಇಲ್ಲಿನ ಡಂಪಿಂಗ್‌ ಸೈಟ್‌ನಲ್ಲಿ ಸಂಗ್ರಹಿಸಿಡಲು ಅವಕಾಶವಿದೆ. ಸಾರ್ವಜನಿಕರು ಕಸ, ತ್ಯಾಜ್ಯ ತಂದು ಇಲ್ಲಿ ಎಸೆಯುತ್ತಿರುವ ಬಗ್ಗೆಯೂ ನಮಗೆ ದೂರು ಬಂದಿದೆ. ಬೀಗ ಇದ್ದರೂ ಒಡೆಯುತ್ತಾರೆ. ಜನವಸತಿ ಇಲ್ಲದ ಸ್ಥಳ ಇದಾಗಿದ್ದು. ಸಿಸಿ ಕೆಮರಾ ಅಳವಡಿಸುವುದು ಕೂಡ ಕಷ್ಟ. ಈ ಬಗ್ಗೆ ಮುಂದಿನ ಸಭೆಯಲ್ಲಿ ರಕ್ಷಣಾತ್ಮಕ ನಿರ್ಧಾರ ತೆಗೆದುಕೊಳ್ಳಲಾಗುವುದು ಎಂದು ಪಂ. ಪಿಡಿಒ ರಮೇಶ್‌ ಹೇಳುತ್ತಾರೆ.

ಭೂಮಿಯೊಡಲು ಸೇರುತ್ತಿದೆ ಕಸ
ದುಗ್ಗೊಟ್ಟು ಪರಿಸರದಲ್ಲಿ ಕಸ ನಿರ್ವಹಣೆ ಪರಿಸ್ಥಿತಿ ಹೇಗಿದೆ ಎಂದು ಖುದ್ದಾಗಿ ಒಮ್ಮೆ ಹೋಗಿ ನೋಡಿದರೆ ವಸ್ತು ಸ್ಥಿತಿಯೇ ಬೇರೆಯದೇ ಅಲ್ಲಿದೆ. ಆಳೆತ್ತರದ ಹೊಂಡಗಳನ್ನು ಅಗೆದು ಕಸ, ತ್ಯಾಜ್ಯಗಳನ್ನು ಅವೈಜ್ಞಾನಿಕವಾಗಿ ಭೂಭರ್ತಿ ಮಾಡಲಾಗುತ್ತಿದೆ. ಗೋಣಿ ಚೀಲಗಳಲ್ಲಿ ಪ್ಲಾಸ್ಟಿಕ್‌ ಇನ್ನಿತರ ಕರಗದ ತ್ಯಾಜ್ಯಗಳು ಕಂಡುಬರುತ್ತಿವೆ. ನೆಲದ ಮೇಲೂ ಸುರಿಯಲಾಗಿದೆ. ಒಣ ಕಸಗಳನ್ನು ಸಂಗ್ರಹಿಸಿ ವಿಲೇವಾರಿ ಮಾಡಬೇಕು. ಆದರಿಲ್ಲಿ ಮಣ್ಣೊಳಗೆ ತುರುಕಿಸಿ, ಹುದುಗಿಸಿ ಭೂಭರ್ತಿ ಮಾಡಿ, ಭೂಮಿ ತಾಯ ಒಡಲಿಗೆೆ ವಿಷವನ್ನಿಕ್ಕುವ ಕೃತ್ಯ ನಡೆಯುತ್ತಿದೆ.

ಚಿರತೆ ಚಿಂತೆ, ರೋಗ ಭೀತಿ
ಯಾರ್ಡ್‌ನ ಅನತಿ ದೂರಗಳ ಪರಿಸರದಲ್ಲಿ 150ಕ್ಕೂ ಅಧಿಕ ಮನೆಗಳಿವೆ. ಪರಿಸರದಲ್ಲಿ ಅಂಗನವಾಡಿ, ಕಾಲೇಜು, ಹಾಸ್ಟೆಲ್‌ಗ‌ಳಿವೆ. ಕೊಳೆತ ತ್ಯಾಜ್ಯ, ಕಸಗಳನ್ನು ಇಲ್ಲಿ ತಂದು ಸುರಿಯುವುದರಿಂದ ಪರಿಸರ ಮಾಲಿನ್ಯ, ರೋಗ ಹರಡಲು ಕಾರಣವಾಗುತ್ತಿದೆ. ಗಬ್ಬು ವಾಸನೆ ಕಿ.ಮೀ. ದೂರಕ್ಕೆ ಹರಡುತ್ತಿದೆ. ಮಳೆ ಬಂದಾಗ ತ್ಯಾಜ್ಯಗಳು ನೀರಿನೊಂದಿಗೆ ಸೇರಿ ಪರಿಸರದ ಕೆಲವು ನಾಗರಿಕರ ಬಾವಿಗಳನ್ನು ಸೇರುತ್ತಿದೆ. ಕಾಡಿನಂಚಿನಲ್ಲಿ ಈ ಪ್ರದೇಶವಿದ್ದು ತ್ಯಾಜ್ಯಗಳನ್ನು ತಿನ್ನಲು ಚಿರತೆಗಳು ಇಲ್ಲಿಗೆ ಬರುತ್ತಿದ್ದು, ಇದೇ ಪರಿಸರದಲ್ಲಿ ಓಡಾಡುವ ಶಾಲಾ ಮಕ್ಕಳು, ಮಹಿಳೆಯರು, ನಾಗರಿಕರು ದಾಳಿ ಭೀತಿ ಎದುರಿಸುತ್ತಿದ್ದಾರೆ.

Advertisement

ಡಿಸಿ, ಮಾಲಿನ್ಯ ನಿಯಂತ್ರಣ ಬೋರ್ಡ್‌ ಗಮನಕ್ಕೂ ತಂದರೂ ಪ್ರಯೋಜವನಿಲ್ಲ
ಇಲ್ಲಿನ ಕಸ, ತ್ಯಾಜ್ಯ ಸಂಗ್ರಹಕ್ಕೆ ಮುಕ್ತಿ ನೀಡುವಂತೆ ವರ್ಷದ ಹಿಂದೆಯೇ ಸ್ಥಳೀಯಾಡಳಿತ, ತಾ.ಪಂ, ಜಿ.ಪಂ, ಜಿಲ್ಲಾಧಿಕಾರಿ, ಮಾಲಿನ್ಯ ನಿಯಂತ್ರಣ ಬೋರ್ಡ್‌ ತನಕವೂ ಮನವಿ ನೀಡಿದ್ದೇವೆ. ಆದರೂ ಪ್ರಯೋಜನವಾಗಿಲ್ಲ ಎಂದು ಅಲ್ಲಿಯವರು ಬೇಸರ ವ್ಯಕ್ತಪಡಿಸುತ್ತಿದ್ದಾರೆ.

ಸಂಘ ಸಂಸ್ಥೆಗಳ ಪ್ರಯತ್ನವೂ ವ್ಯರ್ಥ
ಸ್ವತ್ಛ ಬಜಗೋಳಿ ತಂಡ ನಿರಂತರವಾಗಿ ಈ ಭಾಗದಲ್ಲಿ ಕಸ ಹೆಕ್ಕುವ ಅಭಿಯಾನವನ್ನು 61 ವಾರಗಳ ಕಾಲ ನಡೆಸಿದೆ. ಕಾರ್ಕಳ ಸ್ವತ್ಛ ಬ್ರಿಗೇಡ್‌, ಸಂಘ ಸಂಸ್ಥೆ, ಶಿಕ್ಷಣ ಸಂಸ್ಥೆಗಳ ಸಹಕಾರದಲ್ಲಿ ನಡೆಸುತ್ತಾ ಬರುತ್ತಿದೆ. ಹೆಕ್ಕಿ ನೀಡಿದ ಕಸವನ್ನು° 3 ತಿಂಗಳಾದರೂ ಪಂ. ವಿಲೇವಾರಿ ಮಾಡುತ್ತಿಲ್ಲ ಎಂದು ಸ್ವತ್ಛ ಬಜಗೋಳಿ ತಂಡದ ಸದಸ್ಯರು ಬೇಸರ ವ್ಯಕ್ತಪಡಿಸುತ್ತಾರೆ.

ಭೂಭರ್ತಿಗೆ ಅವಕಾಶವಿಲ್ಲ
ತ್ಯಾಜ್ಯಗಳನ್ನು ವೈಜ್ಞಾನಿಕವಾಗಿ ವಿಲೇವಾರಿ ನಡೆಸಬೇಕು, ಭೂಗರ್ಭಕ್ಕೆ ಸೇರಿಸುವುದಕ್ಕೆ ಅವಕಾಶ ವಿಲ್ಲ. ಎಂಆರ್‌ಎಫ್ ಘಟಕಕ್ಕೆ ಕೊಂಡೊಯ್ಯ ಲಾಗದ ತ್ಯಾಜ್ಯವನ್ನು ಸಂಗ್ರಹಿಸಿಡಲು ಅವಕಾಶವಿದೆ. ಆದರೆ ಹಾಗೆ ಮಣ್ಣಿನಲ್ಲಿ ಹೂಳಲು ಅವಕಾಶವಿಲ್ಲ. ಈ ಬಗ್ಗೆ ಮಾಹಿತಿ ಪಡೆಯುವೆ.
– ಗುರುದತ್ತ್, ಇಒ ತಾ.ಪಂ. ಕಾರ್ಕಳ

– ಬಾಲಕೃಷ್ಣ ಭೀಮಗುಳಿ

Advertisement

Udayavani is now on Telegram. Click here to join our channel and stay updated with the latest news.

Next