Advertisement

ಖಾಸಗಿ ಸಂಸ್ಥೆಗಳ ಹೆಗಲಿಗೆ ಒಣತ್ಯಾಜ್ಯ ಅಧ್ಯಯನ ಹೊಣೆ

09:21 AM May 06, 2022 | Team Udayavani |

ಹುಬ್ಬಳ್ಳಿ: ಒಣ ತ್ಯಾಜ್ಯ ಸಂಗ್ರಹಣ ಘಟಕಗಳ ಪ್ರಾಯೋಗಿಕ ಕಾರ್ಯಾರಂಭ ಮಾಡಿದ್ದ ಮಹಾನಗರ ಪಾಲಿಕೆ ಇದೀಗ ಸಮರ್ಪಕ ಅಧ್ಯಯನಕ್ಕಾಗಿ ಖಾಸಗಿ ಸಂಸ್ಥೆಗಳಿಗೆ ವಹಿಸಿದ್ದು, ಒಂದು ತಿಂಗಳಲ್ಲಿ ಸಂಗ್ರಹವಾಗುವ ವಿವಿಧ ಬಗೆಯ ತ್ಯಾಜ್ಯ, ಆದಾಯ, ಆದಾಯ ಹಂಚಿಕೆ ಸೇರಿದಂತೆ ಸಮಗ್ರ ವರದಿ ತಯಾರಿಸಲು ವಹಿಸಲಾಗಿದೆ.

Advertisement

ಒಣ ತ್ಯಾಜ್ಯ ಸಂಗ್ರಹಣ ಘಟಕಗಳಲ್ಲಿ ಯಂತ್ರಗಳು ಅಳವಡಿಕೆ ನಂತರ ಪ್ರಾಯೋಗಿಕವಾಗಿ ಮಹಾನಗರ ಪಾಲಿಕೆ ನಿರ್ವಹಣೆ ಕೈಗೆತ್ತಿಕೊಂಡಿತ್ತು. ನಿತ್ಯ ತಲಾ 5 ಟನ್‌ ಒಣ ತ್ಯಾಜ್ಯ ಪ್ರತ್ಯೇಕಿಸುವ 4 ಹಾಗೂ 15 ಟನ್‌ ಸಾಮರ್ಥಯದ 1 ಘಟಕಗಳನ್ನು ಪಾಲಿಕೆ ಪೌರಕಾರ್ಮಿಕರ ಮೂಲಕ ನಿರ್ವಹಿಸಲಾಗುತ್ತಿದೆ.

ಇದರಲ್ಲಿ ಒಂದು ಘಟಕವನ್ನು ಎನ್‌ಜಿಒ ನಿರ್ವಹಣೆ ಮಾಡುತ್ತಿದೆ. ಆದರೆ ತಿಂಗಳಿಗೆ ಎಷ್ಟು ಒಣ ತ್ಯಾಜ್ಯ ಸಂಗ್ರಹವಾಗುತ್ತಿದೆ, ಇದರಿಂದ ಎಷ್ಟು ಆದಾಯ ಪಡೆಯಬಹುದು ಸೇರಿದಂತೆ ಸಮಗ್ರ ನಿರ್ವಹಣೆ ಸಾಧ್ಯವಾಗಿರಲಿಲ್ಲ. ಹೀಗಾಗಿ ಐದು ಘಟಕಗಳ ಪೈಕಿ ನಾಲ್ಕು ಘಟಕಗಳನ್ನು ಹಸಿರು ದಳ ಹಾಗೂ ಒಂದು ಘಟಕವನ್ನು ವಸುಂಧರ ಫೌಂಡೇಶನ್‌ಗೆ ನೀಡಲಾಗಿದೆ.

ತಿಂಗಳೊಳಗೆ ಸಮಗ್ರ ವರದಿ: ದೀರ್ಘಾವಧಿಯವರೆಗೆ ಪಾಲಿಕೆಯಿಂದ ಘಟಕಗಳ ನಿರ್ವಹಣೆ ಅಸಾಧ್ಯ ಎನ್ನುವ ಕಾರಣಕ್ಕೆ ಖಾಸಗಿ ಸಂಸ್ಥೆಗಳು, ಎನ್‌ಜಿಒಗಳ ಮೂಲಕ ಆದಾಯ ವಿಂಗಡಣೆ ಮಾದರಿಯಲ್ಲಿ ನೀಡುವುದಕ್ಕೆ ನಿರ್ಧರಿಸಲಾಗಿತ್ತು. ಇದರ ಸಾಧಕ ಬಾಧಕಗಳ ಕುರಿತು ಅಧ್ಯಯನ ನಡೆಸಲು ಈ ಎರಡು ಸಂಸ್ಥೆಗಳಿಗೆ ನೀಡಲಾಗಿದೆ. ಹಸಿರು ದಳ ಸಂಸ್ಥೆ ಇಂದಿರಾ ನಗರ, ನಂದಿನಿ ಲೇಔಟ್‌, ಉಣಕಲ್ಲ ಹಾಗೂ ಧಾರವಾಡ ಘಟಕ ಇನ್ನೂ ವಸುಂಧರ ಫೌಂಡೇಶನ್‌ ಬೆಂಗೇರಿ ಘಟಕ ನೀಡಲಾಗಿದೆ. ಒಂದು ತಿಂಗಳ ಅವಧಿಯಲ್ಲಿ ಘಟಕ ನಿರ್ವಹಣೆ, ಸಿಬ್ಬಂದಿಗೆ ಖರ್ಚು, ಸಂಗ್ರಹವಾಗುವ ವಿವಿಧ ಮಾದರಿಯ ತ್ಯಾಜ್ಯ, ಇದರಿಂದ ಬರುವ ಆದಾಯ, ಬರುವ ಆದಾಯದಲ್ಲಿ ಪಾಲಿಕೆ ಹಾಗೂ ಸಂಸ್ಥೆಗೆ ಹಂಚಿಕೆ, ಸಮರ್ಪಕವಾಗಿ ಕಸ ವಿಂಗಡಣೆ, ಜನರಲ್ಲಿ ಜಾಗೃತಿ ಹೀಗೆ ಪ್ರತಿಯೊಂದು ಕಾರ್ಯಗಳನ್ನು ಎರಡು ಸಂಸ್ಥೆಗಳು ನಿರ್ವಹಿಸಬೇಕು. ಒಂದು ತಿಂಗಳಲ್ಲಿ ಸಮಗ್ರ ವರದಿ ಸಿದ್ಧಪಡಿಸಿ ಪಾಲಿಕೆಗೆ ಸಲ್ಲಿಸಬೇಕು. ಇದರಲ್ಲಿ ಯಾವ ವರದಿ ಉತ್ತಮ ಎನ್ನುವುದನ್ನು ಅಧ್ಯಯನ ಮಾಡಿ ಯಾವ ಸಂಸ್ಥೆಗೆ ವಹಿಸಿಕೊಡುವ ಬಗ್ಗೆ ಪಾಲಿಕೆ ನಿರ್ಧಾರ ಕೈಗೊಳ್ಳಲಿದೆ.

ಉತ್ತಮ ಆದಾಯವಿದೆ: ಹಸಿರು ದಳ ಸಂಸ್ಥೆ ಈಗಾಗಲೇ ಇಂದಿರಾ ನಗರದಲ್ಲಿರುವ ಘಟಕವನ್ನು ನಿರ್ವಹಣೆ ಮಾಡುತ್ತಿದೆ. ಹೊಸ ಘಟಕಗಳಲ್ಲಿ ಕನ್ವೇನರ್‌ ಬೆಲ್ಟ್ ಅಳವಡಿಸುವುದರಿಂದ ಪ್ಲಾಸ್ಟಿಕ್‌ ಬಾಟಲ್‌, ಕಟ್ಟಿಗೆ, ಚಪ್ಪಲ್‌, ಕಾಗದ, ಪ್ಲಾಸ್ಟಿಕ್‌ ವಸ್ತುಗಳು, ರಟ್ಟು ಸೇರಿದಂತೆ ಸುಮಾರು 14 ವಸ್ತುಗಳನ್ನು ಬೇರ್ಪಡಿಸಬಹುದಾಗಿದೆ. ಉಳಿದಂತೆ ಮ್ಯಾಗ್ನೇಟ್‌ ಸಪರೇಟರ್‌ ಯಂತ್ರ ಲೋಹದ ವಸ್ತುಗಳನ್ನು ಬೇರ್ಪಡಿಸುತ್ತದೆ. ಅಂತಿಮವಾಗಿ ಬೇಲಿಂಗ್‌ ಯಂತ್ರದ ಮೂಲಕ ಆರ್‌ಡಿಎಫ್‌ (ಪರ್ಯಾಯ ಇಂಧನ) ಸಿದ್ಧಪಡಿಸಬಹುದಾಗಿದೆ. ಹೊಸ ತಂತ್ರಜ್ಞಾನ ಆಧಾರಿತ ಯಂತ್ರಗಳ ಅಳವಡಿಕೆಯಿಂದಾಗಿ ಹೆಚ್ಚಿನ ಕಾರ್ಮಿಕರ ಅಗತ್ಯವಿಲ್ಲ. ಹೀಗಾಗಿ ನಿರೀಕ್ಷಿತ ಆದಾಯ ಪಡೆಯಬಹುದಾಗಿದೆ.

Advertisement

ಆದಾಯಕ್ಕೆ ಸವಾಲೊಡ್ಡಿದ ಕಸ ವಿಂಗಡಣೆ: ಪ್ರತಿಯೊಂದು ಒಣ ತ್ಯಾಜ್ಯ ಸಂಗ್ರಹ ಘಟಕಗಳಿಗೆ ಪಾಲಿಕೆ 70-75 ಲಕ್ಷ ರೂ. ಸಾರ್ವಜನಿಕ ತೆರಿಗೆ ಹಣ ವಿನಿಯೋಗಿಸಲಾಗಿದೆ. ಹೀಗಾಗಿ ಪಾಲಿಕೆಗೆ ಸಮರ್ಪಕ ನಿರ್ವಹಣೆ ಜತೆಗೆ ಆದಾಯದ ನಿರೀಕ್ಷೆಯೂ ಇದೆ. ಆದರೆ ಮನೆ ಮನೆಗಳಿಂದ ಹಸಿ ಕಸ ಹಾಗೂ ಒಣ ಕಸ ವಿಂಗಡಣೆಯಾಗದಿರುವುದು ಪಾಲಿಕೆ ದೊಡ್ಡ ಸವಾಲಿನ ಕಾರ್ಯವಾಗಿದೆ. ನಿತ್ಯವೂ ಕಸ ಸಂಗ್ರಹಿಸುವ ಆಟೋ ಟಿಪ್ಪರ್‌ಗಳ ಜಿಂಗಲ್‌ ಮೂಲಕ ಜಾಗೃತಿ ಮೂಡಿಸಿದರೂ ಸಮರ್ಪಕ ವಿಂಗಡಣೆ ಸಾಧ್ಯವಿಲ್ಲ. ಅಧಿಕಾರಿಗಳು ಕೊಂಚ ಬಿಗಿ ಮಾಡಿದಾಗ ಆಯಾ ವಾಡ್‌ ìನ ಆರೋಗ್ಯ ನಿರೀಕ್ಷಕರು ಎಚ್ಚೆತ್ತುಕೊಳ್ಳುತ್ತಾರೆ. ಇದರಿಂದ ಆಟೋ ಟಿಪ್ಪರ್‌ ಕಾರ್ಮಿಕರು ವಿಂಗಡಣೆ ಕಸ ಮಾತ್ರ ಪಡೆಯುತ್ತಾರೆ. ನಂತರದಲ್ಲಿ ಯಥಾ ಸ್ಥಿತಿಗೆ ತಲುಪುತ್ತಿದೆ. ಇದರಿಂದಾಗಿ ನಿರೀಕ್ಷಿಸಿದ ಆದಾಯ-ನಿರ್ವಹಣೆ ಅಸಾಧ್ಯವಾಗಿದೆ.

ಕಠಿಣ ಕ್ರಮವಿಲ್ಲ ಯಾಕೆ: ಕಾಯ್ದೆ ಪ್ರಕಾರ ಹಸಿ ಕಸ ಹಾಗೂ ಒಣ ಕಸ ವಿಂಗಡಿಸಿ ಕೊಡಬೇಕು. ಇಂತಹ ಕಸವನ್ನು ಮಾತ್ರ ಪೌರ ಕಾರ್ಮಿಕರು ಪಡೆಯಬೇಕು. ಕಸ ವಿಂಗಡಿಸಿ ಕೊಟ್ಟರೂ ಟಿಪ್ಪರ್‌ ಕಾರ್ಮಿಕರು ಅದನ್ನು ಒಂದೇ ಕಂಟೇನರ್‌ಗೆ ಸುರಿಯುವುದು ನಡೆಯುತ್ತಿದೆ. ಇಷ್ಟೆಲ್ಲಾ ಆದರೂ ಕಸ ನೀಡುವವರು ಹಾಗೂ ಪಡೆಯುವವರ ವಿರುದ್ಧ ಯಾವುದೇ ಕ್ರಮ ಆಗದಿರುವುದು ಪ್ರಾಥಮಿಕ ಹಂತದಲ್ಲೇ 60 ಕೋಟಿ ರೂ. ಸಮಗ್ರ ಘನ ತ್ಯಾಜ್ಯ ನಿರ್ವಹಣಾ ವ್ಯವಸ್ಥೆ ಸಮರ್ಪಕ ನಡೆಯದಂತಾಗಿದೆ. ಪ್ರಾಥಮಿಕ ಹಂತದಲ್ಲಿ ಕಠಿಣ ಕ್ರಮ ಕೈಗೊಂಡರೆ ಯಶಸ್ಸು ಸಾಧ್ಯ ಎನ್ನುವುದು ಖಾಸಗಿ ಸಂಸ್ಥೆ ವಹಿಸಿಕೊಂಡಿರುವ ಪ್ರದೇಶದಲ್ಲಿ ಸಾಬೀತಾಗಿದೆ. ಪಾಲಿಕೆ ಘನ ತ್ಯಾಜ್ಯ ನಿರ್ವಹಣಾ ವಿಭಾಗ ಈ ಬಗ್ಗೆ ಇನ್ನಷ್ಟು ಕಾರ್ಯಪ್ರವೃತ್ತವಾದರೆ ಮಾತ್ರ ಈ ಯೋಜನೆ ಯಶಸ್ವಿಯಾಗಲು ಸಾಧ್ಯವಾಗಿದೆ.

ಒಣ ತ್ಯಾಜ್ಯ ಸಂಗ್ರಹಣ ಘಟಕಗಳ ಸಮಗ್ರ ನಿರ್ವಹಣೆ ಕುರಿತು ವರದಿ ತಯಾರಿಸಲು ಎರಡು ಸಂಸ್ಥೆಗಳಿಗೆ ಘಟಕಗಳನ್ನು ನೀಡಲಾಗಿದೆ. ಒಂದು ತಿಂಗಳೊಳಗೆ ಸಮಗ್ರ ವರದಿ ತಯಾರಿಸಿ ನೀಡಲಿದ್ದಾರೆ. ಈ ವರದಿ ಆಧರಿಸಿ ಒಂದು ವ್ಯವಸ್ಥೆ ಅಳವಡಿಕೆ ಮಾಡಲು ಸಾಧ್ಯವಾಗುತ್ತದೆ. ಸ್ಥಳೀಯವಾಗಿ ಕಸ ಆಯುವವರಿಗೂ ನಿರಂತರ ಕೆಲಸ ನೀಡಿದಂತಾಗುತ್ತದೆ. ಸಮರ್ಪಕ ನಿರ್ವಹಣೆಯೊಂದಿಗೆ ಪಾಲಿಕೆಗೆ ಒಂದಿಷ್ಟು ಆದಾಯ ಬರಲಿದೆ. –ಡಾ| ಗೋಪಾಲಕೃಷ್ಣ, ಆಯುಕ್ತ, ಮಹಾನಗರ ಪಾಲಿಕೆ

ಕಳೆದ ಒಂದು ವರ್ಷದಿಂದ ಒಂದು ಘಟಕವನ್ನು ಕಸ ಆಯುವವರನ್ನು ಬಳಸಿಕೊಂಡು ಯಶಸ್ವಿಯಾಗಿ ನಿರ್ವಹಿಸುತ್ತಿದ್ದೇವೆ. ಪಾಲಿಕೆ ನಿರೀಕ್ಷೆ ಪ್ರಕಾರ ಒಂದು ತಿಂಗಳಲ್ಲಿ ಪ್ರತಿಯೊಂದು ಅಂಶಗಳನ್ನೊಳಗೊಂಡ ವರದಿ ನೀಡುತ್ತೇವೆ. ಪ್ರಾಥಮಿಕ ಹಂತದಲ್ಲೇ ಕಸ ವಿಂಗಡಣೆಯಾದರೆ ನಿರ್ವಹಣೆ-ನಿರೀಕ್ಷಿತ ಆದಾಯ ಪಡೆಯಬಹುದಾಗಿದೆ. –ಮಂಜುನಾಥ ಬಾರಕೇರ, ವ್ಯವಸ್ಥಾಪಕ, ಹಸಿರು ದಳ ಸಂಸ್ಥೆ                              

ಹೇಮರಡ್ಡಿ ಸೈದಾಪುರ

Advertisement

Udayavani is now on Telegram. Click here to join our channel and stay updated with the latest news.

Next