Advertisement

“ದೃಶ್ಯ’ಆಯ್ತು ಈಗ “ಆ.. ದೃಶ್ಯ’

09:59 AM Aug 16, 2019 | Lakshmi GovindaRaj |

ಕ್ರೇಜಿಸ್ಟಾರ್‌ ರವಿಚಂದ್ರನ್‌ ಅಭಿನಯದ “ದೃಶ್ಯ’ ಚಿತ್ರ ನಿಮಗೆ ನೆನಪಿರಬಹುದು. 2014ರಲ್ಲಿ ತೆರೆಗೆ ಬಂದ ಸಸ್ಪೆನ್ಸ್‌, ಕ್ರೈಂ-ಥ್ರಿಲ್ಲರ್‌ ಕಥಾಹಂದರದ “ದೃಶ್ಯ’ ಚಿತ್ರ ರವಿಚಂದ್ರನ್‌ ಅವರಿಗೂ ಹೊಸ ಇಮೇಜ್‌ ತಂದುಕೊಟ್ಟಿತ್ತು. ಈಗ ಅದೇ ಹೆಸರಿನಲ್ಲಿ “ಆ… ದೃಶ್ಯ’ ಎನ್ನುವ ಚಿತ್ರ ತೆರೆಗೆ ಬರುತ್ತಿದೆ. ಈ ಚಿತ್ರದಲ್ಲೂ ರವಿಚಂದ್ರನ್‌ ನಾಯಕನಾಗಿ ಕಾಣಿಸಿಕೊಳ್ಳುತ್ತಿದ್ದು, ಇತ್ತೀಚೆಗೆ “ಆ… ದೃಶ್ಯ’ ಚಿತ್ರದ ಟ್ರೇಲರ್‌ ಬಿಡುಗಡೆಯಾಗಿದೆ.

Advertisement

“ಕೆ. ಮಂಜು ಸಿನಿಮಾಸ್‌’ ಬ್ಯಾನರ್‌ನಲ್ಲಿ ಕೆ. ಮಂಜು ಈ ಚಿತ್ರವನ್ನು ನಿರ್ಮಿಸುತ್ತಿದ್ದು, ಈ ಹಿಂದೆ “ತ್ರಾಟಕ’, “ಜಿಗರ್‌ಥಂಡ’ ಚಿತ್ರಗಳನ್ನು ನಿರ್ದೇಶಿಸಿದ್ದ ಶಿವಗಣೇಶ್‌ “ಆ… ದೃಶ್ಯ’ ಚಿತ್ರವನ್ನು ನಿರ್ದೇಶಿಸುತ್ತಿದ್ದಾರೆ. ಅಂದಹಾಗೆ, “ಆ… ದೃಶ್ಯ’ ಚಿತ್ರ ಕೆಲವರ್ಷಗಳ ಹಿಂದೆ ತಮಿಳಿನಲ್ಲಿ ಬಂದಿದ್ದ “ಧ್ರುವಂಗಳ್‌ 16′ ಚಿತ್ರದ ಕನ್ನಡ ರಿಮೇಕ್‌. ತಮಿಳು ಚಿತ್ರದ ಮೂಲ ಕಥೆಯನ್ನು ಇಟ್ಟುಕೊಂಡು ಅದನ್ನ ಕನ್ನಡದ ನೇಟಿವಿಟಿಗೆ ತಕ್ಕಂತೆ ತೆರೆಗೆ ತಂದಿದ್ದೇವೆ.

“ಆ… ದೃಶ್ಯ’ ಚಿತ್ರ ಕೂಡ ಈ ಹಿಂದೆ ರವಿಚಂದ್ರನ್‌ ಅಭಿನಯಿಸಿದ್ದ “ದೃಶ್ಯ’ ಚಿತ್ರದಂತೆ ಸಸ್ಪೆನ್ಸ್‌, ಕ್ರೈಂ-ಥ್ರಿಲ್ಲರ್‌ ಜಾನರ್‌ನ ಚಿತ್ರ ಎನ್ನುವುದು ಚಿತ್ರತಂಡದ ಮಾತು. ಇನ್ನು “ದೃಶ್ಯ’ ಚಿತ್ರದಲ್ಲಿ ಪೊಲೀಸರಿಂದ ಟಾರ್ಚರ್‌ ಅನುಭವಿಸಿದ್ದ ರಾಜೇಂದ್ರ ಪೊನ್ನಪ್ಪ ಪಾತ್ರದಲ್ಲಿ ಕಾಣಿಸಿಕೊಂಡಿದ್ದ ರವಿಚಂದ್ರನ್‌, “ಆ… ದೃಶ್ಯ’ ಚಿತ್ರದಲ್ಲಿ ತನಿಖಾಧಿಕಾರಿಯಾಗಿ ಅಪರಾಧಿಗಳಿಗೆ ಟಾರ್ಚರ್‌ ನೀಡುತ್ತಾರಂತೆ. ಇನ್ನು “ಆ… ದೃಶ್ಯ’ ಚಿತ್ರದ ಬಗ್ಗೆ ನಟ ರವಿಚಂದ್ರನ್‌ ಕೂಡ ಸಾಕಷ್ಟು ಭರವಸೆಯ ಮಾತುಗಳನ್ನಾಡುತ್ತಾರೆ.

“ಇತ್ತೀಚೆಗೆ ವಿಭಿನ್ನ ಬಗೆಯ ಪಾತ್ರಗಳು ಬರುತ್ತಿವೆ. “ಕುರುಕ್ಷೇತ್ರ’ದಲ್ಲಿ ಕೃಷ್ಣನಾಗಿದ್ದೆ, ಇನ್ನೊಂದು ಹೊಸ ಚಿತ್ರದಲ್ಲಿ ಸೀನಿಯರ್‌ ಸಿಟಿಜನ್‌ ಆಗಿದ್ದೇನೆ. ಈ ಚಿತ್ರದಲ್ಲಿ ತನಿಖಾಧಿಕಾರಿಯಾಗಿದ್ದೇನೆ. ನಿರ್ದೇಶಕರು ಇದರಲ್ಲಿ 30 ವರ್ಷ ವಯಸ್ಸಿನವನಂತೆ ನನ್ನಿಂದ ನಟನೆ ತೆಗೆಸಿದ್ದಾರೆ. ಪ್ರತಿ ಹೊಸ ಚಿತ್ರವನ್ನು ಮಾಡುವಾಗಲೂ ಅದರ ನಿರ್ದೇಶಕ ಬಳಿ ಬಂದಾಗ ನಾನು ಕೂಡ ಹೊಸಬನಾಗಿರುತ್ತಾನೆ.

Advertisement

ಚಿತ್ರದಲ್ಲಿ ಕೇವಲ ಒಂದೇ ಹಾಡಿದ್ದು, ಅದು ಕೊನೆಯಲ್ಲಿ ಬರುತ್ತದೆ. ಹಿನ್ನಲೆ ಸಂಗೀತಕ್ಕೆ ಸಾಕಷ್ಟು ಪ್ರಾಮುಖ್ಯತೆ ಇದೆ. ಇದರಲ್ಲಿರುವ ಸೌಂಡ್‌ ಜನರ ಮನಸ್ಸಿಗೆ ತಟ್ಟಿದರೆ, ಚಿತ್ರ ಗ್ಯಾರಂಟಿ ಹಿಟ್‌ ಆಗುತ್ತದೆ’ ಎನ್ನುವುದು ರವಿಮಾಮನ ಭರವಸೆಯ ಮಾತು. ಉಳಿದಂತೆ “ಆ… ದೃಶ್ಯ’ ಚಿತ್ರದಲ್ಲಿ ರವಿಚಂದ್ರನ್‌ ಅವರೊಂದಿಗೆ ಚೈತ್ರಾ ಆಚಾರ್‌, ಅಜಿತ್‌ ಜಯರಾಜ್‌, ನಿಸರ್ಗ, ಗಿರೀಶ್‌, ರಕ್ಷಿತ್‌, ಯಶ್‌ ಶೆಟ್ಟಿ ಮುಂತಾದವರು ಪ್ರಮುಖ ಪಾತ್ರಗಳಲ್ಲಿ ಅಭಿನಯಿಸಿದ್ದಾರೆ.

ಚಿತ್ರಕ್ಕೆ ವಿನೋದ್‌ ಭಾರತಿ, ಸತೀಶ್‌ ಬಿಲ್ಲಾಡಿ ಛಾಯಾಗ್ರಹಣ ಮತ್ತು ಸುರೇಶ್‌ ಆರ್ಮುಗಂ ಸಂಕಲನ ಕಾರ್ಯವಿದೆ. ಚಿತ್ರದ ಹಾಡುಗಳಿಗೆ ಗೌತಂ ಶ್ರೀವತ್ಸ ಸಂಗೀತ ಸಂಯೋಜನೆಯಿದ್ದು, ವಿ. ನಾಗೇಂದ್ರ ಪ್ರಸಾದ್‌ ಸಾಹಿತ್ಯವನ್ನು ಒದಗಿಸಿದ್ದಾರೆ. ಮೃಗಶಿರ ಶ್ರೀಕಾಂತ್‌ ಸಂಭಾಷಣೆ, ಕುಂಗ್‌ಫ‌ು ಚಂದ್ರು ಸಾಹಸ ಚಿತ್ರದಲ್ಲಿದೆ. ಸದ್ಯ ಬಿಡುಗಡೆಯಾಗಿರುವ “ಆ… ದೃಶ್ಯ’ ಚಿತ್ರದ ಟ್ರೇಲರ್‌ ನಿಧಾನವಾಗಿ ಸಿನಿಪ್ರಿಯರ ಗಮನ ಸೆಳೆಯುತ್ತಿದ್ದು, ಇದೇ ದಸರಾ ಹಬ್ಬದ ವೇಳೆಗೆ ಚಿತ್ರವನ್ನು ಪ್ರೇಕ್ಷಕರ ಮುಂದೆ ತರುವ ಯೋಚನೆಯಲ್ಲಿದೆ ಚಿತ್ರತಂಡ.

Advertisement

Udayavani is now on Telegram. Click here to join our channel and stay updated with the latest news.

Next