Advertisement

Arrested: ಹಣದ ವಿಚಾರಕ್ಕೆ ಮದ್ಯದ ನಶೆಯಲ್ಲಿ ಸ್ನೇಹಿತನಿಗೆ ಬ್ಲೇಡ್‌ನಿಂದ ಹಲ್ಲೆ: ಸೆರೆ

11:43 AM Feb 18, 2024 | Team Udayavani |

ಬೆಂಗಳೂರು:  ಮದ್ಯದ ಅಮಲಿನಲ್ಲಿ ಹಣದ ವಿಚಾರಕ್ಕೆ ಸ್ನೇಹಿತನಿಗೆ ಬ್ಲೇಡ್‌ನಿಂದ ಹಲ್ಲೆಗೈದು ಕೊಲೆಗೆ ಯತ್ನಿಸಿದ ಆರೋಪಿಯನ್ನು ಹಲಸೂರು ಗೇಟ್‌ ಠಾಣೆ ಪೊಲೀ ಸರು ಬಂಧಿಸಿದ್ದಾರೆ.

Advertisement

ನಗರ್ತಪೇಟೆಯ ಸಂತೋಷ್‌(26) ಬಂಧಿತ. ಆರೋಪಿ ಫೆ.15 ರಂದು ಮಧ್ಯಾಹ್ನ 12 ಗಂಟೆಗೆ ರಾಜ ಅಲಿಯಾಸ್‌ ರಾಜರಾವ್‌(25) ಎಂಬಾತನ ಮೇಲೆ ಬ್ಲೇಡ್‌ನಿಂದ ಹೊಟ್ಟೆ ಹಾಗೂ ಭುಜದ ಭಾಗಕ್ಕೆ ಕೊಯ್ದು ಕೊಲೆಗೆ ಯತ್ನಿಸಿದ್ದ. ಈ ಸಂಬಂಧ ದಾಖಲಾದ ದೂರಿನ ಮೇರೆಗೆ ಕಾರ್ಯಾಚರಣೆ ನಡೆಸಿ ಆರೋಪಿಯನ್ನು ಬಂಧಿಸಲಾಗಿದೆ.

ಆರೋಪಿ ಸಂತೋಷ್‌ ಮತ್ತು ಗಾಯಾಳು ರಾಜ ಹಲವು ವರ್ಷ ಗಳಿಂದ ಸ್ನೇಹಿತರು. ನಗರ್ತಪೇಟೆ, ಚಿಕ್ಕಪೇಟೆ ಸುತ್ತಮುತ್ತ ಕೂಲಿ ಮಾಡಿಕೊಂಡು ಜೀವನ ಮಾಡುತ್ತಿದ್ದರು. ದುಶ್ಚಟಗಳ ದಾಸರಾಗಿರುವ ಇಬ್ಬರೂ ಮನೆಗಳಿಂದ ದೂರಾಗಿದ್ದು, ರಾತ್ರಿ ವೇಳೆ ಎಲ್ಲೆಂದರಲ್ಲಿ ಮಲಗುತ್ತಿದ್ದರು. ಫೆ.15ರಂದು ಮದ್ಯದ ಅಂಗಡಿಯಲ್ಲಿ ಮದ್ಯ ಸೇವಿಸಿದ್ದ ರಾಜ ಅಂಗಡಿಯೊಂದರ ಎದುರು ಕುಳಿತ್ತಿದ್ದ. ಈ ವೇಳೆ ಪಾನಮತ್ತ ನಾಗಿ ಬಂದ ಆರೋಪಿ ಸಂತೋಷ್‌, ಮದ್ಯ ಸೇವಿಸಲು ಹಣ ಕೊಡುವಂತೆ ರಾಜನನ್ನು ಕೇಳಿದ್ದಾನೆ. ಆಗ ರಾಜ ಹಣ ಇಲ್ಲ ಎಂದಿದ್ದಾನೆ. ಇಬ್ಬರ ನಡುವೆ ವಾಗ್ವಾದ ನಡೆದಿದೆ. ಈ ವೇಳೆ ಆರೋಪಿ ಸಂತೋಷ್‌ ತನ್ನ ಜೇಬಿನಲ್ಲಿದ್ದ ಬ್ಲೇಡ್‌ ತೋರಿಸಿ, ಹಣ ಕೊಡದಿದ್ದರೆ ಸಾಯಿಸುವುದಾಗಿ ಹೆದರಿಸಿದ್ದಾನೆ. ರಾಜ ಹಣ ಇಲ್ಲ ಎಂದಾಗ, ಸಂತೋಷ್‌ ಬ್ಲೇಡ್‌ನಿಂದ ರಾಜನ ಹೊಟ್ಟೆ ಹಾಗೂ ಭುಜದ ಭಾಗಕ್ಕೆ ಹಲವು ಬಾರಿ ಕೊಯ್ದು ಪರಾರಿಯಾಗಿದ್ದಾನೆ. ರಕ್ತದ ಮಡುವಿನಲ್ಲಿದ್ದ ರಾಜನನ್ನು ಸ್ಥಳೀಯರು ಆಸ್ಪತ್ರೆಗೆ ದಾಖಲಿಸಿದ್ದು, ಪ್ರಾಣಪಾಯದಿಂದ ಪಾರಾಗಿದ್ದಾನೆ.

 

Advertisement

Udayavani is now on Telegram. Click here to join our channel and stay updated with the latest news.

Next