Advertisement

ರಸ್ತೆ ಬದಿಯಲ್ಲೇ ನಡೀತು ಬರ ಅಧ್ಯಯನ !

07:55 AM Feb 02, 2019 | Team Udayavani |

ಕಡೂರು: ಬರಪರಿಶೀಲನೆಗೆ ಶುಕ್ರವಾರ ಕಡೂರಿಗೆ ಆಗಮಿಸಿದ್ದ ರಾಜ್ಯ ಸಚಿವ ಸಂಪುಟ ಉಪಸಮಿತಿ ರಾಷ್ಟ್ರೀಯ ಹೆದ್ದಾರಿಗೆ ಹೊಂದಿಕೊಂಡ ಜಮೀನುಗಳಿಗೆ ಭೇಟಿ ನೀಡಿ ತಮ್ಮ ಬರಪರಿಶೀಲನೆ ‘ಶಾಸ್ತ್ರ’ ಮುಗಿಸಿತು.

Advertisement

ಬರಪರಿಶೀಲನೆ ವೇಳಾಪಟ್ಟಿಯಲ್ಲಿದ್ದ ಹೆಚ್ಚಿನ ಗ್ರಾಮಗಳಿಗೆ ಭೇಟಿ ನೀಡಿಲ್ಲ. ಕಳೆದ ಐದಾರು ವರ್ಷಗಳಿಂದ ಬರದಿಂದ ತತ್ತರಿಸಿದ ಯಗಟಿ ಗ್ರಾಮಕ್ಕೆ ಭೇಟಿ ನೀಡದಿರುವುದಕ್ಕೆ ಜನರು ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ಒಣಗಿದ ತೆಂಗಿನ ಮರಗಳು, ಇಳುವರಿ ಇಲ್ಲದೆ ಸೊರಗಿದ ಕೃಷಿ ಭೂಮಿ, ಕುಡಿವ ನೀರಿನ ಸಮಸ್ಯೆ ಹೀಗೆ ಹತ್ತಾರು ಸಮಸ್ಯೆಗಳು ಸಮಿತಿಯ ಗಮನಕ್ಕೆ ಬಂದಿತು.

ಸಚಿವ ಕೃಷ್ಣಭೆ„ರೇಗೌಡ ಅವರ ಜತೆಗೆ ಸಚಿವರಾದ ಜಯಮಾಲಾ, ಕೆ.ಜೆ. ಜಾರ್ಜ್‌, ವಿಧಾನ ಪರಿಷತ್‌ ಉಪಸಭಾಪತಿ ಎಸ್‌.ಎಲ್‌. ಧರ್ಮೇಗೌಡ, ಶಾಸಕರಾದ ಬೆಳ್ಳಿಪ್ರಕಾಶ್‌, ಸಿ.ಟಿ. ರವಿ, ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್‌ರಾಜ್‌ ಮುಖ್ಯ ಕಾರ್ಯದರ್ಶಿ ಆತೀಕ್‌, ಮೈಸೂರು ವಿಭಾಗ ಮಟ್ಟದ ಚಿಕ್ಕಮಗಳೂರು ಜಿಲ್ಲಾ ಉಸ್ತುವಾರಿ ನೋಡಲ್‌ ಅಧಿಕಾರಿ ರಾಜೀವ್‌ಚಾವ್ಲಾ ಆಗಮಿಸಿದ್ದರು.

ಬೆಳಗ್ಗೆ 10.40 ಸುಮಾರಿಗೆ ಆರಂಭಗೊಂಡ ಪರಿಶೀಲನೆ ಒಂದೂವರೆ ಗಂಟೆಯೊಳಗೆ ಮುಗಿಯಿತು. ಮೊದಲು ತಾಲೂಕಿನ ಗಡಿಗ್ರಾಮ ದೇವರಕಾರೇಹಳ್ಳಿಗೆ ಆಗಮಿಸಿ ಅಲ್ಲಿ ಒಣಗಿ ಬೋಳಾಗಿದ್ದ ತೆಂಗಿನ ತೋಟ ವೀಕ್ಷಿಸಿತು. ಸ್ಥಳದಲ್ಲಿದ್ದ ಶಾಸಕ ಸಿ.ಟಿ.ರವಿ ತೆಂಗು ಬೆಳೆ ವ್ಯಾಪಕವಾಗಿ ನಷ್ಟವಾಗಿದೆ. ಪರಿಹಾರ ವಿತರಣೆಯಲ್ಲಿ ವಿಳಂಬವಾಗಿದೆ ಎಂದು ಅಸಮಾಧಾನ ವ್ಯಕ್ತಪಡಿಸಿದರು. ಈ ಸಂದರ್ಭದಲ್ಲಿ ದೇಬರ ಕಾರೇಹಳ್ಳಿ ರೈತ ನಂಜುಡಪ್ಪ ಅವರ ನಾಶವಾಗಿರುವ ತೆಂಗಿನ ಮರಗಳಿಗೂ ಪರಿಹಾರ ನೀಡಿ ಎಂದು ಸಚಿವರಿಗೆ ಒತ್ತಾಯಿಸಿದರು.

Advertisement

ಇದಕ್ಕೆ ಸಚಿವರು ಉತ್ತರಿಸಿ, ಈಗಾಗಲೇ ಬೆಳೆ ಹಾನಿ ಸರ್ವೆ ಕಾರ್ಯ ಮುಗಿದಿದೆ. ನಷ್ಟದ ಅಂದಾಜು ಮತ್ತು ಸಂಬಂಧಪಟ್ಟ ರೈತರ ಮಾಹಿತಿಯನ್ನು ಗಣಕಯಂತ್ರಕ್ಕೆ ಅಳವಡಿಸಲಾಗುತ್ತಿದೆ. ಎಂದರಲ್ಲದೇ ಸ್ಥಳದಲ್ಲಿಯೇ ಇದ್ದ ಚಿಕ್ಕಮಗಳೂರು ಕೃಷಿ ಇಲಾಖೆಯ ಜಂಟಿ ನಿರ್ದೇಶಕಿ ಪೂರ್ಣಿಮಾ ಅವರಿಗೆ ಕೂಡಲೇ ಮಾಹಿತಿ ಪಡೆದು ಪರಿಹಾರ ವಿತರಣೆಗೆ ಕ್ರಮ ತೆಗೆದುಕೊಳ್ಳಿ ಎಂದು ಸೂಚಿಸಿದರು.

ನಂತರ ಮತಿಘಟ್ಟ ಗ್ರಾಮಕ್ಕೆ ಬಂದ ತಂಡಕ್ಕೆ ಇಡೀ ಗ್ರಾಮದ ಜನರು ಮುತ್ತಿಗೆಹಾಕಿ ಕಳೆದ ಹಲವು ವರ್ಷದಿಂದ ಕುಡಿವ ನೀರಿನ ಸಮಸ್ಯೆ ತಲೆದೋರಿದೆ. ಪರ್ಯಾಯ ವ್ಯವಸ್ಥೆ ಕಾಣದಾಗಿದೆ. ಶಾಶ್ವತ ಪರಿಹಾರಕ್ಕೆ ಸರಕಾರ ಮುಂದಾಗಬೇಕು. ನೀರಿನ ಟ್ಯಾಂಕರ್‌ ಸರಬರಾಜು ಹೆಚ್ಚಳಕ್ಕೆ ಒತ್ತಾಯಿಸಿದರು. ಇದಕ್ಕೆ ಸಚಿವರು,ಕುಡಿವ ನೀರಿನ ಶಾಶ್ವತ ವ್ಯವಸ್ಥೆ ಆಗುವವರೆಗೆ ಪರ್ಯಾಯ ವ್ಯವಸ್ಥೆ ಮಾಡಿ.ಟ್ಯಾಂಕರ್‌ ಹೆಚ್ಚಳಕ್ಕೆ ಮುಂದಾಗಲು ಆದೇಶಿಸಿದರು. ಬಳಿಕ ಬೀರೂರು ಬಳಿಯ ಅಮೃತಮಹಲ್‌ ಕಾವಲು ಪ್ರದೇಶಕ್ಕೆ ತೆರಳಿದ ತಂಡ ಅಲ್ಲಿ ಜಾನುವಾರುಗಳನ್ನು ವೀಕ್ಷಿಸಿ, ಮೇವು ಸಂಗ್ರಹ ಮತ್ತಿತರ ವಿಷಯದ ಮಾಹಿತಿಯನ್ನು ಅಧಿಕಾರಿಗಳಿಂದ ಪಡೆದರು. ನಂತರ ಬ್ಯಾಗಡೇಹಳ್ಳಿ ಗೇಟ್ ಬಳಿ ಬಂದ ತಂಡ ಅಲ್ಲಿ ಕುಡಿಯುವ ನೀರಿನ ಟ್ಯಾಂಕ್‌ ನಿರ್ಮಾಣದ ಕಾಮಗಾರಿ ವೀಕ್ಷಿಸಿತು.

ಕುಡಿವ ನೀರಿಗೆ 2600 ಕೋಟಿ ರೂ.ಮೀಸಲು
ಕಡೂರು:
ಬರ ಎದುರಾಗಿರುವುದರಿಂದ ರಾಜ್ಯ ಸರ್ಕಾರ ಕುಡಿಯುವ ನೀರಿಗಾಗಿಯೇ 2600 ಕೋಟಿ ರೂ. ಮೀಸಲಿರಿಸಿದೆ ಎಂದು ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್‌ ರಾಜ್‌ ಸಚಿವ ಕೃಷ್ಣ ಭೆ„ರೇಗೌಡ ತಿಳಿಸಿದರು. ಸುದ್ದಿಗಾರರೊಂದಿಗೆ ಮಾತನಾಡಿದಅವರು, ಕುಡಿವ ನೀರಿಗೆ ತೊಂದರೆಯಾಗದಂತೆ ಕ್ರಮ ಕೈಗೊಳ್ಳಲು ಜಿಲ್ಲಾ ಪಂಚಾಯತ್‌ಗಳಿಗೆ 1500 ಕೋಟಿ ರೂ. ಮತ್ತು ಶಾಸಕರ ನೇತೃತ್ವದ ಟಾಸ್ಕ್´ೋರ್ಸ್‌ ಸಮಿತಿಗೆ 134 ಕೋಟಿ ರೂ.ಅನುದಾನ ನೀಡಲಾಗಿದೆ. ಇದಲ್ಲದೆ ತೆಂಗು ಬೆಳೆಗಾರರಿಗೆ 178 ಕೋಟಿ ರೂ.ವಿಶೇಷ ಪ್ಯಾಕೇಜ್‌ ಘೋಷಿಸಲಾಗಿದೆ. ಈ ಪರಿಹಾರ ಮೊತ್ತವು ನೇರವಾಗಿ ರೈತರ ಖಾತೆಗಳಿಗೆ ಜಮಾ ಆಗಲಿದೆ ಎಂದರು. ರಾಜ್ಯದಲ್ಲಿ ಉದ್ಯೋಗ ಖಾತ್ರಿ ಯೋಜನೆ ವೇಗ ಪಡೆದುಕೊಂಡಿದೆ. ಅನೇಕ ಕಾಮಗಾರಿಗಳು ನಡೆಯುತ್ತಿವೆ. ಆದರೆ ಕೇಂದ್ರ ಸರ್ಕಾರ ಕಳೆದ ಡಿಸೆಂಬರ್‌ನಿಂದ ಹಣ ಕೊಡುವುದನ್ನು ನಿಲ್ಲಿಸಿದೆ. ಅಲ್ಲದೆ ರಾಜ್ಯದಿಂದ ಬೆಳೆ ಪರಿಹಾರವಾಗಿ 2,434 ಕೋಟಿ ರೂ. ನೀಡಲು ವರದಿ ಸಲ್ಲಿಸಿದ್ದರೂ 900 ಕೋಟಿ ರೂ. ಮಾತ್ರ ನೀಡಿದೆ. ಆದರೆ ಮಹಾರಾಷ್ಟ್ರಕ್ಕೆ ಹೆಚ್ಚು ಪರಿಹಾರ ಮೊತ್ತ ನೀಡಿದೆ ಎಂದು ದೂರಿದರು.

ಪ್ರತಿಯೊಬ್ಬ ರೈತರೂ ಬೆಳೆವಿಮೆ ಮಾಡಿಸಿಕೊಳ್ಳಿ: ಕೃಷ್ಣ ಭೈರೇಗೌಡ
ಚಿಕ್ಕಮಗಳೂರು:
ಹವಾಮಾನ ವೈಪರೀತ್ಯದಿಂದ ಬೆಳೆಹಾನಿಯಾಗಿ ರೈತರು ನಷ್ಟ ಅನುಭವಿಸುವುದನ್ನು ತಪ್ಪಿಸಲು ಬೆಳೆಗೆ ವಿಮೆ ಮಾಡಿಸಿಕೊಳ್ಳುವುದು ಉತ್ತಮ ಎಂದು ಮೈಸೂರು ವಿಭಾಗದ ಸಚಿವ ಸಂಪುಟ ಉಪಸಮಿತಿ ಅಧ್ಯಕ್ಷ ಹಾಗೂ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್‌ ರಾಜ್‌ ಸಚಿವ ಕೃಷ್ಣಭೆ„ರೇಗೌಡ ತಿಳಿಸಿದರು.

ಶುಕ್ರವಾರ ಕಡೂರಿನ ತಾಲೂಕು ಪಂಚಾಯತ್‌ ಸಭಾಂಗಣದಲ್ಲಿ ನಡೆದ ಬರ ನಿರ್ವಹಣಾ ಪ್ರಗತಿ ಪರಿಶೀಲನಾ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.

ಸಭೆಯಲ್ಲಿ ಮಾತನಾಡಿದ ಜಿಲ್ಲಾ ಪಂಚಾಯತ್‌ ಸದಸ್ಯ ಶರತ್‌ ಕೃಷ್ಣಮೂರ್ತಿ, ರಾಜ್ಯ ಸರ್ಕಾರವು ತೆಂಗಿನ ಮರಕ್ಕೆ ಪರಿಹಾರವಾಗಿ 400 ರೂ.ಗಳನ್ನು ನೀಡುತ್ತಿದೆ. ಯಾವ ಮಾನದಂಡ ಅನುಸರಿಸಿ ಈ ದರ ನಿಗದಿಪಡಿಸಲಾಗಿದೆ ಎಂಬುದು ತಿಳಿಯುತ್ತಿಲ್ಲ. ಇದರಿಂದ ರೈತರಿಗೆ ಯಾವುದೇ ಪ್ರಯೋಜನವಾಗುವುದಿಲ್ಲ ಎಂದರು.

ಇದಕ್ಕೆ ಪ್ರತಿಕ್ರಿಯಿಸಿದ ಸಚಿವ ಕೃಷ್ಣಭೆ„ರೇಗೌಡ, ಕೇಂದ್ರ ಸರ್ಕಾರ ನೀಡುತ್ತಿರುವ ದರಕ್ಕಿಂತ 2 ಪಟ್ಟು ಹೆಚ್ಚು ಹಣವನ್ನು ರಾಜ್ಯ ಸರ್ಕಾರ ನೀಡುತ್ತಿದೆ. ಇದು ಪರಿಹಾರವಲ್ಲ. ಮಾನವೀಯ ನೆಲಗಟ್ಟಿನಲ್ಲಿ ನೀಡುತ್ತಿರುವ ಹಣ. ರೈತರು ತಾವು ಬೆಳೆದ ಬೆಳೆಗೆ ವಿಮೆ ಮಾಡಿಸಿಕೊಳ್ಳುವುದರಿಂದ ಹೆಚ್ಚಿನ ಪರಿಹಾರ ಪಡೆದುಕೊಳ್ಳಲು ಸಾಧ್ಯವಾಗುತ್ತದೆ ಎಂದು ತಿಳಿಸಿದರು.

ಪ್ರಧಾನಮಂತ್ರಿ ಫಸಲ್‌ ಬಿಮಾ ಯೋಜನೆಯಡಿ ವಿಮೆ ಮಾಡಿಸಿಕೊಂಡಿದ್ದ ರೈತರಿಗೆ ಹೆಚ್ಚಿನ ಪರಿಹಾರ ದೊರೆತಿದೆ. ಈ ಜಿಲ್ಲೆಯಲ್ಲಿಯೇ ವಿಮೆ ಮಾಡಿಸಿದ್ದ ರೈತರಿಗೆ 51 ಕೋಟಿ ರೂ. ಪರಿಹಾರದ ಹಣ ದೊರೆತಿದೆ. ಅದರಲ್ಲಿಯೂ ಹೆಚ್ಚಿನ ಪಾಲು ತೋಟಗಾರಿಕಾ ಬೆಳೆಗಳಿಗೆ ದೊರೆತಿದೆ. ರೈತರು ವಿಮೆ ಮಾಡಿಸಲು ಜನಪ್ರತಿನಿಧಿಗಳು ಪ್ರೇರೇಪಿಸಬೇಕು ಎಂದರು.

ತೋಟಗಾರಿಕಾ ಇಲಾಖೆ ಉಪನಿರ್ದೇಶಕಿ ಪೂರ್ಣಿಮಾ ಮಾತನಾಡಿ, ಜಿಲ್ಲೆಯಲ್ಲಿ ಅನುತ್ಪಾದಕ ಮತ್ತು ಹಾಳಾಗಿರುವ ತೆಂಗಿನ ಮರಗಳನ್ನು ಗುರುತಿಸಲಾಗಿದೆ. ಈ ಪೈಕಿ 19673 ರೈತರಿಗೆ 18.92 ಕೋಟಿ ರೂ. ಪರಿಹಾರಧನ ನೀಡಬೇಕಿದೆ. ಅದರಲ್ಲಿ ಈವರೆಗೂ 2 ಸಾವಿರ ರೈತರಿಗೆ ಪರಿಹಾರಧನ ನೀಡಲಾಗಿದೆ ಎಂದು ಹೇಳಿದರು.

ಇದಕ್ಕೆ ಅಸಮಾಧಾನ ವ್ಯಕ್ತಪಡಿಸಿದ ಸಚಿವರು, ಇಲಾಖೆಯಲ್ಲಿ ಹಣದ ಕೊರತೆ ಇಲ್ಲ. ಹೀಗಿರುವಾಗ ರೈತರಿಗೆ ಪರಿಹಾರಧನ ನೀಡಲು ವಿಳಂಬ ಮಾಡಿರುವುದು ಏಕೆ. ಕೂಡಲೆ ಎಲ್ಲ ರೈತರಿಗೂ ಪರಿಹಾರಧನ ವಿತರಿಸಿ ಎಂದು ಸೂಚಿಸಿದರು.

ಜಿಲ್ಲಾಧಿಕಾರಿ ಎಂ.ಕೆ.ಶ್ರೀರಂಗಯ್ಯ ಮಾತನಾಡಿ, ಮುಂಗಾರು ಹಂಗಾಮಿನಲ್ಲಿ ಜಿಲ್ಲೆಯ ಕಡೂರು ತಾಲೂಕನ್ನು ಬರಪೀಡಿತ ಪ್ರದೇಶವೆಂದು ಸರ್ಕಾರ ಘೋಷಣೆ ಮಾಡಿತ್ತು. ಹಿಂಗಾರು ಹಂಗಾಮಿನಲ್ಲಿ ಜಿಲ್ಲೆಯ ಎಲ್ಲ ತಾಲೂಕುಗಳನ್ನೂ ಬರಪೀಡಿತ ಪ್ರದೇಶವೆಂದು ಘೋಷಿಸಲಾಗಿದೆ ಎಂದರು.

ಜಿಲ್ಲೆಯಲ್ಲಿ ಜಾನುವಾರುಗಳಿಗೆ ಮೇವಿಗೆ ಕೊರತೆಯಾಗದಂತೆ ನಿಗಾ ವಹಿಸಲಾಗಿದೆ. ಮಲೆನಾಡು ಭಾಗದಲ್ಲಿ ಭತ್ತ ಕಟಾವಿಗೆ ಬಂದಿರುವುದರಿಂದ ಮೇವಿಗೆ ಕೊರತೆಯಾಗುವ ಸಾಧ್ಯತೆ ಕಡಿಮೆ.ಜಿಲ್ಲೆಯಲ್ಲಿ ಬೆಳೆದ ಮೇವನ್ನು ಬೇರೆಡೆಗೆ ಕಳುಹಿಸದಂತೆ ಈಗಾಗಲೆ ಆದೇಶ ಹೊರಡಿಸಲಾಗಿದೆ. ಈಗ ಲಭ್ಯವಿರುವ ಮೇವು 29 ವಾರಗಳಿಗೆ ಸಾಲುತ್ತದೆ ಎಂದು ತಿಳಿಸಿದರು.

ಜಿ.ಪಂ. ಸಿ.ಇ.ಒ. ಸತ್ಯಭಾಮಾ ಮಾತನಾಡಿ, ಸರ್ಕಾರದಿಂದ ಕುಡಿಯುವ ನೀರಿನ ನಿರ್ವಹಣೆಗಾಗಿ ಜಿಲ್ಲಾ ಪಂಚಾಯತ್‌ಗೆ ಈವರೆಗೂ 39.44 ಕೋಟಿ ರೂ. ಅನುದಾನ ಬಿಡುಗಡೆ ಮಾಡಿದೆ. ಈ ಪೈಕಿ ಈವರೆಗೂ 12.21 ಕೋಟಿ ರೂ.ಗಳನ್ನು ಬಳಸಿಕೊಳ್ಳಲಾಗಿದೆ. ಇದರೊಂದಿಗೆ ಟಾಸ್ಕ್ ´ೋರ್ಸ್‌ ಸಮಿತಿಗೆ ಸರ್ಕಾರದಿಂದ ಕುಡಿಯುವ ನೀರಿನ ಕಾಮಗಾರಿಗಳಿಗಾಗಿ ಅನುದಾನ ಬಿಡುಗಡೆ ಮಾಡಿದೆ. ಕಡೂರು ತಾಲೂಕಿಗೆ 1 ಕೋಟಿ ಹಾಗೂ ಉಳಿದಂತೆ ಎಲ್ಲ ತಾಲೂಕುಗಳಿಗೂ ತಲಾ 50 ಲಕ್ಷ ರೂ.ಗಳನ್ನು ಬಿಡುಗಡೆ ಮಾಡಲಾಗಿದೆ ಎಂದು ಹೇಳಿದರು.

ಜಿಲ್ಲೆಯ ವಿವಿಧ ತಾಲೂಕುಗಳ 1022 ಗ್ರಾಮಗಳಲ್ಲಿ ಕುಡಿಯುವ ನೀರಿನ ತೊಂದರೆ ಕಂಡುಬಂದಿದೆ. ಚಿಕ್ಕಮಗಳೂರು ತಾಲೂಕಿನಲ್ಲಿ 213, ಮೂಡಿಗೆರೆ 139, ಶೃಂಗೇರಿ 48, ಕೊಪ್ಪ 80, ನರಸಿಂಹರಾಜಪುರ 57, ಕಡೂರು 272 ಹಾಗೂ ತರೀಕೆರೆ ತಾಲೂಕಿನ 213 ಗ್ರಾಮಗಳಲ್ಲಿ ಕುಡಿಯುವ ನೀರಿನ ತೊಂದರೆ ಕಂಡುಬಂದಿದೆ. ನೀರಿನ ತೀವ್ರ ತೊಂದರೆ ಉಂಟಾಗಿರುವ ಕಡೂರು ತಾಲೂಕಿನ 10 ಗ್ರಾಮಗಳಿಗೆ ಈಗ ಟ್ಯಾಂಕರ್‌ ಮೂಲಕ ನೀರು ಸರಬರಾಜು ಮಾಡಲಾಗುತ್ತಿದೆ ಎಂದರು. ಸಚಿವ ಕೃಷ್ಣಭೆ„ರೇಗೌಡ ಮಾತನಾಡಿ, ಬೇಸಿಗೆ ಆರಂಭಕ್ಕೂ ಮೊದಲೆ ಕುಡಿಯುವ ನೀರಿನ ತೊಂದರೆ ಉಂಟಾದಾಗ ಕೈಗೊಳ್ಳಬಹುದಾದ ಕ್ರಮಗಳ ಬಗ್ಗೆ ಚಿಂತನೆ ನಡೆಸಬೇಕು. ಟ್ಯಾಂಕರ್‌ ಮೂಲಕ ನೀರು ಸರಬರಾಜು ಮಾಡಿದರೆ ಜನತೆ ಅಸಮಾಧಾನವ್ಯಕ್ತಪಡಿಸುತ್ತಾರೆ. ಅದರ ಬದಲು ಈಗಲೇ ಎಲ್ಲೆಲ್ಲಿ ಖಾಸಗಿಯವರ ಬೋರ್‌ವೆಲ್‌ಗ‌ಳಿವೆ ಎಂಬುದನ್ನು ಗುರುತು ಮಾಡಿಕೊಳ್ಳುವುದು ಉತ್ತಮ. ಬಾಡಿಗೆ ಆಧಾರದ ಮೇಲೆ ಬೋರ್‌ವೆಲ್‌ಗ‌ಳನ್ನು ಪಡೆದು ಜನತೆಗೆ ಕುಡಿಯುವ ನೀರು ಒದಗಿಸುವುದು ಒಳ್ಳೆಯದು ಎಂದು ಹೇಳಿದರು.

ಉದ್ಯೋಗ ಖಾತ್ರಿ ಯೋಜನೆ ಪ್ರಗತಿ ಪರವಾಗಿಲ್ಲ. ಆದರೆ ಉದ್ಯೋಗ ಖಾತ್ರಿ ಯೋಜನೆಯಡಿ ತೆಂಗು ಮತ್ತು ಅಡಕೆ ಬೆಳೆ ಪುನಶ್ಚೇತನ ಕಾರ್ಯ ಮಾಡಬಹುದು. ಇದರಿಂದ ರೈತರಿಗೆ ಆರ್ಥಿಕವಾಗಿ ಸಹಾಯವಾಗುವುದಲ್ಲದೆ, ಅವರ ಬೆಳೆಯನ್ನೂ ಉತ್ತಮಪಡಿಸಿಕೊಳ್ಳಬಹುದು. ಸ್ಥಳೀಯ ಜನಪ್ರತಿನಿಧಿಗಳು ಈ ಬಗ್ಗೆ ಆಂದೋಲನ ನಡೆಸಬೇಕು. ರೈತರಿಗೆ ಈ ಬಗ್ಗೆ ಮನವರಿಕೆ ಮಾಡಿಕೊಡಬೇಕೆಂದು ತಿಳಿಸಿದರು.

ಮಳೆಯ ಕೊರತೆಯಿಂದ ಬೆಳೆ ಹಾನಿಗೊಳಗಾದಾಗ ಈ ಮೊದಲು ಪರಿಹಾರ ನೀಡುವ ಸಂದರ್ಭದಲ್ಲಿ ಅಧಿಕಾರಿಗಳು ಗ್ರಾಮಗಳಿಗೆ ಭೇಟಿ ನೀಡಿ ಪಟ್ಟಿ ಸಲ್ಲಿಸಬೇಕಿತ್ತು. ಆದರೆ ಅಧಿಕಾರಿಗಳಿಗೆ ಎಲ್ಲ ಗ್ರಾಮಗಳಿಗೂ ತೆರಳಿ ಪಟ್ಟಿ ಮಾಡಲು ಸಾಧ್ಯವಾಗುತ್ತಿರಲಿಲ್ಲ. ಇದರಿಂದಾಗಿ ಹಲವು ರೈತರಿಗೆ ಅನ್ಯಾಯವಾಗುತ್ತಿತ್ತು. ಇದನ್ನು ತಪ್ಪಿಸಲು ಸರ್ಕಾರ ಸಾಫ್ಟ್‌ವೇರ್‌ ಸಿದ್ದಪಡಿಸಿದೆ ಎಂದು ಸಚಿವರು ತಿಳಿಸಿದರು.

ಮುಂಗಾರು ಹಂಗಾಮಿನಲ್ಲಿ ಬೆಳೆ ವಿವರಗಳನ್ನು ಸಾಫ್ಟ್‌ವೇರ್‌ಗೆ ಹಾಕಲಾಗಿದೆ. ಈಗ ಅಧಿಕಾರಿಗಳು ಬೆಳೆ ಹಾನಿಯಾಗಿರುವ ಗ್ರಾಮ ಮತ್ತು ರೈತರ ಹೆಸರನ್ನು ನಮೂದಿಸಿ, ಸಾಫ್ಟ್‌ವೇರ್‌ಗೆ ದಾಖಲಿಸಿದರೆ ಪರಿಹಾರ ರೈತರಿಗೆ ದೊರೆಯುತ್ತದೆ. ಇದರಿಂದಾಗಿ ಯಾವುದೇ ರೈತರ ಹೆಸರೂ ಪಟ್ಟಿಯಿಂದ ಬಿಟ್ಟು ಹೋಗುವುದಿಲ್ಲ. ಅಧಿಕಾರಿಗಳು ಈ ಕೆಲಸವನ್ನು ಬೇಗನೆ ಮಾಡಬೇಕೆಂದು ಹೇಳಿದರು.

ಜಿಲ್ಲಾ ಉಸ್ತುವಾರಿ ಸಚಿವ ಕೆ.ಜೆ ಜಾರ್ಜ್‌, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ, ವಿಕಲಚೇತನರ ಹಾಗೂ ಹಿರಿಯ ನಾಗರಿಕರ ಸಬಲೀಕರಣ ಸಚಿವೆ ಡಾ| ಜಯಮಾಲಾ, ವಿಧಾನ ಪರಿಷತ್‌ ಉಪಸಭಾಪತಿ ಎಸ್‌.ಎಲ್‌.ಧರ್ಮೇಗೌಡ, ಶಾಸಕ ಬೆಳ್ಳಿ ಪ್ರಕಾಶ್‌, ಜಿ.ಪಂ.ಅಧ್ಯಕ್ಷೆ ಸುಜಾತಾ ಕೃಷ್ಣಪ್ಪ, ಉಪಾಧ್ಯಕ್ಷ ಕೆ.ಅರ್‌.ಆನಂದಪ್ಪ, ಕಡೂರು ತಾಪಂ ಅಧ್ಯಕ್ಷೆ ಭಾರತಿ, ಜಿಲ್ಲಾ ಉಸ್ತುವಾರಿ ಕಾರ್ಯದರ್ಶಿ ರಾಜೀವ್‌ ಚಾವ್ಲಾ, ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್‌ ರಾಜ್‌ ಇಲಾಖೆ ಪ್ರಧಾನ ಕಾರ್ಯದರ್ಶಿ ಎಲ್‌.ಕೆ.ಅತೀಕ್‌ ಉಪಸ್ಥಿತರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next