Advertisement

ರಾಜ್ಯದ ಜಿಡಿಪಿ ಮೇಲೆ ‘ಬರ’ದ ಕಾರ್ಮೋಡ

01:16 AM Feb 10, 2019 | |

ಬೆಂಗಳೂರು: ಮುಂಗಾರು ಮತ್ತು ಹಿಂಗಾರು ಎರಡೂ ಕೈಕೊಟ್ಟಿರುವುದರಿಂದ ಈ ಬಾರಿಯ ಬರ ರಾಜ್ಯಕ್ಕೆ ತುಸು ತೀವ್ರ ವಾಗಿಯೇ ತಟ್ಟಿದೆ. ಇದರಿಂದ ಕೃಷಿ ಮತ್ತು ಕೈಗಾರಿಕಾ ಬೆಳವಣಿಗೆಯಲ್ಲಿ ಗಣನೀಯ ಪ್ರಮಾಣದ ಇಳಿಕೆ ಕಂಡು ಬಂದಿದೆ. ಒಟ್ಟಾರೆ ಆಂತರಿಕ ಉತ್ಪನ್ನ (ಜಿಡಿಪಿ)ದ ಮೇಲೆ ಇದು ಪರಿಣಾಮ ಬೀರಿದೆ.

Advertisement

ಪ್ರಸಕ್ತ ಮುಂಗಾರಿನಲ್ಲಿ ನೂರು ಹಾಗೂ ಹಿಂಗಾರಿನಲ್ಲಿ 156 ತಾಲೂಕುಗಳು ಬರಕ್ಕೆ ತುತ್ತಾಗಿವೆ. ಇದರಿಂದ ಆಹಾರ ಉತ್ಪಾದನೆಯಲ್ಲಿ ಸುಮಾರು 44 ಲಕ್ಷ ಟನ್‌ ಖೋತಾ ಆಗಿದೆ. ಇದರಿಂದ ಕೃಷಿ ವಲಯದ ಬೆಳವಣಿಗೆ ದರ 2018-19ರಲ್ಲಿ ಶೇ.4.8ಕ್ಕೆ ಕುಸಿಯಲಿದೆ ಎಂದು ಅಂದಾಜಿಸಲಾಗಿದೆ. ಇದು ರಾಜ್ಯದ ಜಿಡಿಪಿಯಲ್ಲಿ ಕೃಷಿ ಮತ್ತು ಕೈಗಾರಿಕಾ ವಲಯಗಳ ಕೊಡುಗೆ ಮೇಲೆ ಪರಿಣಾಮ ಬೀರಿದ್ದು, ಕ್ರಮವಾಗಿ ಶೇ. 10.11 ಹಾಗೂ ಶೇ. 22.01ಕ್ಕೆ ಇಳಿಕೆಯಾಗುವ ಸ್ಪಷ್ಟ ಸೂಚನೆ ಇದೆ ಎಂದು 2018-19ನೇ ಸಾಲಿನ ಆರ್ಥಿಕ ಸಮೀಕ್ಷಾ ವರದಿ ತಿಳಿಸಿದೆ.

ಒಟ್ಟಾರೆ ರಾಜ್ಯದ ಆರ್ಥಿಕ ಸ್ಥಿತಿಯು ಬಲಿಷ್ಠ ಮತ್ತು ಸ್ಥಿರವಾಗಿದ್ದು, ಆರ್ಥಿಕ ಬಲವರ್ಧನೆಗೆ ಅಗತ್ಯ ಕ್ರಮಗಳನ್ನೂ ಕೈಗೊಳ್ಳಲಾಗಿದೆ. ಇದರ ಫ‌ಲವಾಗಿ ರಾಜಸ್ವ ಸಂಗ್ರಹ 1.66 ಲಕ್ಷ ಕೋಟಿ ರೂ.ಆಗಿದೆ. ಕಳೆದ ವರ್ಷಕ್ಕೆ ಹೋಲಿಸಿದರೆ ಶೇ.13.94ರಷ್ಟು ಏರಿಕೆ ಕಂಡು ಬಂದಿದೆ. ರಾಜಸ್ವ ತೆರಿಗೆಯೂ ಶೇ. 15.69ರಷ್ಟು ಹೆಚ್ಚಾಗಲಿದೆ ಎಂದು ನಿರೀಕ್ಷಿಸಲಾಗಿದೆ. ಇದೆಲ್ಲ ದರಿಂದ ಅಭಿವೃದ್ಧಿ ವೆಚ್ಚ ಶೇ.12.62ರಷ್ಟು ಏರಿಕೆಯಾಗಿದೆ. ಆದರೆ, ಒಟ್ಟಾರೆ ರಾಜ್ಯದ ಆಂತರಿಕ ಉತ್ಪನ್ನದಲ್ಲಿ ಶೇ.2.89ರಷ್ಟು ಕೊರತೆ ಕಂಡು ಬರುವ ಸಾಧ್ಯತೆ ಇದೆ.

2017-18ಕ್ಕೆ ಹೋಲಿಸಿದರೆ 2018-19ರಲ್ಲಿ ರಾಜ್ಯದ ಬಂಡವಾಳ ಹೂಡಿಕೆಯು ಒಟ್ಟಾರೆ ಆಂತರಿಕ ಉತ್ಪನ್ನದ ಶೇ.3ರಿಂದ ಶೇ.3.18ಕ್ಕೆ ಏರಿಕೆಯಾಗಿರುವುದು ಕೊಂಚ ತೃಪ್ತಿ ತಂದಿದೆ. ಆದರೆ, ಸದ್ಯಕ್ಕಿರುವ ಮೂಲಸೌಕರ್ಯ ಅಸಮರ್ಪಕವಾಗಿರುವುದರಿಂದ ಇದನ್ನು ನಿಭಾಯಿಸುವುದು ಒಂದು ದೊಡ್ಡ ಸವಾಲು ಕೂಡ ಆಗಿದೆ. ಈ ಮಧ್ಯೆ, ಸಾರ್ವಜನಿಕ ಉದ್ದಿಮೆಗಳ ಕಳಪೆ ಕಾರ್ಯ ನಿರ್ವಹಣೆ, ವೆಚ್ಚ ವಸೂಲಾತಿ ದರದಲ್ಲಿ ಇಳಿಕೆ ಸೇರಿದಂತೆ ಹಲವು ಕಾರಣಗಳಿಂದ ತೆರಿಗೆಯೇತರ ರಾಜಸ್ವ ಪ್ರಮಾಣ ನಗಣ್ಯವಾಗಿದೆ ಎಂದು ವರದಿಯಲ್ಲಿ ಉಲ್ಲೇಖೀಸಲಾಗಿದೆ.

ತಲಾದಾಯ ಏರಿಕೆ

Advertisement

ಇದೆಲ್ಲದರ ನಡುವೆ ರಾಜ್ಯದ ನಿವ್ವಳ ತಲಾದಾಯ ಶೇ.12.7ರಷ್ಟು ಏರಿಕೆಯಾಗಿದೆ. 2018-19ನೇ ಸಾಲಿನಲ್ಲಿ ರಾಜ್ಯದ ನಿವ್ವಳ ತಲಾದಾಯ 2,07,062 ರೂ.ಅಂದಾಜಿಸಲಾಗಿದೆ. ಕಳೆದ ವರ್ಷ ಇದು 1,83,737 ರೂ.ಇತ್ತು. ರಾಷ್ಟ್ರೀಯ ನಿವ್ವಳ ತಲಾದಾಯ 2018-19ನೇ ಸಾಲಿನಲ್ಲಿ 1,25,397 ರೂ.ಆಗಲಿದೆ ಎಂದು ಅಂದಾಜಿಸಲಾಗಿದೆ. ಇದನ್ನು ಪ್ರಸಕ್ತ ಸಗಟು ಬೆಲೆಗಳ ಸೂಚ್ಯಂಕವನ್ನು ಆಧರಿಸಿ ಲೆಕ್ಕ ಹಾಕಲಾಗುತ್ತದೆ. ಇನ್ನು ಸೇವಾ ವಲಯ ಬೆಳವಣಿಗೆ ದರ ಕಳೆದ ವರ್ಷಕ್ಕೆ ಹೋಲಿಸಿದಾಗ ಶೇ.12.2ರಿಂದ ಶೇ.12.3ರಷ್ಟು, ಸಾರ್ವಜನಿಕ ಆಡಳಿತ ಶೇ.21.4, ಇತರ ಸೇವೆಗಳು (ಶಿಕ್ಷಣ, ಆರೋಗ್ಯ ಇತ್ಯಾದಿ) ಶೇ. 14.4, ವ್ಯಾಪಾರ ಮತ್ತು ದುರಸ್ತಿ ಸೇವೆಗಳು ಶೇ.14.1 ಹಾಗೂ ಸ್ಥಿರಾಸ್ತಿ, ವೃತ್ತಿಪರ ಸೇವೆಗಳ ಬೆಳವಣಿಗೆಯು ರಾಜ್ಯದ ಜಿಡಿಪಿ ಶೇ.9.6ರಷ್ಟು ಬೆಳವಣಿಗೆ ಸಾಧಿಸಲು ಪ್ರಮುಖ ಕೊಡುಗೆ ನೀಡಿವೆ. ಅಂದ ಹಾಗೆ ದೇಶದ ಜಿಡಿಪಿ ಶೇ. 7.2ರಷ್ಟು ವೃದ್ಧಿಯಾಗುವ ನಿರೀಕ್ಷೆ ಇದೆ.

Advertisement

Udayavani is now on Telegram. Click here to join our channel and stay updated with the latest news.

Next