Advertisement

ವಿಮಾನದ ಮೂಲಕ ಜೈವಿಕ ಸೋಂಕು ನಿವಾರಕ ಸಿಂಪಡಣೆಯ ಪ್ರಾಯೋಗಿಕ ಕಾರ್ಯಾಚರಣೆಗೆ ಚಾಲನೆ

05:45 PM May 29, 2021 | Team Udayavani |

ಬೆಂಗಳೂರು : ಬೆಂಗಳೂರು ನಗರದಲ್ಲಿ ಕೋವಿಡ್‌ ಸಾಂಕ್ರಾಮಿಕ ರೋಗವನ್ನು ಹತೋಟಿಗೆ ತರುವ ಉದ್ದೇಶದಿಂದ ವಿಮಾನದ ಮೂಲಕ ಜೈವಿಕ ಸೋಂಕು ನಿವಾರಕವನ್ನು ಸಿಂಪಡಿಸುವ ಏರಿಯಲ್‌ವರ್ಕ್ಸ್‌ ಏರೋ ಎಲ್‌ಎಲ್‌ಪಿ ಸಂಸ್ಥೆಯ ಪ್ರಾಯೋಗಿಕ ಕಾರ್ಯಾಚರಣೆ ಯೋಜನೆಗೆ ಇಂದು ಕಂದಾಯ ಸಚಿವರಾದ ಆರ್‌ ಅಶೋಕ್‌ ಚಾಲನೆ ನೀಡಿದರು.

Advertisement

ಬೆಂಗಳೂರಿನ ಜಕ್ಕೂರು ಏರೋಡ್ರೋಮ್‌ ನಿಂದ ಚಾಲನೆ ನೀಡಲಾದ ಈ ಕಾರ್ಯಕ್ರಮದಲ್ಲಿ ಬಿಬಿಎಂಪಿ ಆಡಳಿತಾಧಿಕಾರಿ ಶ್ರೀ ರಾಕೇಶ್‌ ಸಿಂಗ್‌, ಬಿಡಿಎ ಅಧ್ಯಕ್ಷ ಎಸ್‌ ಆರ್‌ ವಿಶ್ವನಾಥ್‌, ಕ್ಯಾಪ್ಟನ್‌ ನಾಗೇಶ್‌ ಪಾಲ್ಗೊಂಡಿದ್ದರು.

ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದ ಕಂದಾಯ ಸಚಿವ ಆರ್‌ ಅಶೋಕ್‌, ಕೋವಿಡ್ ಸಾಂಕ್ರಾಮಿಕ ನಿಯಂತ್ರಣಕ್ಕೆ ರಾಜ್ಯ ಸರಕಾರದ ವತಿಯಿಂದ ಅಗತ್ಯ ಕ್ರಮಗಳನ್ನು ಕೈಗೊಳ್ಳಲಾಗುತ್ತಿದೆ. ಇದೇ ಮೊದಲ ಬಾರಿಗೆ ವಿಮಾನದ ಮೂಲಕ ಜೈವಿಕ ಸೋಂಕು ನಿವಾರಕವನ್ನು ವಿಮಾನದ ಮೂಲಕ ಸಿಂಡಪಣೆ ಮಾಡುವ ಕಾರ್ಯಾಚರಣೆಯನ್ನು ಪ್ರಾಯೋಗಿಕವಾಗಿ ಅಳವಡಿಸಿಕೊಳ್ಳಲಾಗುತ್ತಿದೆ. ಏರಿಯಲ್‌ವರ್ಕ್ಸ್‌ ಏರೋ ಎಲ್‌ಎಲ್‌ಪಿ ಸಂಸ್ಥೆ ಮೂರು ದಿನಗಳ ಕಾಲ ಬೆಂಗಳೂರು ನಗರದ ಜನನಿಬಿಡ ಪ್ರದೇಶಗಳಲ್ಲಿ ವಿಮಾನದ ಮೂಲಕ ಸಿಂಪಡಣೆಯನ್ನು ಮಾಡಲಿದೆ ಎಂದರು.

ಬೆಂಗಳೂರಿನ ಜನನಿಬಿಡ ಪ್ರದೇಶಗಳಲ್ಲಿ ಪ್ರಾಯೋಗಿಕವಾಗಿ ವಿಮಾನದ ಮೂಲಕ ಜೈವಿಕ ಸೋಂಕು ನಿವಾರಕವನ್ನು ಸಿಂಪಡನೆ ಮಾಡುವ ಕಾರ್ಯ ಸಫಲವಾದಲ್ಲಿ ಮುಂದಿನ ದಿನಗಳಲ್ಲಿ ಇನ್ನೂ ಹೆಚ್ಚಿನ ಪ್ರದೇಶಗಳಲ್ಲಿ ಈ ಕಾರ್ಯಾಚರಣೆಯನ್ನು ಮುಂದುವರೆಸಲಾಗುವುದು. ಸೋಮುವಾರದಿಂದ ನಗರದ ಶಿವಾಜಿನಗರ, ಕೆ ಆರ್‌ ಮಾರುಕಟ್ಟೆ ಪ್ರದೇಶಗಳಲ್ಲಿ ಸಿಂಪಡನೆ ಎಂದು ಹೇಳಿದರು.

ಏರಿಯಲ್‌ವರ್ಕ್ಸ್‌ ಏರೋ ಎಲ್‌ಎಲ್‌ಪಿ ಸಂಸ್ಥೆಯ ಮುಖ್ಯಸ್ಥರಾದ ಕ್ಯಾಪ್ಟನ್‌ ಮುರಳಿ ರಾಮಕೃಷ್ಣನ್‌ ಮಾತನಾಡಿ, ಅಮೇರಿಕಾ ಹಾಗೂ ಆಫ್ರಿಕಾ ದೇಶಗಳಲ್ಲಿ ವೈಮಾನಿಕ ಜೈವಿಕ ಸೋಂಕು ನಿವಾರಣೆ ಸಿಂಪಡಣಾ ಕಾರ್ಯದಲ್ಲಿ ವಿಶೇಷ ಪರಿಣಿತಿಯನ್ನ ಹೊಂದಿರುವ ತಂಡ ಬೆಂಗಳೂರು ನಗರದಲ್ಲಿ ಈ ಕಾರ್ಯಚರಣೆಯನ್ನು ಪ್ರಾಯೋಗಿಕವಾಗಿ ನಡೆಸಲಿದೆ. ಮೂರು ದಿನಗಳ ಕಾಲ ಬೆಂಗಳೂರಿನ ಜನನಿಬಿಡ ಪ್ರದೇಶದಲ್ಲಿ ವೈಮಾನಿಕವಾಗಿ ಜೈವಿಕ ಸೋಂಕು ನಿವಾರಣೆ ಸಿಂಪಡಣಾ ಕಾರ್ಯವನ್ನು ನಡೆಸಲಾಗುವುದು. ಗಾಳಿಯಲ್ಲಿರುವ ಕೋವಿಡ್‌ ವೈರಾಣು ವನ್ನು ಸಾಯಿಸುಷ್ಟು ಸಮಯ ಗಾಳಿಯಲ್ಲಿ ಸೋಂಕು ನಿವಾರಣ ದ್ರಾವಣ ಸಿಂಪಡಿಸುವಂತಹ ಅತ್ಯಾಧುನಿಕ ತಂತ್ರಜ್ಞಾನವನ್ನು ಈ ಸಂಸ್ಥೆ ಸಿದ್ದಗೊಳಿಸಿದೆ. ಸೂಕ್ಷ್ಮ ಮೈಕ್ರಾನ್‌ ಕಣಗಳ ಸಾಂದ್ರತೆಯಲ್ಲಿರುವ ಜೈವಿಕ ಸೋಂಕು ನಿವಾರಣಾ ದ್ರಾವಣ ಗಾಳಿಯಲ್ಲಿ ತೇಲಾಡುತ್ತಿರುವ ಬ್ಯಾಕ್ಟೀರಿಯಾ ಹಾಗೂ ವೈರಾಣುಗಳನ್ನು ಕೊಲ್ಲಲಿವೆ.

Advertisement

ಮೂರು ದಿನಗಳ ಕಾಲ ಬೆಂಗಳೂರು ನಗರದಲ್ಲಿ ಪ್ರಾಯೋಗಿಕವಾಗಿ ಈ ವೈಮಾನಿಕ ಸಿಂಪಡಣೆಯನ್ನು ಮಾಡಲು ಸರಕಾರದ ಸಂಸ್ಥೆಗಳಿಂದ ಅಗತ್ಯ ಅನುಮತಿಗಳನ್ನು ಏರಿಯಲ್‌ವರ್ಕ್ಸ್‌ ಏರೋ ಎಲ್‌ಎಲ್‌ಪಿ ಸಂಸ್ಥೆ ಪಡೆದುಕೊಂಡಿದೆ ಎಂದು ಹೇಳಿದರು.
300 ಲಿಟರ್‌ಗಳಷ್ಟು ಸೋಂಕು ನಿವಾರಣಾ ದ್ರಾವಣವನ್ನು ಹೊತ್ತೊಯ್ಯಬಲ್ಲ ಅಮೇರಿಕನ್‌ ಚಾಂಫಿಯನ್‌ ಸ್ಕೌಟ್‌ ವಿಮಾನ ಕಡಿಮೆ ಎತ್ತರದಲ್ಲಿ ಹಾರಾಟ ನಡೆಸಿ ಒಂದು ಗಂಟೆಯಲ್ಲಿ 300 ಹೆಕ್ಟೇರ್‌ನಷ್ಟು ಪ್ರದೇಶದಲ್ಲಿ ಸಿಂಪಡಣೆ ಮಾಡುವ ಸಾಮರ್ಥ್ಯವನ್ನು ಹೊಂದಿದೆ. ಈ ಕಾರ್ಯಕ್ಕಾಗಿ ಅದು ಯುಎಲ್‌ವಿ (ULV) ಸ್ಪ್ರೇಯರ್‌ ಮೂಲಕ ಸಿಪಿ ನೋಜಲ್‌ (CP Nozzles) ಗಳನ್ನು ಬಳಸಿ 100 (Below 100 Microns) ಮೈಕ್ರಾನ್‌ಗಳಿಗಿಂತಲೂ ಕಡಿಮೆ ಪ್ರಮಾಣದಲ್ಲಿ ಸಿಂಪಡಣೆ ಮಾಡಲಿದೆ ಎಂದರು.

ಈ ಸಿಂಪಡಣಾ ಕಾರ್ಯದಲ್ಲಿ ಎರಡು ರೀತಿಯ ಜೈವಿಕ ಸೋಂಕು ನಿವಾರಕ ದ್ರಾವಣಗಳನ್ನು ಬಳಸಲಾಗುವುದು

1. ಏರ್‌ಲೆನ್ಸ್‌ ಮೈನಸ್‌ ಕರೋನಾ (Airlens Minus Corona): ಇದು ರಾಸಾಯನಿಕ ರಹಿತ ಮಾನವ ಸ್ನೇಹೀ ಹಾಗೂ ಪರಿಣಾಮಕಾರಿಯಾದ ಸ್ಯಾನಿಟೈಸೇಷನ್‌ ಸಿಸ್ಟಮ್‌ ಆಗಿದೆ. ಕೇವಲ ನಲ್ಲಿಯ ನೀರು ಮತ್ತು ವಿದ್ಯುತ್‌ಶಕ್ತಿಯನ್ನು ಬಳಸಿಕೊಂಡು ತಯಾರಿಸಲಾಗುವ ಸೋಂಕು ನಿವಾರಣಾ ದ್ರಾವಣವನ್ನು ಸಾರ್ವಜನಿಕ ಸ್ಥಳಗಳು, ಕಚೇರಿಗಳು, ಆಸ್ಪತ್ರೆಗಳು ಮತ್ತು ಮನೆಗಳಲ್ಲಿ ಬಳಸಬಹುದಾಗಿದೆ. ಪೆರ್‌ಸಾಪಿಎನ್‌ ಇನ್ನೊವೇಷನ್ಸ್‌ (PerSapien Innovations) ಸಂಸ್ಥೆಯಿಂದ ಕಂಡುಹಿಡಿಯಲಾಗಿರುವ ಈ ನೂತನ ತಂತ್ರಜ್ಞಾನವನ್ನು, ಸ್ಟಾನ್‌ಫೋರ್ಡ್‌ ಯೂನಿವರ್ಸಿಟಿ, ಐಐಟಿ ಮತ್ತು ಎಐಐಎಂಎಸ್‌ (IITS & AIIMS) ನಿಂದ ಇಂಜಿನೀಯರ್‌ಗಳು ಮತ್ತು ವಿಜ್ಞಾನಿಗಳು ತಂಡ ಪರೀಕ್ಷಿಸಿದ್ದು ಐಸಿಎಂಆರ್‌ (ICMR) ನಿಂದ ಧೃಢೀಕೃತಗೊಳಿಸಲ್ಪಟ್ಟಿದೆ. ಈ ನೂತನ ತಂತ್ರಜ್ಞಾನ ವೈರಾಣುಗಳು, ಬ್ಯಾಕ್ಟೀರಿಯಾ ಮತ್ತು ಇನ್ನಿತರ ಪ್ಯಾಥೋಜೀನ್ಸ್‌ಗಳ ವಿರುದ್ದ ಬಹಳ ಸುರಕ್ಷಿತ, ಒಳ್ಳೆಯ ಮತ್ತು ಅತ್ಯಂತ ಪರಿಣಾಮಕಾರಿಯಾಗಿದೆ.

2. ಶುಗಾರಧಾನ ಜೈವಿಕ ಆಂಟಿಮೈಕ್ರೋಬಿಯಲ್‌ ಕಾನ್ಸನ್‌ಟ್ರೇಟ್‌(Sugaradhana Organic Antimicrobial concentrate): ಈ ಸೋಂಕು ನಿವಾರಕ ದ್ರಾವಣವನ್ನು ನಮ್ಮ ಪ್ರಾಚೀನ ಆರೋಗ್ಯ ಪದ್ದತಿಯಾದ ಆಯುರ್ವೇದದ ಅಂಶಗಳನ್ನು ಬಳಸಿಕೊಂಡು ನಿರ್ಮಿಸಲಾಗಿದೆ. ಇದು ಲ್ಯಾಬ್‌ಗಳಲ್ಲಿ ಮತ್ತು ಹೊರಾಂಗಣಗಳಲ್ಲಿ ಬ್ಯಾಕ್ಟೀರಿಯಾ, ಫಂಗಸ್‌ ಮತ್ತು ವೈರಾಣುಗಳ ವಿರುದ್ದ ಪರಿಣಾಕಾರಿಯಾದ ಫಲಿತಾಂಶ ನೀಡುತ್ತದೆ. ಈ ಜೈವಿಕ ಸೋಂಕು ನಿವಾರಣಾ ದ್ರಾವಣ ಚರ್ಮದ ಮೇಲೇ ಯಾವುದೇ ದುಷ್ಪರಿಣಾಮ ಬೀರದ ಶೇಕಡಾ 100 ರಷ್ಟು ಸುರಕ್ಷಿತವಾದದ್ದು. ಇದು ಗಾಳಿಯಲ್ಲಿ ಮಾಲಿನ್ಯ ಹರಡುವುದನ್ನ ಕಡಿಮೆ ಮಾಡುತ್ತದೆ. ಈ ದ್ರಾವಣವನ್ನು ಸಿಂಪಡಣೆ ಮಾಡಿರುವ ಪ್ರದೇಶದಲ್ಲಿ ಕರೋನಾ ವೈರಾಣುವನ್ನು ಪರಿಣಾಮಕಾರಿಯಾಗಿ ನಿವಾರಣೆ ಮಾಡುವಲ್ಲಿ ಯಶಸ್ವಿಯಾಗಿದೆ. ಈ ದ್ರಾವಣವನ್ನು ಡಾ ಕಾರ್ತಿಕ್‌ ನಾರಾಯಣನ್‌ ಅವರು ನಿರ್ಮಿಸಿದ್ದಾರೆ.

ಕರ್ನಾಟಕ ರಾಜ್ಯ ಪರಿಸರ ಮಾಲಿನ್ಯ ನಿಯಂತ್ರಣ ಮಂಡಳಿಯ ತಾಂತ್ರಿಕ ತಂಡ ಈ ಪ್ರಾಯೋಗಿಕ ಯೋಜನೆಯ ಕಾರ್ಯದ ಮೇಲುಸ್ತವಾರಿ ವಹಿಸಲಿದೆ. ಮೂರು ದಿನಗಳ ಪ್ರಾಯೋಗಿಕ ಕಾರ್ಯಾಚರಣೆಯ ನಂತರ ಅದರಿಂದಾದ ಪ್ರಯೋಜನ ಹಾಗೂ ಪರಿಮಾಣಗಳನ್ನು ತಿಳಿಸಲಿದೆ ಎಂದು ಏರಿಯಲ್‌ ವರ್ಕ್ಸ್‌ ಏರೋ ಎಲ್‌ಎಲ್‌ಪಿಯ ಮುಖ್ಯಸ್ಥರಾದ ಮುರಳಿ ರಾಮಕೃಷ್ಣ ತಿಳಿಸಿದ್ದಾರೆ. ಪ್ರಾಯೋಗಿಕ ಕಾರ್ಯಾಚರಣೆಯ ಸಂಧರ್ಭದಲ್ಲಿ ಪ್ರಾತ್ಯಕ್ಷಿಕೆಯನ್ನು ತೋರಿಸಲಾಯಿತು.

Advertisement

Udayavani is now on Telegram. Click here to join our channel and stay updated with the latest news.

Next