Advertisement

ಒಳಚರಂಡಿ,ಕುಡಿಯುವನೀರು,ಘನತ್ಯಾಜ್ಯನಿರ್ವಹಣೆ ಯಶಸ್ವಿ: ಜೆ.ಆರ್‌.ಲೋಬೋ

12:31 PM May 10, 2018 | |

ಮಹಾನಗರ: ವಿದ್ಯುತ್‌ ಸಬ್‌ ಸ್ಟೇಷನ್‌ಗಳ ನಿರ್ಮಾಣ, ನಗರದ ವಿದ್ಯುತ್‌ ಸಮಸ್ಯೆಗಳ ನಿವಾರಣೆ, ಮುಖ್ಯ ಭಾಗಗಳಲ್ಲಿ ಭೂಗತ ವಿದ್ಯುತ್‌ ಕೇಬಲ್‌ಗ‌ಳನ್ನು ಅಳವಡಿಸಿ ಮಂಗಳೂರನ್ನು ಅತ್ಯಾಧುನಿಕ ರೀತಿಯಲ್ಲಿ ಸಜ್ಜುಗೊಳಿಸಲಾಗಿದೆ. ಭವ್ಯ ಮಂಗಳೂರಿನ ನಿರ್ಮಾಣ ನನ್ನ ಸಂಕಲ್ಪ ಎಂದು ಮಂಗಳೂರು ದಕ್ಷಿಣ ವಿಧಾನ ಸಭಾ ಕ್ಷೇತ್ರದ ಕಾಂಗ್ರೆಸ್‌ ಅಭ್ಯರ್ಥಿ, ಹಾಲಿ ಶಾಸಕ ಜೆ.ಆರ್‌. ಲೋಬೋ ತಿಳಿಸಿದ್ದಾರೆ.

Advertisement

ಅವರು ಕಾಂಗ್ರೆಸ್‌ ವತಿಯಿಂದ ಮಂಗಳೂರಿನ ನಾನಾ ಕಡೆ ಕಾಂಗ್ರೆಸ್‌ ಪ್ರಚಾರ ಸಭೆಯನ್ನು ಉದ್ದೇಶಿಸಿ ಮಾತನಾಡಿದರು.

ರಾಜ್ಯ ಸರಕಾರದ 10 ಕೋಟಿ ರೂ. ವೆಚ್ಚದಲ್ಲಿ ಎ.ಬಿ. ಶೆಟ್ಟಿ ವೃತ್ತದಿಂದ ಕರಾವಳಿ ವೃತ್ತದವರೆಗೆ ಹಾಗೂ ಕದ್ರಿ ದೇವಸ್ಥಾನ ರಸ್ತೆಯಲ್ಲಿ ಭೂಗತ ಕೇಬಲ್‌ ಅಳವಡಿಸಲಾಗಿದೆ. ಈಗ ನಗರದ ಉಳಿದ ಪ್ರದೇಶಗಳಲ್ಲೂ ಇದನ್ನು ವಿಸ್ತರಿಸಲು 182 ಕೋಟಿ ರೂ. ವೆಚ್ಚದಲ್ಲಿ ಈ ಯೋಜನೆಗೆ ಮಂಜೂರಾತಿ ಪಡೆದು, ಟೆಂಡರ್‌ ಕರೆಯಲಾಗಿದ್ದು, ಶೀಘ್ರದಲ್ಲೇ ಕೆಲಸ ಆರಂಭಗೊಳ್ಳಲಿದೆ ಎಂದರು.

ಎಡಿಬಿ 1ನೇ ಯೋಜನೆಯಲ್ಲಿ ಸುಮಾರು 350 ಕೋಟಿ ರೂ. ನಗರಕ್ಕೆ ಬಂದಿತ್ತು. ಇದರಲ್ಲಿ ನೀರಿನ ಸರಬರಾಜು, ಒಳಚರಂಡಿ, ಘನತ್ಯಾಜ್ಯ ನಿರ್ವಹಣೆ, ರಸ್ತೆಗಳ ಅಭಿವೃದ್ಧಿ ಇತ್ಯಾದಿ ಕೆಲಸ ನಿರ್ವಹಿಸಲಾಯಿತು. ಆದರೆ ಅನುದಾನದ ಕೊರತೆಯಿಂದ ಒಳಚರಂಡಿ ಹಾಗೂ ಕುಡಿಯುವ ನೀರಿನ ವ್ಯವಸ್ಥೆ ನಿರೀಕ್ಷಿತ ರೀತಿಯಲ್ಲಿ ನಡೆಯಲಿಲ್ಲ. ಅದಕ್ಕಾಗಿ ಎಡಿಬಿ 2ನೇ ಯೋಜನೆಯಲ್ಲಿ ಸುಮಾರು 600 ಕೋಟಿ ರೂ. ಅನ್ನು ಮಂಜೂರು ಮಾಡಿಸಿದ್ದೇನೆ ಎಂದರು.

ಈ ಮೂಲಕ ನಗರದಲ್ಲಿ ಕುಡಿಯುವ ನೀರು ಹಾಗೂ ಒಳಚರಂಡಿ ವ್ಯವಸ್ಥೆಯಲ್ಲಿ ಸುಧಾರಣೆ ತರಲಾಗುವುದು. ಶಿವಭಾಗ್‌, ಶಕ್ತಿನಗರ, ಜಪ್ಪಿನಮೊಗರು, ಪಡೀಲು, ಬಜಾಲ್‌ ಇತ್ಯಾದಿ ಪ್ರದೇಶಗಳ ಒಳಚರಂಡಿಗೆ ಮನೆ ಸಂಪರ್ಕ ಕಲ್ಪಿಸಲಿದ್ದೇವೆ. ಜೆಪ್ಪಿನಮೊಗರು ತ್ಯಾಜ್ಯ ನಿರ್ವಹಣ ಘಟಕ ಹಾಗೂ ಅದರ ವೆಟ್‌ ವೆಲ್‌ಗ‌ಳು ಕಾರ್ಯಾರಂಭಗೊಂಡಿವೆ ಎಂದರು.

Advertisement

ಎಡಿಬಿ 2ನೇ ಮತ್ತು ಅಮೃತ್‌ ಯೋಜನೆಯಲ್ಲಿ ಹಾಗೂ ಎಡಿಬಿ 1ನೇ ಯೋಜನೆಯಲ್ಲಿ ಬಿಟ್ಟು ಹೋಗಿರುವ ಪ್ರದೇಶಗಳಲ್ಲಿ ಹೊಸ ಸಂಪರ್ಕ ಜಾಲ ಹರಿಯುತ್ತಿದೆ. ನಗರದ ಹಳೆ ಚರಂಡಿ ವ್ಯವಸ್ಥೆಯನ್ನು ಸರಿಪಡಿಸಿ ತೆರೆದ ಮಳೆ ನೀರು ಚರಂಡಿಗಳಲ್ಲಿ ಒಳಚರಂಡಿ ತ್ಯಾಜ್ಯ ಹರಿಯುವುದನ್ನು ಪೂರ್ಣವಾಗಿ ನಿಲ್ಲಿಸುವುದು ನನ್ನ ಗುರಿ ಎಂದು ಅವರು ತಿಳಿಸಿದರು.

ಎಡಿಬಿ 1ನೇ ಯೋಜನೆಯಡಿಯಲ್ಲಿ ಶಕ್ತಿನಗರ, ಅಳಪೆ, ಪಡೀಲು, ಬಜಾಲ್‌, ಜಪ್ಪಿನಮೊಗರು ಪ್ರದೇಶಗಳಿಗೆ ಒಳಚರಂಡಿ ವ್ಯವಸ್ಥೆ ಕಲ್ಪಿಸಲಾಗಿದೆ. ಬಿಟ್ಟು ಹೋಗಿರುವ ಪ್ರದೇಶಗಳಲ್ಲಿ 2ನೇ ಎಡಿಬಿ ಯೋಜನೆಯಡಿಯಲ್ಲಿ ಒಳಚರಂಡಿ ಕಲ್ಪಿಸಲಾಗುವುದು. ಕೇಂದ್ರ ಹಾಗೂ ರಾಜ್ಯದ ಸಮಪಾಲಿನೊಂದಿಗೆ 200 ಕೋ. ರೂ.ಗಳನ್ನು ಅಮೃತ್‌ ಯೋಜನೆಯಲ್ಲಿ ಮಂಜೂರುಗೊಳಿಸಲಾಗಿದೆ. ಎಡಿಬಿ 2ನೇ ಯೋಜನೆ ಹಾಗೂ ಅಮೃತ್‌ ಯೋಜನೆಯಲ್ಲಿ 600 ಕೋ.ರೂ. ವನ್ನು ಕುಡಿಯುವ ನೀರು ಹಾಗೂ ಒಳಚರಂಡಿಗೆ ನಿಯೋಗಿಸಲಾಗುವುದು ಎಂದು ಭರವಸೆ ನೀಡಿದರು.

ನನ್ನ ಅವಧಿಯಲ್ಲಿ ಮಂಗಳೂರು ಅಭಿವೃದ್ಧಿಗೊಂಡಿದ್ದು, ಮತದಾರರು ಮತ್ತೂಮ್ಮೆ ಹರಸಿದರೆ ನಗರದ ಸರ್ವತೋಮುಖ ಬೆಳವಣಿಗೆಗೆ ಕ್ರಮ ಕೈಗೊಳ್ಳಲಾಗುವುದು. ನಗರದಲ್ಲಿ ಬಂಡವಾಳ ಹೂಡಿಕೆಯ ಆಕರ್ಷಣೆ, ಕಾನೂನೂ- ಸುವ್ಯವಸ್ಥೆ ಪಾಲನೆ, ನಗರದದ ಹಸುರೀಕರಣಕ್ಕೆ ಒತ್ತು, ಮೀನುಗಾರಿಕೆ, ಶಿಕ್ಷಣ, ಆಸ್ಪತ್ರೆ, ಕ್ರೀಡೆ, ಪ್ರವಾಸ, ಧಾರ್ಮಿಕ ಸಾಮರಸ್ಯ, ಬಡವರ ಏಳಿಗೆ, ಆಶ್ರಯ ಮನೆಗಳ ನಿರ್ಮಾಣ ಕಾರ್ಯಕ್ಕೆ ಒತ್ತು ನೀಡಲಾಗುವುದು. ಪಿಲಿಕುಳದಲ್ಲಿ 36 ಕೋಟಿ ರೂ. ವೆಚ್ಚದಲ್ಲಿ 3ಡಿ ಪ್ಲಾನಟೋರಿಯಂ ರಚಿಸಿ ಪಿಲಿಕುಳದ ಸಮಗ್ರ ಅಭಿವೃದ್ಧಿ, ಕದ್ರಿಯಲ್ಲಿ ಸಂಗೀತ ರಸ ಸಂಜೆ ರಚಿಸಲಾಗುವುದು ಎಂದು ನುಡಿದರು.

ಕಸದಿಂದ ವಿದ್ಯುತ್‌!
ಯಾವುದೇ ನಗರಗಳಲ್ಲಿ ಘನ ತ್ಯಾಜ್ಯ ನಿರ್ವಹಣೆ ಒಂದು ಸಮಸ್ಯೆಯಾಗಿದ್ದು, ನಗರದಲ್ಲಿ ಇದಕ್ಕೆ ಪರಿಹಾರ ಹುಡುಕಲಾಗಿದೆ. ಮನೆಮನೆಯಿಂದ ಕಸ ಸಂಗ್ರಹಣೆಯಿಂದ ‘ತೊಟ್ಟಿ ರಹಿತ ನಗರ’ ಕಾರ್ಯಕ್ರಮ ಯಶಸ್ವಿಯಾಗಿದೆ. ಇತರ ನಗರಕ್ಕೆ ಹೋಲಿಸಿದರೆ ಮಂಗಳೂರು ಸ್ವಚ್ಛವಾಗಿದೆ. ಕಸ ವಿಂಗಡಿಸಿ ಪಚ್ಚನಾಡಿಯಲ್ಲಿ ಕಸ ಸಂಸ್ಕರಣೆ ಮಾಡಿಸುವುದು ನನ್ನ ಗುರಿ. ಕಸದಿಂದ ವಿದ್ಯುತ್‌ ಉತ್ಪಾದಿಸಲು ಸಾಧಕಬಾಧಕಗಳನ್ನು ಪರಿಶೀಲಿಸಲಾಗುವುದು ಎಂದು ಲೋಬೋ ಹೇಳಿದ್ದಾರೆ. 

Advertisement

Udayavani is now on Telegram. Click here to join our channel and stay updated with the latest news.

Next