Advertisement

ಕೊನೆಗೂ ಲಕ್ಷ್ಮೀ ಹೆಬ್ಟಾಳಕರ್‌ಗೆ ಕೊಕ್‌

06:00 AM Nov 03, 2018 | Team Udayavani |

ಬೆಂಗಳೂರು/ಮೈಸೂರು: ನಿರೀಕ್ಷೆಯಂತೆ ಕೆಪಿಸಿಸಿ ಮಹಿಳಾ ಘಟಕದ ಅಧ್ಯಕ್ಷರ ಬದಲಾವಣೆ ಮಾಡಲಾಗಿದ್ದು, ಮೈಸೂರು ಜಿಲ್ಲಾ ಪಂಚಾಯಿತಿ ಮಾಜಿ ಅಧ್ಯಕ್ಷೆ ಡಾ.ಪುಷ್ಪಾ ಅಮರ್‌ನಾಥ್‌ ಅವರನ್ನು ನೇಮಕ ಮಾಡಿ ಎಐಸಿಸಿ ಅಧ್ಯಕ್ಷ ರಾಹುಲ್‌ ಗಾಂಧಿ ಆದೇಶ ಹೊರಡಿಸಿದ್ದಾರೆ. ತನ್ಮೂಲಕ ಶಾಸಕಿ ಲಕ್ಷ್ಮೀ ಹೆಬ್ಟಾಳ್ಕರ್‌ ಅವರನ್ನು ಕೆಪಿಸಿಸಿ ಮಹಿಳಾ ಘಟಕದ ಅಧ್ಯಕ್ಷ ಸ್ಥಾನದಿಂದ ಕೈ ಬಿಡಲಾಗಿದೆ.

Advertisement

ಮಹಿಳಾ ಘಟಕದ ಅಧ್ಯಕ್ಷ ಸ್ಥಾನಕ್ಕೆ ಸಾಕಷ್ಟು ಪೈಪೋಟಿ ಇದ್ದ ಕಾರಣ ಕಳೆದ ವಾರ ರಾಹುಲ್‌ ಗಾಂಧಿ, ಮಹಿಳಾ ಘಟಕದ ಅಧ್ಯಕ್ಷ ಸ್ಥಾನದ ಐವರು ಆಕಾಂಕ್ಷಿಗಳನ್ನು ನೇರ ಸಂದರ್ಶನ ಮಾಡಿ, ಅವರ ರಾಜಕೀಯ ಹಿನ್ನೆಲೆ ಹಾಗೂ ಪಕ್ಷ ಸಂಘಟನೆ ಕುರಿತು ಅವರ ಅಭಿಪ್ರಾಯ ಸಂಗ್ರಹಿಸಿದ್ದರು. ಐವರಲ್ಲಿ ಡಾ.ನಾಗಲಕ್ಷ್ಮಿಚೌಧರಿ ಹಾಗೂ ಡಾ.ಪುಷ್ಪಾ ಅಮರ್‌ನಾಥ್‌ ಅವರ ಹೆಸರುಗಳನ್ನು ಅಂತಿಮಗೊಳಿಸಿದ್ದರು. ಅಂತಿಮವಾಗಿ ಪುಷ್ಪಾ ಅಮರನಾಥ್‌, ಕೆಪಿಸಿಸಿ ರಾಜ್ಯ ಮಹಿಳಾ ಘಟಕದ ಅಧ್ಯಕ್ಷರಾಗಿ ನೇಮಕಗೊಂಡಿದ್ದಾರೆ.

ಡಾ.ಪುಷ್ಪಾ ಅಮರನಾಥ್‌, ಕೆಪಿಸಿಸಿ ಕಾರ್ಯದರ್ಶಿ ಡಾ.ನಾಗಲಕ್ಷ್ಮೀಚೌಧರಿ, ಪಕ್ಷದ ಮುಖಂಡರಾದ  ಶಾರದಾಗೌಡ, ಭಾರತೀಶಂಕರ್‌ ಹಾಗೂ ಶೆರೆಲಟ್‌ ಪಿಂಟೋ ಈ ಹುದ್ದೆಯ ಪ್ರಬಲ ಆಕಾಂಕ್ಷಿಗಳಾಗಿದ್ದರು. ನಾಯಕರ ಲಾಬಿ: ಮಹಿಳಾ ಘಟಕದ ಅಧ್ಯಕ್ಷರ ಸ್ಥಾನಕ್ಕೆ ಕುರುಬ ಸಮಾಜದ ಡಾ.ನಾಗಲಕ್ಷ್ಮೀ ಚೌಧರಿ ತೀವ್ರ ಪೈಪೋಟಿ ನಡೆಸಿದ್ದರು. ಶಾಸಕಾಂಗ ಪಕ್ಷದ ನಾಯಕ
ಸಿದ್ದರಾಮಯ್ಯ ಆರಂಭದಲ್ಲಿ ಪುಷ್ಪಾ ಅಮರನಾಥ್‌ ಹಾಗೂ ಡಾ. ನಾಗಲಕ್ಷ್ಮೀ ಚೌಧರಿ ಇಬ್ಬರ ಪರವಾಗಿಯೂ ಹೈಕಮಾಂಡ್‌ಗೆ ಅಭಿಪ್ರಾಯ ತಿಳಿಸಿದ್ದರು. ಉಪ ಮುಖ್ಯಮಂತ್ರಿ ಡಾ.ಜಿ.ಪರಮೇಶ್ವರ್‌ ಅವರು ಡಾ.ನಾಗಲಕ್ಷ್ಮಿಪರವಾಗಿದ್ದರು. ಆದರೆ, ಎಐಸಿಸಿ ಪ್ರಧಾನ ಕಾರ್ಯದರ್ಶಿ ಹಾಗೂ ರಾಜ್ಯ ಉಸ್ತುವಾರಿ ಕೆ.ಸಿ.ವೇಣುಗೋಪಾಲ್‌ ಹಾಗೂ ಕೆಪಿಸಿಸಿ ಅಧ್ಯಕ್ಷ ದಿನೇಶ್‌ ಗುಂಡೂರಾವ್‌ ಅವರು ಡಾ.ಪುಷ್ಪಾ ಅಮರ್‌ನಾಥ್‌ ಪರ ಲಾಬಿ ನಡೆಸಿದ್ದರು. ನಂತರ, ಸಿದ್ದರಾಮಯ್ಯ ಸಹ ಪುಷ್ಪಾ ಅಮರನಾಥ್‌ಗೆ ಬೆಂಬಲ
ಸೂಚಿಸಿದರು ಎಂದು ತಿಳಿದು ಬಂದಿದೆ.

ಡಾ.ಪುಷ್ಪಾ ಅಮರ್‌ನಾಥ್‌ ಅವರು ರಾಜಕೀಯ ಹಿನ್ನೆಲೆಯಿಂದ ಬಂದಿದ್ದು, ಹುಣಸೂರು ಮಾಜಿ ಶಾಸಕ ಮಂಜುನಾಥ್‌ ಅವರ ಸಹೋದರ ಅಮರ್‌ನಾಥ್‌ ಅವರ ಪತ್ನಿಯಾಗಿದ್ದಾರೆ. ಎರಡು ಬಾರಿ ಜಿಲ್ಲಾ ಪಂಚಾಯತ್‌ ಸದಸ್ಯರಾಗಿ, ಒಂದು ಅವಧಿಗೆ ಜಿಲ್ಲಾ
ಪಂಚಾಯಿತಿ ಅಧ್ಯಕ್ಷೆಯಾಗಿ ಕಾರ್ಯ ನಿರ್ವಹಿಸಿದ್ದಾರೆ. ಆದರೆ, ಡಾ.ನಾಗಲಕ್ಷ್ಮೀ ಚೌಧರಿ ಇತ್ತೀಚೆಗೆ ರಾಜಕೀಯ ಪ್ರವೇಶ ಮಾಡಿದ್ದು, ತಳಮಟ್ಟದಲ್ಲಿ ಪಕ್ಷದ ಕಾರ್ಯಕರ್ತರೊಂದಿಗೆ ಬೆರೆತು ಕೆಲಸ ಮಾಡಿಲ್ಲ ಎಂಬ ಅಭಿಪ್ರಾಯ ವ್ಯಕ್ತವಾದ ಹಿನ್ನೆಲೆಯಲ್ಲಿ, ಪುಷ್ಪಾ
ಅಮರನಾಥ್‌ಗೆ ಅಧ್ಯಕ್ಷ ಸ್ಥಾನ ಒಲಿದು ಬಂದಿದೆ ಎಂದು ಹೇಳಲಾಗುತ್ತಿದೆ.

ಜಾರಕಿಹೊಳಿ ಪ್ರಕರಣ ಕಾರಣ?: ಬೆಳಗಾವಿ ಪಿಎಲ್‌ಡಿ ಬ್ಯಾಂಕ್‌ ಅಧ್ಯಕ್ಷರ ಆಯ್ಕೆ ಕುರಿತಂತೆ ಲಕ್ಷ್ಮೀ ಹೆಬ್ಟಾಳ್ಕರ್‌ ಅವರು ಜಾರಕಿಹೊಳಿ ಸಹೋದರರೊಂದಿಗೆ ಪೈಪೋಟಿ ನಡೆಸಿದ್ದು, ಸಾಕಷ್ಟು ಚರ್ಚೆಗೆ ಗ್ರಾಸವಾಗಿತ್ತು. ಅಲ್ಲದೆ, ಆ ಪ್ರಕರಣದಲ್ಲಿ ಜಾರಕಿಹೊಳಿ ಸಹೋದರರಿಗೆ ಹಿನ್ನಡೆಯಾಯಿತು ಎಂಬ ಅಭಿಪ್ರಾಯ ವ್ಯಕ್ತವಾಗಿದ್ದು, ಈ ಹಿನ್ನೆಲೆಯಲ್ಲಿ ಅವರನ್ನು ಮಹಿಳಾ ಘಟಕದ ಅಧ್ಯಕ್ಷ
ಸ್ಥಾನದಿಂದ ಕೆಳಗಿಳಿಸುವಂತೆ ಸಚಿವ ರಮೇಶ್‌ ಜಾರಕಿಹೊಳಿಯವರು ಸಿದ್ದರಾಮಯ್ಯ ಸೇರಿ ರಾಜ್ಯ ನಾಯಕರ ಮೇಲೆ ಒತ್ತಡ ಹೇರಿದ್ದರೆಂದು ಹೇಳಲಾಗುತ್ತಿದೆ. ಅವರ ಒತ್ತಡದ ಹಿನ್ನೆಲೆಯಲ್ಲಿಯೇ ಹೈಕಮಾಂಡ್‌ ಲಕ್ಷ್ಮೀ ಹೆಬ್ಟಾಳ್ಕರ್‌ ಅವರನ್ನು ಲೋಕಸಭೆ
ಚುನಾವಣೆವರೆಗೂ ಮುಂದುವರಿಸುವ ಬದಲು, ತಕ್ಷಣವೇ ಕಾರ್ಯ ಪ್ರವೃತ್ತರಾಗಿ ನೂತನ ಅಧ್ಯಕ್ಷರ ನೇಮಕ ಮಾಡಿದ್ದಾರೆ ಎಂದು ಹೇಳಲಾಗುತ್ತಿದೆ. 

Advertisement

ಜಿಪಂ ಸದಸ್ಯೆ, ಸಂಘಟನಾ ಚತುರೆ: ಮೈಸೂರು ಜಿಲ್ಲೆ ತಿ.ನರಸೀಪುರ ತಾಲೂಕಿನವರಾದ ಪುಷ್ಪಾ, ಪ್ರಾಥಮಿಕ ಶಿಕ್ಷಣವನ್ನು ಇಲ್ಲಿನ ಸರ್ಕಾರಿ ಶಾಲೆಯಲ್ಲಿ ಪಡೆದರು. ಬಳಿಕ ಅವರ ಪೋಷಕರು ಬೆಂಗಳೂರಿಗೆ ಸ್ಥಳಾಂತರವಾದ ಹಿನ್ನೆಲೆಯಲ್ಲಿ ಬೆಂಗಳೂರು ವಿವಿಯಲ್ಲೇ ಉನ್ನತ ಶಿಕ್ಷಣ ಮುಗಿಸಿ, ಪಿಎಚ್‌.ಡಿ ಪದವಿಯನ್ನು ಪಡೆದಿದ್ದಾರೆ. 

ಕೆಪಿಸಿಸಿ ಮಹಿಳಾ ಘಟಕದ ಅಧ್ಯಕ್ಷ ಸ್ಥಾನಕ್ಕೆ ಯಾವುದೇ ಅನಿರೀಕ್ಷಿತ ಆಯ್ಕೆ ಆಥವಾ ನೇಮಕ ಆಗಿಲ್ಲ. ಪ್ರತಿ ಹಂತದಲ್ಲೂ ನನ್ನ ಸಹಮತ ಹಾಗೂ ಅಭಿಪ್ರಾಯ ಕೇಳಿಯೇ ಈ ನೇಮಕ ಮಾಡಲಾಗಿದೆ. ಪುಷ್ಟ ಅಮರನಾಥ್‌ ಅವರ ಹೆಸರನ್ನು ನಾನೇ ಶಿಫಾರಸು ಮಾಡಿದ್ದೆ. ಹೀಗಿರುವಾಗ ನನಗೆ ಅಸಮಾಧಾನವಾಗಿದೆ ಎಂಬ ಮಾತಿನಲ್ಲಿ ಸತ್ಯವಿಲ್ಲ.
● ಲಕ್ಷ್ಮಿ ಹೆಬ್ಟಾಳಕರ, ಶಾಸಕಿ.

ಮಾಜಿ ಸಿಎಂ ಸಿದ್ದರಾಮಯ್ಯ ಹಾಗೂ ಡಿಸಿಎಂ ಡಾ.ಜಿ.ಪರಮೇಶ್ವರ್‌ ಅವರು ನನ್ನ ಕಾರ್ಯ ಚಟುವಟಿಕೆಯನ್ನು ಗುರುತಿಸಿ ಪಕ್ಷದ ಸಂಘಟನೆಯ ಕೆಲಸ ಕೊಟ್ಟಿದ್ದಾರೆ. ಪಕ್ಷ ನೀಡಿರುವ ಈ ಕಾರ್ಯವನ್ನು ಯಶಸ್ವಿಯಾಗಿ ನಿಭಾಯಿಸುತ್ತೇನೆ. ನನ್ನ ರಾಜಕೀಯ ಜೀವನಕ್ಕೆ ನಮ್ಮ ಕುಟುಂಬಸ್ಥರ ಸಹಕಾರ ಇದೆ.
● ಡಾ. ಪುಷ್ಪಾ ಅಮರನಾಥ್‌, ಅಧ್ಯಕ್ಷೆ, ಕೆಪಿಸಿಸಿ ಮಹಿಳಾ ಘಟಕ

Advertisement

Udayavani is now on Telegram. Click here to join our channel and stay updated with the latest news.

Next