Advertisement

“ಸಿದ್ಧಾಂತದ ಕನ್ನಡಿ ಬಿಟ್ಟುಬಿಡಿ; ವಿಷಯ ಆಧಾರಿತವಾಗಿ ಸಿದ್ಧಾಂತ ರೂಪಿಸಿ’

11:19 PM Feb 10, 2021 | Team Udayavani |

ಮಹಾನಗರ: ಹಿರಿಯ ವಿದ್ವಾಂಸ, ಯಕ್ಷಗಾನದ ಅಗ್ರಮಾನ್ಯ ಅರ್ಥಧಾರಿ, ಪ್ರಭಾವೀ ಭಾಷಣಕಾರ, ವಿಮರ್ಶಕ, ಚಿಂತಕ, ಕವಿ, ಬಹುಭಾಷಾ ವಿಶಾರದ, ಅಧ್ಯಾಪಕ, ಬೆಸೆಂಟ್‌ ಪದವಿ ಪೂರ್ವ ಕಾಲೇಜಿನ ನಿವೃತ್ತ ಪ್ರಾಚಾರ್ಯ, ಅಂಕಣಕಾರ, ಖ್ಯಾತ ಸಂಶೋಧಕರಾಗಿ ಜನಮನ್ನಣೆ ಪಡೆದ ಡಾ| ಎಂ. ಪ್ರಭಾಕರ ಜೋಷಿ ಅವರು ಫೆ.12ರಿಂದ 14ರ ವರೆಗೆ ಮಂಗಳೂರಿನ ಶಾರದಾ ವಿದ್ಯಾಲಯದಲ್ಲಿ ಜರಗಲಿರುವ ದ.ಕ. ಜಿಲ್ಲಾ 24ನೇ ಕನ್ನಡ ಸಾಹಿತ್ಯ ಸಮ್ಮೇಳನಾಧ್ಯಕ್ಷರು.

Advertisement

ನಾರಾಯಣ ಜೋಷಿ, ಲಕ್ಷ್ಮೀ ಬಾಯಿ ಅವರ ಪುತ್ರ ಪ್ರಭಾಕರ ಜೋಷಿ ಅವರು ಮೂಲತಃ ಕಾರ್ಕಳ ತಾಲೂಕು ಮಾಳ ನಿವಾಸಿ. ಸಂಸ್ಕೃತ, ಕನ್ನಡ, ಹಿಂದಿ, ಮರಾಠಿ, ತುಳು, ಕೊಂಕಣಿ ಭಾಷೆಗಳ ಜ್ಞಾನ ಸಂಪ ನ್ನರು. ಜಾಗರ, ಕೇದಗೆ ಯಕ್ಷಗಾನ ಪದಕೋಶ ಭಾರತೀಯ ತತ್ವಶಾಸ್ತ್ರವೇ ಮೊದಲಾದ ಹದಿನೆಂಟು ವೈಚಾರಿಕ ಕೃತಿಗಳ ಜತೆಗೆ ಕೃಷ್ಣ ಸಂಧಾನ ಪ್ರಸಂಗದ ಪಿ.ಎಚ್‌ಡಿ. ಮಹಾಪ್ರಬಂಧ ಮಂಡನೆಯಿಂದ ಬಹುಶ್ರುತ ವಿದ್ವಾಂಸರಾಗಿ ನಾಡಿನ ಅಗ್ರ ಪಂಕ್ತಿಯ ಸಾಧಕರಾಗಿ ಪ್ರಸಿದ್ಧರಾಗಿದ್ದಾರೆ.

ಸಮ್ಮೇಳನಾಧ್ಯಕ್ಷರಾಗಿ ಆಯ್ಕೆಯಾದ ಹಿನ್ನೆಲೆಯಲ್ಲಿ “ಉದಯವಾಣಿ-ಸುದಿನ’ದ ದಿನೇಶ್‌ ಇರಾ ಅವರ ಜತೆಗೆ ಮಾತನಾಡಿದ್ದಾರೆ.

– ಸಮ್ಮೇಳನಾಧ್ಯಕ್ಷರಾಗಿ ಆಯ್ಕೆಯಾದ ಹಿನ್ನೆಲೆಯಲ್ಲಿ ತಮ್ಮ ಅಭಿಪ್ರಾಯ?
ಒಬ್ಬ ಸಾಹಿತಿ, ಕಲಾವಿದನಿಗೆ ಸಾಹಿತ್ಯ ಪರಿಷತ್‌ ಕೊಡಬಹುದಾದ ಬಹುದೊಡ್ಡ ಗೌರವವಿದು. ನಾನು ಯಕ್ಷಗಾನ ಸಂಬಂಧಿತ ವಿಚಾರದಲ್ಲಿ ತೊಡಗಿಸಿಕೊಂಡ ಕಾರಣದಿಂದ ಇದು ಯಕ್ಷಗಾನ ಕ್ಷೇತ್ರಕ್ಕೆ ದೊರೆತ ಗೌರವ ಎಂದು ಭಾವಿಸುತ್ತೇನೆ. ಸಾಹಿತ್ಯ ಸಮ್ಮೇಳನವನ್ನು ಯಶಸ್ವಿಯಾಗಿ ನಿರ್ವಹಿಸುತ್ತಿರುವ ಪ್ರದೀಪ್‌ ಕುಮಾರ್‌ ಕಲ್ಕೂರ ಅವರು ಇದೀಗ ಎರಡನೇ ಬಾರಿಗೆ ಅಧ್ಯಕ್ಷ ಸ್ಥಾನವನ್ನು ಯಕ್ಷಗಾನ ಕ್ಷೇತ್ರಕ್ಕೆ ಮೀಸಲಿಟ್ಟಿರುವುದು ಉಲ್ಲೇಖನೀಯ. ಇದೇ ರೀತಿ ಪತ್ರಕರ್ತರು, ಪಠ್ಯಪುಸ್ತಕ ಲೇಖಕರಿಗೂ ಈ ಅವಕಾಶ ದೊರೆಯಲಿ.

– ಬಹುಭಾಷಾ ತಜ್ಞರಾಗಿರುವ ತಾವು ಭಾಷಾ ವೈವಿಧ್ಯ ಬಗ್ಗೆ ಏನೆನ್ನುತ್ತೀರಿ?
ಬಹುಭಾಷಿಕತೆ ಈ ಪ್ರದೇಶದ ದೊಡ್ಡ ಸಂಪತ್ತು. ಹಲವು ಭಾಷೆ ಕಲಿಯುವುದರಿಂದ ಆಯಾ ಭಾಷೆಯ ಜತೆಗಿನ ಸಹಬಾಳ್ವೆ, ಸಂವರ್ಧನೆ ಹೆಚ್ಚಾಗಿ, ಇನ್ನೊಂದು ಭಾಷೆಯ ಮೇಲಿನ ವಿರೋಧ ಕಡಿಮೆಯಾಗುತ್ತದೆ. ಬಹು ಭಾಷಿಕತೆ ಮನುಷ್ಯನಿಗೆ ಸಹನೆ, ಚಿಂತನ ವಿಸ್ತಾರ ಹಾಗೂ ಸಾಮಾಜಿಕ ಜಾಗೃತಿ ಮೂಡಿಸಲು ಪ್ರಯತ್ನಕಾರಿ. ಹೀಗಾಗಿ ತುಳುನಾಡಿನಲ್ಲಿ ಭಾಷೆಯ ಗೊಂದಲವೇ ಇಲ್ಲ.

Advertisement

– ಕನ್ನಡ ಸಾಹಿತ್ಯ ಲೋಕಕ್ಕೆ ಯಕ್ಷಗಾನ ಬಹುದೊಡ್ಡ ಕೊಡುಗೆ ನೀಡಿದೆ. ಈ ಬಗ್ಗೆ ತಮ್ಮ ಅಭಿಪ್ರಾಯವೇನು?
ಕಾವ್ಯವಾಗಿ ಯಕ್ಷಗಾನ ಶ್ರೀಮಂತ ಕಲೆ. 7 ಸಾವಿರ ಪ್ರಸಂಗ ರಚನೆಯಾಗಿರಬಹುದು. 10 ಲಕ್ಷದಷ್ಟು ಪದ್ಯನಿಧಿಯಿದೆ. ಛಂದೋವೈವಿಧ್ಯವಿದೆ. ಅರ್ಥಸಾಹಿತ್ಯವಿದೆ. ಗಂಟೆಗಟ್ಟಲೆ ಒಂದು ಇಂಗ್ಲಿಷ್‌ ಪದ ಬಳಕೆ ಮಾಡದೆ ಕನ್ನಡದಲ್ಲಿ ಮಾತನಾಡಬಲ್ಲ ಶಕ್ತಿ ಯಕ್ಷಗಾನಕ್ಕಿದೆ. ಕನ್ನಡ ಸಾಹಿತ್ಯ, ತುಳುವಿಗೂ ಬಹುದೊಡ್ಡ ಕೊಡುಗೆ ನೀಡಿದೆ. ಯಕ್ಷಗಾನವು ಸಾಹಿತ್ಯಕ್ಕೆ ಸ್ಪೂರ್ತಿ ನೀಡಬಲ್ಲುದು. ಮಾಧ್ಯಮ ಲೋಕ, ಸಾಮಾಜಿಕ ಜಾಲತಾಣ ಇರುವ ಮಧ್ಯೆಯೇ 40ರಿಂದ 45 ಮೇಳ, 100ರ ಮೇಲೆ ಸಂಘಗಳು, 5,000 ಕಲಾವಿದರು, 100 ಕೋ.ರೂ. ಗಳ ವ್ಯವಹಾರ ನಡೆಸುವ ಯಕ್ಷಗಾನದಂತಹ ಮಾಧ್ಯಮ ಎಲ್ಲೂ ಇಲ್ಲ.

– ತಾವು ಗಮನಿಸಿದಂತೆ ಸಾಹಿತ್ಯ ಕ್ಷೇತ್ರ ಸದ್ಯ ಯಾವ ಸಮಸ್ಯೆ, ಸವಾಲು ಎದುರಿಸುತ್ತಿದೆ?
ಇಲ್ಲಿ ಬರಹ ತುಂಬಾ ಇದೆ; ಪುಸ್ತಕಗಳು ತುಂಬ ಬರುತ್ತಿವೆ. ಆದರೆ ಓದುವವರು ಕಡಿಮೆಯಾಗಿದ್ದಾರೆ. ಕನ್ನಡದಲ್ಲಿ ಪಂಥೀಯತೆ ಆಧಾರವಾಗಿ ಹೋಗುತ್ತಿದ್ದಾರೆ. ಕೆಲವು ಶಬ್ಧ ಉರುಳಿಸಿ ಬಿಡುವ ಸಂಗತಿ ನಡೆಯುತ್ತಿದೆ. ಒಂದು ವಿಷಯವನ್ನು ನೋಡಿ ಸಿದ್ಧಾಂತ ರೂಪಿಸಬೇಕೇ ಹೊರತು, ಸಿದ್ಧಾಂತದ ಕನ್ನಡಿಯಿಂದ ವಿಷಯವನ್ನು ನೋಡಿದರೆ ಎಲ್ಲ ಸಿದ್ಧಾಂತವೇ ಕಾಣುತ್ತದೆ. ಅತಿರೇಕಗಳಿಗೆ ಹೋಗದೆ ಬರೆಯಬೇಕು. ಅನುಭವ ಕಥನವು ಸಾಹಿತ್ಯದ ಕೆಲಸ. ಒಂದು ಪಂಥದ ಪರವಾಗಿ ವಾಲುವುದು ಮಾತ್ರ ಸಾಹಿತ್ಯವಲ್ಲ. ಶಬ್ಧಗ ಳು, ಸಂವೇದನೆಯನ್ನೇ ಕೊಲ್ಲುವ ಪಂಥಗಳನ್ನು ಇಟ್ಟುಕೊಂಡರೆ ಸಾಹಿತ್ಯ ಉಳಿಯುವುದಿಲ್ಲ.

– ಈ ಬಾರಿಯ ಸಮ್ಮೇಳನ ಆತ್ಮನಿರ್ಭರ ಭಾರತ; ಪರಂಪರೆ ಹಾಗೂ ಆಧುನಿಕತೆಯ ಆಶಯ ಹೊಂದಿದೆ. ಇದರ ಬಗ್ಗೆ ತಮ್ಮ ಅಭಿಪ್ರಾಯ.
ಸ್ವಾವಲಂಬಿಯಾಗಬೇಕು ಎಂಬುದೇ ಇದರ ಅರ್ಥ. ಆರ್ಥಿಕವಾಗಿ ಭಾರತ ಆತ್ಮನಿರ್ಭರವಾಗಲು ಇದು ಪ್ರಸಕ್ತ ಕಾಲ. ದೇಶೀಯ ವಸ್ತುಗಳ ಬಳಕೆಗೆ ಒತ್ತು ನೀಡಲು ಆದ್ಯತೆ ನೀಡಬೇಕು. ತನ್ನ ಪರಿಸರದ ಸಮಸ್ಯೆ ಸ್ಪಂದಿಸುವ ಕಾಳಜಿ ಸಾಹಿತಿ ಸಹಿ ತ ಎಲ್ಲರಲ್ಲಿಯೂ ಬೇಕು. ನಾನು ಅದನ್ನು ಪಾಲಿಸಿಕೊಂಡು ಬಂದಿದ್ದೇನೆ.

– ಕಲಿಕಾ ಮಾಧ್ಯಮದ ವಿಚಾರದಲ್ಲಿ ತಮ್ಮ ನಿಲುವೇನು?
ಆರಂಭಿಕ ಶಿಕ್ಷಣ 5ನೇ ತರಗತಿವರೆಗೆ ಕನ್ನಡ ಕಡ್ಡಾಯ ಮಾಡಬೇಕು. ಹಾಗೂ ಇಂಗ್ಲಿಷ್‌ ಅನ್ನು ವಿಷಯವಾಗಿ ಬೋಧಿಸಬೇಕು. ಅನುದಾನಿತ ಹಾಗೂ ಸರಕಾರಿ ಪ್ರಾಥಮಿಕ ಶಾಲೆಗಳನ್ನು ಗಟ್ಟಿ ಮಾಡಲೇಬೇಕು.

ಯಕ್ಷಗಾನ ಯಕ್ಷಗಾನೇತರವಾಗುತ್ತಿದೆ !
ಯಕ್ಷಗಾನೇತರವಾಗಿ ಬೆಳೆಯುತ್ತಿರುವ ಯಕ್ಷಗಾನವನ್ನು ಯಕ್ಷಗಾನೀಕರಣ ಮಾಡಬೇಕು. ಆದರೆ ಈಗ ಅದು ಏನೇನೋ ಆಗುತ್ತಿದೆ. ಮದುವೆ ಮಂಟಪ, ಸಿನೆಮಾ, ನಾಟಕ ಸಹಿತ ಬೇರೆ ಬೇರೆ ಸ್ತರಗಳಿಂದ ಸಂಗತಿಗಳನ್ನು ತಂದು ಯಕ್ಷಗಾನವನ್ನು “ಟ್ರೆಂಡಿ ಆರ್ಟ್‌’ ಮಾಡಲಾಗುತ್ತಿದೆ. ಹೀಗಾಗಿ ಯಕ್ಷಗಾನದ ಶೈಲಿ ಹಾಗೂ ಗುಣಮಟ್ಟದ ಸಂರಕ್ಷಣೆ ಆಗಬೇಕು. ಯಕ್ಷಗಾನದ ಯಜಮಾನರು ಹಾಗೂ ಮುಜರಾಯಿ ಇಲಾಖೆ ಇದರ ಜವಾಬ್ದಾರಿ ತೆಗೆದುಕೊಳ್ಳಬೇಕು. ಒಬ್ಬರನ್ನೊಬ್ಬರು, ದೂರುವ ಅಥವಾ ಸಮಸ್ಯೆಯನ್ನು ವರ್ಗಾಯಿಸುವ ಬದಲು ಬದಲಾವಣೆಗೆ ಸಿದ್ಧವಾಗಬೇಕು. ಜಗತ್ತಿನಲ್ಲಿಯೇ ಹೆಮ್ಮೆ ಪಡುವ ದೊಡ್ಡ ಸಂಪತ್ತು ಯಕ್ಷಗಾನ. ಅದರ ಶೈಲಿ, ನಾಟ್ಯ, ಸಂಗೀತವೇ ಶ್ರೇಷ್ಠ. ಜಗತ್ತಿನ ರಂಗಭೂಮಿಗೆ ಯಕ್ಷಗಾನ ಕೊಡುಗೆ ನೀಡಬಹುದು. ಆದರೆ ಈಗ ನಾವು ಸಿನೆಮಾ, ನಾಟಕ.. ಹೀಗೆ ಬೇರೆಯವರಿಂದ ತೆಗೆದುಕೊಳ್ಳುತ್ತಿದ್ದೇವೆ. ಕಲಾ ಭಾಷೆಯನ್ನು ವಿನಯದಿಂದ ಅರ್ಥೈಸಿ ಪರಿಷ್ಕರಣೆ ಆಗಬೇಕು. ಆದರೆ, ಎಚ್ಚರಿಕೆ ಅಷ್ಟೇ ಮುಖ್ಯ. ಸಬ್ಸಿಡಿ ಕೂಡ ಇದಕ್ಕೆ ದೊರೆಯಬೇಕು. ಈ ಬಗ್ಗೆ ಉಲ್ಲೇಖೀಸಲಿದ್ದೇನೆ.

Advertisement

Udayavani is now on Telegram. Click here to join our channel and stay updated with the latest news.

Next