Advertisement

ಕೋವಿಡ್‌ ಲಸಿಕೆ ಹಾಕಿಸಿಕೊಳ್ಳಲು ಹಿಂದೇಟು ಬೇಡ; ಬಿಬಿಎಂಪಿ ಆಯುಕ್ತ

11:56 PM Jan 27, 2021 | Team Udayavani |

ಬೆಂಗಳೂರು: ಕೋವಿಡ್‌ ಲಸಿಕೆಯನ್ನು ಭಾರತದಿಂದ ಹಲವು ದೇಶಗಳು ಅಮದು ಮಾಡಿಕೊಳ್ಳುತ್ತಿವೆ. ಆದರೆ, ನಮ್ಮಲ್ಲಿ ಆರೋಗ್ಯ ಕಾರ್ಯಕರ್ತರು ಕೋವಿಡ್‌ ಲಸಿಕೆ ತೆಗೆದುಕೊಳ್ಳಲು “ಕಾದು ನೋಡುವ ತಂತ್ರ’ ಅನುಸರಿಸುತ್ತಿದ್ದಾರೆ ಎಂದು ಬಿಬಿಎಂಪಿ ಆಯುಕ್ತ ಎನ್‌. ಮಂಜುನಾಥ್‌ ಪ್ರಸಾದ್‌ ಅವರು ಬೇಸರ ವ್ಯಕ್ತಪಡಿಸಿದರು.

Advertisement

ಬುಧವಾರ ಈ ಸಂಬಂಧ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಹಲವು ಹಂತದ ಸಂಶೋಧನೆಗಳ ನಂತರವಷ್ಟೇ ಕೋವಿಡ್‌ ಲಸಿಕೆ ಮಾರುಕಟ್ಟೆಗೆ ಬಿಡಲಾಗಿದೆ. ಆದರೆ, ನಮ್ಮಲ್ಲಿ ಹಲವು ಆರೋಗ್ಯ ಕಾರ್ಯಕರ್ತರು ಕೋವಿಡ್‌ ಲಸಿಕೆ ಹಾಕಿಸಿಕೊಳ್ಳಲು ಹಿಂದೇಟು ಹಾಕುತ್ತಿದ್ದಾರೆ. ಕೋವಿಡ್‌ ಲಸಿಕೆ ಹಾಕಿಸಿಕೊಂಡವರಿಗೆ ಯಾವುದೇ ಅಡ್ಡಪರಿಣಾಮ ಬೀರದೆ  ಇದ್ದರೆ, ಮುಂದೆ ಲಸಿಕೆ ತೆಗೆದುಕೊಳ್ಳೋಣ ಎನ್ನುವ (ಕಾದು ನೋಡುವ)ತಂತ್ರ ಅನುಸರಿಸುತ್ತಿದ್ದಾರೆ. ಹಿತ್ತಲ ಗಿಡ ಮದ್ದಲ್ಲ ಎಂಬ ಭಾವನೆ ಹೋಗಬೇಕು. ಈಗಾಗಲೇ ಹಲವು ಹಿರಿಯ ಹಾಗೂ ನುರಿತ ವೈದ್ಯರು ಕೋವಿಡ್‌ ಲಸಿಕೆ ಹಾಕಿಸಿಕೊಂಡು ಉಳಿದವರಿಗೆ ಮಾದರಿ ಆಗಿದ್ದಾರೆ ಎಂದು ಹೇಳಿದರು.

ಮೊದಲ ಹಂತದಲ್ಲಿ ಐವತ್ತು ಸಾವಿರ ಜನ ಆರೋಗ್ಯ ಕಾರ್ಯಕರ್ತರಿಗೆ ಕೋವಿಡ್‌ ಲಸಿಕೆ ನೀಡಲಾಗಿದೆ. ಪ್ರತಿದಿನ ಅಂದಾಜು 20 ಸಾವಿರ ಜನ ಆರೋಗ್ಯ ಕಾರ್ಯಕರ್ತರಿಗೆ ಕೋವಿಡ್‌ ಲಸಿಕೆ ನೀಡಲು ಸಿದ್ಧತೆ ಮಾಡಿಕೊಳ್ಳಲಾಗುತ್ತಿದ್ದು,ಇದರಲ್ಲಿ ಶೇ. 50ರಿಂದ 60ರಷ್ಟು ಪ್ರತಿಶತ ಜನ ಮಾತ್ರ ಕೋವಿಡ್‌ ಲಸಿಕೆ ಹಾಕಿಸಿಕೊಳ್ಳುತ್ತಿದ್ದಾರೆ.ಹೀಗಾಗಿ,ಕೋವಿಡ್‌ ಲಸಿಕೆ ನೀಡುವ ಸಂಬಂಧ ಜಾಗೃತಿ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗುವುದು ಎಂದು ತಿಳಿಸಿದರು.

ನಗರದಲ್ಲಿ ಕೋವಿಡ್‌ ಸೋಂಕು ಹರಡುವುದನ್ನು ತಡೆಗಟ್ಟಬೇಕಾದರೆ, ಎಲ್ಲರಲ್ಲೂ ರೋಗ ನಿರೋಧಕ ಶಕ್ತಿ ಹೆಚ್ಚಾಗಬೇಕು. ಈ ರೀತಿ ವ್ಯಕ್ತಿಯಲ್ಲಿ ರೋಗ ನಿರೋಧಕ ಶಕ್ತಿ ಹೆಚ್ಚಾದರೆ, ಕೊರೊನಾ ಸೋಂಕು ಹಬ್ಬುವುದು ಕಡಿಮೆ ಆಗಲಿದೆ. ಅಲ್ಲದೆ, ಆರೋಗ್ಯ ಕಾರ್ಯಕರ್ತರು ಫ್ರಂಟ್‌ಲೈನ್‌ನಲ್ಲಿ ಕೋವಿಡ್ ಸೋಂಕಿತರಿಗೆ ಚಿಕಿತ್ಸೆ ನೀಡುತ್ತಿರುವುದರಿಂದ ಅವರಿಗೆ ಮೊದಲ ಹಂತದಲ್ಲಿ ಕೋವಿಡ್‌ ಲಸಿಕೆ ನೀಡಲು ನಿರ್ಧರಿಸಲಾಗಿದೆ. ಹೀಗಾಗಿ, ಎಲ್ಲ ಆರೋಗ್ಯ ಕಾರ್ಯಕರ್ತರು ಕೋವಿಡ್‌ ಲಸಿಕೆ ತೆಗೆದುಕೊಳ್ಳಿ ಎಂದು ಮನವಿ ಮಾಡುತ್ತೇನೆ.ಆದರೆ, ಇದರಲ್ಲಿ ಯಾವುದೇ ರೀತಿಯ ಒತ್ತಡ ಹಾಕುವುದಿಲ್ಲ ಎಂದರು.

ಎರಡನೇ ಹಂತದಲ್ಲಿ ಲಸಿಕೆ ನೀಡಲು ಸಿದ್ಧತೆ :

Advertisement

ಮೊದಲ ಹಂತದ ಕೋವಿಡ್‌ ಲಸಿಕೆಯನ್ನು ನಿರ್ದಿಷ್ಟ ಸಮಯದ ಒಳಗಾಗಿ ನೀಡಬೇಕು ಎಂದು ಯಾವುದೇ ಗಡವು ನೀಡಿಲ್ಲ. ಆದರೆ, ಮುಂದಿನ ಒಂದುವಾರ ಅಥವಾ 10 ದಿನಗಳ ಒಳಗಾಗಿ ಮೊದಲ ಹಂತದಲ್ಲಿ ಗುರುತಿಸಿರುವ ಆರೋಗ್ಯ ಕಾರ್ಯಕರ್ತರಿಗೆ ಕೋವಿಡ್‌ ಲಸಿಕೆ ನೀಡುವ ಪ್ರಕ್ರಿಯೆ ಪೂರ್ಣವಾಗಲಿದೆ. ಎರಡನೇ ಹಂತದಲ್ಲಿ ಪಾಲಿಕೆಯ ಅಧಿಕಾರಿಗಳು ಹಾಗೂ ಸಿಬ್ಬಂದಿ ಮತ್ತು ಪೊಲೀಸ್‌ ಇಲಾಖೆಯ ಸಿಬ್ಬಂದಿ ಸೇರಿ 50 ಸಾವಿರ ಜನ ಕೊರೊನಾ ವಾರಿಯರ್ಸ್‌ಗಳನ್ನು ಗುರುತಿಸಲಾಗಿದ್ದು,  ಈಗಾಗಲೇ 30 ಸಾವಿರ ಜನರ ಪಟ್ಟಿ ಸಿದ್ಧಪಡಿಸಿಕೊಳ್ಳಲಾಗಿದೆ. ಸರ್ಕಾರದ ನಿರ್ದೇಶನದ ಅನುಸಾರ ಎರಡನೇ ಹಂತದ ಕೋವಿಡ್‌ ಲಸಿಕೆ ಅಭಿಯಾನ ಪ್ರಾರಂಭಿಸಲಾಗುವುದು ಎಂದರು.

ಇನ್ನು ಪ್ರಥಮ ಹಂತದಲ್ಲಿ ಕೋವಿಡ್‌ ಲಸಿಕೆ ಹಾಕಿಸಿಕೊಂಡಿರುವವರಿಗೆ 28 ದಿನಗಳ ನಂತರ ಎರಡನೇ ಡೋಸ್‌ ಕೋವಿಡ್‌ ಲಸಿಕೆ ನೀಡಲಾಗುವುದು ಕೋವಿಡ್‌ ಲಸಿಕೆ ಹಾಗೂ ಪಲ್ಸ್‌ ಪೋಲಿಯೊ ಲಸಿಕೆ ನೀಡಲು ಪ್ರತ್ಯೇಕ ವ್ಯವಸ್ಥೆ ಮಾಡಿಕೊಳ್ಳಲಾಗಿದೆ. ಹೀಗಾಗಿ, ಪಲ್ಸ್‌ ಪೋಲಿಯೊ ವೇಳೆ ಯಾವುದೇ ಸಮಸ್ಯೆ ಆಗುವುದಿಲ್ಲ ಎಂದು ಆಯುಕ್ತರು ಮಾಹಿತಿ ನೀಡಿದರು.

Advertisement

Udayavani is now on Telegram. Click here to join our channel and stay updated with the latest news.

Next