Advertisement

ಬೆಳಗಾವಿ ರೈತರಂತೆ ಕಬ್ಬು ಬೆಳೆದು ಹಾಳಾಗಬೇಡಿ; ಸಚಿವ ಉಮೇಶ ಕತ್ತಿ

06:10 PM Apr 25, 2022 | Team Udayavani |

ವಿಜಯಪುರ: ಬೆಳಗಾವಿ ಜಿಲ್ಲೆಯಲ್ಲಿ 27 ಸಕ್ಕರೆ ಕೈಗಾರಿಕೆಗಳಿದ್ದು, 2.50 ಕೋಟಿ ಲಕ್ಷ ಟನ್‌ ಕಬ್ಬು ಉತ್ಪಾದನೆ ಮಾಡಲಾಗುತ್ತದೆ. ಇದರಿಂದ ಇಡಿ ಕೃಷಿ ವ್ಯವಸ್ಥೆ ಅವಸಾನವಾಗಿದೆ. ಫಲವತ್ತಾದ ಮಣ್ಣು ಹೊಂದಿರುವ ವಿಜಯಪುರ ಜಿಲ್ಲೆ ಇದೀಗ ನೀರಾವರಿ ಸೌಲಭ್ಯ ಕಾಣುತ್ತಿದ್ದು, ಕಬ್ಬು ಬೆಳೆದು ಹಾಳಾಗಬೇಡಿ. ಬದಲಾಗಿ ತೋಟಗಾರಿಕೆಗೆ ಪೂರಕವಾಗಿರುವ ಇಲ್ಲಿನ ನೈಸರ್ಗಿಕ ಸಂಪನ್ಮೂಲವನ್ನು ಸದ್ಬಳಕೆ ಮಾಡಿಕೊಳ್ಳಿ ಎಂದು ಜಿಲ್ಲಾ ಉಸ್ತುವಾರಿ ಹೊಂದಿರುವ ಅರಣ್ಯ ಸಚಿವ ಉಮೇಶ ಕತ್ತಿ ವಿಜಯಪುರ ಜಿಲ್ಲೆಯ ರೈತರಿಗೆ ಮನವಿ ಮಾಡಿದರು.

Advertisement

ರವಿವಾರ ಸಂಜೆ ನಗರದ ಕಂದಗಲ್‌ ಹನುಮಂತರಾಯ ಜಿಲ್ಲಾ ರಂಗ ಮಂದರಿದಲ್ಲಿ ರಾಜ್ಯ ಮಟ್ಟದ ಲಿಂಬೆ ಉತ್ಸವ ಸಮಾರೋಪ ಸಮಾರಂಭದ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ವಿಜಯಪುರ ಜಿಲ್ಲೆಯ ವಾತಾವರಣ ತೋಟಗಾರಿಕೆ ಬೆಳೆಗೆ ಪೂರಕ ಪರಿಸ್ಥಿತಿ ಹೊಂದಿದೆ. 5 ಲಕ್ಷ ಕೃಷಿ ಹಾಗೂ 2 ತೋಟಗಾರಿಕೆ ಬೆಳೆಯಲಾಗುತ್ತಿದ್ದು, ಫಲವತ್ತಾದ 7 ಲಕ್ಷ ಭೂಮಿಯನ್ನು ಸಂರಕ್ಷಿಸುವ ಹೊಣೆ ನಿಮ್ಮ ಮೇಲಿದೆ ಎಂದರು.

ಬೆಳಗಾವಿ ಜಿಲ್ಲೆಯ ರೈತರು ಕಬ್ಬು ಬೆಳೆದು ಸಮೃದ್ಧವಾಗಿದ್ದಾರೆ, ಆರ್ಥಿಕವಾಗಿ ಸಿರಿವಂತರಾಗಿದ್ದಾರೆ ಎಂಬ ಭಾವನೆ ಇದೆ. ಆದರೆ ಕಬ್ಬು ಬೆಳೆದವಗೆ ವರ್ಷವಾದರೂ ಬಿಲ್‌ ಪಾವತಿ ಆಗುವುದಿಲ್ಲ. ಸಹಕಾರಿ, ಖಾಸಗಿ ಎಲ್ಲ ಕಾರ್ಖಾನೆ ವ್ಯವಸ್ಥೆಯಲ್ಲೂ ಇದೇ ದುಸ್ಥಿತಿ ಇದೆ. ಎಲ್ಲ ಕಾರ್ಖಾನೆಗಳೂ ಕಬ್ಬು ಬೆಳೆದ ರೈತರಿಗೆ ಸೌಲಭ್ಯ ಕಲ್ಪಿಸುವಲ್ಲಿ ಒಂದೇ ತೆರನಾಗಿವೆ ಎಂದು ವಿವರಿಸಿದರು.

ಹೀಗಾಗಿ ಕಬ್ಬಿಗೆ ಮಾರು ಹೋಗಿ ಫಲವತ್ತಾದ ಭೂಮಿ ಹಾಳು ಮಾಡದೇ ರೈತರು ಭೂಮಿಯನ್ನು ಉಳಿಸಿಕೊಂಡು, ಕೃಷಿ, ತೋಟಗಾರಿಕೆ ಬೆಳೆಗಳಿಗೆ ಆದ್ಯತೆ ನೀಡಿ. ಭೀಕರ ಬರಕ್ಕೆ ಹೆಸರಾಗಿರುವ ವಿಜಯಪುರ ಜಿಲ್ಲೆಯಲ್ಲಿ ಗುಳೆ ಹೋಗುವುದನ್ನು ತಡೆಯಲು ಇಲ್ಲಿರುವ ಸಂಪನ್ಮೂಲ ಬಳಕೆ ಮಾಡಿಕೊಳ್ಳಬೇಕು. ತೋಟಗಾರಿಕೆ ಬೆಳೆಗಳ ಮೌಲ್ಯ ವರ್ಧನೆಗೆ ಉದ್ಯಮಿಗಳು, ಸಹಕಾರಿ ಸಂಘ ಸಂಸ್ಥೆಗಳು ಮುಂದೆ ಬಂದಲ್ಲಿ ಸ್ಥಳೀಯವಾಗಿಯೇ ಉದ್ಯೋಗ ಕಲ್ಪಿಸಲು ಸಾಧ್ಯವಿದೆ ಎಂದು ಸಲಹೆ ನೀಡಿದರು.

ಒಂದು ಜಿಲ್ಲೆ ಒಂದು ಬೆಳೆ ಯೋಜನೆಗೆ ಆಯ್ಕೆಯಾಗಿರುವ ವಿಜಯಪುರ ಜಿಲ್ಲೆಯಲ್ಲಿ ರೈತರು ಇನ್ನೂ ಹೆಚ್ಚಿನ ಅಭಿವೃದ್ಧಿಗೆ ಲಿಂಬೆ ಮೌಲ್ಯವರ್ಧನೆ ಘಟಕ ಸ್ಥಾಪಿಸಲು ಮುಂದಾದಲ್ಲಿ ಡಿಸಿಸಿ ಬ್ಯಾಂಕ್‌ ಹಾಗೂ ಲೀಡ್‌ ಬ್ಯಾಂಕ್‌ ಅ ಧಿಕಾರಿಗಳಿಗೆ ಅಗತ್ಯ ಸಾಲ ಸೌಲಭ್ಯ ನೀಡಲು ಸೂಚನೆ ನೀಡಿದ್ದೇನೆ. ಇದಲ್ಲದೇ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ನಾಳೆ ಜಿಲ್ಲೆಗೆ ಆಗಮಿಸಲಿದ್ದು, ಲಿಂಬೆ ಅಭಿವೃದ್ಧಿ ಮಂಡಳಿ ಬಲವರ್ಧನೆಗಾಗಿ ಮಂಡಳಿ ಅಧ್ಯಕ್ಷ ಅಶೋಕ ಅಲ್ಲಾಪುರ ಅವರ ನೇತೃತ್ವದಲ್ಲಿ ನಿಯೋಗದಲ್ಲಿ ಮನವಿ ಮಾಡುವುದಾಗಿ ಭರವಸೆ ನೀಡಿದರು.

Advertisement

ವಿಜಯಪುರ ಜಿಲ್ಲೆಯ ಉಸ್ತುವಾರಿ ಸಚಿವನಾಗಿರುವ ನಾನು ವಾರಕ್ಕೆ, 10 ದಿನಕ್ಕೊಮ್ಮೆ ಜಿಲ್ಲೆಗೆ ಭೇಟಿ ನೀಡಲಿದ್ದು, ರೈತರ ತಮ್ಮ ಸಮಸ್ಯೆ ಹೇಳಿಕೊಳ್ಳುವ ಎಲ್ಲ ಸಮಸ್ಯೆಗಳಿಗೆ ಪರಿಹಾರ ಕಂಡುಕೊಡಲು ಪ್ರಾಮಾಣಿಕ ಪ್ರಯತ್ನ ಮಾಡುವುದಾಗಿ ಹೇಳಿದರು. ಜೆ.ಎಚ್‌.ಪಟೇಲ್‌ ಸಿಎಂ ಆಗಿದ್ದಾಗ 1996ರಲ್ಲಿ ಅಖಂಡ ವಿಜಯಪುರ ಜಿಲ್ಲೆಗೆ ಉಸ್ತುವಾರಿ ಸಚಿವನಾಗಿದ್ದೆ. ಇದೀಗ 2022 ಜಿಲ್ಲಾ ಉಸ್ತುವಾರಿ ಸಚಿವನಾಗಿ ಸೇವೆ ಮಾಡುವ ಅವಕಾಶ ಸಿಕ್ಕಿದೆ. ಈ ಜಿಲ್ಲೆಯ ಗೌಡರೊಂದಿಗೆ ನಾನು ಹೊಂದಾಣಿಕೆ ಮಾಡಿಕೊಳ್ಳುತ್ತೇನೆ ಎಂಬ ವಿಶ್ವಾಸವೇ ನನಗೆ ಇಂಥ ಹೊಣೆಗಾರಿಕೆ ನೀಡಲು ಕಾರಣ ಇರಬಹುದು ಎಂದರು.

ಬಿಜೆಪಿ ಮುಖಂಡ ಸೋಮನಗೌಡ ಪಾಟೀಲ ಮನಗೂಳಿ, ಡಿಸಿ ವಿ.ಬಿ. ದಾನಮ್ಮನವರ, ಜಿಪಂ ಸಿಇಒ ರಾಹುಲ್‌ ಶಿಂಧೆ, ಎಸ್ಪಿ ಆನಂದಕುಮಾರ, ಲಿಂಬೆ ಅಭಿವೃದ್ಧಿ ಮಂಡಳಿ ವ್ಯವಸ್ಥಾಪಕ ನಿರ್ದೇಶಕ ಸಂತೋಷ ಸಪ್ಪಂಡಿ, ತೋಟಗಾರಿಕೆ ಉಪ ನಿರ್ದೇಶಕ ಎಸ್‌.ಎಂ. ಬರಗಿಮಠ, ಸಿದ್ದು ಪೂಜಾರಿ, ಮಹಾದೇವ ಅಂಬಲಿ, ಅಶೋಕ ನಾಡಗೌಡ, ಡಾ| ಖೇಡಗಿ ಇತರರು ವೇದಿಕೆಯಲ್ಲಿದ್ದರು.

ವಿಜಯಪುರ ಜಿಲ್ಲೆ ಸರ್ಕಾರದ ಒಂದು ಜಿಲ್ಲೆ ಒಂದು ಬೆಳೆ ಯೋಜನೆಗೆ ಆಯ್ಕೆ ಆಗಿರುವ ಲಿಂಬೆ ಬೆಳೆಗೆ ಕಿಸಾನ್‌ ರೈಲು ಯೋಜನೆ ಸೌಲಭ್ಯ ಕಲ್ಪಿಸಲು ಯೋಜಿಸಲಾಗಿದೆ. ಇದಲ್ಲದೇ ಒಂದು ಸ್ಟೇಷನ್‌ ಒಂದು ವ್ಯಾಪಾರ ಯೋಜನೆ ಅಡಿಯಲ್ಲಿ ವಿಜಯಪುರ ರೈಲ್ವೆ ನಿಲ್ದಾಣದಲ್ಲಿ ಲಿಂಬೆ ಉತ್ಪನ್ನ ಮಾರಾಟಕ್ಕೆ ವ್ಯವಸ್ಥೆ ಕಲ್ಪಿಸಲಾಗುತ್ತಿದೆ.
ಎಸ್‌.ಹರಿತಾ, ವ್ಯವಸ್ಥಾಪಕ ನಿರ್ದೇಶಕಿ
ವಾಣಿಜ್ಯ ವಿಭಾಗ, ನೈರುತ್ಯ ರೈಲ್ವೆ ಇಲಾಖೆ

ವಿಜಯಪುರ ಜಿಲ್ಲೆಯ ಲಿಂಬೆಗೆ ಭೌಗೋಳಿಕ ಸೂಚ್ಯಂಕ ಮಾನ್ಯತೆ ಸಿಕ್ಕಲ್ಲಿ ಇಂಡಿ ಭಾಗದ ಲಿಂಬೆಗೆ ಜಾಗತಿಕ ಮಾರುಕಟ್ಟೆ ಲಭ್ಯವಾಗುವ ಅವಕಾಶ ತೆರೆದುಕೊಳ್ಳಲಿದೆ.
ಡಾ| ಆರ್‌.ಬಿ.ಬೆಳ್ಳಿ, ಸಹ ವಿಸ್ತರಣಾ
ನಿರ್ದೇಶಕರು ಕೃಷಿ ವಿಸ್ತರಣಾ ಕೇಂದ್ರ

ರೈತರು ಪರಿಶ್ರಮದಿಂದ ಬೆಳೆದ ಬೆಳೆಗೆ ವೈಜ್ಞಾನಿಕ ಬೆಲೆ ಸಿಗಲಿಲ್ಲ ಎಂದು ಕೊರಗುವ ಬದಲು ಸಂಸ್ಕರಣೆ ಆಗೂ ಮೌಲ್ಯವರ್ಧನೆಗೆ ರೈತರು ಆದ್ಯತೆ
ನೀಡಬೇಕು. ಲಿಂಬೆ, ಇರುಳ್ಳಿ, ಟೊಮ್ಯಾಟೋ ಸೇರಿಧಂತೆ ಬಹುತೇಕ ಎಲ್ಲ ಕೃಷಿ-ತೋಟಗಾರಿಕೆ ಬೆಳೆಗಳಿಗೆ ಮೌಲ್ಯವರ್ಧನೆ ಮಾಡಿ, ಮಾರುಕಟ್ಟೆ ಕಂಡುಕೊಂಡಲ್ಲಿ ಹೆಚ್ಚಿನ ಬೆಲೆ ಸಿಗಲು ಸಾಧ್ಯವಿದೆ.
ಅರವಿಂದ ದೇಶಪಾಂಡೆ
ಕೃಷಿ ಪಂಡಿತ, ಅಥಣಿ

ಲಿಂಬೆ ಅಭಿವೃದ್ಧಿ ಮಂಡಳಿಗೆ ಸರ್ಕಾರ ಸೂಕ್ತ ಅನುದಾನ ನೀಡಿದಲ್ಲಿ ಸಂಕಷ್ಟದಲ್ಲಿರುವ ರಾಜ್ಯದ ಅದರಲ್ಲೂ ವಿಶಿಷ್ಟ ಲಿಂಬೆ ಬೆಳೆಯಲು ಜೀವನವನ್ನೇ ಮುಡಿಪಾಗಿಟ್ಟಿರುವ ವಿಜಯಪುರ ಜಿಲ್ಲೆಯ ರೈತರ ನೆರವಿಗೆ ಧಾವಿಸಲು ಸಾಧ್ಯವಿದೆ. ಜಿಲ್ಲಾ ಉಸ್ತುವಾರಿ ಸಚಿವ ಉಮೇಶ ಕತ್ತಿ ಅವರು ಲಿಂಬೆ ಬೆಳೆಗಾರರ ಸಂಕಷ್ಟ ನಿವಾರವಣೆಗಾಗಿ ಅಭಿವೃದ್ಧಿ ಮಂಡಳಿಗೆ ಹೆಚ್ಚಿನ ನೆರವು ನೀಡಲು ಮುಖ್ಯಮಂತ್ರಿ ಬಳಿಗೆ ನಿಯೋಗ ಕೊಂಡೊಯ್ಯಬೇಕು. ನನಗೆ ಸಿಕ್ಕ ಅಕಡಿಮೆ ಅವಧಿಯಲ್ಲಿ ಏನೆಲ್ಲ ಕೊರತೆಗಳ ಮಧ್ಯೆ ಲಿಂಬೆ ಅಭಿವೃದ್ಧಿಗೆ ಹಾಗೂ ಸಂಕಷ್ಟದಲ್ಲಿರುವ ಲಿಂಬೆ ಬೆಳೆಗಾರ ರೈತರಿಗೆ ನೆರವು ನೀಡಲು ಶ್ರಮಿಸಿದ್ದೇನೆ.
ಅಶೋಕ ಅಲ್ಲಾಪುರ, ಅಧ್ಯಕ್ಷರು, ಕರ್ನಾಟಕ ರಾಜ್ಯ ಲಿಂಬೆ ಅಭಿವೃದ್ಧಿ ಮಂಡಳಿ, ಇಂಡಿ

ವಿಶ್ವದಲ್ಲೇ ಕೃಷಿ ಹಾಗೂ ಕೃಷಿ ಆಧಾರಿತ ಅತ್ಯಧಿಕ ಉತ್ಪಾದನೆಯಲ್ಲಿ ಭಾರತ ಮುಂಚೂಣಿಯಲ್ಲಿದೆ. ಕೇಂದ್ರ ಸರ್ಕಾರ ಹಾಗೂ ಪ್ರಧಾನ ಮಂತ್ರಿ ರೂಪಿಸಿರುವ ಹಲವು ಕಾರ್ಯಕ್ರಮಗಳನ್ನು ರೈತರು ಸದ್ಬಳಕೆ ಮಾಡಿಕೊಳ್ಳಬೇಕು. ಒಂದು ಜಿಲ್ಲೆ ಒಂದು ಬೆಳೆ ಯೋಜನೆಗೆ ಆಯ್ಕೆಯಾಗಿರುವ ಲಿಂಬೆ ಬೆಳೆ ಯೋಜನೆಯಲ್ಲಿ 42 ಫಲಾನುಭವಿಗಳಿಗೆ ಸಾಲ ಸೌಲಭ್ಯ ಸಿಕ್ಕಿದ್ದು, ವ್ಯವಸ್ಥಿತ ಅನುಷ್ಠಾನ ಮಾಡುವಂತೆ ಸೂಚಿಸುತ್ತೇನೆ.
ವಿ.ಬಿ. ದಾನಮ್ಮನವರ, ಜಿಲ್ಲಾಧಿಕಾರಿ, ವಿಜಯಪುರ

Advertisement

Udayavani is now on Telegram. Click here to join our channel and stay updated with the latest news.

Next