Advertisement

ಇಳಿವಯಸ್ಸಲ್ಲೂ ಕನ್ನಡ ಪದಕೋಶ ಪ್ರಚಾರ ಕಾಯಕ

11:09 AM Nov 18, 2018 | |

ಸುಳ್ಯ : ವಯಸ್ಸು 65 ದಾಟಿದರೂ ಕನ್ನಡದ ಮೇಲಿನ ಪ್ರೇಮ ಕಿಂಚಿತ್ತೂ ಇಂಗಿಲ್ಲ. ಕಾಲಿಗೆ ಚಕ್ರ ಕಟ್ಟಿಕೊಂಡವರಂತೆ ಊರೂರು ಸುತ್ತಿ ಕನ್ನಡ ಪದ ಸಂಪತ್ತಿನ ಕುರಿತು ಅರಿವು ಮೂಡಿಸುವುದು ಇವರ ಕಾಯಕ. ಕನ್ನಡ ಪದಕೋಶವನ್ನು ಪಸರಿಸುವ ಕಾಯಕ ಮಾಡುತ್ತಿರುವ ಕನ್ನಡದ ಕಾಯಕಯೋಗಿ – ಚನ್ನಪಟ್ಟಣದ ಕೋಟೆ ಬೀದಿಯ ಓಂಕಾರಪ್ರಿಯ ಬಾಗೇಪಳ್ಳಿ.

Advertisement

ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯಲ್ಲಿ 30 ವರ್ಷಗಳ ಕಾಲ ಸೇವೆ ಸಲ್ಲಿಸಿ ನಿವೃತ್ತರಾಗಿರುವ ಅವರು 25 ವರ್ಷಗಳಿಂದ ತಮ್ಮ ಬಿಡುವಿನ ಅವಧಿಯಲ್ಲಿ ಶಾಲೆಗಳಿಗೆ ತೆರಳಿ ಕನ್ನಡ ಪದಗಳ ಉಚ್ಚಾರ, ಅಕ್ಷರ ಬಳಕೆಯಿಂದ ಆಗುವ ಅರ್ಥ ವ್ಯತ್ಯಾಸ, ಪ್ರಮಾದಗಳ ಕುರಿತು ತಿಳಿಸುವುದಲ್ಲದೆ ಪದಕ್ಕೆ ಇರುವ ಅರ್ಥವನ್ನು ಹೇಳಿಕೊಡುತ್ತಾರೆ.

ಓಂಕಾರಪ್ರಿಯ ಅವರು ಇದುವರೆಗೆ ರಾಜ್ಯ ಮತ್ತು ಹೊರರಾಜ್ಯಗಳಲ್ಲಿ 1,680 ಕಾರ್ಯಕ್ರಮಗಳನ್ನು ನೀಡಿದ್ದಾರೆ. ಶನಿವಾರ ಸುಬ್ರಹ್ಮಣ್ಯ ಪರಿಸರದ ಎರಡು ಶಿಕ್ಷಣ ಸಂಸ್ಥೆಗಳಲ್ಲಿ ಉಪನ್ಯಾಸ ನೀಡಿದರು. ಪದಗಳೊಂದಿಗೆ ಮಕ್ಕಳನ್ನು ಆಟವಾಡಿಸುತ್ತಾರೆ. ಸರಳ ಪದಗಳನ್ನು ಮಕ್ಕಳೇ ಉಚ್ಚರಿಸುವಂತೆ ಮಾಡುತ್ತಾರೆ. ತಮಿಳುನಾಡು, ಕೇರಳ-ಕರ್ನಾಟಕ ಗಡಿಭಾಗದ ಕನ್ನಡ ಶಾಲೆಗಳು, ಪುಣೆ, ಮುಂಬಯಿ ಚೆನ್ನೈ ಸಹಿತ ಹಲವು ಪ್ರದೇಶಗಳಿಗೆ ತೆರಳಿ ಪದ ಸಂಪತ್ತಿನ ಕುರಿತು ಕಾರ್ಯಕ್ರಮಗಳನ್ನು ನೀಡುತ್ತಿದ್ದಾರೆ. ಇದರೊಂದಿಗೆ ಪರಿಸರ ಸಂರಕ್ಷಣೆಯ ಪಾಠವನ್ನೂ ಹೇಳುತ್ತಾರೆ. ಸಸಿಗಳನ್ನು ನೆಡುವ, ಗೋಪೂಜೆ ನಡೆಸುವ ಮೂಲಕ ಸ್ಥಳೀಯವಾಗಿ ಸಂಘ-ಸಂಸ್ಥೆಗಳ ಸಹಭಾಗಿತ್ವ ಪಡೆದುಕೊಂಡು ಸರಳ ಕಾರ್ಯಕ್ರಮ ನಡೆಸುತ್ತಾರೆ. ಮಕ್ಕಳ ಮೂಲಕವೇ ಉದ್ಘಾಟನೆ ಮಾಡಿಸುವುದು ಮಕ್ಕಳ ಮೇಲೆ ಅವರಿಗಿರುವ ಪ್ರೀತಿ, ಕಾಳಜಿಯನ್ನು ತೋರಿಸುತ್ತದೆ. ತಮ್ಮ ಉಪನ್ಯಾಸದ ಕೊನೆಯಲ್ಲಿ ಮಕ್ಕಳಿಗೆ ಪ್ರಮಾಣ ವಚನ ಬೋಧಿಸುತ್ತಾರೆ. ದುಶ್ಚಟಗಳಿಗೆ ಬಲಿಯಾಗದೆ, ಹೆತ್ತವರಿಗೂ ಅದರ ಪರಿಣಾಮವನ್ನು ತಿಳಿಸುವ ಪ್ರತಿಜ್ಞೆ ಮಾಡಿಸುವ ಮೂಲಕ ಜಾಗೃತಿ ಮೂಡಿಸುತ್ತಾರೆ.

ಮಕ್ಕಳಲ್ಲಿ ಸೃಜನಾತ್ಮಕತೆ ಹಾಗೂ ಬೌದ್ಧಿಕ ಬೆಳವಣಿಗೆಯಾಗಬೇಕು. ಸರಳ ಪದಗಳ ಅರ್ಥ ಗುರುತಿಸಲು ಹಾಗೂ ಸಂಸ್ಕೃತಿ ಮೈಗೂಡಿಸಿಕೊಳ್ಳಲು ಮಕ್ಕಳಿಗೆ ಉಪನ್ಯಾಸ ಸಹಕಾರಿಯಾಗುತ್ತದೆ. ಮೃದು ಮನಸ್ಸು ಹಾಗೂ ಹೃದಯಗಳಲ್ಲಿ ಬಿತ್ತುವ ಜಾಗೃತಿಯಿಂದ ಬೀರುವ ಪರಿಣಾಮಗಳು ಹೆಚ್ಚು. ಅದು ಅವರ ಭವಿಷ್ಯದ ದಿಕ್ಕನ್ನು ಬದಲಿಸುತ್ತದೆ ಎನ್ನುತ್ತಾರೆ ಓಂಕಾರಪ್ರಿಯ.

ವಿದ್ಯಾರ್ಥಿಗಳು ಮತ್ತು ಉಪನ್ಯಾಸಕರು ಅನ್ವೇಷಣೆಯಲ್ಲಿ ತೊಡಗಿಸಿಕೊಳ್ಳಬೇಕು. ಪ್ರಶ್ನಿಸುವ ಮನೋಭಾವ ಅವರಲ್ಲಿರಬೇಕು. ಜ್ಞಾನ ದಾಸೋಹ ಕಾರ್ಯದಲ್ಲಿ ಅಕ್ಷರದ ಮಹಿಮೆ ಮತ್ತು ಸಂಸ್ಕೃತಿಯನ್ನು ಪರಿಚಯಿಸುವ ಕಾರ್ಯ ನಡೆಯಬೇಕು. ಆಗ ಬೌದ್ಧಿಕ ಜ್ಞಾನ ವೃದ್ಧಿಯಾಗುತ್ತದೆ ಎನ್ನುವುದು ಅವರ ಉಪನ್ಯಾಸದ ಅಂಶ. ಉಪನ್ಯಾಸ ವೇಳೆ ಕನ್ನಡ ಭಾಷೆ, ನಡೆ, ಸಂಸ್ಕೃತಿ, ಸಂಪ್ರದಾಯ ಮಾತ್ರವಲ್ಲ, ಆಚರಣೆಗಳು, ಬಾಲ್ಯವಿವಾಹ ತಡೆ, ರಕ್ತ, ನೇತ್ರ, ದೇಹದಾನಗಳ ಉಪಯೋಗ, ದುಶ್ಚಟಗಳಿಂದ ದೂರ ಇರುವ ಕುರಿತು ವಿದ್ಯಾರ್ಥಿಗಳಿಗೆ ಮನವರಿಕೆ ಮಾಡಿಕೊಡುತ್ತಾರೆ.

Advertisement

ಬದುಕಿಗೆ ಸಹಕಾರಿ
ಪದ ಸಂಪತ್ತು ಸಹಿತ ಇತರ ವಿಚಾರಗಳ ಕುರಿತು ಉಪನ್ಯಾಸ ನೀಡಿದ ವೇಳೆ ವಿದ್ಯಾರ್ಥಿಗಳಲ್ಲಿ ಉಂಟಾಗುವ ಧನಾತ್ಮಕ ಚಿಂತನೆಗಳು ಅವರ ಬದುಕಿಗೆ, ಸಮಾಜಕ್ಕೆ ಜ್ಞಾನದ ದಾರಿ ದೀವಿಗೆಯಾಗುತ್ತವೆ. ಕನ್ನಡ ಸಂಸ್ಕೃತಿ ಸೇವಾ ಭಾರತಿ ಸಂಸ್ಥೆ ಸ್ಥಾಪಿಸಿಕೊಂಡು ಇದರ ಮೂಲಕ ಕನ್ನದ ಪದ ಸಂಪತ್ತು ಕಮ್ಮಟ ನಡೆಸುತ್ತಿದ್ದೇನೆ. ಉಪನ್ಯಾಸದ ಮೂಲಕ ವಿದ್ಯಾರ್ಥಿಗಳಲ್ಲಿ ಸಮಯದ ಸದುಪಯೋಗ, ಕನ್ನಡ ಭಾಷೆಯ ಬೆಳವಣಿಗೆ, ಶ್ರೇಷ್ಠತೆ, ಸರಳ ಪದಗಳ ಅರ್ಥ, ಲಿಪಿ ಬಗ್ಗೆ ತಿಳಿಸುತ್ತಿದ್ದೇನೆ.
– ಓಂಕಾರಪ್ರಿಯ ಬಾಗೇಪಲ್ಲಿ
ಉಪನ್ಯಾಸಕ

 ಜೀವನ ಪಾಠ
ಜೀವನದಲ್ಲಿ ಕಲಿತುಕೊಳ್ಳಬೇಕಾದ ಹಲವು ಸಂಗತಿಗಳು ಓಂಕಾರಪ್ರಿಯ ಅವರ ಮಾತುಗಳಲ್ಲಿದ್ದವು. ನಮಗೆ ತಿಳಿಯದ ಹಲವು ಸಂಗತಿಗಳನ್ನು ಮನಮುಟ್ಟುವಂತೆ ವಿವರಿಸಿದರು. ನಮಗೆ ಜೀವನ ಪಾಠವಾಯಿತು.
– ಗಗನ್‌ ಪರಮಲೆ,
ಯೇನೆಕಲ್ಲು, ವಿದ್ಯಾರ್ಥಿ

 ಬಾಲಕೃಷ್ಣ ಭೀಮಗುಳಿ

Advertisement

Udayavani is now on Telegram. Click here to join our channel and stay updated with the latest news.

Next