Advertisement

ನಾಯಿಮರಿ ನಾಯಿಮರಿ ತಿಂಡಿಬೇಕೆ?

06:00 AM Dec 23, 2018 | |

ಚಳಿಗಾಲ ಶುರುವಾಗಿದೆ. ದಣಿದ ತನುವನ್ನು ಬೆಚ್ಚಗಿನ ಹೊದಿಕೆಯೊಳಗೆ ತೂರಿಸಿ ಮಲಗಿದರೆ ಬೆಳಗಾದರೂ ಏಳಲು ಮನಸ್ಸಾಗದು. ಅದು ಭಾನುವಾರ. ನಮ್ಮ ಪಾಲಿಗೆ ಬೆಳಗಾಗುವುದು ಸ್ವಲ್ಪ ತಡವಾಗಿ. ಏಳಬೇಕೆನ್ನುವ ಸಂಕಟದಿಂದ ಎದ್ದು, ಮುಖ ತೊಳೆದುಕೊಂಡು ಕೈಗೆ ಪೊರಕೆ ತೆಗೆದುಕೊಂಡೆ. ಒಬ್ಬೊಬ್ಬ ಮನುಷ್ಯನಿಗೆ ಒಂದೊಂದು ವರವಿರುತ್ತದಂತೆ! ನನ್ನ ಹೆಂಡತಿಗೆ ಧೂಳು ದೇವರು ಕೊಟ್ಟ ವರ ! ಅವಳಿಗದು ಅಲರ್ಜಿ. ಆದ್ದರಿಂದ ಹಾಸಿಗೆ ಮಡಚಿ, ಕಸಗುಡಿಸಿ ನೆಲ ಒರೆಸುವುದು ನನ್ನ ಪಾಲಿನ ಪಂಚಾಮೃತ. ಬಹುತೇಕ ಮಾನಿನಿಯರು ಪೊರಕೆ ಹಿಡಿದರೆ, ನಮ್ಮನೆಯಲ್ಲಿ ಸ್ಟೋರಿ ಉಲ್ಟಾ. ಆ ನಿತ್ಯಕರ್ಮವನ್ನು ನೆರವೇರಿಸುತ್ತ ಸಿಟೌಟ್‌ ಗುಡಿಸಲು ಹೊರಗಡಿಯಿಟ್ಟಿದ್ದೆ. ಆಗಲೇ “ಔ..ಔ..ಔ..ಔ…ಅವ್‌…’ ಎಂದು ಅಂಗಳದಲ್ಲಿ ನಾಯಿಮರಿಯ ಸದ್ದೊದು ಕೇಳಿಸಿತು. 

Advertisement

ಮಖೆ ಮಳೆಯಲ್ಲಿ ನಾಯಿಗಳು ಎಲ್ಲೆಂದರಲ್ಲಿ ಲಜ್ಜೆಗೆಟ್ಟು ಲಲ್ಲೆಗರೆದ ಕುರುಹಾಗಿ ಕೇರಿಯುದ್ದಕ್ಕೂ ಅಲ್ಲಲ್ಲಿ ನಾಯಿಮರಿಗಳ ಗುಂಪು ಸೃಷ್ಟಿಯಾಗಿವೆ. ಅಂಥ ಒಂದು ಗುಂಪಿನ ನಾಯಿಮರಿಗಳು ನಮ್ಮ ಕಂಪೌಂಡಿನೊಳಗೆ ಲಗ್ಗೆಯಿಟ್ಟಂತೆನಿಸಿತು. ದಿಟ್ಟಿಸಿ ಶಬ್ದ ಬಂದೆಡೆ ನಿಟ್ಟಿಸಿದರೆ, ಎರಡು ಗೇಟಿನಿಂದ ಒಳ ಬಂದಿದ್ದವು. ನಿನ್ನೆ ಮೊನ್ನೆಯವರೆಗೂ ಬಲು ದೂರದಲ್ಲಿದ್ದ ಅವು ಬಹುಶಃ ವಾಕಿಂಗ್‌ ವೀರರ ಬೆನ್ನುಹತ್ತಿ ನಮ್ಮನೆಯತ್ತ ಸುಳಿದಿದ್ದವು. ಅದೇ ಸಮಯಕ್ಕೆ ಕಾರೊಂದು ಕರ್ಕಶವಾಗಿ ಹಾನುì ಬಾರಿಸುತ್ತಾ ಹಾದು ಹೋಗಿದ್ದೇ ತಡ, ಕುನ್ನಿ ಮರಿಗಳು ಮತ್ತೂಮ್ಮೆ “ಅಂಯ್‌… ಅಂಯ್‌… ಅಂಯ್‌…’ ಎಂದು ಅಂಜಿಕೊಂಡು ಕಂಪೌಂಡಿನ ಮತ್ತೂ ಒಳಗೆ ಓಡಿ ಬಂದವು. 

ಒಂದಾನೊಂದು ಕಾಲದಲ್ಲಿ ನಾವೂ ಶುನಕ ಸಾಕಿದ್ದೆವು. ಊರಲ್ಲಿ ನಾವು ಚಿಕ್ಕವರಿದ್ದಾಗ ಎರಡು ನಾಯಿಗಳ ಸಂಸಾರವನ್ನು ಪೊರೆದು ಕಷ್ಟ-ನಷ್ಟಗಳನ್ನು ಎದುರಿಸಿ ಗೊತ್ತಿದ್ದವರೇ. ಆದರೆ, ಪರವೂರಿನಲ್ಲಿ ನಮ್ಮ ಸಂಸಾರದ ಬಂಡಿ ನೂಕುವುದೇ ಸಾಹಸ. ಇನ್ನು, ಶುನಕ ಸಂಸಾರವನ್ನೂ ಸಲಹತೊಡಗಿದರೆ ಫ‌ಜೀತಿಗಿಟ್ಟುಕೊಳ್ಳಬಹುದು. ನಮಗೆ ಗಂಜಿಯಾದರೂ ನಡೆದೀತು. ಇವುಗಳಿಗೆ ಪಿಡಿಗ್ರಿಯೇ ಆಗಬೇಕು. ಆವರಣ ಸ್ವತ್ಛವಾಗಿಡಬೇಕಾದರೆ ಹೊತ್ತು ಹೊತ್ತಿಗೆ ವಾಕಿಂಗ್‌ ಮಾಡಿಸಬೇಕು, ವಾರಕ್ಕೊಮ್ಮೆಯಾದರೂ ಸ್ಪೆಷಲ್‌ ಸೋಪಿನಿಂದ ಮೈ ತೊಳೆಯಬೇಕು. ಫ‌ಂಕ್ಷನ್‌ಗಳಿಗೆ ಕೆಲದಿನ ಮನೆಬಿಟ್ಟು ಹೋಗುವ ಸಂದರ್ಭವಂತೂ ತಲೆನೋವು. ಮದುವೆ-ಮುಂಜಿಗಳಿಗೆ ಹೋಗಬೇಕೆಂದರೆ ಅವುಗಳನ್ನೂ ಕಟ್ಟಿಕೊಂಡು ಹೋಗಬೇಕು ಅಥವಾ ನೆರೆಯವರಿಗೆ ನಾವು ಬರುವ ತನಕ ಶುನಕಗಳ ದೇಖರೇಕಿಯ ಜವಾಬುದಾರಿ ಹೊರೆಸಿ ಹೊರೆಯಾಗಬೇಕು. ಅವುಗಳನ್ನು ಅಬ್ಬೇಪಾರಿಗಳಂತೆ ಬಿಟ್ಟು ತೆರಳಲು ಮನಸ್ಸಾಗದು. ನಮ್ಮೊಟ್ಟಿಗೆ ಕರೆದೊಯ್ಯಲು ಕಾರೇನೋ ಇದೆ. ಆದರೆ, ಅವುಗಳನ್ನು ಹತ್ತಿರ ಬಿಟ್ಟುಕೊಳ್ಳಲು ಸಾಧ್ಯವೇ? ದಿನವೂ ಮಜ್ಜನ ಮಾಡಿಸುವವರಾದರೆ ತೊಂದರೆಯಿಲ್ಲ. ನಮ್ಮ ಸ್ನಾನಕ್ಕೇ ಸಮಯ ಸಾಲದ ಪರಿಸ್ಥಿತಿಯಲ್ಲಿ ನಾಯಿ ಮಜ್ಜನಕ್ಕೆ ಸಮಯವೆಲ್ಲಿ? ಮನೆಯೊಳಗೇ ಬಿಟ್ಟುಕೊಳ್ಳದ ನಾಯಿಗಳನ್ನು ಕಾರೊಳಗೆ ಕೂರಿಸುವುದೇ? ನಾಯಿಗಳು ಸರಿಯಾಗಿದ್ದರೆ ಎಲ್ಲವೂ ಚಂದ. ಅವುಗಳ ಆಟದಲ್ಲಿ ಸಮಯ ಹೋದದ್ದೇ ಗೊತ್ತಾಗದು. ಆದರೆ, ಅವುಗಳು ಹುಷಾರು ತಪ್ಪಿದಾಗ ಭಾರೀ ಬೇಸರ. ಒಮ್ಮೆ ಊರಲ್ಲಿ ಹುಚ್ಚು ನಾಯಿಯೊಂದು ಬಂದು ಬಹುತೇಕ ಎಲ್ಲ ನಾಯಿಗಳಿಗೂ ತನ್ನ ಹುಚ್ಚನ್ನು ಅಂಟಿಸಿತ್ತು. ನಮ್ಮನೆಯ ದುಣ್ಣ ಎಂಬ ನಾಯಿಗೂ ಹುಚ್ಚು ತಾಗಿತ್ತು. ಕೊನೆಗೊಮ್ಮೆ ಅದರ ವರ್ತನೆಯನ್ನು ನೋಡಲಾಗದೇ ಬಜೆಯಲ್ಲಿ ವಿಷ ಬೆರೆಸಿ ಕಷ್ಟಪಟ್ಟು ಮುಕ್ತಿ ದೊರಕುವಂತೆ ಮಾಡಿದ್ದೆವು. 

ಮೇನಕಾ ಗಾಂಧಿ ಆಗಿನ್ನೂ ಪ್ರವರ್ಧಮಾನಕ್ಕೆ ಬಂದಿರಲಿಲ್ಲ. ಹಾಗಾಗಿ ನಾವು ಬಚಾವ್‌! ಈಗ ಹಾಗೆ ಮಾಡಲಾದೀತೆ? ಬ್ರೇಕಿಂಗ್‌ ನ್ಯೂಸ್‌ಗಳಿಗಾಗಿ ಕಾದು ಕುಳಿತಿರುವ ಪ್ರಜಾಪ್ರಭುತ್ವದ ಕಾವಲು ನಾಯಿಗಳಾದ ನ್ಯೂಸ್‌ ಚಾನೆಲ್‌ಗ‌ಳಲ್ಲಿ ನಮ್ಮ ಕೃತ್ಯ ನೇರ ಪ್ರಸಾರವಾಗಿ, ವೀಕ್ಷಕರಿಂದ ಛೀ… ಥೂ… ಎಂದು ವಾರಗಟ್ಟಲೆ ಉಗಿಸಿಕೊಳ್ಳುವ ಎಲ್ಲ ಸಾಧ್ಯತೆಗಳೂ ಇವೆ. ಅದಕ್ಕೆಂದೇ ನಾಯಿಮರಿಗಳ ಕುರಿತು ನಾವು ನಿರ್ದಯಿಗಳಾಗಿದ್ದೇವೆ.

ನನ್ನ ಮಗಳು-ಅದಿತಿಗೆ ನಾಯಿಗಳೆಂದರೆ ಕುತೂಹಲ ಬೆರೆತ ಅಚ್ಚರಿ. ಪ್ರತೀ ಬಾರಿ ಅಜ್ಜಿ ಮನೆಗೆ ಹೋದಾಗ ಮೊದಮೊದಲು ಬೊಗಳುವ ಬೊಳ್ಳ ನಂತರ ಆಕೆಯೊಟ್ಟಿಗೆ ಆಟವಾಡುವುದನ್ನು ಕಂಡಾಗ ಆಕೆಗೆ ಖುಷಿಯೋ ಖುಷಿ. “ಅಪ್ಪಾ, ನಾವೂ ನಾಯಿಮರಿ ಸಾಕಣಪ್ಪಾ’ ಎಂದು ಮರಿಗಳನ್ನು ಕಂಡಾಗಲೆಲ್ಲ ಗೋಗರೆಯುತ್ತಾಳೆ. ಅಂತಿಪ್ಪ ಅದಿತಿಯ ಕಣ್ಣಿಗೆ ನಾಯಿಮರಿ ಬೀಳುವುದರೊಳಗೆ ಇವುಗಳನ್ನು “ಬೌಂಡರೀ ಕೆ ಬಾಹರ್‌ ಚಾರ್‌ ರನ್‌ ಕೇಲಿಯೇ…’ ಎಂಬಂತೆ ಹೊರಗೋಡಿಸೋಣ ಎಂದು ಕೈಲಿದ್ದ ಪೊರಕೆಯನ್ನು ಕತ್ತಿವರಸೆಯಂತೆ ಬೀಸುತ್ತ¤ “ಹಚಾ, ಹಚ್‌’ ಎಂದು ಮರಿಗಳತ್ತ ಓಡಿದೆ. 

Advertisement

ಇದನ್ನು ನಿರೀಕ್ಷಿಸಿದ್ದ ಆ ಮರಿಗಳೂ ಬಹುಶಃ ತಮ್ಮದೇ ಪ್ಲಾನ್‌ ಮಾಡಿಕೊಂಡಿದ್ದವೇನೋ? ನಾನು ಆ ಕಡೆ ಓಡ್ತೀನಿ, ನೀನು ಈ ಕಡೆ ಓಡು ಎಂದು ನನ್ನನ್ನು ಕನ್‌ಫ್ಯೂಸ್‌ ಮಾಡಲು ಎರಡರಲ್ಲಿ ಒಂದು ಮರಿ ಗೇಟಿನತ್ತ ಓಡಿದರೆ, ಇನ್ನೊಂದು ಹೂವಿನ ಗಿಡಗಳತ್ತ ನುಗ್ಗಿತು. ಗೇಟಿನತ್ತ ಧಾವಿಸಿದ ಮರಿಯನ್ನೇನೋ ಸುಲಭವಾಗಿ ಹೊರಗೋಡಿಸಿದೆ. ಹೂಗಿಡಗಳತ್ತ ಸಾಗಿದ ಮರಿಯನ್ನು ಅರಸುತ್ತ ನಡೆದೆ. ನಾ ಹತ್ತಿರ ಹೋದೊಡನೆ ಬೆದರಿದ ಶುನಕಪುತ್ರ/ಪುತ್ರಿ ಶರಣಾಗತನಾದಂತೆ ನಿಶ್ಶಬ್ದವಾಗಿ ನೆಲಕ್ಕಂಟಿಕೊಂಡು ಮಲಗಿ ದೈನ್ಯದಿಂದ ನೋಡತೊಡಗಿತು. ಹೊಡೆಯಲು ಮನಸ್ಸಾಗದೇ ಎತ್ತಿದ ಕೈ ಕೆಳಗಿಳಿಸಿ ಈಟಿಯಿಂದ ಚುಚ್ಚುವ ಭಂಗಿಯಲ್ಲಿ ಪೊರಕೆಯನ್ನಾಡಿಸುತ್ತ “ಹುಷ್‌ ಹುಷ್‌’ ಎಂದೆ. ನನ್ನಿಂದ ಇನ್ನು ಅಪಾಯವಿಲ್ಲ ಎಂದೆಣಿಸಿ ಕೆಲ ಸೆಕೆಂಡಿನಲ್ಲೇ ಅದು ಚೇತರಿಸಿಕೊಂಡು ಇನ್ನೊಂದು ಪೊದೆಯತ್ತ‌¤ ಧಾವಿಸಿತು. ಬರಿಗಾಲಿನಲ್ಲಿದ್ದ ನಾನು ನಾಚಿಕೆೆ ಮುಳ್ಳಿನ ಪ್ರದೇಶದಲ್ಲಿ ಜಾಗರೂಕತೆಯಿಂದ ಅದರತ್ತ ಓಡಬೇಕಾಯಿತು. ಮುಂದೋಡುತ್ತಿದ್ದ ಮರಿ ಅಚಾನಕ್‌ ನೆಲವನ್ನು ಮೂಸುತ್ತ ಒಂದೆಡೆ ಸುತ್ತತೊಡಗಿತು. ಸ್ವಲ್ಪ ಹೊತ್ತಲ್ಲೇ ತನ್ನ ಬಾಲವನ್ನೆತ್ತಿ ಗಿಡವೊಂದರ ಬುಡದತ್ತ ಪೃಷ್ಠವನ್ನು ತಗ್ಗಿಸಿ ಶೌಚಕ್ಕೆ ತೊಡಗಿತು. 

ಗೇಟಿನ ಹೊರಗೋಡಿದ ನಾಯಿಮರಿಗೆ ಸ್ವಲ್ಪ “ಅಕ್ಕಲ್‌’ ಇದೆ, ತನ್ನನ್ನು ರಕ್ಷಿಸಿಕೊಳ್ಳಲು ಹೊರಗೋಡಿದೆ, ಈ ನಾಯಿಮರಿಗೆ ನಮ್ಮ ವಠಾರ ಇಷ್ಟವಾಗಿರಬೇಕು, ಅದಕ್ಕೇ ಮತ್ತೂ ಮತ್ತೂ ಒಳ ನುಸುಳುತ್ತಿದೆ ಎನ್ನುವ ನನ್ನ ಭ್ರಮೆ ಆ ಹೊತ್ತಲ್ಲಿ ನುಚ್ಚು ನೂರಾಯಿತು. ನಮ್ಮ ನಾಯಕರು ಕರೆಗೊಟ್ಟಿರುವ ಸ್ವತ್ಛ ಭಾರತದ ಕಲ್ಪನೆಯ ಸಾಕಾರ ಮಾಡಲು ರಸ್ತೆಯನ್ನು ಮಲಿನಮಾಡಲು ಮನಸ್ಸಾಗದೇ ನಮ್ಮ ಅಂಗಳಕ್ಕೆ ಬಂದಿತ್ತೇನೋ? ನಮ್ಮ ಪಾಲಿಗೆ ಸ್ವತ್ಛವಾಗಿದ್ದ ಅಂಗಳವು ಅದಕ್ಕೆ ಶೌಚಾಲಯದಂತೆ ಕಂಡಿರಬೇಕು. ಆದರೆ, ಶೌಚಾಲಯದ ಯಾವ ಕುರುಹೂ ಇಲ್ಲದ ಪ್ರದೇಶವನ್ನು ಮಲಿನಗೊಳಿಸಲು ಅದಕ್ಕೆ ಮನಸ್ಸು ಹ್ಯಾಗೆ ಬಂತೋ ತಿಳಿಯಲಿಲ್ಲ. ಅಥವಾ, ಮುಂದಾನೊಂದು ಕಾಲದಲ್ಲಿ ಕೊಳೆತು ಗೊಬ್ಬರವಾಗಬಹುದಾದ ವಸ್ತುವನ್ನು ಗಿಡದ ಬುಡಕ್ಕೇ ವಿಸರ್ಜಿಸಿದರೆ ಒಳ್ಳೆಯದೆಂಬ ಬುದ್ಧಿವಂತಿಕೆ ಈ ನಾಯಿಮರಿಗಿದ್ದಿರಬಹುದು. ಇಲ್ಲದಿದ್ದರೆ, ವೈರಿ ಪೊರಕೆ ಹಿಡಿದು ಎದುರಲ್ಲೇ ನಿಂತಿರುವಾಗ ಸ್ವತ್ಛಂದವಾಗಿ ನಿಸರ್ಗದ ಕರೆಗೆ ಓಗೊಡುವುದು ಸಾಧ್ಯವಿತ್ತೇ? ನಾಯಿಮರಿಯನ್ನು ಓಡಿಸುವ ಉತ್ಸಾಹವನ್ನು ಬಲವಂತವಾಗಿ ಹತ್ತಿಕ್ಕತೊಡಗಿದೆ. ಅದರ ವಿಸರ್ಜನೆಯಾಗುವ ತನಕವೂ ತೆಪ್ಪಗಿರಲೇಬೇಕಾಯಿತು. ಇಲ್ಲವಾದರೆ, ಓಡುವ ನಾಯಿಯ ಶೌಚವು ರಂಗೋಲಿಯೋಪಾದಿಯಲ್ಲಿ ಉದ್ದನೆಯ ಸಾಲಾಗಿಬಿಟ್ಟರೆ ಬರಿಗಾಲಿನ ನನಗೇ ಅಪಾಯ ಎಂದು ಅವಡುಗಚ್ಚಿ ಸುಮ್ಮನಿದ್ದೆ. ಇದೇ ಸಮಯವನ್ನು ಸಾಧಿಸಿ, ಶೌಚ ಪೂರೈಸಿದ್ದ ನಾಯಿಮರಿ ಬೇಲಿಯ ಮುಳ್ಳುಕಂಟಿಗಳತ್ತ ಧಾವಿಸಿತು. ಮೆಟ್ಟು ಮೆಟ್ಟದಿದ್ದ ನಾನು ಇನ್ನೂ ಮುಂದುವರೆಯುವುದು ಸಾಧ್ಯವಿರಲಿಲ್ಲ. ಒಂಬತ್ತು ಗಂಟೆಗೆ ಡ್ನೂಟಿಗೆ ಹೋಗಲಿಕ್ಕಿದ್ದುದರಿಂದ ತಾತ್ಕಾಲಿಕ ಕದನ ವಿರಾಮವನ್ನು ಘೋಷಿಸಿ ಥತ್‌ ಎಂದು ಹ್ಯಾಪು ಮೋರೆಯಲ್ಲಿ ಹಿಂದಿರುಗಿದ್ದೆ. 

ಡ್ನೂಟಿ ಮುಗಿಸಿ ಸಂಜೆ ಮನೆಗೆ ವಾಪಸಾದಾಗ ಅಂಗಳದಲ್ಲಿ ನಾಯಿಮರಿಗಳೊಂದಿಗೆ ಮಗಳು ಆಟವಾಡುವ ನಿರೀಕ್ಷೆಯಲ್ಲಿದ್ದವನಿಗೆ ಆ ಕುರುಹುಗಳೊಂದೂ ಕಾಣಲಿಲ್ಲ. ಅದಿತಿಯ ಕಣ್ಣಿಗೆ ಬಹುಶಃ ನಾಯಿಮರಿಗಳು ಬಿದ್ದಿರಲಿಲ್ಲ. ಗೇಟಿನಾಚೆ ಓಡಿದ್ದ ನಾಯಿಮರಿ ಗೇಟಿನೊಳಗಿದ್ದ ಮರಿಯನ್ನು ತನ್ನ ಜೊತೆ ಕರೆದೊಯ್ದಿತ್ತೇನೋ. ಒಟ್ಟಿನಲ್ಲಿ ನಮ್ಮ ಕಂಪೌಂಡು ಶುನಕ ರಹಿತವಾಗಿತ್ತು. ಮುಂದಿನ ದಿನಗಳಲ್ಲಿ ಇನ್ನೂ ಕೆಲ ನಾಯಿಮರಿಗಳು ಧಾಂಗುಡಿಯಿಡಬಹುದು. ನಾವಂತೂ ಸಾಕುವುದಿಲ್ಲ. ಯಾರಿಗಾದರೂ ನಾಯಿಮರಿ ಬೇಕಿದ್ದರೆ ಸಂಪರ್ಕಿಸಿ. 

ಮನೋಜ ಗೋಡಬೋಲೆ

Advertisement

Udayavani is now on Telegram. Click here to join our channel and stay updated with the latest news.

Next