Advertisement

ರಂಗಕಲೆ ಉಳಿಸಲು ಬೇಕಿದೆ ಹೊಸ ಪ್ರಯೋಗ : ಇಂದು ವಿಶ್ವ ರಂಗಭೂಮಿ ದಿನಾಚರಣೆ

12:33 PM Mar 27, 2022 | Team Udayavani |

ದೊಡ್ಡಬಳ್ಳಾಪುರ: ಇಂದು ವಿಶ್ವ ರಂಗಭೂಮಿ ದಿನ. ಕಳೆದ ವರ್ಷ ಕೋವಿಡ್‌ ಹಿನ್ನೆಲೆ ಸ್ಥಗಿತಗೊಂಡಿದ್ದ ರಂಗ ಚಟುವಟಿಕೆಗಳು ಪುನರಾರಂಭಗೊಂಡಿವೆ. ಆದರೆ, ತಾಲೂಕಿಗೆ ಸುಸಜ್ಜಿತ ರಂಗ ಮಂದಿರ ಹಾಗೂ ಬಯಲು ರಂಗ ಮಂದಿರದ ಅಗತ್ಯವಿದೆ. ಇತ್ತೀಚಿನ ವರ್ಷಗಳಲ್ಲಿ ಟೀವಿ, ಸಾಮಾಜಿಕ ಜಾಲತಾಣಗಳಿಂದ ರಂಗ ಕಲೆಗಳು ಮರೆಯಾಗುತ್ತಿದ್ದು, ಇವುಗಳನ್ನು ಉಳಿಸಿಕೊಳ್ಳಲು ಜನರನ್ನು ಆಕರ್ಷಿಸುವಂತಹ ಹೊಸ ಪ್ರಯೋಗಗಳು, ಸುಧಾರಣೆ ಕ್ರಮಗಳನ್ನು ಕೈಗೊಳ್ಳಬೇಕಾದ ಅವಶ್ಯಕತೆ ಇದೆ.

Advertisement

ರಂಗಮಂದಿರದ ಕೊರತೆ: ನಗರದಲ್ಲಿ ಡಾ.ರಾಜ್‌ಕುಮಾರ್‌ ಕಲಾಮಂದಿರ (ಪುರಭವನ) ನವೀಕೃತಗೊಂಡಿದೆ ಯಾದರೂ, ಇಂದಿನ ನಾಟಕ ಪ್ರದರ್ಶನಗಳಿಗೆ ಪೂರಕವಾಗಿ, ಧ್ವನಿ ಮತ್ತು ಬೆಳಕಿನ ವ್ಯವಸ್ಥೆಯಿಲ್ಲ. ನಗರದ ಕನ್ನಡ ಜಾಗೃತ ಭವನ ಕಾರ್ಯಕ್ರಮಗಳಿಗೆ ಸೀಮಿತವಾಗಿದ್ದು, ನಾಟಕ ಪ್ರದರ್ಶನಗಳಿಗೆ ವೇದಿ ಕೆಯ ಕೊರತೆಯಿದೆ. ಇತ್ತೀಚೆಗೆ ನಾಟಕ ಅಕಾಡೆಮಿ ಯಿಂದ ನಡೆದ ಅಮೃತ ರಂಗ ಮಹೋತ್ಸವ ನಾಟಕ ಪ್ರದರ್ಶನಕ್ಕೆ ಧ್ವನಿ ಮತ್ತು ಬೆಳಕಿನ ಬೇರೆ ವ್ಯವಸ್ಥೆ ಮಾಡಬೇಕಾಯಿತು. ಕಲಾಮಂದಿರದ ಬಾಡಿಗೆಯೂ ಹೆಚ್ಚಾಗಿದ್ದು, ಇದಕ್ಕೆ ಪೂರಕ ಸೌಲಭ್ಯಗಳಿಲ್ಲ. ಪ್ರಸಾಧನಕ್ಕೆ ಸೂಕ್ತ ಕೊಠಡಿಯಿಲ್ಲ.

ನಗರಕ್ಕೆ ಸುಸಜ್ಜಿತ ರಂಗ ಮಂದಿರ ಹಾಗೂ ಬಯಲು ರಂಗ ಮಂದಿರದ ಅಗತ್ಯವಿದ್ದು, ಸರ್ಕಾರ ಈ ಬಗ್ಗೆ ಗಮನ ಹರಿಸಬೇಕಿದೆ ಎನ್ನುತ್ತಾರೆ ಸಮಷ್ಟಿ ರಂಗಶಾಲೆಯ ನಿರ್ದೇಶಕ ದಿವಾಕರ್‌ ನಾಗ್‌.

ನಾಟಕ ಪ್ರಸಂಗಗಳು: ದೊಡ್ಡಬಳ್ಳಾಪುರ ತಾಲೂಕಿನಲ್ಲಿ ಹೆಚ್ಚಾಗಿ ಪ್ರದರ್ಶಿಸಲ್ಪಡುವ ನಾಟಕವೆಂದರೆ ಕುರುಕ್ಷೇತ್ರ ಅಥವಾ ಶ್ರೀ ಕೃಷ್ಣ ಸಂಧಾನ. ಉಳಿದಂತೆ ರಾಜ ಸತ್ಯವ್ರತ ಅಥವಾ ಶನಿಪ್ರಭಾವ, ಸಂಪೂರ್ಣ ರಾಮಾಯಣ, ತ್ರಿಪುರ ಸಂಹಾರ, ತ್ರಿಜನ್ಮ ಮೋಕ್ಷ, ರಾಜಸೂಯ ಯಾಗ, ಸೌಗಂಧಿಕಾ ಪುಷ್ಪಹರಣ, ರುಕ್ಮಿಣಿ ಸ್ವಯಂವರ, ಶ್ರೀ ಕೃಷ್ಣ ಗಾರುಡಿ, ಗದಾಯುದ್ಧ, ಮೂರೂವರೆ ವಜ್ರಗಳು ಮೊದಲಾದ ಪೌರಾಣಿಕ ನಾಟಕಗಳೊಂದಿಗೆ ಮಹಾಭಾರತ ಪ್ರಸಂಗಗಳು ಸುಂದರ ಕಾಂಡ, ಲವ ಕುಶ, ಕರಿಭಂಟನ ಕಾಳಗ ಮೊದಲಾದ ಯಕ್ಷಗಾನಗಳು ಪ್ರದರ್ಶಿತಗೊಳ್ಳುತ್ತಿವೆ. ಇದರೊಂದಿಗೆ ಜಗಜ್ಯೋತಿ ಬಸವೇಶ್ವರ ಮೊದಲಾದ
ಸಾಮಾಜಿಕ, ಐತಿಹಾಸಿಕ ನಾಟಕಗಳು ಪ್ರದರ್ಶಿತವಾಗುತ್ತಿವೆ. ಬೇಸಿಗೆ ಮುಗಿಯುವ ವೇಳೆಗೆ ತಾಲೂಕಿನಲ್ಲಿ 200ಕ್ಕೂ ಹೆಚ್ಚು ನಾಟಕ ಪ್ರದರ್ಶನ ನಡೆಯುತ್ತವೆ. ಹಿಂದೆ ಪುರುಷರು ನಿರ್ವಹಿಸುತ್ತಿದ್ದ ಸ್ತ್ರೀ ಪಾತ್ರಗಳನ್ನು ಈಗ ಮಹಿಳೆಯರೇ ನಿರ್ವಹಿಸುತ್ತಿದ್ದಾರೆ.

ಕೋವಿಡ್‌ ಸಂಕಷ್ಟ: ಕಳೆದ ವರ್ಷ ಮಾರ್ಚ್‌ನಿಂದ ಕೋವಿಡ್‌ ಕಾರಣದಿಂದಾಗಿ ಸಾಂಸ್ಕೃತಿಕ ಕಾರ್ಯಕ್ರಮಗಳಿಗೆ ನಿರ್ಬಂಧ ವಿಧಿಸಿದ್ದರಿಂದ ಹಲವಾರು ವೃತ್ತಿ ಕಲಾವಿದರು ಸಂಕಷ್ಟ ಎದುರಿಸಬೇಕಾಯಿತು.
ಈಗ ಪರಿಸ್ಥಿತಿ ಸುಧಾರಿಸಿದ್ದು, ನಿರಂತರವಾಗಿ ನಾಟಕ ಪ್ರದರ್ಶನಗಳು ನಡೆಯುತ್ತಿವೆ.

Advertisement

ಕಾಡುತ್ತಿದೆ ಪ್ರೇಕ್ಷಕರ ಕೊರತೆ: ನಾಟಕ ಸೇರಿದಂತೆ ಹಲವಾರು ಸಾಂಸ್ಕೃತಿಕ ಕಾರ್ಯಕ್ರಮಗಳಿಗೆ ಪ್ರೇಕ್ಷಕರ ಕೊರತೆ ಕಾಡುತ್ತಿದೆ ಎನ್ನುವುದು ಆಯೋಜಕರ ಸಾಮಾನ್ಯ ಮಾತಾಗಿದೆ. ಆದರೆ, ಗ್ರಾಮಾಂತರ ಪ್ರದೇಶಗಳಲ್ಲಿ, ಹಬ್ಬ ಹರಿದಿನ, ಜಾತ್ರಾ ವಿಶೇಷ ಸಂದರ್ಭಗಳಲ್ಲಿ ನಾಟಕಗಳಿಗೆ ನಿರೀಕ್ಷೆಗೂ ಮೀರಿ ಜನ ಸೇರುತ್ತಾರೆ. ಅಂದರೆ ಗ್ರಾಮದಲ್ಲಿ ನಡೆಯುವ ನಾಟಕ ಎನ್ನುವ ಅಭಿಮಾನದೊಂದಿಗೆ ಪಾತ್ರದಾರಿಗಳು ತಮ್ಮ ಗೆಳೆಯರೋ, ಬಂಧುಗಳ್ಳೋ ಆಗಿರುವುದು ಸಹ ಪ್ರೇಕ್ಷಕರ ಸಂಖ್ಯೆ ಹೆಚ್ಚಲು ಕಾರಣವಾಗಿರಬಹುದು. ಇನ್ನೊಂದೆಡೆ ಪ್ರೇಕ್ಷಕರೇ ಇಲ್ಲದೇ ಹಲವಾರು ನಾಟಕೋತ್ಸವಗಳು ನಡೆದಿರುವ ನಿದರ್ಶನಗಳಿವೆ.

ರಂಗ ಕಲೆಗೆ ಉತ್ತೇಜನ ಅಗತ್ಯ: ನಾಟಕ ಪ್ರದರ್ಶನಕ್ಕೆ ಲಕ್ಷಕ್ಕೂ ಹೆಚ್ಚು ವೆಚ್ಚ ತಗುಲಲಿದ್ದು, ಇದನ್ನು ಭರಿಸುವುದು ಕಲಾವಿದರಿಗೆ ಕಷ್ಟಸಾಧ್ಯವಾಗಿದೆ. ರಂಗ ಚಟುವಟಿಕೆಗಳ ಆಯೋಜನೆಗಳು ಸಹ ದುಬಾರಿಯಾಗಿದೆ. ಕೆಲವೇ ಕಲಾವಿದರಿಗೆ ಸರ್ಕಾರದ ಸೌಲಭ್ಯಗಳು ತಲುಪುತ್ತಿದ್ದು, ರಂಗ ಕಲೆಗಳನ್ನು ಆಯೋಜಿಸುವ ಸಂಸ್ಥೆಗಳಿಗೆ ಕನ್ನಡ ಹಾಗೂ ಸಂಸ್ಕೃತಿ ಇಲಾಖೆಯಿಂದ ಸಂಸ್ಥೆಗಳಿಗೆ ಹೆಚ್ಚಿನ ಅನುದಾನ
ನೀಡಬೇಕು. ಕಲಾವಿದರಿಗೂ ಆರೋಗ್ಯ ವಿಮೆ ನೀಡಬೇಕು ಎನ್ನುತ್ತಾರೆ ತಾಲೂಕು ಕಲಾವಿದರ ಸಂಘದ ಅಧ್ಯಕ್ಷ ಎನ್‌.ರಾಮಾಂಜಿನಪ್ಪ ಮತ್ತು ಪ್ರಧಾನ ಕಾರ್ಯದರ್ಶಿ ಬಿ.ಚಂದ್ರಶೇಖರ್‌.

ವಿಶ್ವ ರಂಗಭೂಮಿ ದಿನಾಚರಣೆ ಹಿನ್ನೆಲೆ
ರಂಗಭೂಮಿ ಚಟುವಟಿಕೆ ನಿರತರಿಗೂ ಒಂದು ಸ್ಮರಣೀಯ ದಿನ ಬೇಕು ಎನ್ನುವ ಕಾರಣದಿಂದಾಗಿ 1962ರಿಂದ ವಿಶ್ವ ರಂಗಭೂಮಿ ದಿನವನ್ನು ಮಾರ್ಚ್‌ 27ರಂದು ಆಚರಿಸಿಕೊಂಡು ಬರಲಾಗುತ್ತಿದೆ. ಪ್ಯಾರಿಸ್‌ನಲ್ಲಿ ಮುಖ್ಯ ಕಚೇರಿ ಹೊಂದಿರುವ ಅಂತಾರಾಷ್ಟ್ರೀಯ ರಂಗಸಂಸ್ಥೆಯು ಪ್ರತಿವರ್ಷ ವಿಶ್ವದ ಯಾವುದಾದರೊಂದು ಭಾಷೆಯ ಹೆಸರಾಂತ ನಟ, ನಾಟಕಕಾರ, ನಿರ್ದೇಶಕ ಅಥವಾ ಸಂಘಟಕನಿಗೆ ಒಂದು ಸಂದೇಶ ಕೊಡುವಂತೆ ಕೇಳಿಕೊಂಡು ಅದನ್ನು ವಿಶ್ವದೆಲ್ಲೆಡೆ ಪಸರಿಸುತ್ತದೆ. 2002ರಲ್ಲಿ ಕನ್ನಡದ ಖ್ಯಾತ ನಾಟಕಕಾರ ಜ್ಞಾನಪೀಠ ಪ್ರಶಸ್ತಿ ಪುರಸ್ಕೃತ ಗಿರೀಶ್‌ ಕಾರ್ನಾಡ್‌ ಅವರನ್ನು ವಿಶ್ವರಂಗಭೂಮಿ ದಿನದ ಸಂದೇಶ ನೀಡುವಂತೆ ಕೇಳಿಕೊಳ್ಳಲಾಗಿತ್ತು. ವಿಶ್ವದ ವಿವಿಧ ಭಾಷೆಯ ರಂಗಕರ್ಮಿಗಳು ಅಂದು ಈ ಸಂದೇಶ ಓದಿ ನಾಟಕ ಪ್ರಯೋಗ ಇತ್ಯಾದಿ ಉತ್ಸವ ಆಚರಿಸುತ್ತಾರೆ. ನಮ್ಮ ನಾಡಿನಲ್ಲೂ ವಿವಿಧ ರಂಗ ಸಂಸ್ಥೆಗಳು ವಿಶೇಷ ರಂಗಪ್ರಯೋಗಗಳೊಂದಿಗೆ ಈ ವಿಶೇಷ ದಿನವನ್ನು ಸಂಭ್ರಮದಿಂದ ಆಚರಿಸಲಾಗುತ್ತದೆ. 2022ರ ವಿಶ್ವ ರಂಗಭೂಮಿ ದಿನಾಚರಣೆಯ ಸಂದೇಶವನ್ನು ಅಮೆರಿಕ ಸಂಯುಕ್ತ ಸಂಸ್ಥಾನದ ಪೆನ್ಸಿಲ್ವಾನಿಯಾದ ರಂಗ ನಿರ್ದೇಶಕ ಪೀಟರ್‌ ಸೆಲ್ಲರ್ ನೀಡಲಿದ್ದಾರೆ.

ಇದನ್ನೂ ಓದಿ : ಸೋಮವಾರ ಪ್ರಮಾಣ ವಚನ: ಸಂಪುಟದ ಕುರಿತು ಗುಟ್ಟು ಬಿಟ್ಟು ಕೊಡದ ಸಾವಂತ್

ನಾಟಕದಲ್ಲಿ ಹೊಸತನ ಮೂಡಿ ಬರಲಿ
ಮಾಧ್ಯಮಗಳ ಪ್ರಭಾವದಿಂದ ರಂಗಭೂಮಿ ತನ್ನ ಅಸ್ತಿತ್ವ ಕಾಪಾಡಿಕೊಳ್ಳಬೇಕಿದೆ. ಇತ್ತೀಚೆಗೆ ಪೌರಾಣಿಕ ನಾಟಕ ಎಂದರೆ ಕುರುಕ್ಷೇತ್ರ ಎನ್ನುವ ಮಟ್ಟಿಗೆ ಹೆಚ್ಚಿನ ಸಂಖ್ಯೆಯಲ್ಲಿ ಕುರುಕ್ಷೇತ್ರ ನಾಟಕಗಳೇ ಪ್ರದರ್ಶಿತವಾಗುತ್ತಿವೆ. ರಾಮಾಯಣ, ಮಹಾಭಾರತದ ಹಲವಾರು ಪ್ರಸಂಗಗಳು ಪೌರಾಣಿಕ ಹಾಗೂ ಯಕ್ಷಗಾನ ಪ್ರಕಾರಗಳಲ್ಲಿ ಅಭಿನಯಿಸಲು ಅವಕಾಶವಿದೆ. ಇದಲ್ಲದೇ ಸಾಮಾಜಿಕ ನಾಟಕಗಳು ವೃತ್ತಿ ರಂಗಭೂಮಿ ಕಲಾವಿದರಿಗೇ ಸೀಮಿತವಾಗಿವೆ. 80ರ ದಶಕದಲ್ಲಿ ತಾಲೂಕಿನ ನಟ ಗಂಗೋತ್ರಿ ಮೊದಲಾದ ತಂಡಗಳು ಹಲವಾರು ಸಾಮಾಜಿಕ, ಐತಿಹಾಸಿಕ ನಾಟಕಗಳನ್ನು ಪ್ರದರ್ಶಿಸುತ್ತಿದ್ದರು. ಇತ್ತೀಚೆಗೆ ಕೃಷ್ಣ ಸಂಧಾನ ಸಾಮಾಜಿಕ ನಾಟಕ ಮೊದಲಾಗಿ ಬೆರಳೆಣಿಕೆಯಷ್ಟು ನಾಟಕಗಳು ಮಾತ್ರ ಇವೆ. ಸಾಮಾಜಿಕ ಕಳಕಳಿಯ ನಾಟಕಗಳು ಹಾಗೂ ಹೊಸ ರಂಗ ಪ್ರಯೋಗಗಳತ್ತ ಹವ್ಯಾಸಿ ಕಲಾವಿದರು ಗಮನ ಹರಿಸಿದರೆ ತಾಲೂಕಿನ ರಂಗಭೂಮಿಗೆ ಚೈತನ್ಯ ದೊರೆಯುತ್ತದೆ ಎನ್ನುವುದು ರಂಗಪ್ರೇಮಿಗಳ ಬಯಕೆಯಾಗಿದೆ.

– ಶ್ರೀಕಾಂತ

Advertisement

Udayavani is now on Telegram. Click here to join our channel and stay updated with the latest news.

Next