Advertisement

ವಿದ್ಯಾರ್ಥಿಗಳಿಗೆ ಜಾನಪದ ತರಬೇತಿ

11:50 AM Feb 17, 2020 | Naveen |

ದೊಡ್ಡಬಳ್ಳಾಪುರ: ನಮ್ಮ ಜಾನಪದ ಕಲೆ, ಸಂಸ್ಕೃತಿಗಳನ್ನು ಇಂದಿನ ಪೀಳಿಗೆಗೆ ಪರಿಚಯಿಸುವ ನಿಟ್ಟಿನಲ್ಲಿ ಶಾಲಾ ಕಾಲೇಜುಗಳಲ್ಲಿ ಜಾನಪದ ತರಬೇತಿ ಕಾರ್ಯಕ್ರಮ ರೂಪಿಸಲಾಗಿದ್ದು, ಜಾನಪದ ಅಕಾಡೆಮಿಯಿಂದ ಜಾನಪದ ಹಬ್ಬದಂತಹ ವಿಶಿಷ್ಠ ಕಾರ್ಯಕ್ರಮಗಳನ್ನು ರೂಪಿಸಲಾಗುತ್ತಿದೆ ಎಂದು ಕರ್ನಾಟಕ ಜಾನಪದ ಅಕಾಡೆಮಿ ಅಧ್ಯಕ್ಷೆ ಮಾತಾ ಬಿ.ಜಯಮ್ಮ ಜೋಗತಿ ಹೇಳಿದರು.

Advertisement

ನಗರದ ಭಗತ್‌ ಸಿಂಗ್‌ ಕ್ರೀಡಾಂಗಣದಲ್ಲಿ ಕರ್ನಾಟಕ ರಾಜ್ಯ ಪೊಲೀಸ್‌, ಕರ್ನಾಟಕ ಜಾನಪದ ಅಕಾಡೆಮಿ ಹಾಗೂ ಬೆಂಗಳೂರು ಗ್ರಾಮಾಂತರ ಜಿಲ್ಲಾ ಪೊಲೀಸ್‌ ಸಹಯೋಗದೊಂದಿಗೆ ಜಾನಪದ ಹಬ್ಬ- ಭಾವೈಕ್ಯತೆಯ ಸಮ್ಮಿಲನ’ ಉದ್ಘಾಟನಾ ಸಮಾರಂಭದಲ್ಲಿ ಅವರು ಮಾತನಾಡಿದರು.

ನಾಡಿನ ಅನನ್ಯ ಸಾಂಸ್ಕೃತಿಕ ಪರಂಪರೆಯಲ್ಲಿ ಒಂದಾಗಿರುವ ಜಾನಪದ ಕಲೆಗಳನ್ನು ಬೆಳೆಸಲು ಎಲ್ಲಾ ವಯೋಮಾನದವರಿಗೂ ಮಾನ್ಯತೆ ನೀಡಲು ಸೂಕ್ತ ಯೋಜನೆ ರೂಪಿಸಲಾಗುತ್ತಿದೆ. ಕನ್ನಡ ಕಲಿಸಿ, ಕನ್ನಡ ಸಂಸ್ಕೃತಿ ಬೆಳೆಸಿ ಎಂಬುದು ಅಕಾಡೆಮಿಯ ಚಿಂತನೆಯಾಗಿದೆ. ಕಲಾವಿದರು ತಮ್ಮ ಕಲೆಯನ್ನು ವೇದಿಕೆಯ ಮೇಲೆ ಅಥವಾ ಜನರ ಮುಂದೆ ಪ್ರಸ್ತುತಪಡಿಸುವ ವೇಳೆ ತಮ್ಮ ಹಾವ,ಭಾವ ಮತ್ತು ವಸ್ತ್ರದ ಶಿಸ್ತಿಗೂ ಆದ್ಯತೆ ನೀಡಬೇಕು. ಕರೋಕೆ, ಸಿನಿಮಾದ ಸಿದ್ಧ ಸಂಗೀತದ ಮೂಲಕ ಮೂಲ ಜಾನಪದಕ್ಕೆ ಧಕ್ಕೆ ಬಾರದಂತೆ ಪ್ರದರ್ಶನಗಳನ್ನು ನೀಡಬೇಕು. ಉಡುಪು ಸಂಹಿತೆ ಕಲಾವಿದರಿಗೆ ಮುಖ್ಯ. ಫೈಬರ್‌ ನಿಂದ ಮಾಡಿದ ವಾದ್ಯಗಳು ಬಳಸದೆ, ಆಕರ್ಷಕ ನಾದವನ್ನು ಹೊರ ಹೊಮ್ಮಿಸುವ ವಾದ್ಯಗಳನ್ನು ಬಳಸಲು ಮನವಿ ಮಾಡಿದರು.

ಮಂಗಳಮುಖೀ ಸಾಧಕರೊಬ್ಬರನ್ನು ರಾಜ್ಯ ಸರ್ಕಾರದ ಮಹತ್ವದ ಅಕಾಡೆಮಿಯೊಂದಕ್ಕೆ ಅಧ್ಯಕ್ಷರನ್ನಾಗಿ ನೇಮಕ ಮಾಡಿರುವುದು ದೇಶದಲ್ಲೇ ಮೊದಲು. ಇಂತಹ ಮಹತ್ವದ ಕೆಲಸವನ್ನು ರಾಜ್ಯ ಸರ್ಕಾರ ಮಾಡಿದೆ. ಈ ಜವಾಬ್ದಾರಿಯನ್ನು ಸಮರ್ಪಕವಾಗಿ ನಿಭಾಯಿಸುವ ಮೂಲಕ ಜನಪದ ಕಲಾವಿದರ ಏಳಿಗೆಗಾಗಿ ಶ್ರಮಿಸಲಾಗುವುದು ಎಂದರು.

ಸದಾ ಒಂದಲ್ಲಾ ಒಂದು ಒತ್ತಡದ ಕೆಲಸದಲ್ಲಿಯೇ ನಿರತರಾಗಿರುವ ಪೊಲೀಸ್‌ ಇಲಾಖೆ ಅಧಿಕಾರಿಗಳು ಹಾಗೂ ಸಿಬ್ಬಂದಿ ಜಾನಪದ ಅಕಾಡೆಮಿಯೊಂದಿಗೆ ಸೇರಿಕೊಂಡು ಹಾಡು, ಕುಣಿತಗಳಲ್ಲಿ ತೊಡಗಿಸಿಕೊಂಡಿರುವುದು ವಿಶೇಷವಾಗಿದೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.

Advertisement

ಸಮಾರಂಭವನ್ನು ಉದ್ಘಾಟಿಸಿದದ ಶಾಸಕ ಟಿ.ವೆಂಕಟರಮಣಯ್ಯ ಮಾತನಾಡಿ, ಮಕ್ಕಳಲ್ಲಿ ಜಾನಪದ ಕಲೆ ಕುರಿತು ಆಸಕ್ತಿ ಬೆಳೆಸುವ ಮೂಲಕ ಸಾಂಪ್ರದಾಯಿಕ ಜಾನಪದ ಪರಂಪರೆಯನ್ನು ಸಂರಕ್ಷಿಸಲು ಮುಂದಾಗಬೇಕು. ನಮ್ಮ ಪೂರ್ವಜರು ಹೊಲ, ಗದ್ದೆಗಳಲ್ಲಿ ಕೆಲಸ ಮಾಡುವಾಗ, ಭತ್ತ ನಾಟಿ ಮಾಡುವಾಗ ಅಂದು ಆಡು ಭಾಷೆಯಲ್ಲಿ ಕಟ್ಟಿದ ಪದಗಳೆ ಇಂದು ಜಾನಪದ ಗೀತೆಗಳಾಗಿದ್ದು, ಕಲಿತಿರುವ ಜಾನಪದ ಗೀತೆಗಳನ್ನು ಹಾಡುತ್ತಾ, ಮುಂದಿನ ಪೀಳಿಗೆಗೂ ಕಲಿಸುತ್ತಾ ಜಾನಪದ ಕಲೆಯನ್ನು ಉಳಿಸಿಕೊಳ್ಳಬೇಕೆಂದು ಹೇಳಿದರು.

ಸಮಾರಂಭದಲ್ಲಿ ಮುಖ್ಯಮಂತ್ರಿಗಳ ರಾಜಕೀಯ ಕಾರ್ಯದರ್ಶಿ ಹಾಗೂ ಶಾಸಕ ಎಸ್‌.ಆರ್‌.ವಿಶ್ವನಾಥ್‌, ಜಿಲ್ಲಾ ಪಂಚಾಯಿತಿ ಅಧ್ಯಕ್ಷೆ ಜಯಮ್ಮ ಲಕ್ಷ್ಮೀನಾರಾಯಣ, ಉಪಾಧ್ಯಕ್ಷೆ ಕನ್ಯಾಕುಮಾರಿ ಶ್ರೀನಿವಾಸ್‌, ವಿಧಾನ ಪರಿಷತ್‌ ಸದಸ್ಯ ಅ.ದೇವೇಗೌಡ, ಕೇಂದ್ರ ರೇಷ್ಮೆ ಮಂಡಳಿ ಮಾಜಿ ಅಧ್ಯಕ್ಷ ಕೆ.ಎಂ. ಹನುಮಂತರಾಯಪ್ಪ, ತಾಲೂಕು ಪಂಚಾಯಿತಿ ಅಧ್ಯಕ್ಷ ಡಿ.ಸಿ.ಶಶಿಧರ್‌ ,ಉಪಾಧ್ಯಕ್ಷೆ ಪದ್ಮಾವತಿಅಣ್ಣಯಪ್ಪ,ಡಿವೈಎಸ್ಪಿ ಟಿ.ರಂಗಪ್ಪ, ಸರ್ಕಲ್‌ ಇನ್ಸ್‌ಪೆಕ್ಟರ್‌ ರಾಘವ ಎಸ್‌.ಗೌಡ ಇದ್ದರು. ಕಾರ್ಯಕ್ರಮದಲ್ಲಿ ವಿವಿಧೆಡೆಗಳಿಂದ ಆಗಮಿಸಿದ್ದ ಜಾನಪದ ಕಲಾ ತಂಡಗಳಿಂದ ವೀರಭದ್ರನ ನೃತ್ಯ, ತಮಟೆ ವಾದನ, ಡೊಳ್ಳು ಕುಣಿತ, ಸೀಮ ಕುಣಿತ, ಪೂಜಾ ಕುಣಿತ, ಕಂಗೀಲು ನೃತ್ಯ ಮೊದಲಾದ ನೃತ್ಯ ಪ್ರದರ್ಶನ ನಡೆಯಿತು.

ಕಾಲೇಜು ವಿದ್ಯಾರ್ಥಿನಿಯರಿಂದ ಜಾನಪದ ನೃತ್ಯ ಪ್ರದರ್ಶನ, ಖ್ಯಾತ ಗಾಯಕರಿಂದ ಜಾನಪದ ಗೀತ ಗಾಯನ, ಪೊಲೀಸ್‌ ಇಲಾಖೆಯ ಸಿಬ್ಬಂದಿಯಿಂದ ಜಾನಪದ ಹಾಡುಗಳನ್ನು ಹಾಡುವ ಮೂಲಕ ಪ್ರೇಕ್ಷರರ ಮೆಚ್ಚುಗೆ ಪಡೆದರು

Advertisement

Udayavani is now on Telegram. Click here to join our channel and stay updated with the latest news.

Next