Advertisement

ಅರ್ಥವ್ಯವಸ್ಥೆ ಗುಣವಾಗದಿದ್ದರೆ ಅರ್ಥವಿದೆಯೇ?

08:05 AM Sep 19, 2017 | |

ಇನ್ನುಳಿದಿರುವ ಎರಡು ವರ್ಷಗಳಲ್ಲಿ ಮೋದಿಯವರೇನಾದರೂ ಆಡಳಿತಾತ್ಮಕ ಮತ್ತು ಆರ್ಥಿಕ ಸುಧಾರಣೆ ತರುವಲ್ಲಿ ಯಶಸ್ವಿಯಾದರೆ, 2019ರಲ್ಲಿ ಅವರ ಗೆಲುವು ನಿಶ್ಚಿತ. ಅವರು ಹಾಗೆ ಮಾಡದಿದ್ದರೆ ಕಾಂಗ್ರೆಸ್‌ನ ಪುನರುಜ್ಜೀವನ ಅಲ್ಲಿಯವರೆಗೂ ಸಾಧ್ಯವಿರುತ್ತದೆ. ಬರ್ಕಲೆಯಲ್ಲಿ ಕಾಂಗ್ರೆಸ್‌ ಉಪಾಧ್ಯಕ್ಷ ರಾಹುಲ್‌ ಗಾಂಧಿ ಬಿಟ್ಟ ಬಾಣವಿದೆಯಲ್ಲ ಅದು ಸರಿಯಾದ ಗುರಿ ಮುಟ್ಟದೇ ಹೋಗಿದ್ದರೆ, ಮೋದಿ ಸರ್ಕಾರದ ವಕ್ತಾರರ್ಯಾರೂ ಈ ಪಾಟಿ ಚಿಂತಾಕ್ರಾಂತರಾಗುತ್ತಿರಲಿಲ್ಲ.

Advertisement

ನಿಜ ಹೇಳಬೇಕೆಂದರೆ, ರಾಹುಲ್‌ ಗಾಂಧಿಯವರ ಭಾಷಣ ಕೇಳುವ ಇರಾದೆಯೇ ನನಗಿರಲಿಲ್ಲ. ಕಾಂಗ್ರೆಸ್‌ನ ಯುವರಾಜ ಕ್ಯಾಲಿಫೋರ್ನಿಯಾದ ಬರ್ಕೆಲೆ ವಿಶ್ವವಿದ್ಯಾಲಯದಲ್ಲಿನ ಭಾರತೀಯ ವಿದ್ಯಾರ್ಥಿಗಳನ್ನುದ್ದೇಶಿಸಿ ಮಾತನಾಡಲಿದ್ದಾರೆ ಎನ್ನುವುದು ಮೊದಲೇ ಗೊತ್ತಿತ್ತು, ಆದರೆ “ಮತ್ತೆ ಮತ್ತೆ ಅದದೇ ಹಳೆಯ ಮಾತನಾಡ್ತಾರೆ. ಏನು ಕೇಳ್ಳೋದು’ ಅಂತ ಸುಮ್ಮನಾಗಿದ್ದೆ. ಹೀಗಾಗಿ ನಾನು ಟಿ.ವಿ. ಕೂಡ ಆನ್‌ ಮಾಡಲು ಹೋಗಲಿಲ್ಲ. ಆದರೆ ಯಾವಾಗ ಟ್ವಿಟರ್‌ ಪ್ರವೇಶಿಸಿದೆನೋ ಆಗ ರಾಹುಲ್‌ರ ಈ ಭಾಷಣದಿಂದ ಸ್ಮತಿ ಇರಾನಿಯವರು ಬಹಳ ಬೇಸರಗೊಂಡಿದ್ದಾರೆ ಎನ್ನುವುದು ಅರ್ಥವಾಯಿತು. ಟಿ.ವಿ. ಆನ್‌ ಮಾಡಿದ್ದೇ ಸ್ಮತಿ ಇರಾನಿಯವರು ಕಾಂಗ್ರೆಸ್‌ ಉಪಾಧ್ಯಕ್ಷರ ಮೇಲೆ ಯಾವ ರೀತಿ ಟೀಕಾ ಪ್ರಹಾರ ನಡೆಸುತ್ತಿದ್ದರೆಂದರೆ, ಎಲ್ಲಿ ಅವರು ಮತ್ತೆ ಅಮೆಠಿಯಲ್ಲಿ ರಾಹುಲ್‌ರ ಪ್ರತಿಸ್ಪರ್ಧಿಯಾಗಿಬಿಟ್ಟರೋ ಎಂದು ಅನಿಸುವಂತಿತ್ತು. ಆದರೆ ಅಷ್ಟರಲ್ಲಾಗಲೇ ರಾಹುಲ್‌ ಭಾಷಣ ಮುಗಿಸಿಬಿಟ್ಟಿದ್ದರು. ಹೀಗಾಗೇ ಅಂತರ್ಜಾಲದಲ್ಲಿ ಹುಡುಕಾಡಿ ನಾನು ಅವರ ಪೂರ್ಣ ಭಾಷಣವನ್ನು ಗಮನವಿಟ್ಟು ಕೇಳಬೇಕಾಯಿತು. 

ಮಂಗಳವಾರ ಭಾರತೀಯ ಜನತಾ ಪಾರ್ಟಿಯ ವಕ್ತಾರರೆಲ್ಲ ಟೆಲಿವಿಷನ್‌ಗಳ ಯುದ್ಧಭೂಮಿಗೆ ಧುಮುಕಿಬಿಟ್ಟಿದ್ದರು. ನರೇಂದ್ರ ಮೋದಿ ಪ್ರಧಾನಿಯಾದ ನಂತರ ಭಾರತದಲ್ಲಿ ಹಿಂಸೆ ಮತ್ತು ದ್ವೇಷದ ವಾತಾವರಣ ಸೃಷ್ಟಿಯಾಗಿದೆ ಎನ್ನುವ ರಾಹುಲ್‌ಮಾತನ್ನು ಇವರೆಲ್ಲ ಬಹಳ ತೀಕ್ಷ್ಣವಾಗಿ ಖಂಡಿಸಿದರು. ಹೇಗೆ ಕಾಂಗ್ರೆಸ್‌ ಆಡಳಿತಾವಧಿಯಲ್ಲಿ ಅಮಾಯಕ ಸಿಖ್ಬರು ಮತ್ತು ಮುಸಲ್ಮಾನರು ಪ್ರಾಣ ಕಳೆದುಕೊಂಡರು ಎನ್ನುವುದನ್ನು ಬಿಜೆಪಿಯ ವಕ್ತಾರರು ರಾಹುಲ್‌ಗೆ ನೆನಪುಮಾಡಿಕೊಟ್ಟರು. ಅಷ್ಟೇ ಅಲ್ಲ, ಕಾಶ್ಮೀರದ ಸಮಸ್ಯೆ ರಾಹುಲ್‌ರ ಮುತ್ತಜ್ಜನ ಕೊಡುಗೆಯೇ ಹೊರತು, ಮೋದಿಯವರದ್ದಲ್ಲ ಎನ್ನುವುದನ್ನೂ ನೆನಪಿಸಿದರು. ಅಂದರೆ ರಾಹುಲ್‌ ಅವರು ಮೋದಿಯವರ ವಿರುದ್ಧ ಮಾಡಿದ್ದ ರಾಜಕೀಯ ಆರೋಪಗಳನ್ನು ಖಂಡಿಸುವುದು ಬಿಜೆಪಿಯವರಿಗೆ ಬಹಳ ಸುಲಭವಾಯಿತು. ಆದರೆ “ಯುವರಾಜರು’ ಮೋದಿ ಸರ್ಕಾರದ ಆರ್ಥಿಕ ನೀತಿಗಳ ಮೇಲೆ ಮಾಡಿದ ಆರೋಪಗಳಿವೆ ಯಲ್ಲ, ಅದನ್ನು ಖಂಡಿಸುವುದು ಸುಲಭದ ಕೆಲಸವಾಗಿರಲಿಲ್ಲ.

“”ಡಿಮಾನಿಟೈಸೇಷನ್‌ನಿಂದಾಗಿ ಚಿಕ್ಕ ವ್ಯಾಪಾರಿಗಳಿಗೆ ಆಳವಾದ ಗಾಯವಾಗಿದೆ. ಈ ಆಘಾತದಿಂದ ಇವರೆಲ್ಲ ಚೇತರಿಸಿಕೊಳ್ಳು ವುದಕ್ಕೂ ಮುನ್ನವೇ ಜಿಎಸ್‌ಟಿಯ ಭಾರ ಹೊರುವಂತಾಗಿದೆ. ತಪ್ಪು ನೀತಿಗಳ ಕಾರಣದಿಂದಾಗಿ ಚಿಕ್ಕ ವ್ಯಾಪಾರಿಗಳಿಗೆ ತೀವ್ರ ಹಾನಿಯಾಗಿದೆ ಮತ್ತು ಅರ್ಥ್ಯವ್ಯವಸ್ಥೆಯ ವೃದ್ಧಿ ದರವೂ ಕುಸಿದಿದೆ. ಇದರ ಋಣಾತ್ಮಕ ಪರಿಣಾಮ ಉದ್ಯೋಗ ಸೃಷ್ಟಿಯ ಮೇಲೆ ಆಗುತ್ತಿದೆ.” ಎಂದರು ರಾಹುಲ್‌.  

ರಾಹುಲ್‌ರ ಈ ಆರೋಪಗಳಲ್ಲಿ ಸತ್ಯವಿಲ್ಲವೇನು? ಹಾಗೆಂದು ನಾನೇನೂ ರಾಹುಲ್‌ ಗಾಂಧಿಯವರ ಪ್ರಶಂಸಕಳೇನೂ ಅಲ್ಲ (ಹಿಂದೆಯೂ ಆಗಿರಲಿಲ್ಲ, ಈಗಲೂ ಅಲ್ಲ). ಆದರೂ ಮೋದಿ ಸರ್ಕಾರದ ಆರ್ಥಿಕ ನೀತಿಗಳ ಬಗ್ಗೆ ಅವರು ಮಾಡಿರುವ ಟಿಪ್ಪಣಿ ಅಕ್ಷರಶಃ ಸತ್ಯ ಎಂದು ಹೇಳಲೇಬೇಕಾಗಿದೆ. ನನಗೆ ಗೊತ್ತಿರುವ ಬಹಳಷ್ಟು ಚಿಕ್ಕ ವ್ಯಾಪಾರಿಗಳು ಈಗ ತಮ್ಮ ವ್ಯಾಪಾರವನ್ನು ಬಂದ್‌ ಮಾಡಲು ಯೋಚಿಸುತ್ತಿದ್ದಾರೆ. ಏಕೆಂದರೆ ನೋಟ್‌ಬಂದಿ ಇವರಿಗೆ ಅರ್ಧ ಹಾನಿಯಷ್ಟೇ ಮಾಡಿತ್ತು. ಈಗ ಜಿಎಸ್‌ಟಿಯೂ ಅವರಿಗೆಲ್ಲ ಪೆಟ್ಟು ಕೊಟ್ಟು ಪೂರ್ಣ ಹಾನಿ ಮಾಡಿದೆ. 

Advertisement

ಕಳೆದ ವಾರವಷ್ಟೇ ನನಗೆ ಪರಿಚಯವಿರುವ ಚಿಕ್ಕ ವ್ಯಾಪಾರಿ ಯೊಬ್ಬರು ತಾವೆದುರಿಸುತ್ತಿರುವ ಸಂಕಟವನ್ನು ವಿವರಿಸಿದರು. “”ನಾವು ಸಣ್ಣ ಪ್ರಮಾಣದಲ್ಲಿ ರಫ್ತು ವ್ಯಾಪಾರ ನಡೆಸುವವರು. ಕಟ್ಟಿಗೆಯ ಕುರ್ಚಿ ಮತ್ತು ಟೇಬಲ್‌ಗ‌ಳನ್ನು ಇಲ್ಲಿಂದ  ಯುರೋಪ್‌ಗೆ ಕಳುಹಿಸುತ್ತೇವೆ. ಅಲ್ಲೆಲ್ಲ ಈ ವಸ್ತುಗಳಿಗೆ ಭಾರೀ ಬೆಲೆ ಇದೆ. ಈ ಬಾರಿ ನಾವು ನಮ್ಮ ಸಾಮಾನು-ಸರಂಜಾಮು ಹೊತ್ತು ಕಸ್ಟಮ್ಸ್‌ಗೆ ತೆರಳಿದ್ದೇ ಕಸ್ಟಮ್ಸ್‌ ಅಧಿಕಾರಿಗಳು ಹೇಳಿ ಬಿಟ್ಟರು - “ನೀವೇನು ಈ ರಫ್ತಿನ ಮೇಲೆ ಹದಿನೈದು ಪ್ರತಿಶತದಷ್ಟು ಲಾಭ ಗಳಿಸುತ್ತೀರಲ್ಲ, ಅದನ್ನು ಸ್ಥಿರ ಠೇವಣಿಯ ರೂಪದಲ್ಲಿ ಡಿಪಾಸಿಟ್‌ ಇಡಬೇಕು.’ ಅಂತ. ಅಲ್ಲದೆ, ಈ ಹಣ ಮುಂದಿನ ವರ್ಷವೇ ನಮಗೆ ಸಿಗುತ್ತದೆ ಎಂದೂ ಹೇಳಿದರು! “ಅಲ್ಲ ಸಾರ್‌, ಲಾಭವಿಲ್ಲದೇ ಎಕ್ಸ್‌ಪೋರ್ಟ್‌ ಬ್ಯುಸಿನೆಸ್‌ ಹೇಗೆ ನಡೆಸಬೇಕು?’ ಅಂತ ನಾವು ಕೇಳಿದರೆ, “ನಿಯಮವಿರುವುದೇ ಹೀಗೆ’ ಅಂತ ಉತ್ತರಿಸಿದರು ಆ ಅಧಿಕಾರಿಗಳು. ನಮಗೆಷ್ಟು ಬೇಜಾರಾಗಿದೆಯೆಂದರೆ ಕಾರ್ಖಾನೆಯನ್ನು ಮುಚ್ಚಲು ಯೋಚಿಸುತ್ತಿದ್ದೇವೆ”

ವಿತ್ತ ಮಂತ್ರಿಗಳೇನಾದರೂ ತಮ್ಮ ಗೂಢಚರ ರನ್ನು ಭಾರತದ ಚಿಕ್ಕ ನಗರಗಳಿಗೆ ಕಳುಹಿಸುವ ಪ್ರಯಾಸ ಮಾಡಿದರೆಂದರೆ, ಇಂಥ ಹಲವಾರು ಕಥೆಗಳು ಅವರಿಗೆ ಕೇಳಲು ಸಿಗುತ್ತವೆ. ಜಿಎಸ್‌ಟಿಯ ಪ್ರಭಾವ ದೊಡ್ಡ ಉದ್ಯೋಗಪತಿಗಳಿಗೂ ತಟ್ಟಿದೆ. ಆದರೆ ಅವರೆಲ್ಲ ಅದರ ನಿಯಮಗಳನ್ನು ಅರ್ಥಮಾಡಿಕೊಳ್ಳಲು ವಕೀಲರು ಅಥವಾ ಇತರೆ ವಿಶೇಷಜ್ಞರ ಮೊರೆಹೋಗಿಬಿಡುತ್ತಾರೆ. ಚಿಕ್ಕ ವ್ಯಾಪಾರಿಗಳಿಗೆ ಇದೆಲ್ಲ ಸಾಧ್ಯವಿಲ್ಲವಲ್ಲ? ಹೀಗಾಗಿ ಅವರಿಗೆ ಬಹಳ ಪೆಟ್ಟು ಬೀಳುತ್ತಿದೆ. ಹಾಗೆಂದು ಜಿಎಸ್‌ಟಿಯೇ ತಪ್ಪು ಕರ ಪದ್ಧತಿ ಎಂದೇನೂ ಅರ್ಥವಲ್ಲ, ಆದರೆ ನೋಟ್‌ ರದ್ದತಿಯ ಪರಿಣಾಮ ತಗ್ಗುವವರೆಗಾದರೂ ಸುಮ್ಮನಿದ್ದು, ನಂತರ ಜಿಎಸ್‌ಟಿಯನ್ನು ಅನುಷ್ಠಾನಕ್ಕೆ ತರಬಹುದಿತ್ತು. ಆಗ ಜನರಿಗೆ ಇಷ್ಟು ಕಷ್ಟವಾಗುತ್ತಿರಲಿಲ್ಲವೇನೋ?

ಕಳೆದ ವಾರ ಅಹಮದಾಬಾದ್‌ನ ಜನರು ಜಪಾನ್‌ ಪ್ರಧಾನಿ ಶಿಂಜೋ ಅಬೆ ಮತ್ತು ಪ್ರಧಾನಮಂತ್ರಿ ಮೋದಿಯವರ ಸ್ವಾಗತ ಮಾಡಿದ ರೀತಿಯನ್ನು ನೋಡಿದಾಗ, ನರೇಂದ್ರ ಮೋದಿಯವರ ಜನಪ್ರಿಯತೆ ಒಂದಿಷ್ಟೂ ಕಡಿಮೆಯಾಗಿಲ್ಲ ಎನ್ನುವುದು ಸ್ಪಷ್ಟವಾಯಿತು. “ಮೂರು ವರ್ಷ ಆಡಳಿತದ ನಂತರವೂ ಬಹುತೇಕ ಭಾರತವಾಸಿಗಳು ಮೋದಿಯವರನ್ನು ಒಬ್ಬ ಸಶಕ್ತ, ಪ್ರಾಮಾಣಿಕ ಮತ್ತು ಒಳ್ಳೆಯ ರಾಜಕಾರಣಿ ಎಂದೇ ನೋಡುತ್ತಾರೆ’ ಎನ್ನುತ್ತವೆ ಸಮೀಕ್ಷೆಗಳು. ಪ್ರಧಾನಿಗಳ ನೀತಿಗಳ ಮೇಲೆ ಅನುಮಾನ ವ್ಯಕ್ತಪಡಿಸುವ ಜನರೂ ಕೂಡ ಅವರ ನಿಯತ್ತು ಸ್ವತ್ಛವಾಗಿದೆ ಎನ್ನುವುದನ್ನು ಒಪ್ಪಿಕೊಳ್ಳುತ್ತಾರೆ. ಈ ಜನಪ್ರಿಯ ತೆಯ ಹೊರತಾಗಿಯೂ ಒಂದು ವೇಳೆ ಅರ್ಥವ್ಯವಸ್ಥೆಯಲ್ಲಿ ಬದಲಾವಣೆ ತಂದು ತೋರಿಸಲು ಮೋದಿ ವಿಫ‌ಲರಾದರೆ, 2019ರ ಲೋಕಸಭಾ ಚುನಾವಣೆ ಅಷ್ಟು ಆಸಾನಾಗಿ ಇರುವು ದಿಲ್ಲ. ಭಾರತವನ್ನು ಸಂಪನ್ನ ಮಾಡಿ ತೋರಿಸುತ್ತಾರೆ ಎಂಬ ನಂಬಿಕೆಯ ಆಧಾರದಲ್ಲಿಯೇ ನರೇಂದ್ರ ಮೋದಿಯವರನ್ನು ಜನ ಅಧಿಕಾರಕ್ಕೆ ತಂದಿರುವುದು. ಅಲ್ಲದೇ ಭ್ರಷ್ಟಾಚಾರ ಮತ್ತು ಭ್ರಷ್ಟ ಸರ್ಕಾರಿ ಅಧಿಕಾರಿಗಳಿಗೆ ತಕ್ಕ ಪಾಠ ಕಲಿಸುತ್ತಾರೆ ಎನ್ನುವ ನಂಬಿಕೆಯ ಮೇಲೆಯೂ ಭಾರತೀಯರು ಓಟು ನೀಡಿದ್ದಾರೆ. 

ಹೀಗಾಗಿ ಇನ್ನುಳಿದಿರುವ ಎರಡು ವರ್ಷಗಳಲ್ಲಿ ಮೋದಿಯವರೇನಾದರೂ ಆಡಳಿತಾತ್ಮಕ ಮತ್ತು ಆರ್ಥಿಕ ಸುಧಾರಣೆ ತರುವಲ್ಲಿ ಯಶಸ್ವಿಯಾದರೆ, 2019ರಲ್ಲಿ ಅವರ ಗೆಲುವು ನಿಶ್ಚಿತ. ಅವರು ಹಾಗೆ ಮಾಡದಿದ್ದರೆ ಕಾಂಗ್ರೆಸ್‌ನ ಪುನರುಜ್ಜೀವನ ಅಲ್ಲಿಯವರೆಗೂ ಸಾಧ್ಯವಿರುತ್ತದೆ. ಬರ್ಕಲೆಯಲ್ಲಿ ಕಾಂಗ್ರೆಸ್‌ ಉಪಾಧ್ಯಕ್ಷ ರಾಹುಲ್‌ ಗಾಂಧಿ ಬಿಟ್ಟ ಬಾಣವಿದೆಯಲ್ಲ ಅದು ಸರಿಯಾದ ಗುರಿ ಮುಟ್ಟದೇ ಹೋಗಿದ್ದರೆ, ಮೋದಿ ಸರ್ಕಾರದ ವಕ್ತಾರರ್ಯಾರೂ ಈ ಪಾಟಿ ಚಿಂತಾಕ್ರಾಂತರಾಗುತ್ತಿರಲಿಲ್ಲ. ಯಾವ ಸಚಿವರೂ ಟಿ.ವಿ. ಚಾನೆಲ್‌ಗ‌ಳ ಯುದ್ಧ ಭೂಮಿಗೆ ಧುಮುಕಿ ಸ್ಪಷ್ಟನೆ ಕೊಡುತ್ತಿರಲಿಲ್ಲ. ಭಾರತೀಯ ಯುವಕರು ಎದುರಿಸುತ್ತಿರುವ ಅತಿದೊಡ್ಡ ಸಮಸ್ಯೆಯೇ ನಿರುದ್ಯೋಗ. ಈ ಸಂಗತಿ ಪ್ರಧಾನಮಂತ್ರಿಗಳಿಗೂ ಚೆನ್ನಾಗಿಯೇ ತಿಳಿದಿದೆ. ಗುಜರಾತ್‌ಮುಖ್ಯಮಂತ್ರಿಯಾಗಿದ್ದಾಗ ಮೋದಿಯವರು ಹಳ್ಳಿಗಳಿಗೆಲ್ಲ ಭೇಟಿ ನೀಡಿದಾಗ ಅಲ್ಲಿ ಗುಂಪುಗುಂಪಾಗಿ ಸುಮ್ಮನೇ ಕುಳಿತ ಯುವಕರನ್ನು ನೋಡಿರುತ್ತಾರೆ. ಅರ್ಥವ್ಯವಸ್ಥೆಯ ವಾರ್ಷಿಕ ವೃದ್ಧಿ ದರ ಜಿಗಿದು 8 ಪ್ರತಿಶತಕ್ಕೆ ಏರದಿದ್ದರೆ ಈ ಯುವಕರಿಗೆಲ್ಲ ಎಲ್ಲಿಂದ ಸೃಷ್ಟಿಯಾಗಬೇಕು ಉದ್ಯೋಗ?

 ತವ್ಲಿನ್‌ ಸಿಂಗ್‌

Advertisement

Udayavani is now on Telegram. Click here to join our channel and stay updated with the latest news.

Next