Advertisement

ಸಮಾಜ ವಿಜ್ಞಾನ ಪರೀಕ್ಷೆಗೆ ಹೇಗೆ ತಯಾರಾಗಬೇಕು ಗೊತ್ತೇ?

10:18 AM Feb 24, 2020 | mahesh |

ಪ್ರಿಯ ವಿದ್ಯಾರ್ಥಿಗಳೇ,
ಹತ್ತನೇ ತರಗತಿಯ ಬದಲಾದ ಪರೀಕ್ಷಾ ಕ್ರಮದ ಬಗ್ಗೆ ಈಗಾಗಲೇ ತಮಗೆ ತಿಳಿದಿದೆ. ಈ ವರ್ಷದಿಂದ ಕರ್ನಾಟಕ ಪ್ರೌಢಶಿಕ್ಷಣ ಪರೀಕ್ಷಾ ಮಂಡಳಿಯು ಥೀಮ್‌ ವೈಸ್‌ ಪ್ರಶ್ನೆಪತ್ರಿಕೆಯನ್ನು ಜಾರಿಗೆ ತರಲಿದೆ. ಅದರ ಪ್ರಕಾರ ನೀವು ನಿಮ್ಮ ನಿಮ್ಮ ಶಾಲಾ ಮತ್ತು ಜಿಲ್ಲಾ ಹಂತಗಳಲ್ಲಿ ಪೂರ್ವಸಿದ್ಧತಾ ಪರೀಕ್ಷೆಗಳನ್ನು ಎದುರಿಸಿ, ಮಂಡಳಿಯ ರಾಜ್ಯ ಮಟ್ಟದ ಪೂರ್ವ ಸಿದ್ಧತಾ ಪರೀಕ್ಷೆಯನ್ನೂ ನಿನ್ನೆಯಷ್ಟೇ ಪೂರೈಸಿದ್ದೀರಿ. ಅಂತಿಮ ಥೀಮ್‌ ವೈಸ್‌ ಪರೀಕ್ಷೆಗೆ ಸಂಬಂಧಿಸಿದಂತೆ ನಿಮ್ಮ ಸಿದ್ಧತೆ ಹೀಗಿರಲಿ.

Advertisement

– 1, 2, 3 ಮತ್ತು 4 ಅಂಕಗಳ ಸಂಭವನೀಯ ಪ್ರಶ್ನೆಗಳನ್ನು ನಿಮ್ಮ ಶಿಕ್ಷಕರ ಸಹಾಯದಿಂದ ಗುರುತಿಸಿಕೊಂಡು, ನಿತ್ಯ ಅವುಗಳನ್ನು ಅಭ್ಯಾಸ ಮಾಡಿರಿ.

– ಪಠ್ಯಪುಸ್ತಕದ ಎಲ್ಲ ಪಾಠಗಳತ್ತಲೂ ಹೆಚ್ಚು ಗಮನವನ್ನು ಹರಿಸಿ, ಅವುಗಳಲ್ಲಿ ಮುಖ್ಯಾಂಶಗಳನ್ನು ಚಿಕ್ಕ -ಚೊಕ್ಕ ನೋಟ್ಸ್‌ ಮಾಡಿಕೊಳ್ಳಿ. ಪರೀಕ್ಷೆಯ ಹಿಂದಿನ ದಿನ ನಿಮಗೆ ಇವು ಹೆಚ್ಚು ಸಹಾಯಕವಾಗುತ್ತವೆ.

– 2 ಅಂಕದ ಪ್ರಶ್ನೆಗಳಿಗೆ 3-4 ಅಂಶಗಳು (ಪಾಯಿಂಟ್‌), 3 ಅಂಕದ ಪ್ರಶ್ನೆಗಳಿಗೆ 5-6 ಅಂಶಗಳು ಮತ್ತು 4 ಅಂಕದ ಪ್ರಶ್ನೆಗಳಿಗೆ 8 ಅಂಶಗಳನ್ನು ಕಡ್ಡಾಯವಾಗಿ ಕಲಿತುಕೊಳ್ಳಿ.

– ನೇರ ಪ್ರಶ್ನೆಗಳಿಗೆ ಬದಲಾಗಿ ಪರೋಕ್ಷ ಪ್ರಶ್ನೆಗಳತ್ತ ಹೆಚ್ಚು ಗಮನಹರಿಸಿ. ಉದಾಹರಣೆಗೆ, ಬಾಲ್ಯ ವಿವಾಹ ಮಕ್ಕಳ ಶೋಷಣೆಗೆ ಕಾರಣವಾಗಿದೆ ಹೇಗೆ? (ಅಂದರೆ ಬಾಲ್ಯವಿವಾಹದ ಪರಿಣಾಮ – effects of child marriage), ಕೆಲವೊಮ್ಮೆ ನದಿಗಳು ತಮ್ಮ ದಂಡೆಗಳಾಚೆಗೂ ಉಕ್ಕಿ ಹರಿಯುತ್ತವೆ. ಏಕೆ? (ಪ್ರವಾಹಕ್ಕೆ ಕಾರಣ  – reasons for flooding). ಇಂತಹ ಪ್ರಶ್ನೆಗಳನ್ನು ಹೆಚ್ಚಾಗಿ ಅಧ್ಯಯನ ಮಾಡಿಕೊಳ್ಳಿ.

Advertisement

– ಮಂಡಳಿಯಿಂದ ಈಗಾಗಲೇ ಬಿಡುಗಡೆ ಮಾಡಿರುವ ಮಾದರಿ ಪ್ರಶ್ನೆಪತ್ರಿಕೆಗಳು ಮತ್ತು ಶಿಕ್ಷಕರ ನೆರವಿನಿಂದ ಬೇರೆ ಬೇರೆ ಜಿಲ್ಲೆಗಳಲ್ಲಿ ತಯಾರಿಸಲಾದ ಜಿಲ್ಲಾ ಹಂತದ ಪ್ರಶ್ನೆಪತ್ರಿಕೆಗಳನ್ನು ಸಂಗ್ರಹಿಸಿ ಅಭ್ಯಾಸ ಮಾಡಿ.

– “ಹಲವು ಪ್ರಶ್ನೆಗಳು- ಉತ್ತರ ಒಂದೇ’ (one answer- multiple questions)  ಈ ಮಾದರಿಯ ಪ್ರಶ್ನೋತ್ತರಗಳನ್ನು ಹೆಚ್ಚು ಅಭ್ಯಾಸ ಮಾಡಿಕೊಳ್ಳಿ. ಉದಾಹರಣೆಗೆ, “ಭಾರತದ ಕೈಗಾರಿಕೆಗಳು’ (Indian Industries) ಅಧ್ಯಾಯದಿಂದ ಕೇಳಬಹುದಾದ ವಿವಿಧ ಪ್ರಶ್ನೆಗಳಾದ ಕೈಗಾರಿಕೆ ಸ್ಥಾನೀಕರಣದ ಮೇಲೆ ಪ್ರಭಾವ ಬೀರುವ ಅಂಶಗಳು, ಕಾಗದ ಕೈಗಾರಿಕೆಯ ಸ್ಥಾಪನೆಯ ಮೇಲೆ ಪ್ರಭಾವ ಬೀರುವ ಅಂಶಗಳು, ಭಾರತದಲ್ಲಿ ಕೈಗಾರಿಕೆಗಳು ಕೆಲವು ಪ್ರದೇಶದಲ್ಲಿ ಮಾತ್ರ ಸೀಮಿತಗೊಂಡಿವೆ ಏಕೆ- ಈ ಎಲ್ಲ ಪ್ರಶ್ನೆಗಳಿಗೆ ಒಂದೇ ಉತ್ತರ: ಕಾರ್ಮಿಕರ ಲಭ್ಯತೆ, ಕಚ್ಚಾವಸ್ತು, ಶಕ್ತಿ ಸಂಪನ್ಮೂಲ, ಸಾರಿಗೆ, ಮಾರುಕಟ್ಟೆ, ಬಂಡವಾಳ, ವಾಯುಗುಣ, ನೀರಿನ ಪೂರೈಕೆ ಇತ್ಯಾದಿ. ಭಾರತದ ನೈಸರ್ಗಿಕ ವಿಪತ್ತುಗಳು (Indian Natural Disasters) ಪಾಠದಲ್ಲಿಯೂ ಇಂತಹುದನ್ನು ನಿರೀಕ್ಷಿಸಬಹುದು.

– ಇತಿಹಾಸ ವಿಭಾಗದಲ್ಲಿ ಘಟಕ ಮೂರು, ಐದು, ಆರು, ಏಳು, ಎಂಟು ಮತ್ತು ಹತ್ತನೇ ಅಧ್ಯಾಯಗಳನ್ನು ಹೆಚ್ಚು ಅಭ್ಯಾಸ ಮಾಡಿ.

– ರಾಜ್ಯಶಾಸ್ತ್ರ ವಿಭಾಗದಲ್ಲಿ ಒಂದು, ಎರಡು, ಮೂರು ಮತ್ತು ಐದನೇ ಅಧ್ಯಾಯಗಳ ಮೇಲೆ ಪ್ರಶ್ನೆಗಳು ನಿರೀಕ್ಷಿತ.

– ಸಮಾಜ ಶಾಸ್ತ್ರದಲ್ಲಿ ಒಂದು, ಎರಡು, ನಾಲ್ಕು -ಈ ಅಧ್ಯಾಯಗಳ ಮೇಲೆ ಗಮನಹರಿಸಿ.

– ಅರ್ಥಶಾಸ್ತ್ರದಲ್ಲಿ ಎರಡು, ಮೂರು ಮತ್ತು ನಾಲ್ಕನೇ ಅಧ್ಯಾಯಗಳು ಮುಖ್ಯವಾದವುಗಳು.

– ವ್ಯವಹಾರ ಅಧ್ಯಯನದಲ್ಲಿ ಒಂದು, ಎರಡು, ನಾಲ್ಕನೇ ಅಧ್ಯಾಯಗಳ ಅಧ್ಯಯನವು ಹೆಚ್ಚು ಅಂಕ ಗಳಿಸಲು ಸಹಕಾರಿ.

– ಭೂಗೋಳ ಶಾಸ್ತ್ರದಲ್ಲಿ ಅಂದವಾದ ನಕಾಶೆ ಮತ್ತು ಅದರಲ್ಲಿ ಸೂಕ್ತವಾಗಿ ಸ್ಥಳ ಬಿಡಿಸುವುದನ್ನು ಅಭ್ಯಾಸ ಮಾಡಿ. ಮುಖ್ಯವಾಗಿ ನಕಾಶೆಯಲ್ಲಿ ಪರೋಕ್ಷ ಪ್ರಶ್ನೆಗಳು ಅಂದರೆ, ಭಾರತದ ಅತ್ಯಂತ ಉತ್ತರದ ತುದಿ (ಇಂದಿರಾ ಕೋಲ್‌), ನೇರವಾದ ಗುರುತ್ವವುಳ್ಳ ಅಣೆಕಟ್ಟು (ಬಾಕ್ರಾ ಅಣೆಕಟ್ಟು) ಈ ತರಹದ ಪ್ರಶ್ನೆಗಳು ಹೆಚ್ಚು ನಿರೀಕ್ಷಿತ.

– ಭೂಗೋಳಶಾಸ್ತ್ರದಲ್ಲಿ ನಕಾಶೆಗೆ ಸಂಬಂಧಿತವಾಗಿ ಒಂದು, ಎರಡು, ಆರು, ಎಂಟು, ಒಂಬತ್ತು, ಹತ್ತು ಮತ್ತು ಹನ್ನೊಂದನೇ ಅಧ್ಯಾಯಗಳನ್ನು ಹೆಚ್ಚು ಅಧ್ಯಯನ ಮಾಡಿ. ಯಾಕೆಂದರೆ, ಪರಿಣಾಮ ಪ್ರಶ್ನೆಗಳ ಅಧ್ಯಯನವು ಹೆಚ್ಚು ಅಂಕಗಳನ್ನು ಗಳಿಸಲು ನೆರವಾಗುತ್ತದೆ.

– ಪ್ರಮುಖ ಒಪ್ಪಂದಗಳು (treaties), ಹೇಳಿಕೆ (ವ್ಯಾಖ್ಯೆಗಳು -definitions)), ಮಹತ್ವದ ಘಟನೆಗಳು (important events), ಕಾನೂನುಗಳು (ಗ್ರಾಹಕ ರಕ್ಷಣೆ, ಬಾಲ ಕಾರ್ಮಿಕ, ಬಾಲ್ಯ ವಿವಾಹ ನಿಷೇಧ ಕಾಯಿದೆ ಇತ್ಯಾದಿ- laws- consumer rights, child labour, child marriage prohibition act etc.), ಪ್ರಮುಖ ಚಳುವಳಿಗಳು (important movements), ಉದ್ಯಮಗಳು, ಪ್ರವರ್ತಕ ಸಂಸ್ಥೆಗಳು – ಇವುಗಳ ಅಧ್ಯಯನ ಪರೀಕ್ಷಾ ದೃಷ್ಟಿಯಿಂದ ಹೆಚ್ಚು ಸೂಕ್ತ.

– ಸತತ ಅಭ್ಯಾಸ, ಗುಂಪು ಚರ್ಚೆ, ಹೆಚ್ಚೆಚ್ಚು ಪ್ರಶ್ನೆ ಪತ್ರಿಕೆಗಳನ್ನು ಬಿಡಿಸಿ ಅಭ್ಯಾಸ ಮಾಡುವುದು, ಇವೆಲ್ಲವೂ ನಿಮಗೆ ಹೆಚ್ಚು ಅಂಕ ತರಬಲ್ಲವು.

ಎಲ್ಲರಿಗೂ ಶುಭವಾಗಲಿ,

ಮಹಾಬಲೇಶ್ವರ ಚಿದಂಬರ ಭಾಗವತ್‌
ಸಹಶಿಕ್ಷಕರು, ಸರಕಾರಿ ಪ್ರೌಢಶಾಲೆ ಕೆದೂರು, ಕುಂದಾಪುರ ವಲಯ

 

Advertisement

Udayavani is now on Telegram. Click here to join our channel and stay updated with the latest news.

Next