ಮಾಗಡಿ: ನಾವೆಲ್ಲರೂ ನೀರನ್ನು ಪೋಲು ಮಾಡದೆ, ಸದ್ಬಳಕೆ ಮಾಡಬೇಕು ಎಂದು ವಿಜ್ಞಾನಿ ಡಾ.ಸವಿತಾ.ಎಸ್.ಎಂ ಸಲಹೆ ನೀಡಿದರು. ಚಂದೂರಾಯನಹಳ್ಳಿ ಕೃಷಿ ವಿಜ್ಞಾನ ಕೇಂದ್ರ ಮತ್ತು ಕೃಷಿ ಇಲಾಖೆಯಿಂದ ನಡೆದ ವಿಶ್ವ ಜಲ ದಿನಾಚರಣೆಯಲ್ಲಿ ಮಾತನಾಡಿದರು.
ಹಣ ನೀಡಿ ನೀರನ್ನು ಖರೀದಿಸುವ ಕಾಲವನ್ನು ಎದುರಿಸಬೇಕಾಗಿದೆ. ಮುಂದಿನ ಪೀಳಿಗೆಗೆ ನೀರನ್ನು ಸಂರಕ್ಷಿಣೆ ಮಾಡಬೇಕಾಗಿದೆ. ಕಲುಷಿತ ನೀರಿನ ಮರುಬಳಕೆ, ಮಳೆ ನೀರು ಕೋಯ್ಲು ಮತ್ತು ನೀರಿನ ಸಂರಕ್ಷಣೆಕ್ಕೆ ಬದ್ಧರಾಗಬೇಕಾಗಿದೆ ಎಂದು ಹೇಳಿದರು.
ಕೇಂದ್ರದ ವಿಜ್ಞಾನಿ ಪ್ರೀತು ಅವರು ಮಣ್ಣು ಮತ್ತು ನೀರು ಸಂರಕ್ಷಣೆ ಕುರಿತು ಸಮಗ್ರ ಮಾಹಿತಿ ನೀಡಿದರು. ಕೇಂದ್ರದ ವಿಜ್ಞಾನಿ ಡಾ. ದಿನೇಶ್ ಸಮಗ್ರ ಬೇಸಾಯ ಪದ್ಧತಿಯಲ್ಲಿ ನೀರಿನ ಬಳಕೆಯ ಮಹತ್ವದ ಅರಿವು ಮೂಡಿಸಿದರು. ಡಾ.ರಾಜೇಂದ್ರ ಪ್ರಸಾದ್ ಮಾವಿನಲ್ಲಿ ಸಮಗ್ರ ಕೀಟ ಮತ್ತು ಪೀಡೆ ನಿರ್ವಹಣೆ ಬಗ್ಗೆ ತಿಳಿಸಿದರು.
ಡಾ. ಲತಾ ಆರ್. ಕುಲಕರ್ಣಿ ಹಣ್ಣುಗಳ ಮೌಲ್ಯವರ್ಧನೆ ಕುರಿತು ತಿಳಿಸಿದರು. ಈ ವೇಳೆ ನಡೆದ ಕಿಸಾನ್ ಮೇಳದಲ್ಲಿ ಕೃಷಿ ಪರಿಕರಗಳ ಪ್ರದರ್ಶನ ಮಾಡಲಾಯಿತು. ರಾಮನಗರ ಜಿಲ್ಲೆಯ ಜಂಟಿ ಕೃಷಿ ನಿರ್ದೇಶಕ ಅಶೋಕ್ ಮಾತನಾಡಿದರು.
ಕೃಷಿ ಇಲಾಖೆಯ ಆತ್ಮ ಯೋಜನೆಯ ಉಪ ಯೋಜನಾ ಅಧಿಕಾರಿ ಕಿರಣ್, ರಾಜಶೇಖರ್ ಮತ್ತು ಯೋಜನಾ ಸಹಾಯಕ ಶ್ಯಾಮಸುಂದರ್ ಮತ್ತು ರಂಜಿತ್ ಸೇರಿದಂತೆ ವಿವಿಧ ಇಲೆಖೆ ಅಧಿಕಾರಿಗಳು, ರೈತರು ಭಾಗವಹಿಸಿದ್ದರು.