Advertisement

ಆಮಿಷಗಳನ್ನು ನಂಬಲೇಬಾರದು ಸೈಬರ್‌ ವಂಚನೆ ಹೆಚ್ಚಳ

07:54 AM Sep 12, 2017 | |

ಡಿಜಿಟಲ್‌ ಇಂಡಿಯಾ ಜನಪ್ರಿಯಗೊಳಿಸಲು ನಡೆಸಿದ ಪ್ರಯತ್ನವನ್ನು ಸೈಬರ್‌ ಸುರಕ್ಷೆಯನ್ನು ಜನಪ್ರಿಯಗೊಳಿಸಲು ಮಾಡಿಲ್ಲ.

Advertisement

ಕೆಲ ಸಮಯದ ಹಿಂದೆ ಮುಂಬಯಿಯ ಕೆಲವು ಮಂದಿಯ ಬ್ಯಾಂಕ್‌ ಖಾತೆಯಿಂದ ಅವರಿಗೆ ಅರಿವಿಲ್ಲದಂತೆ ಹಣ ಮಾಯವಾಗತೊಡಗಿತು. ತನಿಖೆಗೆ ಇಳಿದ ಪೊಲೀಸರಿಗೆ ಆರಂಭದಲ್ಲಿ ಇದು ಬಹಳ ಜಿಗುಟು ಪ್ರಕರಣವಾಗಿ ಕಾಣಿಸತೊಡಗಿತು. ಏಕೆಂದರೆ ಹಣ ಕಳೆದುಕೊಂಡವರು ಆನ್‌ಲೈನ್‌ ವಹಿವಾಟು ಮಾಡುವಾಗ ಎಲ್ಲ ಸುರಕ್ಷಾ ಪ್ರಕ್ರಿಯೆಗಳನ್ನು ಪಾಲಿಸಿದ್ದರು. ಆದರೂ ಅದು ಹೇಗೋ ಅವರ ಬ್ಯಾಂಕ್‌ ಖಾತೆಯ ಪಾಸ್‌ವರ್ಡ್‌ ವಂಚಕರಿಗೆ ಸಿಕ್ಕಿ ಹಣ ಲಪಟಾಯಿಸಲಾಗಿತ್ತು. ತನಿಖೆ ಮುಂದುವರಿದಂತೆ ಬೆಚ್ಚಿ ಬೀಳಿಸುವ ಅಂಶವೊಂದು ಪತ್ತೆಯಾಯಿತು. ಅವರು ಮೋಸ ಹೋದದ್ದು ಕೆಲವು ಮಾಮೂಲು ಹೊಟೇಲು ಸಪ್ಲಾಯರ್‌ಗಳಿಂದ. ಹೊಟೇಲ್‌ಗೆ ಹೋದ ಅವರು ತಿಂಡಿ ತಿಂದಾದ ಬಳಿಕ ಬಿಲ್‌ ಪಾವತಿಸಲು ಕಾರ್ಡ್‌ಗಳನ್ನು ಸಪ್ಲಾಯರ್‌ಗಳ ಕೈಗೆ ಕೊಟ್ಟು ಜತೆಗೆ ಪಿನ್‌ ನಂಬರ್‌ ಕೂಡ ಹೇಳಿದ್ದರು. ಸಪ್ಲಾಯರ್‌ಗಳು ಕಾರ್ಡ್‌ ಕ್ಲೋನ್‌ ಮಾಡಿ ಪಿನ್‌ ನಂಬರ್‌ ಬರೆದಿಟ್ಟುಕೊಂಡು ಅನಂತರ ಖಾತೆಯಿಂದ ಹಣ ಲಪಟಾಯಿಸಿದ್ದಾರೆ. ಒಂದು ವ್ಯವಸ್ಥಿತ ಜಾಲವೇ ಇದರ ಹಿಂದೆ ಕಾರ್ಯಾಚರಿಸುತ್ತಿತ್ತು. ಸಪ್ಲಾಯರ್‌ಗಳ ಮೇಲಿಟ್ಟ ನಂಬಿಕೆಯೇ ಅವರಿಗೆ ಮುಳುವಾಯಿತು. ಈ ರೀತಿಯ ವಂಚನೆಗಳು ಈಗ ದಿನಂಪ್ರತಿ ಎಂಬಂತೆ ನಡೆಯುತ್ತಿರುತ್ತವೆ. ಕಳೆದ ಬರೀ ಆರು ತಿಂಗಳ ಅವಧಿಯಲ್ಲಿ ಸುಮಾರು 27,000 ಸೈಬರ್‌ ವಂಚನೆ ಪ್ರಕರಣಗಳು ದಾಖಲಾಗಿವೆ! 

ಕಳೆದ ನವಂಬರ್‌ನಲ್ಲಿ ಕಪ್ಪುಹಣ ಬಯಲಿಗೆಳೆಯಲು ಹಾಗೂ ಡಿಜಿಟಲ್‌ ವ್ಯವಹಾರಗಳಿಗೆ ಉತ್ತೇಜನ ನೀಡುವ ಉದ್ದೇಶದಿಂದ 500 ಮತ್ತು 1000 ರೂ. ನೋಟುಗಳನ್ನು ರದ್ದುಗೊಳಿಸಿದ ಬಳಿಕ ಸೈಬರ್‌ ವಂಚನೆ ಪ್ರಕರಣಗಳು ಹೆಚ್ಚಾಗಿವೆ ಎನ್ನುವುದನ್ನು ಕೇಂದ್ರ ಮಾಹಿತಿ ತಂತ್ರಜ್ಞಾನ ಸಚಿವಾಲಯವೇ ಬಹಿರಂಗಪಡಿಸಿದೆ. ನೋಟು ರದ್ದುಗೊಳಿಸಿದ ಬಳಿಕ ಡಿಜಿಟಲ್‌ ವ್ಯವಹಾರಗಳನ್ನು ಜನಪ್ರಿಯಗೊಳಿಸಲು ಸರಕಾರವೇ ಅಭಿವೃದ್ಧಿ ಪಡಿಸಿದ ಭೀಮ್‌ ಆ್ಯಪ್‌ ಹಾಗೂ ಖಾಸಗಿ ವಲಯದ ಪೇಟಿಎಂ ಸೇರಿದಂತೆ ಯಾವ ಆನ್‌ಲೈನ್‌ ಮಾಧ್ಯಮಗಳು ಸಂಪೂರ್ಣ ಸುರಕ್ಷಿತವಲ್ಲ ಎಂಬುದನ್ನು ಅಧ್ಯಯನಗಳು ತಿಳಿಸುತ್ತಿವೆ. 2020ರೊಳಗೆ ದೇಶದಲ್ಲಿ 175 ದಶಲಕ್ಷ ಇ-ಶಾಪಿಂಗ್‌ ಮಾಡುವವರು ಇರುತ್ತಾರೆ. ಈಗಾಗಲೇ ಸುಮಾರು 470 ದಶಲಕ್ಷ ಇಂಟರ್‌ನೆಟ್‌ ಬಳಕೆದಾರರು ದೇಶದಲ್ಲಿದ್ದಾರೆ. ಇ-ಕಾಮರ್ಸ್‌ ವೆಬ್‌ಸೈಟ್‌ ಮತ್ತು ಆ್ಯಪ್‌ಗ್ಳು ಮೂಲಕ ಖರೀದಿ ಮಾಡುವುದು ಅತ್ಯಂತ ಕ್ಷಿಪ್ರವಾಗಿ ಅಭಿವೃದ್ಧಿ ಹೊಂದುತ್ತಿರುವ ವ್ಯವಹಾರ. ಡಿಜಿಟಲ್‌ ವಹಿವಾಟು ಅಧಿಕವಾದಂತೆ ಸೈಬರ್‌ ವಂಚನೆಗಳು ಹೆಚ್ಚುತ್ತಿರುವುದು ಸಹಜ. ನಗದುರಹಿತ ವಹಿವಾಟಿಗೆ ಅಗತ್ಯವಿರುವ ಸುರಕ್ಷಾ ವ್ಯವಸ್ಥೆಗಳನ್ನು ಅಳವಡಿಸಿಕೊಳ್ಳದೆ ಡಿಜಿಟಲ್‌ ವ್ಯವಹಾರಗಳನ್ನು ಅವಸರದಲ್ಲಿ ಜನಪ್ರಿಯಗೊಳಿಸಲು ಮುಂದಾಗಿರುವುದರ ಪರಿಣಾಮವಿದು. 

ಈಗಲೂ ದೇಶದಲ್ಲಿ ಸಾಂಪ್ರದಾಯಿಕವಾದ ಕಂಪ್ಯೂಟರ್‌ ವ್ಯವಸ್ಥೆಯನ್ನೇ ಬಳಸುತ್ತಿದ್ದೇವೆ, ಅದೇ ಹಳೇ ಸಾಫ್ಟ್ವೇರ್‌ ಮತ್ತು ಪುರಾತನ ಹಾರ್ಡ್‌ವೇರ್‌ ಬಳಕೆಯಲ್ಲಿವೆ. ಜಗತ್ತಿನೆಲ್ಲೆಡೆ ತಿರಸ್ಕೃತವಾಗಿರುವ ಕಂಪ್ಯೂಟರ್‌ ಸಿಸ್ಟಮ್‌ ಭಾರತಕ್ಕೆ ಬರುತ್ತಿದೆ. ಹೊಸ ಮಾದರಿಯ ವೈರಸ್‌ ದಾಳಿಗಳನ್ನು ತಡೆಯುವ ಸಾಮರ್ಥ್ಯ ಈ ಕಂಪ್ಯೂಟರ್‌ಗಳಿಗಿಲ್ಲ. ಹೀಗಾಗಿ ಸೈಬರ್‌ ವಂಚಕರಿಗೆ ಭಾರತದ ಗ್ರಾಹಕರು ಸುಲಭ ತುತ್ತಾಗುತ್ತಿದ್ದಾರೆ. ಜಿಎಸ್‌ಟಿ ಜಾರಿಯಾದ ಬಳಿಕ ಮಾಮೂಲು ಕಿರಾಣಿ ಅಂಗಡಿ ಮತ್ತು ಹೊಟೇಲುಗಳಲ್ಲೂ ಕಂಪ್ಯೂಟರ್‌ ಬಳಕೆ ಅನಿವಾರ್ಯವಾಗಿದೆ. ಆದರೆ ಡಿಜಿಟಲ್‌ ಇಂಡಿಯಾ ಕಾರ್ಯಕ್ರಮವನ್ನು ಜನಪ್ರಿಯಗೊಳಿಸಲು ನಡೆಸಿದಷ್ಟು ಪ್ರಯತ್ನವನ್ನು ಸರಕಾರ ಸೈಬರ್‌ ಸುರಕ್ಷೆಯನ್ನು ಜನಪ್ರಿಯಗೊಳಿಸಲು ಮಾಡಿಲ್ಲ. ಈ ವಿಚಾರದಲ್ಲಿ ಜನಸಾಮಾನ್ಯರಿನ್ನೂ ಅನರಕ್ಷರಸ್ಥರಾಗಿಯೇ ಉಳಿದಿದ್ದಾರೆ. ಆಧಾರ್‌ ಲಿಂಕಿಂಗ್‌, ಬಯೋಮೆಟ್ರಿಕ್‌ ಎಂಟ್ರಿ ಇಂತಹ ಸಂದರ್ಭಗಳೆಲ್ಲ ಹೇಳಿಕೊಟ್ಟ ಸಿದ್ಧ ಮಾದರಿಯೊಂದನ್ನು ಅನುಸರಿಸುತ್ತಾರೆಯೇ ಹೊರತು ಅದರ ಸುರಕ್ಷತೆಯ ಬಗ್ಗೆ ಯಾವ ಅರಿವು ಇರುವುದಿಲ್ಲ. 

ಕದ್ದು ತಂದ ಸಾಫ್ಟ್ವೇರ್‌ಗಳನ್ನು ಅಳವಡಿಸುವ ಚಾಳಿ ಬಿಟ್ಟರೆ ಅರ್ಧದಷ್ಟು ಸೈಬರ್‌ ವಂಚನೆ ತಡೆಗಟ್ಟಬಹುದು. ಕಾಲಕಾಲಕ್ಕೆ ಸಾಫ್ಟ್ ವೇರ್‌ ಪರಿಷ್ಕರಣೆಗೊಳಪಡಿಸುವ ಅಭ್ಯಾಸ ಮಾಡಿಕೊಳ್ಳಬೇಕು. ಲಾಟರಿ ಗೆದ್ದಿದ್ದೀರಿ, ಶ್ರೀಮಂತ ವ್ಯಕ್ತಿ ನಿಮಗಾಗಿ ಕೋಟಿಗಟ್ಟಲೆ ಸಂಪತ್ತು ಬಿಟ್ಟು ಹೋಗಿದ್ದಾನೆ ಎಂಬಿತ್ಯಾದಿ ಆಮಿಷಗಳನ್ನು ನಂಬಲೇಬಾರದು. ಪ್ರತಿಯೊಬ್ಬರಿಗೂ ಕನಿಷ್ಠ ಡೆಬಿಟ್‌ /ಕ್ರೆಡಿಟ್‌ ಕಾರ್ಡ್‌ಗಳನ್ನು ಬಳಸುವಾಗ ವಹಿಸಬೇಕಾಗಿರುವ ಸಾಮಾನ್ಯ ಮುನ್ನೆಚ್ಚರಿಕೆಗಳನ್ನು ಹೇಳಿಕೊಡಬೇಕು. ರಾಷ್ಟ್ರೀಯ ಡಿಜಿಟಲ್‌ ಸಾಕ್ಷರತೆ ಕಾರ್ಯಕ್ರಮದಲ್ಲಿ ಈ ಮೂಲ ಅಂಶಗಳೇ ಇಲ್ಲ ಎನ್ನುವುದು ಈ ವಿಚಾರದಲ್ಲಿ ನಾವೆಷ್ಟು ಹಿಂದೆ ಇದ್ದೇವೆ ಎನ್ನುವುದನ್ನು ತಿಳಿಸುತ್ತದೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next