ಚಾಮರಾಜನಗರ: ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷ ಸೋತರೆ ಅನ್ನಭಾಗ್ಯ ಯೋಜನೆಯಲ್ಲಿ ಅಕ್ಕಿ ದೊರಕುವುದಿಲ್ಲ ಎಂದು ಕೊಳ್ಳೇಗಾಲದ ಕಾಂಗ್ರೆಸ್ ಪ್ರಚಾರ ಸಂದರ್ಭದಲ್ಲಿ ಜನತೆಗೆ ಸುಳ್ಳು ಹೇಳುತ್ತಿದ್ದಾರೆ ಎಂದು ಮಾಜಿ ಸಚಿವ ಹಾಗೂ ಶಾಸಕ ಎನ್. ಮಹೇಶ್ ಆರೋಪಿಸಿದರು.
ತಾಲೂಕಿನ ಕೋಡಿಉಗನೆ ಗ್ರಾಮದಲ್ಲಿ ಲೋಕಸಭಾ ಬಿಎಸ್ಪಿ ಅಭ್ಯರ್ಥಿ ಡಾ.ಶಿವಕುಮಾರ್ ಪರ ನಡೆದ ಪ್ರಚಾರದ ಸಭೆಯಲ್ಲಿ ಮಾತನಾಡಿ, ಕಾಂಗ್ರೆಸ್ನವರು ಪ್ರಾರಂಭದಿಂದಲೂ ಚುನಾವಣಾ ಸಂದರ್ಭದಲ್ಲಿ ಸುಳ್ಳು ಹೇಳಿಕೊಂಡು ಅಧಿಕಾರ ಹಿಡಿದಿದ್ದಾರೆ. ಈಗಲೂ ಅದೇ ಚಾಳಿಯನ್ನು ಮುಂದುವರಿಸಿದ್ದಾರೆ. ಕಾಂಗ್ರೆಸ್ ಕೊತ್ತಿಗೆ ಜ್ವರ ಬರಿಸುತ್ತದೆ, ನುಚ್ಚಿಗೆ ಮೊಳಕೆ ಬರಿಸುತ್ತದೆ ಎಂದು ಗಾದೆಯ ಮೂಲಕ ವ್ಯಂಗ್ಯವಾಡಿದರು.
ಸರ್ಕಾರ ಇರಲಿ ಅಥವಾ ಸರ್ಕಾರ ಇಲ್ಲದೆ ಇರಲಿ ಹಾಗೂ ಶಾಸಕರು, ಸಚಿವರು ಇಲ್ಲದಿದ್ದರೂ ಸರ್ಕಾರದ ಯೋಜನೆಗಳು ಜಾರಿಯಾಗುತ್ತದೆ. ಯಾವುದೇ ಪಕ್ಷ ಸೋಲಲಿ, ಯಾವುದೇ ಪಕ್ಷ ಗೆಲ್ಲಲಿ ಜನತೆಗೆ ಅಕ್ಕಿ ಬಂದೇ ಬರುತ್ತದೆ. ಕಾಂಗ್ರೆಸ್ನವರು ನೀಡುವ ಇಲ್ಲಸಲ್ಲದ ಹೇಳಿಕೆ ಜನತೆ ತಲೆಕೆಡಿಸಿಕೊಳ್ಳಬೇಡಿ ಎಂದು ಹೇಳಿದರು.
ಕಾಂಗ್ರೆಸ್ ಮತ್ತು ಬಿಜೆಪಿ ಅಭ್ಯರ್ಥಿಗಳಾದ ಧ್ರುವನಾರಾಯಣ ಹಾಗೂ ವಿ.ಶ್ರೀನಿವಾಸಪ್ರಸಾದ್ ಅವರೇ ನಿಮಗೆ ವಯಸ್ಸಾಗಿದ್ದು, ಸಾಕಷ್ಟು ಅಭಿವೃದ್ಧಿ ಕೆಲಸ ಮಾಡಿದ್ದೀರಿ. ಕ್ಷೇತ್ರದಲ್ಲಿ ಅಪೂರ್ಣಗೊಂಡಿರುವ ಕೆಲಸವನ್ನು ಪಕ್ಷದ ಅಭ್ಯರ್ಥಿ ಡಾ.ಶಿವಕುಮಾರ್ ಮಾಡಲಿದ್ದಾರೆ. ನಿಮ್ಮನ್ನು ಟೀಕಿಸುತ್ತಿಲ್ಲ, ಶಿವಕುಮಾರ್ರನ್ನು ಆಶೀರ್ವದಿಸಬೇಕೆಂದು ತಮ್ಮಲ್ಲಿ ಮನವಿ ಮಾಡುತ್ತೇನೆ ಎಂದರು.
ಬಿಎಸ್ಪಿಯಲ್ಲಿ ಬಬ್ಬ ಶಾಸಕ ಗೆದ್ದು ಸಚಿವ ಸ್ಥಾನ ಪಡೆದಿದ್ದೇವೆ: ಬಿಎಸ್ಪಿಯಲ್ಲಿ ಬಬ್ಬ ಶಾಸಕ ಗೆದ್ದು ಸಚಿವರಾಗಿದ್ದು, ಪ್ರಜಾಪ್ರಭುತ್ವದ ಅದ್ಭುತಗಳಲ್ಲಿ ಒಂದಾಗಿದೆ. ಅದೇ ರೀತಿಯಲ್ಲಿ 38 ಸ್ಥಾನಗಳನ್ನು ಗೆದ್ದು ಜೆಡಿಎಸ್ ಪಕ್ಷದಿಂದ ಎಚ್.ಡಿ.ಕುಮಾರಸ್ವಾಮಿ ಮುಖ್ಯಮಂತ್ರಿಯಾದರು. ಅದೇ ಮಾದರಿಯಲ್ಲಿ ಬಿಎಸ್ಪಿ ನಾಯಕಿ ಮಾಯಾವತಿ ಅವರು ಉತ್ತರಪ್ರದೇಶದಲ್ಲಿ 60 ಸ್ಥಾನಗಳನ್ನು ಗೆಲ್ಲುವ ಮೂಲಕ ಪ್ರಧಾನಿಯಾಗಲಿದ್ದಾರೆ. ಆದರಿಂದ ಚಾಮರಾಜನಗರ ಲೋಕಸಭಾ ಕ್ಷೇತ್ರದಲ್ಲಿ ಪಕ್ಷದ ಅಭ್ಯರ್ಥಿ ಡಾ.ಶಿವಕುಮಾರ್ಗೆ ಮತದಾರರು ಹೆಚ್ಚಿನ ಮತ ಹಾಕುವ ಮೂಲಕ ಗೆಲ್ಲಿಸಿಕೊಡುವಂತೆ ಮನವಿ ಮಾಡಿದರು.
ಬಿಎಸ್ಪಿ ತಾಲೂಕು ಅಧ್ಯಕ್ಷ ಆಲೂರುಮಲ್ಲು, ನಗರ ಘಟಕ ಅಧ್ಯಕ್ಷ ಚಿನ್ನಸ್ವಾಮಿ, ನಗರಸಭಾ ಸದಸ್ಯ ಪ್ರಕಾಶ್, ಜಿಲ್ಲಾ ಪ್ರಧಾನ ಕಾರ್ಯದರ್ಶಿ ಬ.ಮ.ಕೃಷ್ಣಮೂರ್ತಿ, ಜಿಲ್ಲಾ ಸಮಿತಿ ಸದಸ್ಯ ಬ್ಯಾಡಮೂಡ್ಲುಬಸವಣ್ಣ, ನಿವೃತ್ತ ತಹಶೀಲ್ದಾರ್ ಕೃಷ್ಣಯ್ಯ, ಬಿವಿಎಸ್ ಜಿಲ್ಲಾ ಸಂಯೋಜಕ ಪರ್ವತ್ರಾಜ್, ವಾಸು ಇತರರು ಇದ್ದರು.