Advertisement

ಸೋಲಿಸಬೇಡ, ಗೆಲ್ಲಿಸೇ ಗೆಳತಿ…

11:44 AM Sep 26, 2017 | |

ಮುಂದೊಂದು ದಿನ ಸಂತೋಷ, ಸಮೃದ್ಧ, ಸಂತೃಪ್ತ ಮನುಷ್ಯನಾಗಿ ಬದಲಾಗಬಲ್ಲೆ ಎಂಬ ನಂಬಿಕೆ ನನ್ನಲ್ಲಿದೆ. ಗಳಿಸುವ ಜ್ಞಾನ, ಸಂಪತ್ತು, ಹೆಸರು ಎಲ್ಸವೂ ನಿನ್ನ ಪ್ರೀತಿ ಸಿಗದೆ ನೊಂದ ಹೃದಯಕ್ಕೆ ಸಿಗುವ ಉಡುಗೊರೆ ಎಂದು ಭಾವಿಸಿ ಬದುಕುವೆ…

Advertisement

ಪ್ರೀತಿಯ ಮಾಜಿ ಹೃದಯದೊಡತಿಗೆ…
ಇಂದಿಗೆ ಒಂದು ವರ್ಷವಾಯಿತು ನೀ ನನಗೆ ಆತ್ಮೀಯಳಾಗಿ. ನೀ ಮೊದಲೇ ಪರಿಚಯವಿದ್ದರೂ ಹೃದಯಕ್ಕೆ ಹತ್ತಿರವಾಗಿದ್ದು, ಕೆಲ ತಿಂಗಳ ಹಿಂದಷ್ಟೆ. ಮಿಂಚಿನ ವೇಗದಲ್ಲಿ ಬೆಳೆದ ನಮ್ಮಿಬ್ಬರ ಸಂಬಂಧ ಅಷ್ಟೇ ವೇಗದಲ್ಲಿ ಒಡೆದು ಚೂರಾಯಿತು.

ನಿನ್ನ ಜೊತೆಗೆ ಮೂಡಿದ ಸಲುಗೆ, ಪ್ರೀತಿಗೆ ಜಾಗ ಮಾಡಿಕೊಟ್ಟಿತ್ತು. ದಿನ ಕಳೆದಂತೆ ಜೀವನಕ್ಕೆ ಆಸರೆ ಎಂಬಂತೆ ನೀ ಕಂಡೆ. ಪ್ರಾಣಕ್ಕಿಂತ ಹೆಚ್ಚಾಗಿ ನಾನು ನಿನ್ನ ಪ್ರೀತಿಸಿದೆ, ಬದುಕು ಸಾಗಿದರೆ ನಿನ್ನೊಂದಿಗೆ ಎಂದು ದೃಢ ಸಂಕಲ್ಪ ಮಾಡಿದೆ. ನಿನಗಾಗಿ ಹುಚ್ಚು ಕನಸು ಕಟ್ಟಿ, ಬೆಟ್ಟದಷ್ಟು ಆಸೆ ಹೊತ್ತು ಸಾಗುತ್ತಿದ್ದೆ. ಪ್ರತಿದಿನ, ಪ್ರತಿಕ್ಷಣ ನಿನ್ನ ನೆನಪಲ್ಲೇ ಕಾಲ ಕಳೆಯುತ್ತಿದ್ದೆ. ಅದೆಷ್ಟೂ ಸಾರಿ ನಿನ್ನ ಬಳಿ ಪ್ರೀತಿಯ ವಿಷಯ ಹೇಳಿಕೊಂಡೆ, ಕಣ್ಣೀರಿಟ್ಟು ಬೇಡಿಕೊಂಡೆ. ನೀ ಮಾತ್ರ ಮರು ಮಾತಾಡಲಿಲ್ಲ, ನನ್ನ ಭಾವನೆಗೆ ಸ್ಪಂದಿಸಲಿಲ್ಲ. ಮುಂದೊಂದಿನ ನನ್ನ ಪ್ರೀತಿ ಒಪ್ಪಿ ಬಂದು ನನ್ನ ಸೇರುತ್ತೀಯಾ ಅಂತ ಕಾದೆ, ನಿನ್ನ ಬರುವಿಕೆಗಾಗಿ ಹಾತೊರೆದೆ. ಆದರೆ, ನೀನು ಬರಲೇ ಇಲ್ಲ, ಪ್ರೀತಿಯ ಬಗ್ಗೆ ಹೇಳಲೇ ಇಲ್ಲ.

ನಿನ್ನ ಪ್ರತಿಯೊಂದು ವಿಷಯದ ಬಗ್ಗೆ ವಿಚಾರಿಸುತ್ತಿದ್ದೆ, ಹಗಲಿರುಳು ನಿನ್ನ ನೆನೆದು ಖುಷಿ ಪಡುತ್ತಿದ್ದೆ. ನಿನಗೆ ಯಾವುದೇ ತೊಂದರೆ ಆಗಬಾರದು, ಸಂತೋಷದಿಂದ ಬಾಳಬೇಕು, ನನ್ನ ಪ್ರೀತಿಯನ್ನು ಒಪ್ಪಿಕೊಳ್ಳಬೇಕು ಎಂದು ಸದಾ ಆ ದೇವರಲ್ಲಿ ಪ್ರಾರ್ಥಿಸುತ್ತಿದ್ದೆ. ನಿನಗಾಗಿ ಈ ಜನ್ಮವನ್ನೇ ಮೀಸಲಿಟ್ಟಿದ್ದೆ. ಆದರೆ, ನೀನು ನನ್ನ ಬಗ್ಗೆ ಕೊಂಚವೂ ದಯೆ ತೋರಲಿಲ್ಲ, ಅಲ್ಪವೂ ವಿಚಾರಿಸಲಿಲ್ಲ, ನನ್ನೆಲ್ಲಾ ಭಾವನೆಗಳಿಗೆ ಅಸಹಾಯಕತೆ ತೋರಿಸಿದೆ, ಭವಿಷ್ಯದ ಕನಸುಗಳಿಗೆ ಸಹಕಾರ ನೀಡಲಿಲ್ಲ. ಕರುಳು ಕಿತ್ತುಬಂದರೂ, ಕಣ್ಣೀರು ಧರೆಗಿಳಿದರೂ ನನ್ನ ಕಡೆ ಮುಖ ನೋಡಲಿಲ್ಲ.

ಈಗಲಾದರೂ ಹೇಳು ಗೆಳತಿ? ನನ್ನ ಪ್ರೀತಿಯನ್ನೇಕೆ ಒಪ್ಪಲಿಲ್ಲ? ನನ್ನ ಭಾವನೆಗಳಿಗೇಕೆ ಸ್ಪಂದಿಸಲಿಲ್ಲ? ನಿನ್ನನ್ನು ಸುಖವಾಗಿ ನೊಡಿಕೊಳ್ಳಲು ನನಗಾಗಲ್ವ? ನಿನ್ನ ಕನಸುಗಳಿಗೆ ಸ್ಪಂದಿಸಲು ನನ್ನಿಂದ ಸಾಧ್ಯವಿಲ್ಲವಾ? ಅದೇನೇ ಕಾರಣವಿರಲಿ, ನಿನ್ನ ಪಡೆಯಲಾಗದೆ ಹೃದಯ ಚೂರಾಗಿ ಹೋಯ್ತು. ನಿನಿಲ್ಲದೇ ಬದುಕೋದು ಕಷ್ಟವಾದರೂ ಭವಿಷ್ಯದ ಸಾಧನೆ ಕಣ್ಮುಂದೆ ಕಾಣುತ್ತಿದೆ. ನಾನಂದುಕೊಂಡಿರುವ ಕಾರ್ಯ ಸಾಧಿಸುವ ಅನಿವಾರ್ಯವಿದೆ, ಗುರಿ ತಲುಪಬೇಕಾದರೆ ಕಠಿಣ ಪರಿಶ್ರಮ ಪಡಬೇಕಾಗಿದೆ. ನಿನ್ನ ತಿರಸ್ಕಾರದ ಭಾವ ನನ್ನ°ನ್ನು ಚುಚ್ಚಿ ಕೊಲ್ಲುತ್ತಿದ್ದರೂ ಅನಿವಾರ್ಯವಾಗಿ ಮುನ್ನುಗ್ಗಬೇಕಾಗಿದೆ.

Advertisement

ನೀನೇ ಜಗತ್ತು, ನಿನ್ನಿಂದಾನೇ ನನ್ನ ಬದುಕು ಎಂದವನಿಗೆ, ಅರಗಿಸಿಕೊಳ್ಳಲಾಗದ ಘಟನೆ ನಡೆದು ಹೋಗಿದೆ. ನಿನ್ನ ಪಡೆಯಲು ಸೋತು ಹೋದ ನಾನು ಭವಿಷ್ಯದಲ್ಲಿ ಸೋಲಬಾರದು. ಮುಂದೊಂದು ದಿನ ಸಂತೋಷ, ಸಮೃದ್ಧ, ಸಂತೃಪ್ತ ಮನುಷ್ಯನಾಗಿ ಬದಲಾಗಬಲ್ಲೆ ಎಂಬ ನಂಬಿಕೆ ನನ್ನಲ್ಲಿದೆ. ಗಳಿಸುವ ಜ್ಞಾನ, ಸಂಪತ್ತು, ಹೆಸರು ಎಲ್ಲವೂ ನಿನ್ನ ಪ್ರೀತಿ ಸಿಗದೇ ನೊಂದ ಹೃದಯಕ್ಕೆ ಸಿಗುವ ಉಡುಗೊರೆ ಎಂದು ಭಾವಿಸಿ ಬದುಕುವೆ. ಕನಸಲ್ಲಿಯೂ, ಮನಸಲ್ಲಿಯೂ, ಮತ್ತೆ ಮರಳಿ ಬರಬೇಡ. ನನ್ನ ಬದುಕಿನಲ್ಲಿ ನಿನ್ನ ಸ್ಥಾನ ಸಾಧನೆಯಾಗಿ ಮಾರ್ಪಾಡಾಗಲಿ. ಜೀವನಕ್ಕೆ ಬೆಲೆ ಸಿಗುವಂತಾಗಲಿ. ನೀ ದೂರವಿದ್ದೇ, ನನ್ನನ್ನು ಗೆಲ್ಲಿಸು…

ವೀರೇಶ ದೊಡಮನಿ, ಬಾದಾಮಿ

Advertisement

Udayavani is now on Telegram. Click here to join our channel and stay updated with the latest news.

Next