Advertisement

ಸಾಂಕ್ರಮಿಕ ರೋಗ ಹರಡುವಿಕೆ ಭೀತಿ ಬೇಡ: ಡಿಎಚ್‌ಒ

01:59 PM Jun 10, 2017 | Team Udayavani |

ಮೈಸೂರು: ಡೆಂಘೀ, ಚಿಕುನ್‌ ಗುನ್ಯಾ ಸೇರಿದಂತೆ ಜಿಲ್ಲೆಯಲ್ಲಿ ಯಾವುದೇ ರೀತಿಯ ಸಾಂಕ್ರಮಿಕ ರೋಗ ಹರಡದಂತೆ ಮುಂಜಾಗ್ರತಾ ಕ್ರಮಗಳನ್ನು ಕೈಗೊಳ್ಳಲಾಗಿದ್ದು, ಸಾರ್ವಜನಿಕರು ಆತಂಕ ಪಡುವ ಅಗತ್ಯವಿಲ್ಲ ಎಂದು ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ.ಬಸವರಾಜು ಹೇಳಿದರು.

Advertisement

ನಗರದಲ್ಲಿ ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಡೆಂಘೀ ಹಾಗೂ ಚಿಕುನ್‌ ಗುನ್ಯಾ ರೋಗಿಗಳಿಗೆ ಯಾವುದೇ ನಿರ್ದಿಷ್ಟ ಔಷಧಿ ಅಥವಾ ಲಸಿಕೆ ಇರುವುದಿಲ್ಲ. ರೋಗ ಲಕ್ಷಣಗಳಿಗನುಸಾರವಾಗಿ ವೈದ್ಯರಿಂದ ಸೂಕ್ತ ಚಿಕಿತ್ಸೆ ಪಡೆಯಬಹುದು. ಜಿಲ್ಲೆಯ ಎಲ್ಲಾ ಸರ್ಕಾರಿ ಆಸ್ಪತ್ರೆ ಹಾಗೂ ಪ್ರಾಥಮಿಕ ಆರೋಗ್ಯ ಕೇಂದ್ರಗಳಲ್ಲಿ ಉಚಿತ ಚಿಕಿತ್ಸೆ ದೊರೆಯಲಿದೆ ಎಂದರು.

ವಾತಾವರಣದಲ್ಲಿ ಬದಲಾವಣೆಯಿಂದಾಗಿ ವೈರಾಣು ಜ್ವರ ಕಾಣಿಸಿಕೊಳ್ಳುವುದು ಸಾಮಾನ್ಯ. ಮೂರ್‍ನಾಲ್ಕು ದಿನಗಳಲ್ಲಿ ಸರಿ ಹೋಗುತ್ತದೆ. ಇದಕ್ಕಾಗಿ ಗಾಬರಿ ಆಗಬೇಕಿಲ್ಲ. ಜನರು ಸಮೂಹ ಸನ್ನಿಗೆ ಒಳಗಾಗಬೇಕಿಲ್ಲ ಎಂದು ತಿಳಿಸಿದರು. ಜಿಲ್ಲಾ ರೋಗವಾಹಕ ಆಶ್ರಿತ ರೋಗಗಳ ನಿಯಂತ್ರಣಾಧಿಕಾರಿ ಡಾ.ಚಿದಂಬರಂ ಮಾತನಾಡಿ, 2017ರ ಜನವರಿಯಿಂದ ಏಪ್ರಿಲ್‌ ವರೆಗೆ ಯಾವುದೇ ಡೆಂಘೀ ಪ್ರಕರಣ ವರದಿಯಾಗಿಲ್ಲ. ಮೇ ತಿಂಗಳಲ್ಲಿ 45 ಪ್ರಕರಣಗಳು ಧೃಡಪಟ್ಟಿವೆ ಎಂದರು.

2013ರಲ್ಲಿ ಡೆಂಘೀ ಪೀಡಿತ ಮೂವರು ಸಾವನ್ನಪ್ಪಿರುವುದನ್ನು ಹೊರತುಪಡಿಸಿದರೆ ಈವರೆಗೆ ಡೆಂಘೀಯಿಂದ ಜಿಲ್ಲೆಯಲ್ಲಿ ಯಾವುದೇ ಸಾವು ಸಂಭವಿಸಿಲ್ಲ. 2013ರಲ್ಲಿ 334 ಪ್ರಕರಣ, 2014ರಲ್ಲಿ 66, 2015ರಲ್ಲಿ 382, 2016ರಲ್ಲಿ 582 ಪ್ರಕರಣ ಹಾಗೂ 2017ರಲ್ಲಿ ಈವರೆಗೆ 112 ಡೆಂಘೀ ಪ್ರಕರಣಗಳು ಧೃಡಪಟ್ಟಿವೆ ಎಂದು ತಿಳಿಸಿದರು.

ಡೆಂಘೀ ಮತ್ತು ಚಿಕುನ್‌ ಗುನ್ಯಾ ರೋಗಗಳ ತಡೆಗಟ್ಟುವಿಕೆ ಹಾಗೂ ನಿಯಂತ್ರಣಕ್ಕಾಗಿ ಇಲಾಖೆವತಿಯಿಂದ ಮನೆ ಮನೆಗೆ ಭೇಟಿ ನೀಡಿ ಈಡಿಸ್‌ ಲಾರ್ವ ಸಮೀಕ್ಷೆ ಕಾರ್ಯವನ್ನು ನಿರಂತರವಾಗಿ ಮಾಡಲಾಗುತ್ತಿದೆ. ಶಂಕಿತ ಡೆಂಘೀ, ಚಿಕುನ್‌ ಗುನ್ಯಾ ಜ್ವರ ಪ್ರಕರಣಗಳಿಂದ ರಕ್ತ ಮಾದರಿ ಪರೀಕ್ಷೆಯನ್ನು ಆರೋಗ್ಯ ಇಲಾಖೆಯ ಸೆಂಟಿನಲ್‌ ಸರ್ವೇಲೆನ್ಸ್‌ ಪ್ರಯೋಗಾಲಯದಲ್ಲಿ ಉಚಿತವಾಗಿ ಮಾಡಲಾಗುತ್ತಿದೆ.

Advertisement

ಡೆಂಘೀ ರೋಗ ಹರಡುವ ಈಡಿಸ್‌ ಈಜಿಫೆ ಹೆಣ್ಣು ಸೊಳ್ಳೆಗಳ ನಿಯಂತ್ರಣಕ್ಕೆ ಗ್ರಾಪಂ ಹಾಗೂ ಮೈಸೂರು ಮಹಾ ನಗರಪಾಲಿಕೆಯ ಸಹಕಾರದೊದಿಗೆ ಧೂಮೀಕರಣ ಮಾಡಲಾಗುತ್ತಿದೆ. ಸಾರ್ವಜನಿಕರಿಗೆ ಕರಪತ್ರ ವಿತರಣೆ, ಬಿತ್ತಿಪತ್ರ, ಗುಂಪುಸಭೆ ಮತ್ತು ಸಂವಾದಗಳ ಮೂಲಕ ಆರೋಗ್ಯ ಅರಿವು ಶಿಕ್ಷಣ, ಸ್ವಯಂ ರಕ್ಷಣಾ ವಿಧಾನಗಳ ಬಗ್ಗೆ ತಿಳಿವಳಿಕೆ ನೀಡಲಾಗುತ್ತಿದೆ ಎಂದರು.

2020ಕ್ಕೆ ಮೈಸೂರು ಜಿಲ್ಲೆಯನ್ನು ಮಲೇರಿಯಾ ಮುಕ್ತ ಜಿಲ್ಲೆಯಾಗಿಸುವ ಕಾರ್ಯಕ್ಕೆ ಜಿಲ್ಲೆಯ ಎಲ್ಲಾ ಸಾರ್ವಜನಿಕರು, ನಾಗರಿಕರು, ಸಮಾಜ ಸೇವಕರು, ಸ್ಥಳೀಯ ಜನಪ್ರತಿನಿಧಿಗಳ ಸಹಕಾರಕೋರಲಾಗಿದೆ ಎಂದು ತಿಳಿಸಿದರು. ಜಿಲ್ಲಾ ಶಸ್ತ್ರಚಿಕಿತ್ಸಕ ಡಾ.ಪಶುಪತಿ ಸೇರಿದಂತೆ ಹಲವರು ಇದ್ದರು.

Advertisement

Udayavani is now on Telegram. Click here to join our channel and stay updated with the latest news.

Next