Advertisement

ವಿಧಾನಸಭೆ ವಿಸರ್ಜಿಸಿ ಜನರ ಮುಂದೆ ಹೋಗೋಣ ಬನ್ನಿ; ಬಿಜೆಪಿಗೆ ಡಿಕೆಶಿ ಸವಾಲ್

05:50 PM Jul 25, 2021 | Team Udayavani |

ಬೆಂಗಳೂರು: ‘ರಾಜ್ಯದ ಜನ ನೆರೆ, ಕೋವಿಡ್ ನಿಂದ ತತ್ತರಿಸಿ ಜೀವ ಹಾಗೂ ಜೀವನ ಉಳಿಸಿಕೊಳ್ಳಲು ಪರದಾಡುತ್ತಿದ್ದಾರೆ. ಈ ಸಂದರ್ಭದಲ್ಲಿ ಅವರ ರಕ್ಷಣೆ ಮಾಡಲು ಸರ್ಕಾರ ವಿಫಲವಾಗಿದೆ. ಹೀಗಾಗಿ ವಿಧಾನಸಭೆ ವಿಸರ್ಜಿಸಿ ಜನರ ಮುಂದೆ ಹೋಗೋಣ, ಅವರ ತೀರ್ಪಿನ ಪ್ರಕಾರ ಹೊಸ ಆಡಳಿತ ಬರಲಿ’ ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಅವರು ಬಿಜೆಪಿ ಸರಕಾರಕ್ಕೆ ಸವಾಲೆಸೆದಿದ್ದಾರೆ.

Advertisement

ಬೆಂಗಳೂರಿನ ಸದಾಶಿವನಗರ ನಿವಾಸದಲ್ಲಿ ಭಾನುವಾರ ಕೋವಿಡ್ 19 ರಾಜ್ಯಮಟ್ಟದ ಕಾಂಗ್ರೆಸ್ ಮೇಲ್ವಿಚಾರಣಾ ಸಮಿತಿ ವರದಿಯನ್ನು ಸ್ವೀಕರಿಸಿದ ನಂತರ ಮಾಧ್ಯಮಗಳ ಜತೆ ಮಾತನಾಡಿದ ಡಿ.ಕೆ. ಶಿವಕುಮಾರ್ ಅವರು ಹೇಳಿದ್ದಿಷ್ಟು:

‘ಮುಖ್ಯಮಂತ್ರಿಗಳು ನೆರೆ ಪರಿಶೀಲನೆಗೆ ಇಂದು ಪ್ರವಾಸ ಮಾಡುತ್ತಿದ್ದಾರೆ. ಅವರ ಸ್ಥಾನ ಏನಾಗುತ್ತದೋ ಆ ಬಗ್ಗೆ ನಾವು ತಲೆ ಕೆಡಿಸಿಕೊಳ್ಳುವುದಿಲ್ಲ. ಕಳೆದ ಮೂರು ವರ್ಷಗಳಿಂದ ಈ ರೀತಿ ಮಳೆ-ನೆರೆ ಬರುತ್ತಿದೆ. ನಮ್ಮ ಪಕ್ಷದಿಂದ  ಆರ್.ವಿ. ದೇಶಪಾಂಡೆ ಹಾಗೂ ಸತೀಶ್ ಜಾರಕಿಹೊಳಿ ಅವರ ನೇತೃತ್ವದ ತಂಡಗಳು ನೆರೆ ಪರಿಶೀಲನೆಗೆ ತೆರಳಿವೆ. ಬೆಳಗಾವಿಯಲ್ಲಿ ನಿಮ್ಮದೇ ಪಕ್ಷದ 10 ಕ್ಕೂ ಹೆಚ್ಚು ಶಾಸಕರಿದ್ದಾರೆ. ಸರ್ಕಾರವೂ ನಿಮ್ಮದೇ ಇದೆ. ಆದರೂ ಕಳೆದ ವರ್ಷದ ನೆರೆಗೆ ಪರಿಹಾರ ನೀಡಲು ನಿಮಗೆ ಸಾಧ್ಯವಾಗಿಲ್ಲ ಏಕೆ? ಮನೆ ಕಟ್ಟಿಕೊಡಲು ಆಗಿಲ್ಲ ಯಾಕೆ? ಈ ವರ್ಷದ ನೆರೆ ಪಕ್ಕಕ್ಕಿಡಿ, ಒಂದೇ ದಿನದಲ್ಲಿ ಮ್ಯಾಜಿಕ್ ಮಾಡಲು ಸಾಧ್ಯವಿಲ್ಲ. ಕಳೆದ ಎರಡು ವರ್ಷಗಳ ನೆರೆ ಸಂತ್ರಸ್ತರಿಗೆ ಪರಿಹಾರ ಕೊಟ್ಟಿಲ್ಲ ಯಾಕೆ? ಇದನ್ನು ಕೊಡಲು ಆಗಿಲ್ಲ ಎಂದರೆ ಈ ಸರ್ಕಾರ ಯಾಕಿರಬೇಕು? ಯಾವ ಕಾರಣಕ್ಕೆ ನಿಮಗೆ ಅಧಿಕಾರ ಬೇಕು?

ಈ ಹಿಂದೆ ಪಶ್ಚಿಮ ಬಂಗಾಳ ಮತ್ತಿತರ ರಾಜ್ಯಗಳಲ್ಲಿ ನೆರೆ ಬಂದಾಗ ಪ್ರಧಾನ ಮಂತ್ರಿಗಳು ಅಲ್ಲಿಗೆ ಭೇಟಿ ನೀಡಿದ್ದರು. ಆದರೆ ಕರ್ನಾಟಕಕ್ಕೆ ಯಾಕೆ ಬರಲಿಲ್ಲ?ನಮ್ಮ ರಾಜ್ಯಕ್ಕೆ ಯಾಕೆ ಸೂಕ್ತ ಪರಿಹಾರ ನೀಡಲಿಲ್ಲ? ಕೇಂದ್ರ ಸರ್ಕಾರ ನಮ್ಮ ರಾಜ್ಯಕ್ಕೆ ಅನ್ಯಾಯ ಮಾಡುತ್ತಿದೆ? ಆದರೂ ಬಿಜೆಪಿ ಸಂಸದರು ಯಾಕೆ ಒತ್ತಡ ತರಲಿಲ್ಲ? ಲಸಿಕೆ ವಿಚಾರದಲ್ಲಿ ಗುಜರಾತಿಗೆಷ್ಟು ಕೊಟ್ಟಿದ್ದಾರೆ? ನಮ್ಮ ರಾಜ್ಯಕ್ಕೆಷ್ಟು ಕೊಟ್ಟಿದ್ದಾರೆ? ರಾಜ್ಯದಿಂದ 25 ಸಂಸದರನ್ನು ಗೆಲ್ಲಿಸಿ ಕಳುಹಿಸಿಲ್ಲವೇ? ಇದೇನಾ ಬಿಜೆಪಿ, ಎನ್ ಡಿಎ ಸಂಸ್ಕೃತಿ?

ಬಿಜೆಪಿಗೆ ಅಧಿಕಾರ ನಡೆಸಲು, ಜನರ ಸೇವೆ ಮಾಡಲು ಅರ್ಹತೆ ಇಲ್ಲ ಎಂಬುದಕ್ಕೆ ಇದೇ ಸಾಕ್ಷಿ. ಅಭಿವೃದ್ಧಿ ವಿಚಾರ ಪಕ್ಕಕ್ಕಿಡಿ. ಜನ ಕಷ್ಟದಲ್ಲಿರುವಾಗ, ಆಸ್ತಿ, ಜೀವ ಹಾಗೂ ಜೀವನ ಕಳೆದುಕೊಳ್ಳುತ್ತಿರುವಾಗ ಈ ಸರಕಾರ ಸ್ಪಂದಿಸಲಿಲ್ಲ. ಸಂಪೂರ್ಣ ವಿಫಲವಾಗಿದೆ.

Advertisement

ಯಡಿಯೂರಪ್ಪ ಅವರು ಅಧಿಕಾರ ತೆಗೆದುಕೊಂಡ ದಿನದಿಂದ ರಾಜಕೀಯ ಅನಿಶ್ಚಿತತೆ ಇದೆ ಎಂದು ಅವರೇ ಹೇಳಿದ್ದಾರೆ. ಅದೇ ಅವರ ಆಡಳಿತ. ಅದೇ ಜನರಿಗೆ ಕೊಟ್ಟಿರುವ ಕೊಡುಗೆ.

ಸರ್ಕಾರ ಮಾಡಲಾಗದ್ದನ್ನು ಕಾಂಗ್ರೆಸ್ ಮಾಡಿದೆ:

ಕೋವಿಡ್ ಸಮಯದಲ್ಲಿ ಕಾಂಗ್ರೆಸ್ ಪಕ್ಷದ ಕಾರ್ಯವನ್ನು ಎಲ್ಲರೂ ಗಮನಿಸಿದ್ದಾರೆ. ಕೋವಿಡ್ ಆರಂಭವಾದಾಗ ಪಕ್ಷದ ಜವಾಬ್ದಾರಿ ಹೊತ್ತೆ. ಜನರ ಸೇವೆ ಮಾಡಲು ಅವಕಾಶ ಸಿಕ್ಕಿತು. ಮೊದಲ ಅಲೆಯಲ್ಲಿ ನಾವು ಅತ್ಯುತ್ತಮ ನಿಲುವು ತೆಗೆದುಕೊಂಡೆವು. ವಲಸೆ ಕಾರ್ಮಿಕರಿಗೆ ಕೊಟ್ಟ ರಕ್ಷಣೆ, ಅವರಿಗೆ ತುಂಬಿದ ಧೈರ್ಯ, ರೈತರಿಗೆ ಬೆಂಬಲವಾಗಿ ನಿಂತದ್ದು, ಅವರ ಬೆಳೆ ಖರೀದಿ ಮಾಡಿದ್ದನ್ನು ಎಲ್ಲರೂ ಗಮನಿಸಿದ್ದಾರೆ.

ರಾಜ್ಯದ ಉದ್ದಗಲಕ್ಕೂ ಕಾಂಗ್ರೆಸ್ ನಾಯಕರು, ಕಾರ್ಯಕರ್ತರು ಈ ಕೆಲಸ ಮಾಡಿದ್ದಾರೆ. ಬಿಜೆಪಿಯವರು ಸರ್ಕಾರದ ದುಡ್ಡಲ್ಲಿ ತಮ್ಮ ಫೋಟೋ ಹಾಕಿಕೊಂಡು ಆಹಾರ ಕಿಟ್ ಕೊಟ್ಟರೆ, ನಮ್ಮ ನಾಯಕರು ತಮ್ಮ ಸ್ವಂತ ದುಡ್ಡಿನಲ್ಲಿ ಆಹಾರ ಕಿಟ್, ಆಕ್ಸಿಜನ್, ದಿನಸಿ ಕಿಟ್, ಸ್ಯಾನಿಟೈಸರ್ ಕೊಟ್ಟಿದ್ದಾರೆ. ನಾವು ಸರ್ಕಾರಕ್ಕೆ ಪರ್ಯಾಯವಾಗಿ ಜನರಿಗೆ 1225 ಆಂಬುಲೆನ್ಸ್ ಸೇವೆ ಒದಗಿಸಿದ್ದೇವೆ. 12,53,000 ಮೆಡಿಕಲ್ ಕಿಟ್ ಹಂಚಿದ್ದೇವೆ. 93,47,867 ಆಹಾರ ಕಿಟ್ ನೀಡಿದ್ದೇವೆ. 24,654 ಆಕ್ಸಿಜನ್ ಸಿಲಿಂಡರ್ ನೀಡಿದ್ದೇವೆ. ಇದಕ್ಕೆ ದಾಖಲೆಗಳಿವೆ.

ಒತ್ತಡ ಹಾಕಿ ಸರಕಾರ ಸರ್ವಪಕ್ಷ ಸಭೆ ಕರೆಯುವಂತೆ ಮಾಡಿದೆವು. ವೃತ್ತಿ ಕಳೆದುಕೊಂಡವರಿಗೆ ಪರಿಹಾರಕ್ಕೆ ಆಗ್ರಹಿಸಿ ಹೋರಾಟ ಮಾಡಿದೆವು.

ವಲಸಿಗರನೇಕರು ರಸ್ತೆಯಲ್ಲಿ ಸತ್ತರು. ವಲಸಿಗರು ತಮ್ಮ ಊರಿಗೆ ಹೋಗಲು ಸರಕಾರ ಮೂರು ಪಟ್ಟು ಪ್ರಯಾಣದರ ವಿಧಿಸಿತ್ತು. ನಾವು ಅವರ ನೆರವಿಗೆ ಧಾವಿಸಿದಾಗ ಸರ್ಕಾರ ಒತ್ತಡಕ್ಕೆ ಮಣಿದು ಅವರಿಗೆ ಉಚಿತ ಸಾರಿಗೆ ವ್ಯವಸ್ಥೆ ಕಲ್ಪಿಸಿತು.

ಮತಕ್ಕಾಗಿ ನಾವು ಈ ಕೆಲಸ ಮಾಡಲಿಲ್ಲ. ವಿರೋಧ ಪಕ್ಷವಾಗಿ ಇದು ನಮ್ಮ ಜವಾಬ್ದಾರಿ. ಜನರ ಸಮಸ್ಯೆ ಮಧ್ಯೆ ಇರಬೇಕು ಎಂಬುದು ನಮ್ಮ ಬದ್ಧತೆ.

10 ಸಾವಿರ ಹಾಸಿಗೆ, ಕೋವಿಡ್ ಔಷಧದಲ್ಲಿ ಅವ್ಯವಹಾರ ಬಯಲಿಗೆಳೆದೆವು. ಕೋವಿಡ್ ನಿಂದ ಸತ್ತವರನ್ನು ಸರಕಾರ ಹೇಗೆ ನಡೆಸಿಕೊಂಡಿತು ಎಂಬುದನ್ನು ನಾನು ಹೇಳಬೇಕಿಲ್ಲ. ಎಲ್ಲರೂ ನೋಡಿದ್ದಾರೆ. 2ನೇ ಅಲೆ ಬಗ್ಗೆ ತಜ್ಞರು ಎಚ್ಚರಿಕೆ ನೀಡಿದ್ದರೂ ಸರ್ಕಾರ ಜಾಗೃತವಾಗಲಿಲ್ಲ. ಸರ್ಕಾರ ಕೆಲಸ ಮಾಡುತ್ತದೋ, ಇಲ್ಲವೋ ಲೆಕ್ಕಿಸದೇ ನಮ್ಮ ಜವಾಬ್ದಾರಿ ನಾವು ನಿಭಾಯಿಸಿದೆವು. ಅಂದಿನಿಂದ ಇಂದಿನವರೆಗೂ ನಾವು ಕೆಲಸ ಮಾಡಿಕೊಂಡು ಬಂದಿದ್ದೇವೆ. ಇಂದಿಗೂ ನಮ್ಮ ಕಾರ್ಯಕರ್ತರು ಮನೆ ಮನೆಗೆ ಹೋಗಿ ಅವರಿಗೆ ನೆರವು, ಸಾಂತ್ವನ ನೀಡುತ್ತಿದ್ದಾರೆ.

ಅಧಿಕಾರದ ಜಂಜಾಟ ನಮಗೆ ಬೇಡ. ಆಸ್ಪತ್ರೆಯ ದುಬಾರಿ ಬಿಲ್ ಕಟ್ಟಲು ಜನ ತಮ್ಮ ಆಸ್ತಿ, ಚಿನ್ನವನ್ನು ಅಡವಿಟ್ಟಿದ್ದಾರೆ, ಮಾರಿಕೊಂಡಿದ್ದಾರೆ. ಈ ಬಗ್ಗೆ ನಮಗೆ ಮಧ್ಯಂತರ ವರದಿ ಬಂದಿದ್ದು, ಎಐಸಿಸಿಗೆ ಈ ವರದಿ ಕಳುಹಿಸಲಾಗುತ್ತದೆ. ಮುಂದೆ ಅಂತಿಮ ವರದಿ ಬರಲಿದೆ. ಈ ಕೆಲಸಕ್ಕಾಗಿ ನಮ್ಮ ತಂಡವನ್ನು ಅಭಿನಂದಿಸುತ್ತೇನೆ.

ನಮ್ಮ ಪಕ್ಷದ ಶಾಸಕರು ಇಲ್ಲದ ಕಡೆಗಳಲ್ಲೂ ಸಾವಿರಾರು ಆಹಾರ ಕಿಟ್ ಗಳನ್ನು ಹಂಚಲಾಗಿದೆ. ಸರ್ಕಾರ ಮಾಡಲಾಗದ ಕೆಲಸ ನಾವು ಮಾಡಿದ್ದೇವೆ. ₹100 ಕೋಟಿ ಲಸಿಕೆ ಕಾರ್ಯಕ್ರಮ ರೂಪಿಸಿದ್ದೆವು. ಅದಕ್ಕೆ ಒಪ್ಪಿಗೆ ನೀಡಲು ಸರಕಾರಕ್ಕೆ ಮನಸ್ಸಾಗಲಿಲ್ಲ. ನಮ್ಮ ಒತ್ತಡಕ್ಕೆ ಮಣಿದು ಉಚಿತ ಲಸಿಕೆ ಎಂದು ಘೋಷಿಸಿದರು. ನಮ್ಮ ಶಾಮನೂರು ಶಿವಶಂಕರಪ್ಪ ಅವರು 3 ಲಕ್ಷ ಜನರಿಗೆ ಉಚಿತ ಲಸಿಕೆ ನೀಡಿ ಇಡೀ ದೇಶಕ್ಕೆ ಮಾದರಿಯಾದರು. ನಮ್ಮ ಕಾರ್ಯಕರ್ತರು ಸ್ವಯಂ ಸೇವಾ ಸಂಸ್ಥೆಗಳ ಜತೆ ಒಪ್ಪಂದ ಮಾಡಿಕೊಂಡು ಉಚಿತ ಲಸಿಕೆ ನೀಡಿದರು. ಇದು ಕಾಂಗ್ರೆಸ್ ಪಕ್ಷದ ಕಾರ್ಯ. ಇಂತಹ ಒಂದು ಕೆಲಸವನ್ನು ಬೇರೆಯವರು ಮಾಡಿರುವುದನ್ನು ತೋರಿಸಿ.

ನಮ್ಮ ಲೋಕಸಭಾ ಸದಸ್ಯರು ಹಾಸಿಗೆ ದಂಧೆ ಬಯಲಿಗೆಳೆದರು. ಆದರೆ ಅದನ್ನು ಮಾಡಿದವರು ಯಾರು? ಅದು ಏನಾಯ್ತು? ಚಾಮರಾಜನಗರ ದುರ್ಘಟನೆ ಬಗ್ಗೆ ಜನರ ದಿಕ್ಕುತಪ್ಪಿಲು ಅವರ ಸರ್ಕಾರದ ದಂಧೆಯನ್ನೇ ಬಯಲು ಮಾಡಿದರು. ಬಹಳ ಸಂತೋಷವಾಯಿತು. ಒಂದು ಸಮಾಜದ ಮೇಲೆ ದ್ವೇಷ ಕಾರಿದರು. ಇತಿಹಾಸ ಮುಚ್ಚಿಹಾಕಲು ಸಾಧ್ಯವಿಲ್ಲ.

ಡೆತ್ ಆಡಿಟ್ ಮಾಡಲು ನಮ್ಮ ತಂಡಕ್ಕೆ ಸೂಚನೆ ನೀಡಿದ್ದು, ಪ್ರತಿ ಬ್ಲಾಕ್ ಮಟ್ಟದಲ್ಲೂ ಚುರುಕಾಗಿ ಕಾರ್ಯನಿರ್ವಹಿಸುತ್ತಿವೆ. ಈ ಸಮಯದಲ್ಲಿ ಆಡಳಿತ ಪಕ್ಷದ ಒಬ್ಬ ಮಂತ್ರಿ, ಶಾಸಕ, ಕಾರ್ಯಕರ್ತರು ಯಾರಾದರೂ ಒಬ್ಬರು ಇಂತಹ ಕೆಲಸ ಮಾಡಿದ್ದರೆ ಹೇಳಿ. ನಾವು ಭೇಟಿ ಕೊಟ್ಟ 20 ದಿನಗಳ ನಂತರ ಸರ್ಕಾರದ ದುಡ್ಡಲ್ಲಿ ಸಂತ್ರಸ್ತರ ಮನೆಗೆ ಹೊರಟಿದ್ದಾರೆ. ಸರ್ಕಾರ ಈ ವಿಚಾರದಲ್ಲಿ ವಿಫಲವಾಗಿದ್ದು, ನಮ್ಮ ಸೇವೆಗೆ ಒಂದು ಲೆಕ್ಕ ಇರಲಿ ಎಂದು ಈ ಸಮಿತಿ ರಚಿಸಿ ವರದಿ ಸಿದ್ಧಪಡಿಸಿದ್ದೇವೆ.

ಮುಖ್ಯಮಂತ್ರಿಗಳೇ ಆಕ್ಸಿಜನ್ ಇಲ್ಲದೆ ಯಾರೂ ಸತ್ತಿಲ್ಲ ಎಂದು ಕೇಂದ್ರ ಸರ್ಕಾರದ ಸಚಿವಾಲಯಕ್ಕೆ ಮಾಹಿತಿ ನೀಡಿದ ಮೇಲೆ ಚಾಮರಾಜನಗರದಲ್ಲಿ ಸತ್ತ 24 ಜನರ ಕುಟುಂಬಕ್ಕೆ ತಲಾ 2 ಲಕ್ಷ ಪರಿಹಾರ ನೀಡಿರುವುದೇಕೇ..? 36 ಜನ ಆಕ್ಸಿಜನ್ ಇಲ್ಲದೆ ಸತ್ತಿದ್ದಾರೆ ಎಂದು ಹೈಕೋರ್ಟ್ ನೇಮಕ ಮಾಡಿದ ಸಮಿತಿ ವರದಿ ತಿಳಿಸಿದೆ.

ಅವರಿಗೆ ಕೋವಿಡ್ ನಿಂದ ಸತ್ತಿದ್ದಾರೆ ಎಂಬ ಪ್ರಮಾಣ ಪತ್ರವನ್ನೂ ನೀಡಿಲ್ಲ. ಈ ವಿಚಾರದಲ್ಲಿ ಕಾಂಗ್ರೆಸ್ ಮನೆ ಮನೆಗೂ ತೆರಳಿ ಅವರ ಕುಟುಂಬದವರ ರಕ್ಷಣೆಗೆ ನಿಲ್ಲಲಿದೆ.

Advertisement

Udayavani is now on Telegram. Click here to join our channel and stay updated with the latest news.

Next