Advertisement

ದ.ಕ. ಜಿಲ್ಲೆಯಿಂದ 21,888 ಕಾರ್ಮಿಕರು ಸ್ವಂತ ರಾಜ್ಯಕ್ಕೆ

01:07 PM May 20, 2020 | mahesh |

ಮಂಗಳೂರು: ಲಾಕ್‌ಡೌನ್‌ ಅವಧಿಯಲ್ಲಿ ಇದುವರೆಗೆ ದ.ಕ. ಜಿಲ್ಲೆಯಿಂದ ತಮ್ಮ ಊರಿಗೆ ತೆರಳಲು ಬಯಸಿದ ವಿವಿಧ ರಾಜ್ಯಗಳ 21,888 ಮಂದಿ ವಲಸೆ ಕಾರ್ಮಿಕರನ್ನು 16 ರೈಲುಗಳ ಮೂಲಕ ಕಳುಹಿಸಿ ಕೊಡಲಾಗಿದೆ. ಜಿಲ್ಲೆಯಿಂದ ಬಿಹಾರಕ್ಕೆ 5, ಜಾರ್ಖಂಡ್‌ ಮತ್ತು ಉ. ಪ್ರದೇಶಕ್ಕೆ ತಲಾ 5 ಹಾಗೂ ರಾಜಸ್ತಾನಕ್ಕೆ ಒಂದು ರೈಲು ಸಂಚರಿಸಿದೆ.  ಪ್ರತೀ ರೈಲಿನಲ್ಲಿ ಸರಾಸರಿ 1,400ರಷ್ಟು ಪ್ರಯಾಣಿಕರು ತೆರಳಿದ್ದಾರೆ. ಮಂಗಳೂರು ಜಂಕ್ಷನ್‌ ಹಾಗೂ ಪುತ್ತೂರು ರೈಲ್ವೇ ನಿಲ್ದಾಣಗಳಿಂದ ರೈಲುಗಳು ಹೊರಟಿದ್ದು ರೈಲ್ವೇ ಇಲಾಖೆ ನಿಗದಿಪಡಿಸಿದ ದರ ವನ್ನು ಪ್ರಯಾಣಿಕರಿಂದ ಪಡೆದು ಕೊಳ್ಳಲಾಗಿದೆ.

Advertisement

ಉಚಿತ ಊಟ
ಕಾರ್ಮಿಕರಿಗೆ ಉಚಿತ ಊಟದ ಪೊಟ್ಟಣ ಹಾಗೂ ನೀರಿನ ಬಾಟಲ್‌ ವಿತರಿಸಲಾಗಿದೆ. ಪ್ರಯಾಣಿಕರು ರೈಲಿನಲ್ಲಿ ತಮ್ಮ ನಿಗದಿತ ಸ್ಥಳ ತಲುಪಲು 2-3 ದಿನ ತಗಲುವುದರಿಂದ ಪ್ರಯಾಣ ಹಾದಿಯ ಪ್ರಮುಖ ಜಂಕ್ಷನ್‌ಗಳಲ್ಲಿ ಊಟೋಪಚಾರ ವ್ಯವಸ್ಥೆಯನ್ನು ಮಾಡಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಈ ಸಂದರ್ಭದಲ್ಲಿ ಸ್ಥಳಕ್ಕೆ ಆಗಮಿಸಿದ ಮಂಗಳೂರು ಪೊಲೀಸ್‌ ಕಮಿಷನರ್‌ ಡಾ| ಹರ್ಷ ಅವರು ಕಾರ್ಮಿಕರ ಮನವೊಲಿಸಿ, ಅವರಿಗೆ ಸೂಕ್ತ ಊಟ, ತಿಂಡಿಯ ವ್ಯವಸ್ಥೆ ಮಾಡುವಂತೆ ಅಧಿಕಾರಿಗಳಿಗೆ ಸೂಚನೆ ನೀಡಿದರು.

ಊರಿಗೆ ಕಳುಹಿಸಿ ಕೊಡಲು ಆಗ್ರಹ
ಜಿಲ್ಲೆಯ ವಿವಿಧೆಡೆ ಇನ್ನೂ ಕೂಡ ಕೆಲವು ರಾಜ್ಯಗಳ ವಲಸೆ ಕಾರ್ಮಿಕರು ಬಾಕಿಯಾಗಿದ್ದಾರೆ. ಅವರಿಗೆ ಜಿಲ್ಲಾಡಳಿತ ಹಾಗೂ ಸಂಘ-ಸಂಸ್ಥೆಗಳ ಮೂಲಕ ಆಶ್ರಯ, ಊಟ ಒದಗಿಸಲಾಗುತ್ತಿದೆ. ಮಂಗಳೂರಿನ ಮಿಲಾಗ್ರಿಸ್‌ ಶಾಲಾ ಕಟ್ಟಡದಲ್ಲಿರುವ ಉತ್ತರ ಪ್ರದೇಶದ ಸುಮಾರು 300 ಮಂದಿ ಕಾರ್ಮಿಕರು ತಮ್ಮ ಊರಿಗೆ ಕಳುಹಿಸಿಕೊಡಲು ವ್ಯವಸ್ಥೆ ಮಾಡುವಂತೆ ಒತ್ತಾಯಿಸಿ ಮಂಗಳವಾರ ಪ್ರತಿಭಟನೆ ಕೂಡ ನಡೆಸಿದರು. ಸರಿಯಾದ ಊಟ, ತಿಂಡಿ ಒದಗಿಸಿ ಕೊಡುವಂತೆಯೂ ಒತ್ತಾಯಿಸಿದರು.

ಕಡಬ: ತವರಿಗೆ ತೆರಳಲು ಕಾರ್ಮಿಕರ ಪಟ್ಟು
ಕಡಬ: ಕಡಬ ಭಾಗದಿಂದ ಮೇ 19ರಂದು ಅಧಿಕಾರಿಗಳ ಸೂಚನೆ ಮೇರೆಗೆ ಊರಿಗೆ ತೆರಳಲು ತಯಾರಾಗಿದ್ದ ಜಾರ್ಖಂಡ್‌ ಮೂಲದ ಸುಮಾರು 148 ಕಾರ್ಮಿಕರ ಪ್ರಯಾಣ ಕೊನೆಯ ಕ್ಷಣದಲ್ಲಿ ರದ್ದುಗೊಂಡಿದ್ದು, ಅವರು ಕಡಬ ತಹಶೀಲ್ದಾರ್‌ ಕಚೇರಿ ಎದುರು ಜಮಾಯಿಸಿ ತಮ್ಮನ್ನು ಊರಿಗೆ ಕಳುಹಿಸಿಕೊಡುವಂತೆ ಆಗ್ರಹಿಸಿ ಘಟನೆ ನಡೆದಿದೆ. ಬಳಿಕ ಪುತ್ತೂರು ವಿಭಾಗದ ಡಿವೈಎಸ್ಪಿ ದಿನಕರ ಶೆಟ್ಟಿ ಆಗಮಿಸಿ, ವಲಸೆ ಕಾರ್ಮಿಕರನ್ನು ಸಮಾಧಾನಪಡಿಸಿ ಬಳಿಕ ಅವರಿಗೆ ಒಕ್ಕಲಿಗ ಗೌಡ ಸಮುದಾಯ ಭವನದಲ್ಲಿ ತಾತ್ಕಾಲಿಕ ವ್ಯವಸ್ಥೆ ಕಲ್ಪಿಸಿದರು. ಈ ವೇಳೆ ಕಡಬ ಎಸ್‌,ಐ, ರುಕ್ಮ ನಾೖಕ್‌, ಡಿವೈಎಸ್ಪಿ ದಿನಕರ ಶೆಟ್ಟಿ ಹಾಗೂ ಪುತ್ತೂರು ಗ್ರಾಮಾಂತರ ವೃತ್ತ ನಿರೀಕ್ಷಕ ನಾಗೇಶ್‌ ಕದ್ರಿ, ದಿನಕರ ಶೆಟ್ಟಿ ಕಾರ್ಮಿಕರಿಗೆ ರೈಲು ಸ್ಥಗಿತಗೊಂಡಿರುವ ಬಗ್ಗೆ ಮನವರಿಕೆ ಮಾಡಿದರು.
ಪ್ರಯಾಣ ವ್ಯವಸ್ಥೆ ಆಗುವ ವರೆಗೆ ಕಡಬ ಗೌಡ ಸಮುದಾಯ ಭವನದಲ್ಲಿ ತಾತ್ಕಾಲಿಕ ವ್ಯವಸ್ಥೆ ಮಾಡಲಾಯಿತು. ಕುಕ್ಕೆ ಶ್ರೀ ಸುಬ್ರಹ್ಮಣ್ಯ ದೇವಸ್ಥಾನದ ವತಿಯಿಂದ ಊಟದ ವ್ಯವಸ್ಥೆ ಮಾಡಲಾಯಿತು. ಕಡಬ ಕಂದಾಯ ನಿರೀಕ್ಷಕ ಅವಿನ್‌ ರಂಗತ್‌ಮಲೆ, ಕಡಬ ತಹಶೀಲ್ದಾರ್‌ ಜಾನ್‌ ಪ್ರಕಾಶ್‌, ಪೊಲೀಸ್‌ ಸಿಬಂದಿ ಉಪಸ್ಥಿತರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next