Advertisement

ಶೆರೇವಾಡದಲ್ಲಿ ಜಿಲ್ಲೆಯ ಮೊದಲ ಅಮೃತ ಸರೋವರ

12:19 PM May 09, 2022 | Team Udayavani |

ಹುಬ್ಬಳ್ಳಿ: ಸ್ವಾತಂತ್ರ್ಯ ಅಮೃತ ಮಹೋತ್ಸವ ಸವಿನೆನಪಿಗಾಗಿ ಪ್ರತಿ ಲೋಕಸಭಾ ಕ್ಷೇತ್ರದಲ್ಲಿ ಕನಿಷ್ಟ 75 ಕೆರೆ ನಿರ್ಮಿಸಲು ಪ್ರಧಾನಿ ಕರೆ ಕೊಟ್ಟಿದ್ದು, ತಾಲೂಕಿನ ಶೆರೇವಾಡ ಗ್ರಾಮದ 3 ಎಕರೆ ಪ್ರದೇಶದಲ್ಲಿ ಜಿಲ್ಲೆಯ ಮೊದಲ ಅಮೃತ ಸರೋವರ ಕೆರೆ ನಿರ್ಮಾಣ ಮಾಡಲಾಗುತ್ತಿದೆ ಎಂದು ಕೇಂದ್ರ ಸಂಸದೀಯ ವ್ಯವಹಾರಗಳ ಸಚಿವ ಪ್ರಹ್ಲಾದ ಜೋಶಿ ಹೇಳಿದರು.

Advertisement

ಶೆರೇವಾಡ ಗ್ರಾಮದಲ್ಲಿ ಜಿಲ್ಲೆಯಲ್ಲಿ ಅಭಿವೃದ್ಧಿ ಪಡಿಸುತ್ತಿರುವ 75 ಅಮೃತ ಸರೋವರಗಳ ಪೈಕಿ ಮೊದಲನೆಯ ಅಮೃತ ಸರೋವರವನ್ನು ಟಾಟಾ ಕಂಪನಿಯವರ ಸಿಎಸ್‌ಆರ್‌ ಕಾರ್ಯ ಚಟುವಟಿಕೆಗಳಡಿ ನೂತನ ಕೆರೆ ನಿರ್ಮಾಣಕ್ಕೆ ರವಿವಾರ ಭೂಮಿಪೂಜೆ ನೆರವೇರಿಸಿ ಅವರು ಮಾತನಾಡಿದರು.

ಜಿಲ್ಲೆಯಲ್ಲಿ ಖಾಸಗಿ ಕಂಪನಿಗಳ ಸಹಭಾಗಿತ್ವದಲ್ಲಿ ಮುಂದಿನ 7-8 ತಿಂಗಳ ಅವಧಿಯಲ್ಲಿ 75 ಕೆರೆಗಳನ್ನು ಅಮೃತ ಸರೋವರ ಹೆಸರಿನಲ್ಲಿ ನಿರ್ಮಿಸುವ ಗುರಿ ಹೊಂದಲಾಗಿದೆ. ಜಗತ್ತಿನಲ್ಲಿ 60 ಕೋಟಿ ಜನರು ಶುದ್ಧ ಕುಡಿಯುವ ನೀರು ಸಿಗದೇ ಸಾಯುತ್ತಿದ್ದಾರೆ. ಇಸ್ರೇಲ್‌ ದೇಶದಲ್ಲಿ ನೀರಿನ ಪರಿಸ್ಥಿತಿ ಬಹಳ ಕಷ್ಟವಿದ್ದು, ಪ್ರತಿ ಹನಿ ನೀರಿಗೂ ಮಹತ್ವ ಕೊಡುತ್ತಾರೆ.

ಭಾರತದಲ್ಲೂ ನೀರಿನ ಸದ್ಬಳಕೆಗೆ ಆದ್ಯತೆ ನೀಡಬೇಕಾಗಿದೆ. ಅನೇಕ ಕಡೆಗಳಲ್ಲಿ ಬೋರ್‌ವೆಲ್‌ ಮೂಲಕ ನೀರು ಪೂರೈಸಲಾಗುತ್ತಿದೆ. ಬಹಳಷ್ಟು ಕಡೆ ಅದು ಕುಡಿಯಲು ಯೋಗ್ಯವಿರುವುದಿಲ್ಲ. ಕೊಳವೆಬಾವಿಗಳು ಬೇಸಿಗೆ ಅವಧಿಯಲ್ಲಿ ಬತ್ತಿ ಹೋಗುತ್ತವೆ. ಆದರೆ ಕೆರೆಯ ನೀರನ್ನು ಶುದ್ಧೀಕರಿಸಿ ಕುಡಿಯಬಹುದು. ನೀರನ್ನು ಮಿತವಾಗಿ ಅಗತ್ಯಕ್ಕೆ ಅನುಗುಣವಾಗಿ ಬಳಕೆ ಮಾಡಿಕೊಳ್ಳಬೇಕು ಎಂದರು.

ಓಡುವ ನೀರು ನಡೆಸಬೇಕು. ನಡೆಯುವ ನೀರನ್ನು ನಿಲ್ಲಿಸಬೇಕು. ನಿಲ್ಲುವ ನೀರನ್ನು ಇಂಗಿಸಬೇಕು. ಆಗ ಬೋರ್‌ವೆಲ್‌ಗ‌ಳು ಪುನರ್‌ ಭರ್ತಿ (ರಿಚಾರ್ಜ್‌) ಆಗುತ್ತವೆ. ಮೇಲ್ಮೈ (ಸರ್ಫೇಸ್) ನೀರು ಸಾಮಾನ್ಯವಾಗಿ ಕುಡಿಯಲು ತಕ್ಕವಾಗಿರುತ್ತದೆ. ಅದನ್ನು ಶುದ್ಧೀಕರಿಸಿದರೆ ಇನ್ನಷ್ಟು ಯೋಗ್ಯವಾಗಿರುತ್ತದೆ. ಬೆಂಗಳೂರಿನಲ್ಲಿ ಬಹಳಷ್ಟು ರಾಜಕಾಲುವೆ, ಕೆರೆಗಳನ್ನು ಅತಿಕ್ರಮಣ ಮಾಡಿಕೊಂಡು ಅಲ್ಲಿ ಮನೆಗಳನ್ನು ನಿರ್ಮಿಸಲಾಗಿದೆ. ಇದರಿಂದ ಮುಂದಿನ 10 ವರ್ಷಗಳಲ್ಲಿ ಕುಡಿಯುವ ನೀರಿನ ಸಮಸ್ಯೆ ತುಂಬಾ ಹೆಚ್ಚಾಗಲಿದೆ ಎಂದು ಹೇಳಿದರು.

Advertisement

ನಿಗಮ-ಮಂಡಳಿ ಅಧ್ಯಕ್ಷರಾದ ಸಿದ್ದನಗೌಡ ಚಿಕ್ಕನಗೌಡ್ರ, ಈರಣ್ಣ ಜಡಿ, ಜಿಪಂ ಸಿಇಒ ಡಾ| ಸುರೇಶ ಇಟ್ನಾಳ, ತಾಪಂ ಇಒ ಗಂಗಾಧರ ಕಂದಕೂರ, ಎಂ.ಆರ್‌. ಪಾಟೀಲ, ಗ್ರಾಪಂ ಉಪಾಧ್ಯಕ್ಷೆ ಮಹಾದೇವಿ ಅಮಟೂರ, ಟಾಟಾ ಕಂಪನಿಯ ಗೋವಿಂದರಾಜ ಕುಲಕರ್ಣಿ, ಪ್ರಶಾಂತ ದೀಕ್ಷಿತ, ಮುಖಂಡರಾದ ಬಸವರಾಜ ಕುಂದಗೋಳಮಠ, ಸಿ.ಎನ್‌. ಪಾಟೀಲ ಸೇರಿದಂತೆ ಅಧಿಕಾರಿಗಳು, ಗ್ರಾಪಂ ಸದಸ್ಯರು, ಗ್ರಾಮಸ್ಥರು ಮೊದಲಾದವರಿದ್ದರು. ಗ್ರಾಪಂ ಅಧ್ಯಕ್ಷ ಶಿವಾನಂದ ಉಳ್ಳಾಗಡ್ಡಿ ವಂದಿಸಿದರು.

ಪ್ರಧಾನಿ ಮೋದಿ ಅವರು ದೂರದೃಷ್ಟಿಯಿಂದ ಅಮೃತ ಸರೋವರ ಯೋಜನೆಯಡಿ ಕೆರೆಗಳ ನಿರ್ಮಾಣಕ್ಕೆ ಮುಂದಾಗಿದ್ದಾರೆ. ಇದರಿಂದ ದೇಶದಲ್ಲಿ ನೀರಿನ ಬವಣೆ ತಪ್ಪಲಿದೆ. ಈ ನಿಟ್ಟಿನಲ್ಲಿ ಜಿಲ್ಲೆಯ ಕೆಲ ಕಂಪನಿಗಳು, ಕೈಗಾರಿಕೆಗಳಿಗೆ ಕೆರೆ ಅಭಿವೃದ್ಧಿ ಪಡಿಸಲು ಸಿಎಸ್‌ಆರ್‌ ನಿಧಿಯಡಿ ಧನ ಸಹಾಯ ನೀಡುವಂತೆ ಕೋರಲಾಗುವುದು. ಶೆರೇವಾಡದಲ್ಲಿ ನಿರ್ಮಾಣವಾಗುವ ಕೆರೆಯು ಇತರೆ ಕೆರೆಗಳಿಗೆ ಮಾದರಿಯಾಗಬೇಕು. –ಪ್ರಹ್ಲಾದ ಜೋಶಿ, ಕೇಂದ್ರ ಸಚಿವ

Advertisement

Udayavani is now on Telegram. Click here to join our channel and stay updated with the latest news.

Next