Advertisement

​​Bantwal, ಪುತ್ತೂರಿನ ಮಳೆ ಹಾನಿ ಪ್ರದೇಶಕ್ಕೆ ದಕ್ಷಿಣ ಕನ್ನಡ ಜಿಲ್ಲಾಧಿಕಾರಿ ಭೇಟಿ

12:50 AM Jun 29, 2024 | Team Udayavani |

ಬಂಟ್ವಾಳ: ಪ್ರಾಕೃತಿಕ ವಿಕೋಪ ಉಂಟಾಗಬಹುದಾದ ಪ್ರದೇಶ ಹಾಗೂ ನೆರೆ ಬಾಧಿತ ಪ್ರದೇಶಗಳನ್ನು ಪರಿಶೀಲಿಸಿ ಅಧಿಕಾರಿಗಳ ತಂಡದ ಜತೆ ಪರಿಶೀಲಿಸಿ ತೆಗೆದುಕೊಂಡಿರುವ ಮುನ್ನೆಚ್ಚರಿಕೆ ಕ್ರಮಗಳ ಮಾಹಿತಿ ಪಡೆದುಕೊಳ್ಳಲಾಗುತ್ತಿದೆ. ನದಿ ನೀರಿನ ಮಟ್ಟ ನೋಡಿಕೊಂಡು ಮುಳುಗಡೆ ಭೀತಿಯ ಮನೆಗಳ ಸ್ಥಳಾಂತರಕ್ಕೂ ಸೂಚನೆ ನೀಡಲಾಗಿದೆ ಎಂದು ದ.ಕ.ಜಿಲ್ಲಾಧಿಕಾರಿ ಮುಲ್ಲೈ ಮುಗಿಲನ್ ಹೇಳಿದರು.

Advertisement

ಅವರು ಶುಕ್ರವಾರ ಬಂಟ್ವಾಳ ತಾಲೂಕಿನ ಪ್ರಾಕೃತಿಕ ವಿಕೋಪ ಸಂಭವನೀಯ ಪ್ರದೇಶಗಳನ್ನು ವೀಕ್ಷಿಸಿ ಪತ್ರಕರ್ತರ ಜತೆ ಮಾತನಾಡಿದರು. ಗೂಡಿನಬಳಿ ಪ್ರದೇಶದಲ್ಲಿ ಉಂಟಾಗಿರುವ ಕುಸಿತಕ್ಕೆ ಸಂಬಂಧಿಸಿ ತಡೆಗೋಡೆ ನಿರ್ಮಿಸಲಾಗಿದ್ದು, ಅಲ್ಲಿ ಹೆಚ್ಚುವರಿ ತಡೆಗೋಡೆಯ ಜತೆಗೆ ನೀರು ಹರಿದು ಹೋಗುವುದಕ್ಕೂ ವ್ಯವಸ್ಥೆ ಆಗಬೇಕಿದೆ. ಜತೆಗೆ ಪಾಣೆಮಂಗಳೂರಿನಲ್ಲಿ ಗುಡ್ಡ ಅಗೆತದಿಂದ ತಡೆಗೋಡೆ ನಿರ್ಮಾಣ ವಾದರೂ ಪುರಸಭೆಯ ಟ್ಯಾಂಕ್‌ ಅಪಾಯ ದಲ್ಲಿದ್ದು, ಖಾಸಗಿಯವರು ಇನ್ನೂ ಹೆಚ್ಚು ಅಗೆಯದಂತೆ ತಡೆಯಾಜ್ಞೆ ತರಲು ಆದೇಶ ನೀಡಿದ್ದೇನೆ ಎಂದರು.

ಗೂಡಿನಬಳಿ ಪ್ರವಾಹದ ನೀರಿನ ಮಾಪನ ವನ್ನು ಜಿಲ್ಲಾಧಿಕಾರಿಗಳು ವೀಕ್ಷಿಸಿ ತಹಶೀಲ್ದಾರ್‌ ಅರ್ಚನಾ ಡಿ. ಭಟ್‌ ಅವರಿಂದ ಮಾಹಿತಿ ಪಡೆದುಕೊಂಡರು. ಗೂಡಿನಬಳಿ ಗುಡ್ಡ ಕುಸಿತಕ್ಕೆ ಸಂಬಂಧಿಸಿ ನಿರ್ಮಾಣಗೊಂಡ ತಡೆಗೋಡೆಯ ಸುರಕ್ಷೆ ಕುರಿತು ಪುರಸಭಾ ಎಂಜಿನಿಯರ್‌ ಡೊಮಿನಿಕ್‌ ಡಿಮೆಲ್ಲೋ ಮಾಹಿತಿ ನೀಡಿದರು.

ಬೂಡಾ ಅಧ್ಯಕ್ಷ ಬೇಬಿ ಕುಂದರ್‌, ಪುರಸಭಾ ಸದಸ್ಯೆ ಝೀನತ್‌ ಪಿರೋಜ್‌ ಅವರು ಸಮಸ್ಯೆ ಕುರಿತು ಡಿಸಿಗೆ ವಿವರಿಸಿದರು. ಪಾಣೆಮಂಗಳೂರು ಶ್ರೀ ಕಲ್ಲುರ್ಟಿ ಗುಡಿ ಬಳಿಯ ಪುರಸಭಾ ಟ್ಯಾಂಕ್‌ ಅಪಾಯದ ಕುರಿತು ಮುಖ್ಯಾಧಿಕಾರಿ ಲೀನಾ ಬ್ರಿಟೋ ಹಾಗೂ ಆರೋಗ್ಯ ನಿರೀಕ್ಷಕ ರತ್ನಪ್ರಸಾದ್‌ ವಿವರಿಸಿದರು.

ಮಾಣಿ, ಪೆರ್ನೆಯಲ್ಲಿ
ಮಾಣಿ ಗ್ರಾಮದ ಹಳೀರದಲ್ಲಿ ಹೆದ್ದಾರಿ ಕಾಮಗಾರಿಯಿಂದ ಅಪಾಯದ ಅಂಚಿಗೆ ತಲುಪಿದ ಮನೆ ಹಾಗೂ ಕಾಮಗಾರಿಯಿಂದ ಮಾಣಿಯಲ್ಲಿ ಚರಂಡಿ ವ್ಯವಸ್ಥೆ ಇಲ್ಲದೆ ಮಳೆ ನೀರಿನಿಂದ ತೊಂದರೆಗೊಳಗಾದ ಪ್ರದೇಶವನ್ನು ಜಿಲ್ಲಾಧಿಕಾರಿಗಳು ವೀಕ್ಷಿಸಿ ಗುತ್ತಿಗೆ ಸಂಸ್ಥೆಯ ಜತೆಗೆ ಮಾತುಕತೆ ನಡೆಸಿದರು. ಮಾಣಿ ಗ್ರಾ.ಪಂ.ಸದಸ್ಯರು, ಸ್ಥಳೀಯ ಪ್ರಮುಖರು ಸಮಸ್ಯೆಗಳನ್ನು ಜಿಲ್ಲಾಧಿಕಾರಿಗಳ ಗಮನಕ್ಕೆ ತಂದರು. ಜತೆಗೆ ಪೆರ್ನೆ ಗ್ರಾಮದ ದೋರ್ಮೆಯಲ್ಲಿ ಹೆದ್ದಾರಿ ಕಾಮಗಾರಿಯಿಂದ ಮಳೆ ನೀರು ಕೃಷಿ ಭೂಮಿಗೆ ನುಗ್ಗಿ ತೊಂದರೆಗೊಳಗಾದ ಪ್ರದೇಶವನ್ನೂ ವೀಕ್ಷಿಸಿದರು.

Advertisement

ಅಪರ ಜಿಲ್ಲಾಧಿಕಾರಿ ಡಾ| ಸಂತೋಷ್‌ಕುಮಾರ್‌, ಪ್ರೊಬೆಷನರಿ ಐಎಎಸ್‌ ಅಧಿಕಾರಿ ಶುಶಾಂತ್‌, ಮಂಗಳೂರು ಸಹಾಯಕ ಕಮೀಷನರ್‌ ಹರ್ಷವರ್ಧನ ಪಿ.ಜೆ., ಕಂದಾಯ ನಿರೀಕ್ಷಕರಾದ ಜನಾರ್ದನ್‌ ಜೆ, ವಿಜಯ್‌ ಆರ್‌, ಪುರಸಭಾ ಸಮುದಾಯ ಸಂಘಟಕಿ ಉಮಾವತಿ ಉಪಸ್ಥಿತರಿದ್ದರು.

ಪುತ್ತೂರು: ಎರಡು ದಿನಗಳಿಂದ ಭಾರೀ ಮಳೆಯಿಂದ ಪುತ್ತೂರು ತಾಲೂಕಿನ ಅಲ್ಲಲ್ಲಿ ಹಾನಿ ಉಂಟಾಗಿದ್ದು, ಮುನ್ನೆಚ್ಚೆರಿಕೆ ವಹಿಸಿಕೊಳ್ಳಬೇಕಾದ ಸ್ಥಳಗಳಿಗೆ ದ.ಕ.ಜಿಲ್ಲಾಧಿಕಾರಿ ಮುಲ್ಲೈ ಮುಗಿಲನ್ ಶುಕ್ರವಾರ ಭೇಟಿ ನೀಡಿ ಪರಿಶೀಲಿಸಿದರು.

ಈಗಾಗಲೇ ಮಳೆಯಿಂದ ತೊಂದರೆಗೆ ಒಳಗಾಗಿರುವ ಸಂತ್ರಸ್ತರನ್ನು ತಾತ್ಕಾಲಿಕ ನೆಲೆಯಲ್ಲಿ ಬೇರೆಡೆಗೆ ಸ್ಥಳಾಂತರಿಸಬೇಕು. ಮನೆ ಶಿಥಿಲ ಸ್ಥಿತಿಯಲ್ಲಿದ್ದರೆ ಅಂತಹ ಕುಟುಂಬಗಳನ್ನು ಕಾಳಜಿ ಕೇಂದ್ರಗಳಿಗೆ ಸ್ಥಳಾಂತರಿಸುವಂತೆ ಮುಲ್ಲೈ ಮುಗಿಲನ್ ಅವರು ಸಹಾಯಕ ಆಯುಕ್ತರು ಮತ್ತು ತಹಶೀಲ್ದಾರ್‌ ಸೂಚನೆ ನೀಡಿದರು.

ಭೂ ಕುಸಿತ ಸಂಭವಿಸುವ ಸ್ಥಳಗಳನ್ನು ಗುರುತಿಸಿ ಅಲ್ಲಿ ಮುನ್ನೆಚ್ಚರಿಕೆ ಕ್ರಮಗಳನ್ನು ಅಳವಡಿಸಿಕೊಳ್ಳಬೇಕು. ಚೆಲ್ಯಡ್ಕ ಮುಳುಗು ಸೇತುವೆಯ ಬದಲು ಬೇರೆ ಮಾರ್ಗಗಳಲ್ಲಿ ಸಂಚಾರಕ್ಕೆ ವ್ಯವಸ್ಥೆ ಮಾಡಬೇಕು ಎಂದು ಅವರು ಸೂಚಿಸಿದರು.

ತಂಡ ರಚಿಸಿ
ಕಂದಾಯ ಇಲಾಖೆ, ಗ್ರಾ.ಪಂ. ಪಿಡಿಒ ನೇತೃತ್ವದಲ್ಲಿ ತಂಡಗಳನ್ನು ರಚಿಸಿ ಅಪಾಯ ಸಂಭವಿಸಬಹುದಾದ ಪ್ರದೇಶಗಳ ಬಗ್ಗೆ ಪಟ್ಟಿ ತಯಾರಿಸಿ ಅಲ್ಲಿ ಸುರûಾ ಕ್ರಮ ಅನುಷ್ಠಾನಿಸುವಂತೆ ಜಿಲ್ಲಾಧಿಕಾರಿಗಳು ಸಹಾಯಕ ಆಯುಕ್ತರಿಗೆ ಸೂಚಿಸಿದರು.

ಬೀರಮಲೆ, ಬಪ್ಪಳಿಗೆ, ಸಿಂಗಾಣಿ, ಬನ್ನೂರು, ಚೆಲ್ಯಡ್ಕ ಭಾಗಕ್ಕೆ ಭೇಟಿ ನೀಡಿದ ಜಿಲ್ಲಾಧಿಕಾರಿ, ಮಳೆ ಹಾನಿ ಕುರಿತು ಅಧಿಕಾರಿಗಳಿಂದ ಮಾಹಿತಿ ಪಡೆದರು. ಸಹಾಯಕ ಕಮಿಷನರ್‌ ಜುಬಿನ್‌ ಮೊಹಪಾತ್ರ, ತಾಲೂಕು ಪಂಚಾಯತ್‌ ಇಒ ನವೀನ ಭಂಡಾರಿ, ನಗರಸಭೆ ಆಯುಕ್ತ ಮಧು ಮನೋಹರ್‌, ಕಂದಾಯ ನಿರೀಕ್ಷಕ ಗೋಪಾಲ್‌ ಮೊದಲಾದವರು ಉಪಸ್ಥಿತರಿದ್ದರು.

ಚೆಲ್ಯಡ್ಕ ಸೇತುವೆಯಲ್ಲಿ
ಘನ ವಾಹನ ನಿಷೇಧ
ಚೆಲ್ಯಡ್ಕ ಸೇತುವೆಯಲ್ಲಿ ಘನ ವಾಹನಗಳ ಸಂಚಾರವನ್ನು ನಿಷೇಧಿಸಿ ಜಿಲ್ಲಾಧಿಕಾರಿಗಳು ಆದೇಶ ಹೊರಡಿಸಿದ್ದಾರೆ.

 

Advertisement

Udayavani is now on Telegram. Click here to join our channel and stay updated with the latest news.

Next