Advertisement

New Year: ನೂತನ ವರ್ಷಾರಂಭಕ್ಕೆ ಎರಡು ಲಕ್ಷ ಲಾಡು ವಿತರಣೆ

02:42 PM Dec 28, 2023 | Team Udayavani |

ಮೈಸೂರು: ನೂತನ ವರ್ಷವನ್ನು ಸ್ವಾಗತಿಸಲು ಸಾಂಸ್ಕೃತಿಕ ನಗರಿ ಮೈಸೂರು ಸಜ್ಜಾಗುತ್ತಿದ್ದು, ಲೋಕ ಕಲ್ಯಾಣದೊಂದಿಗೆ ಹೊಸ ವರ್ಷವನ್ನು ಸಂಭ್ರಮದಿಂದ ಸ್ವಾಗತಿಸಲು ವಿಜಯನಗರದ ಯೋಗ ನರಸಿಂಹಸ್ವಾಮಿ ದೇವಸ್ಥಾನದಲ್ಲಿ 2 ಲಕ್ಷ ಲಾಡುಗಳನ್ನು ತಯಾರಿಸಲಾಗುತ್ತಿದೆ.

Advertisement

ಜ.1ರಂದು ದೇವಸ್ಥಾನಕ್ಕೆ ಬರುವ ಭಕ್ತರಿಗೆ ಲಾಡುಗಳನ್ನು ವಿತರಿಸಲಾಗುತ್ತಿದ್ದು, ಅದಕ್ಕಾಗಿ ತಿರುಪತಿ ಮಾದರಿಯ 2 ಲಕ್ಷ ಲಾಡುಗಳು ಸಿದ್ಧವಾಗುತ್ತಿವೆ. ಅಂದು ಬೆಳಗ್ಗೆ 4 ಗಂಟೆಯಿಂದ ರಾತ್ರಿ 12 ಗಂಟೆಯವರೆಗೆ ಭಕ್ತಾದಿಗಳಿಗೆ ಲಾಡು ಗಳನ್ನು ವಿತರಿಸುವ ಕಾರ್ಯಕ್ರಮ ನಡೆಯಲಿದೆ ಎಂದು ಯೋಗಾನರಸಿಂಗಸ್ವಾಮಿ ದೇಗುಲದ ಸಂಸ್ಥಾಪಕ ಪ್ರೊ.ಭಾಷ್ಯಂ ಸ್ವಾಮೀಜಿ ಬುಧವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.

1994ರಿಂದ ಲಾಡು ವಿತರಿಸುವ ಕಾರ್ಯವನ್ನು ನಡೆಸಿಕೊಂಡು ಬರಲಾಗಿದ್ದು, ಈ ವರ್ಷವೂ ನೂತನ ವರ್ಸಾರಂಭದ ಅಂಗವಾಗಿ ಜ.1ರ ಬೆಳಗ್ಗೆ 4 ಗಂಟೆಯಿಂದ ಪ್ರಾರಂಭಿಸಿ ಶ್ರೀ ಯೋಗಾ ನರಸಿಂಹಸ್ವಾಮಿಯವರಿಗೆ ವಿಶೇಷ ಅಲಂಕಾರ ಮತ್ತು ಶ್ರೀರಂಗ, ಮಧುರೆ ಕ್ಷೇತ್ರದಿಂದ ತರಿಸಿರುವ ವಿಶೇಷ ತೋಮಾಲೆ ಮತ್ತು ಸ್ವರ್ಣಪುಷ್ಪದಿಂದ ಶ್ರೀಸ್ವಾಮಿಗೆ ಸಹಸ್ರನಾಮರ್ಚನೆ ಮತ್ತು ದೇಗುಲದ ಉತ್ಸವ ಮೂರ್ತಿಯಾದ ಶ್ರೀಮಲಯಪ್ಪನ್‌ ಸ್ವಾಮಿ, ಪದ್ಮಾವತಿ ಮತ್ತು ಮಹಾಲಕ್ಷ್ಮೀ ದೇವರಿಗೆ ದೇಗುಲದ ಆವರಣದಲ್ಲಿ ಏಕಾದಶ ಪ್ರಾಕಾರೋತ್ಸವ ಹಾಗೂ 20 ಕ್ವಿಂಟಲ್‌ ಪುಳಿಯೊಗರೆ ನಿವೇದನೆ ಮಾಡಲಾಗುತ್ತಿದ್ದು, ದೇಗುಲದಕ್ಕೆ ಆಗಮಿಸುವ ಎಲ್ಲಾ ಭಕ್ತಾದಿಗಳಿಗೆ ಎರಡು ಲಕ್ಷ ತಿರುಪತಿ ಮಾದರಿಯ ಲಾಡು ವಿತರಣಾ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ ಎಂದರು.

ದೊಡ್ಡ ಮಟ್ಟದಲ್ಲಿ ಸಾಮಗ್ರಿಗಳ ಬಳಕೆ: ಲಾಡು ತಯಾರಿಕೆಗೆ 100 ಕ್ವಿಂಟಾಲ್‌ ಕಡ್ಲೆಹಿಟ್ಟು, 200 ಕಿಂಟಾಲ್‌ ಸಕ್ಕರೆ, 10 ಸಾವಿರ ಲೀ. ಖಾದ್ಯ ತೈಲ, 500 ಕೆ.ಜಿ ಗೋಡಂಬಿ, 500 ಕೆ.ಜಿ ಒಣದ್ರಾಕ್ಷಿ, 500 ಕೆ.ಜಿ ಬಾದಾಮಿ, 1 ಸಾವಿರ ಕೆ.ಜಿ ಡೈಮಂಡ್‌ ಸಕ್ಕರೆ, 2 ಸಾವಿರ ಕೆ.ಜಿ ಬೂರಾ ಸಕ್ಕರೆ, 20 ಕೆ.ಜಿ ಪಿಸ್ತಾ, 50 ಕೆ.ಜಿ ಏಲಕ್ಕಿ, 50 ಕೆ.ಜಿ ಜಾಕಾಯಿ ಮತ್ತು ಜಾಪತ್ರೆ, 50 ಕೆ.ಜಿ, ಪಚ್ಚೆ ಕರ್ಪೂರ, 200 ಕೆ.ಜಿ ಲವಂಗಗಳನ್ನು ಬಳಸಿ ತಯಾರಿಸಲಾಗಿದೆ ಎಂದು ತಿಳಿಸಿದರು. ದೇವಸ್ಥಾನದ ಆಡಳಿತಾಧಿಕಾರಿ ಎನ್‌.ಶ್ರೀನಿವಾಸನ್‌ ಇತರರು ಇದ್ದರು.

60 ನುರಿತ ಬಾಣಸಿಗರಿಂದ ಲಾಡು ತಯಾರಿ :

Advertisement

ಈ ವರ್ಷ ಅಂದಾಜು 2 ಕೆ.ಜಿ. ತೂಕದ 15 ಸಾವಿರ ಲಾಡುಗಳು ಹಾಗೂ 150 ಗ್ರಾಂ ತೂಕದ 2 ಲಕ್ಷ ಲಾಡುಗಳನ್ನು ದೇವಾಲಯಕ್ಕೆ ಬರುವ ಎಲ್ಲಾ ಭಕ್ತಾದಿಗಳಿಗೆ ಯಾವುದೇ ಜಾತಿ, ಮತ ಭೇದವಿಲ್ಲದೆ ಉಚಿತವಾಗಿ ವಿತರಿಸಲಾಗುವುದು. ಲಾಡು ಪ್ರಸಾದವನ್ನು ವಿಶೇಷವಾಗಿ 60 ಮಂದಿ ನುರಿತ ಬಾಣಸಿಗರಿಂದ ತಯಾರಿಸಲಾಗಿದ್ದು, ಡಿ.20 ರಿಂದ ಪ್ರಾರಂಭಿಸಿ 31ರವರೆಗೂ ಲಾಡು ತಯಾರಿ  ಕಾರ್ಯ ನಡೆಯುತ್ತಿದೆ ಎಂದರು.

ವಿಶ್ವಶಾಂತಿ, ಜಾತೀಯತೆ, ಮತೀ ಯತೆ ತೊಲಗಿಸಿ ಸಮಾನತೆ, ಸರ್ವಧರ್ಮ ಸಮನ್ವಯತೆ ಆಚರಿಸುವ ಸಲುವಾಗಿ ಹೊಸ ವರ್ಸಾಚರಣೆ ಮಾಡಲಾಗುತ್ತಿದೆ. ವರ್ಷವನ್ನು ಒಳ್ಳೆಯ ಕಾರ್ಯದ ಮೂಲಕ ಆರಂಭಿಸಬೇಕಿರುವ ಹಿನ್ನೆಲೆಯಲ್ಲಿ ವಿಶೇಷ ಸಂಕಲ್ಪ ಮಾಡಿ ಸಾರ್ವಜನಿಕರಿಗೆ ಸಿಹಿ ವಿತರಿಸಲಾಗುತ್ತಿದೆ.-ಪ್ರೊ.ಭಾಷ್ಯಂ ಸ್ವಾಮೀಜಿ, ದೇವಸ್ಥಾನದ ಸಂಸ್ಥಾಪಕ

ರಾಜಕುಮಾರ್‌ ದಂಪತಿಗಳ ಪ್ರೇರಣೆ ಯಿಂದ 1994ರಲ್ಲಿ 1 ಸಾವಿರ ಲಾಡು ವಿತರಣೆಯೊಂದಿಗೆ ಆರಂಭವಾದ ಈ ಸೇವೆ ಇಂದು 2 ಲಕ್ಷ ಲಾಡು ವಿತರಣೆ ಯೊಂದಿಗೆ ನಿರಾಂತಕವಾಗಿ ನಡೆಯುತ್ತಿದೆ. ಕೊರೊನಾ ಅಲೆ ಮತ್ತೆ ಬಂದಿರುವುದರಿಂದ ಸಾರ್ವಜನಿಕರು ಮುನ್ನೆಚ್ಚರಿಕೆ ವಹಿಸ ಬೇಕು. ಹಿರಿಯ ನಾಗರಿಕರು ಕಡ್ಡಾಯವಾಗಿ ಮಾಸ್ಕ್ ಧರಿಸಿ ಬರಬೇಕು.-ಎನ್‌.ಶ್ರೀನಿವಾಸನ್‌, ದೇವಸ್ಥಾನದ ಆಡಳಿತಾಧಿಕಾರಿ

Advertisement

Udayavani is now on Telegram. Click here to join our channel and stay updated with the latest news.

Next