ರಾಮದುರ್ಗ: ರೈತರಿಗೆ ಅನುಕೂಲ ಕಲ್ಪಿಸುವ ಉದ್ದೇಶದಿಂದ ಸರ್ಕಾರ ರಿಯಾಯಿತಿ ದರದಲ್ಲಿ ಕೃಷಿ ಉಪಕರಣನೀಡುತ್ತಿದ್ದು, ರೈತರು ಸದುಪಯೋಗ ಪಡೆದುಕೊಂಡು ಕೃಷಿ ಕ್ಷೇತ್ರ ಬಲಪಡಿಸುವಲ್ಲಿ ಮುಂದಾಗಬೇಕು ಎಂದು ಶಾಸಕ ಮಹಾದೇವಪ್ಪ ಯಾದವಾಡ ಹೇಳಿದರು.
ಕೆ. ಚಂದರಗಿ ರೈತ ಸಂಪರ್ಕ ಕೇಂದ್ರದಲ್ಲಿ ಕೃಷಿ ಇಲಾಖೆಯಿಂದ ರೈತರಿಗೆ ನೀಡಲಾಗುವ ಕೃಷಿ ಪರಿಕರ ವಿತರಿಸಿ ಮಾತನಾಡಿದ ಅವರು, ರೈತರು ಕೇವಲ ಯಂತ್ರಗಳ ಬಳಕೆಗೆ ಸಿಮಿತವಾಗದೇ ಮನೆಯಲ್ಲಿ ಎರಡೆತ್ತು ಕಟ್ಟಿ ಕೃಷಿ ಮಾಡುವ ಪ್ರವೃತ್ತಿ ಬೆಳೆಸಿಕೊಳ್ಳಬೇಕು ಎಂದರು.
ಅತಿಯಾಗಿ ಯಂತ್ರ ಬಳಸಿ ಉಳುಮೆ ಮಾಡುವದರಿಂದ ಫಲವತ್ತತೆ ನಾಶಕ್ಕೆ ಕಾರಣವಾಗುತ್ತದೆ. ಆದ್ದರಿಂದ ಎತ್ತುಗಳ ಮೂಲಕ ಕೃಷಿ ಮಾಡುವಲ್ಲಿ ಮುಂದಾಗಬೇಕು. ಜೊತೆಗೆ ಅತಿಯಾದ ರಾಸಾಯನಿಕ ಗೊಬ್ಬರ ಬಳಸುವುದು ಬಿಟ್ಟು ಸಾವಯವ ಪದ್ಧತಿಯತ್ತ ಗಮನ ಹರಿಸುವಲ್ಲಿ ಎಲ್ಲರೂ ಮುಂದಾಗಬೇಕು ಎಂದರು.
ಸರ್ಕಾರ ಕೃಷಿ ಉತ್ತೇಜಿಸುವ ನಿಟ್ಟಿನಲ್ಲಿ ಪವರ್ ಟೇಲರ್, ಬಿತ್ತುವ ಕೂರಿಗೆ, ಪಾಲ್ಟಿ ನೇಗಿಲು, ರೂಟಾವೇಟರ್ ಸೇರಿದಂತೆ ಇತರ ಕೃಷಿ ಉಪಕರಣ ನೀಡುತ್ತಿದೆ. ಕೋವಿಡ್ ಕಾರಣದಿಂದಾಗಿ ಸ್ವಲ್ಪ ವಿಳಂಬವಾದರೂ ಈಗ ಅರ್ಜಿ ಸಲ್ಲಿಸಿದ ರೈತರಿಗೆ ಪರಿಕರ ವಿತರಿಸುವ ಕಾರ್ಯ ನಡೆಸಲಾಗುತ್ತಿದೆ ಎಂದರು.
ಸಹಾಯಕ ಕೃಷಿ ನಿರ್ದೇಶಕ ಎಸ್.ಎಫ್. ಬೆಳವಟಗಿ ಮಾತನಾಡಿ, ರೈತರಿಗೆ ಬೇಕಾದ ಕೃಷಿ ಉಪಕರಣ ಪಡೆಯಲು ಅವಕಾಶಗಳಿದ್ದು, ಯಾವ ರೈತರಿಗೆ ಯಾವ ವಸ್ತುಗಳು ಹಾಗೂ ಯಾಪ ಕಂಪನಿಯಿಂದ ಪಡೆಯಬೇಕು ಎಂಬುದನ್ನು ಅರ್ಜಿ ಸಲ್ಲಿಸಿದರೆ ಅವುಗಳನ್ನು ಪೂರೈಸಲು ಅ ಧಿಕಾರಿಗಳು ಶ್ರಮಿಸಲಿದ್ದಾರೆ. ಅಲ್ಲದೇ ಶಾಸಕರ ನಿರ್ದೇಶನದ ಮೆರೆಗೆ ತಾಲೂಕಿನಲ್ಲಿ ಕೃಷಿ ಅಭಿವೃದ್ಧಿಗೆ ಸದಾ ಶ್ರಮಿಸುವುದಾಗಿ ಹೇಳಿದರು.
ಈ ವೇಳೆ ಗ್ರಾಪಂ ಅಧ್ಯಕ್ಷೆ ಸಾವಿತ್ರಿ ಅಡಗಿಮನಿ, ಉಪಾಧ್ಯಕ್ಷ ರಾಮಕೃಷ್ಣ ಬಡಿಗೇರ, ಸದಸ್ಯರಾದ ವಿಜಯಾ ಮನ್ನೂರ, ಗಂಗಮ್ಮ ಮೇಟಿ, ಮುಖಂಡರಾದ ಶಿವಪ್ಪ ನವರಕ್ಕಿ, ಬಾಳನಗೌಡ ಪಾಟೀಲ, ಮಾರುತಿ ಮೇಟಿ, ಬಾಳಪ್ಪ ಹಂಜಿ, ಉಮೇಶ ಕೊಳವಿ ಸೇರಿದಂತೆ ಇತರರಿದ್ದರು. ಕೃಷಿ ಅಧಿಕಾರಿ ರಮೇಶ ಅರಕೇರಿ ಸ್ವಾಗತಿಸಿ, ವಂದಿಸಿದರು.