Advertisement

ಪೌರ ಕಾರ್ಮಿಕ ಕಾಯಂ ಹುದ್ದೆಗಾಗಿ ಅಡ್ಡದಾರಿ

12:23 PM Jul 31, 2017 | |

ತಿ.ನರಸೀಪುರ: ಪರಿವರ್ತಿತ ಪುರಸಭೆಯಲ್ಲಿ ಪೌರ ಕಾರ್ಮಿಕರ ಕಾಯಂ ಹುದ್ದೆ ಗಿಟ್ಟಸಿಕೊಳ್ಳಲು 10 ಮಂದಿ ಸವರ್ಣೀಯರು ಸರ್ಕಾರಕ್ಕೆ ಸುಳ್ಳು ದಾಖಲೆ ನೀಡಿ ಅನುಮೋದನೆ ಪಡೆದು ಅವ್ಯವಹಾರ ನಡೆಸಿದ್ದಾರೆ ಎಂದು ಪ.ಜಾತಿ ಮತ್ತು ಪ.ಪಂಗಡಗಳ ಹಿತರಕ್ಷಣಾ ಸಮಿತಿ ಜಿಲ್ಲಾ ಸಂಚಾಲಕ ಆಲಗೂಡು ಶಿವಕುಮಾರ್‌ ಗಂಭೀರ ಆರೋಪ ಮಾಡಿದರು.

Advertisement

ಪಟ್ಟಣದ ತಾಲೂಕು ತಹಶೀಲ್ದಾರ್‌ ಕಚೇರಿ, ನ್ಯಾಯಾಲಯ ಸಭಾಂಗಣದಲ್ಲಿ ನಡೆದ ತಾಲೂಕು ಮಟ್ಟದ ಪ.ಜಾತಿ ಮತ್ತು ಪ.ಪಂಗಡ ಹಿತರಕ್ಷಣಾ ಸಮಿತಿಯ ಸಭೆಯಲ್ಲಿ ಆರೋಪ ಮಾಡಿದ ಅವರು, ಪರಿವರ್ತಿತ ಪುರಸಭೆಯಲ್ಲಿ ಪೌರಕಾರ್ಮಿಕರ ಕಾಯಂ ಮಾಡುವಲ್ಲಿಯೂ ಅರ್ಹ ಪೌರ ಕಾರ್ಮಿಕರಿಗೆ ಉದ್ಯೋಗ ವಂಚಿಸುವ ಹುನ್ನಾರ ನಡೆದಿರುವುದನ್ನು ಪ್ರಪ್ತಾಪಿಸಿದದರು, ಈ ಮೂಲಕ ಸರ್ಕಾರಕ್ಕೆ ತಪ್ಪು ಮಾಹಿತಿ ನೀಡಿದ್ದು, ಪ್ರಕರಣವನ್ನು ಉನ್ನತ ಮಟ್ಟದ ತನಿಖೆಗೆ ಒಪ್ಪಿಸಬೇಕೆಂದು ಆಗ್ರಹಿಸಿದರು.

ಮೀಸಲು ಹಣ ದುರ್ಬಳಕೆ: ಮೇಲ್ದರ್ಜೆಗೇರಿದ ಪುರಸಭೆಯಲ್ಲಿ ಅಸ್ಥಿತ್ವ ಕಳೆದುಕೊಂಡ ಭೈರಾಪುರ ಪಂಚಾಯ್ತಿಯ 13 ಮಂದಿ ಪೌರ ಕಾರ್ಮಿಕರಿಗೆ ಕಾಯಂ ಆಗಿಲ್ಲ. ದಿನಗೂಲಿ ನೌಕರರಾಗಿ ಮನೆ ಕಸ ಸಂಗ್ರಹಕ್ಕೆ ನಿಯೋಜನೆಗೊಂಡ ಕಾರ್ಮಿಕರಿಗೂ ಅನುಮೋದನೆ ನೀಡಿಲ್ಲ. ಅದರೆ, ಪೌರ ಕಾರ್ಮಿಕರಲ್ಲದ 10 ಮಂದಿಗೆ ಅನುಮೋದನೆ ನೀಡಿ, ಪೌರ ಸೇವೆಗೆ ಬಳಸಿಕೊಳ್ಳದೆ.

ಕಚೇರಿ ಸಹಾಯಕರಾಗಿ, ಸ್ವತ್ಛ ಭಾರತ್‌ ಅಭಿಯಾನದ ನೆಪದಲ್ಲಿ ಕಡಿಮೆ ದುಡಿಮೆ ಮಾಡಿಸಿಕೊಂಡು ಪೌರ ಕಾರ್ಮಿಕರ ಸೌಲಭ್ಯಗಳನ್ನು ನೀಡಲಾಗುತ್ತಿದೆ. ಎಸ್‌ಎಫ್ಸಿ ಮತ್ತು ಎಸ್ಸಿ/ಎಸ್ಟಿ ಮೀಸಲು ಹಣವನ್ನು ದುರ್ಬಳಕೆ ಮಾಡಿಕೊಂಡಿರುವ ಪ್ರಕರಣವನ್ನು ಸಮಿತಿ ಗಂಭೀರವಾಗಿ ಪರಿಗಣಿಸಿ ಶಿಸ್ತುಕ್ರಮಕ್ಕೆ ಶಿಫಾರಸ್ಸು ಮಾಡಬೇಕು. ಗ್ರಾ.ಪಂಗಳಲ್ಲಿ ದುಡಿಯುತ್ತಿರುವ ಪೌರ ಕಾರ್ಮಿಕರಿಗೆ ಕನಿಷ್ಠ ವೇತನವನ್ನು ನೀಡಬೇಕೆಂದು ಒತ್ತಾಯಿಸಿದರು.

ಮುಖ್ಯಾಧಿಕಾರಿ ಸ್ಪಷ್ಟನೆ: ಪುರಸಭೆ ಮುಖ್ಯಾಧಿಕಾರಿ ಎಂ.ಸಿ.ನಾಗರತ್ನ ಮಾತನಾಡಿ, ಪರಿವರ್ತಿತ ಪುರಸಭೆಯಲ್ಲಿ ಭೈರಾಪುರ ಹಾಗೂ ಆಲಗೂಡು ಗ್ರಾಮ ಪಂಚಾಯಿತಿಗಳು ವಿಲೀನಗೊಂಡ ಸಂದರ್ಭದಲ್ಲಿ ಅನುಮೋದಿತ ಮತ್ತು ಅನುಮೋದನೆ ಪಡೆಯದ ನೌಕರರನ್ನು ಪುರಸಭೆಗೆ ನಿಯೋಜಿಸಿಕೊಳ್ಳಲು ಸಮಸ್ಯೆ ಎದುರಾಯಿತು. ಅನುಮೋದನೆ ಪಡೆದವರ ಪಟ್ಟಿಯಲ್ಲಿ 10 ಮಂದಿಗೆ ಪೌರ ಕಾರ್ಮಿಕರೆಂದು ನಮೂದಿಸಿದ್ದರಿಂದ ಅವರಿಗೆ ಪೌರ ಕಾರ್ಮಿಕರೆಂದೇ ಹುದ್ದೆ ನೀಡಲಾಗಿದೆ. ಅವರನ್ನು ಪೌರ ಸೇವಾ ಕಾರ್ಯಕ್ಕೆ ಬಳಕೆ ಮಾಡಿಕೊಳ್ಳಲಾಗುತ್ತಿದೆ ಎಂದು ಸ್ಪಷ್ಟನೆ ನೀಡಿದರು.

Advertisement

ಕಾನೂನು ಕ್ರಮದ ಎಚ್ಚರಿಕೆ: ತಾಪಂ ಸಾಮಾಜಿಕ ನ್ಯಾಯ ಸ್ಥಾಯಿ ಸಮಿತಿ ಅಧ್ಯಕ್ಷ ರಾಮಲಿಂಗಯ್ಯ ಮಾತನಾಡಿ, ಅರ್ಹ ಪೌರ ಕಾರ್ಮಿಕರಿಗೆ ಉದ್ಯೋಗ ವಂಚಿಸಿ, ಪೌರ ಕಾರ್ಮಿಕರಲ್ಲದವರು ಉದ್ಯೋಗ ಪಡೆದುಕೊಂಡು. ಸರ್ಕಾರಕ್ಕೆ ತಪ್ಪು ಮಾಹಿತಿ ನೀಡಿದ ಅಧಿಕಾರಿಗಳ ಮಾಹಿತಿಯನ್ನು ಸಮಿತಿಗೆ ಸಲ್ಲಿಸಿದರೆ ಅವರೆಲ್ಲರ ವಿರುದ್ಧ ದಲಿತ ದೌರ್ಜನ್ಯ ಕಾಯ್ದೆಯಡಿ ಪ್ರಕರಣವನ್ನು ದಾಖಲಿಸಿ ಕಾನೂನು ಕ್ರಮ ಜರುಗಿಸುವ ಸಂಪೂರ್ಣ ಅಧಿಕಾರ ಎಸ್ಸಿ/ಎಸ್ಟಿ ಹಿತರಕ್ಷಣಾ ಸಮಿತಿಗಿದೆ ಎಂದು ಎಚ್ಚರಿಸಿದರು.

ಕಟ್ಟು ನಿಟ್ಟಿನ ಸೂಚನೆಗೆ ಆದೇಶ: ತಹಶೀಲ್ದಾರ್‌ ಬಸವರಾಜು ಚಿಗರಿ ಮಾತನಾಡಿ, ಪುರಸಭೆಯಲ್ಲಿ ಪೌರ ಕಾರ್ಮಿಕರಾಗಿ ಅನುಮೋದನೆ ಪಡೆದುಕೊಂಡ 10 ಮಂದಿಗೆ ನೋಟಿಸ್‌ ಕೊಟ್ಟು ವಿವರಣೆ ಪಡೆದುಕೊಳ್ಳಿ. ಇಲ್ಲವೆ ಪೌರ ಸೇವಾ ನೌಕರಿಯನ್ನು ಮಾಡುವಂತೆ ಕಟ್ಟು ನಿಟ್ಟಿನ ಸೂಚನೆ ನೀಡಬೇಕು. ಎಸ್ಸಿ/ಎಸ್ಟಿ ಹಿತರಕ್ಷಣಾ ಸಮಿತಿ ಸಭೆ ನಡೆಯುವ ಮೊದಲು ಅಧಿಕಾರಿಗಳು ಅನುಪಾಲನಾ ವರದಿಯೊಂದಿಗೆ ಪೂರ್ವಸಿದ್ಧತಾ ಸಭೆಯನ್ನು ನಡೆಸಬೇಕು. ಸಭೆಯಲ್ಲಿ ಕೈಗೊಂಡ ನಿರ್ಣಯಗಳಿಗೆ ತುರ್ತಾಗಿ ಸ್ಪಂದಿಸಿ ದಲಿತರ ಸಮಸ್ಯೆಗಳಿಗೆ ಪರಿಹಾರ ಸೂಚಿಸಬೇಕು ಎಂದು ಸಲಹೆ ನೀಡಿದರು.

ಸಭೆಯ ಆರಂಭದಲ್ಲಿ ತಾಪಂ ಮಾಜಿ ಉಪಾಧ್ಯಕ್ಷ ಬಿ.ಮರಯ್ಯ , ಇಲಾಖಾ ಮುಖ್ಯಸ್ಥ ಅಧಿಕಾರಿಗಳ ಗೈರು ಹಾಜರಾತಿಗೆ ಆಕ್ಷೇಪ ವ್ಯಕ್ತಪಡಿಸಿದರು. ದಲಿತ ಸಂಘರ್ಷ ಸಮಿತಿ ತಾಲೂಕು ಸಂಚಾಲಕ ಕುಕ್ಕೂರು ರಾಜು ಅವರು ಹೊಸ ಕುಕ್ಕೂರು ಗ್ರಾಮದ ದಲಿತರ ನಿವೇಶನ ಸಮಸ್ಯೆಯ ಪ್ರಸ್ತಾಪವ ಸಭಾ ನಡಾವಳಿಯಲ್ಲಿ ತಪ್ಪಾಗಿ ನಿರ್ಣಯಿಸಿ ನಮೂದಿರುವ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿದರು. ದಲಿತ ಜಾಗೃತಿ ಸಮಿತಿ ಜಿಲ್ಲಾಧ್ಯಕ್ಷ ತುಂಬಲ ಮಂಜುನಾಥ್‌ ಕೆಂಪಯ್ಯನಹುಂಡಿ ಗ್ರಾಮದಲ್ಲಿ ದಲಿತ ನಿವೇಶನ ಹಂಚಿಕೆಯಾಗದ ವಿಚಾರವನ್ನು ಪ್ರಸ್ತಾಪಿಸಿದರು.

ಪ.ಜಾತಿ ಮತ್ತು ಪ.ಪಂಗಡ ಹಿತರಕ್ಷಣಾ ಸಮಿತಿ ಸದಸ್ಯರಾದ ಸೋಸಲೆ ಮಹದೇವಸ್ವಾಮಿ, ಕೆಂಪದಾಸು, ಬಸವಣ್ಣ, ಕಾರ್ಯದರ್ಶಿ ಹಾಗೂ ಸಮಾಜ ಕಲ್ಯಾಣಾಧಿಕಾರಿ ಜಗದೀಶ್‌, ಕೆಪಿಸಿಸಿ ಎಸ್ಸಿಗಳ ವಿಭಾಗದ ಉಪಾಧ್ಯಕ್ಷ ಹೊನ್ನನಾಯಕ, ಅಂಬೇಡ್ಕರ್‌ ಅಭಿವೃದ್ಧಿ ಸಂಘದ ಅಧ್ಯಕ್ಷ ಕರೋಹಟ್ಟಿ ಮಹದೇವಯ್ಯ, ನಾಯಕ ಸಂಘದ ಅಧ್ಯಕ್ಷ ಚಿನ್ನಸ್ವಾಮಿ, ಬಾಬೂಜಿ ಸಂಘದ ಅಧ್ಯಕ್ಷ ಮೂಗೂರು ಸಿದ್ದರಾಜು, ದಸಂಸ ಜಿಲ್ಲಾ ಖಜಾಂಚಿ ಆಲಗೂಡು ಶಿವಣ್ಣ,

-ತಾಲೂಕು ಸಂಚಾಲಕರಾದ ಯಾಚೇನಹಳ್ಳಿ ಸೋಮಶೇಖರ್‌, ಬನ್ನಹಳ್ಳಿ ಸೋಮಣ್ಣ, ತಾ.ಪಂ ಮಾಜಿ ಉಪಾಧ್ಯಕ್ಷ ಕುಕ್ಕೂರು ಪ್ರಸನ್ನ, ತಾ.ಪಂ ಕಾರ್ಯನಿರ್ವಹಕ ಅಧಿಕಾರಿ ಬಿ.ಎಸ್‌.ರಾಜು, ಎಎಸ್‌ಐ ಮೂರ್ತಿ, ಪಶುಪಾಲನೆ ಸಹಾಯಕ ನಿರ್ದೇಶಕ ಡಾ.ಚಿನ್ನಸ್ವಾಮಿ, ಸೆಸ್ಕಾಂ ಎಇಇ ಎ.ಎಂ.ಶಂಕರ್‌, ಮುಖಂಡರಾದ ಹುಣಸೂರು ಬಸವಣ್ಣ, ಆಲಗೂಡು ನಾಗರಾಜು, ಬೆನಕನಹಳ್ಳಿ ಗಂಗಾಧರ ಸೇರಿದಂತೆ ತಾಲೂಕು ಮಟ್ಟದ ಅಧಿಕಾರಿಗಳು ಮತ್ತು ಸಂಘಟನೆಗಳ ಮುಖಂಡರು ಹಾಜರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next