Advertisement

JDS ಅತೃಪ್ತ ನಾಯಕರು ಸಂಪರ್ಕದಲ್ಲಿದ್ದಾರೆ: ಸಚಿವ ಜಮೀರ್‌ ಅಹಮದ್‌ ಖಾನ್‌

09:42 PM Oct 02, 2023 | Team Udayavani |

ಬೆಂಗಳೂರು: ಬಿಜೆಪಿ-ಜೆಡಿಎಸ್‌ ಮೈತ್ರಿಯಿಂದ ಅತೃಪ್ತರಾಗಿರುವ ಮುಖಂಡರನ್ನು ಅರಮನೆ ಮೈದಾನದಲ್ಲಿ ಬೃಹತ್‌ ಸಮಾವೇಶ ನಡೆಸಿ ಕಾಂಗ್ರೆಸ್‌ಗೆ ಕರೆ ತರಲಾಗುವುದು ಎಂದು ವಸತಿ ಹಾಗೂ ಅಲ್ಪಸಂಖ್ಯಾತರ ಕಲ್ಯಾಣ ಸಚಿವ ಜಮೀರ್‌ ಅಹಮದ್‌ ಖಾನ್‌ ಹೇಳಿದ್ದಾರೆ.

Advertisement

ಕೆಪಿಸಿಸಿ ಕಚೇರಿಯಲ್ಲಿ ಏರ್ಪಡಿಸಿದ್ದ ಜೆಡಿಎಸ್‌ ತೊರೆದು ಕಾಂಗ್ರೆಸ್‌ ಸೇರಿದ ನಾಯಕರ ಸ್ವಾಗತ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಅವರು ಮಾತನಾಡಿದರು.

ರಾಮನಗರ, ಚನ್ನಪಟ್ಟಣ, ಹಾಸನ, ಮಂಡ್ಯ ಸಹಿತ ರಾಜ್ಯದ ಎಲ್ಲೆಡೆ ಅಲ್ಪಸಂಖ್ಯಾತರು ಹಾಗೂ ಸೇರಿ ಜಾತ್ಯತೀತ ಮನೋಭಾವವುಳ್ಳ ಮುಖಂಡರು ಜೆಡಿಎಸ್‌ನ ಮೈತ್ರಿ ನಡೆಯಿಂದ ಬೇಸರಗೊಂಡಿದ್ದಾರೆ. ಅಂತವರು ನಮ್ಮ ಸಂಪರ್ಕ ದಲ್ಲಿದ್ದಾರೆ. ಅವರೆಲ್ಲರನ್ನು ಅರಮನೆ ಮೈದಾನದಲ್ಲಿ ಬೃಹತ್‌ ಕಾರ್ಯಕ್ರಮ ಆಯೋಜಿಸಿ ಕಾಂಗ್ರೆಸ್‌ ಸೇರ್ಪಡೆ ಮಾಡಿಕೊಳ್ಳಲಾಗುವುದು ಎಂದು ಹೇಳಿದರು.

ಚಡ್ಡಿ ಹಾಕಿದ್ದು ಗೊತ್ತಿರಲಿಲ್ಲ: ದೇವೇಗೌಡರು ಈಗಲೂ ಜಾತ್ಯತೀತರು, ಆಗಲೂ ಜಾತ್ಯತೀತರು. ಅವರಿಂದ ನಮ್ಮ ಸಮಾಜಕ್ಕೆ ನ್ಯಾಯ ಸಿಕ್ಕಿದೆ, ಎರಡನೇ ಹಂತದ ನಾಯಕರನ್ನೂ ಬೆಳೆಸಿದ್ದಾರೆ. ಆದರೆ ಎಚ್‌.ಡಿ. ಕುಮಾರಸ್ವಾಮಿ ಜಾತ್ಯತೀತವಾದಿಯಲ್ಲ. ನಾನು ಕುಮಾರಸ್ವಾಮಿ ಅವರ ಎಲ್ಲ ವಿದ್ಯೆ ನೋಡಿದ್ದೆ . ಆದರೆ ಅವರು ಪ್ಯಾಂಟ್‌ ಒಳಗೆ ಆರ್‌ಎಸ್‌ಎಸ್‌ ಚಡ್ಡಿ ಹಾಕಿದ್ದು ಗೊತ್ತಿರಲಿಲ್ಲ ಎಂದು ವ್ಯಂಗ್ಯವಾಗಿ ಹೇಳಿದರು.

ಚನ್ನಪಟ್ಟಣದ ಮಾಜಿ ಶಾಸಕ ಅಶ್ವತ್ಥ್, ಜಬಿ, ಜಿಯಾಜಿಲ್ಲಾಖಾನ್‌ ಸೇರಿದಂತೆ ಹಲವು ಮುಖಂಡರು ಜೆಡಿಎಸ್‌ ತೊರೆದು ಕಾಂಗ್ರೆಸ್‌ ಸೇರಿದರು. ಈ ಸಂದರ್ಭದಲ್ಲಿ ಸಚಿವ ರಾಮಲಿಂಗಾರೆಡ್ಡಿ, ಸಂಸದ ಡಿ. ಕೆ. ಸುರೇಶ್‌ ಉಪಸ್ಥಿತರಿದ್ದರು.

Advertisement

ಜೆಡಿಎಸ್‌ -ಬಿಜೆಪಿ ಸರ್ಕಾರದಲ್ಲಿ ಕುಮಾರಸ್ವಾಮಿ ನನಗೆ ಕಾಟಾಚಾರಕ್ಕೆ ಸಚಿವ ಸ್ಥಾನ ನೀಡಿ ವಕ್ಫ್, ಹಜ್‌ ಖಾತೆ ಮಾತ್ರ ನೀಡಿದ್ದರು. ಕಾಂಗ್ರೆಸ್‌ ಸರ್ಕಾರದಲ್ಲಿ ನನಗೆ ಕಳೆದ ಬಾರಿ ನಾಲ್ಕು, ಈ ಬಾರಿ ಮೂರು ಪ್ರಬಲ ಖಾತೆ ನೀಡಿದ್ದಾರೆ. ಇದು ಕುಮಾರಸ್ವಾಮಿಗೂ ಕಾಂಗ್ರೆಸ್‌ಗೆ ಇರುವ ವ್ಯತಾಸ. ಬಿ.ಎಂ.ಫಾರೂಕ್‌ ಅವರು ಹೇಗೆ ಸಮರ್ಥಿಸಿಕೊಂಡು ಬಿಜೆಪಿ ಮೈತ್ರಿ ಒಪ್ಪುತ್ತಾರೆ?
-ಜಮೀರ್‌ ಅಹಮ್ಮದ್‌ ಖಾನ್‌, ಸಚಿವ

Advertisement

Udayavani is now on Telegram. Click here to join our channel and stay updated with the latest news.

Next