Advertisement

ದುರಂತಗಳು ಅನಿರೀಕ್ಷಿತ, ಅನಪೇಕ್ಷಿತ; ಆದರೆ ಜೀವ ಉಳಿಸುವ ಜಾಗೃತಿ ಅಗತ್ಯ

12:03 PM Apr 26, 2017 | Team Udayavani |

ಮಂಗಳೂರು: ಕರಾವಳಿಯ ಜಿಲ್ಲೆಗಳ ಸಹಿತ ರಾಜ್ಯದಲ್ಲಿ ಅಸಹಜ ಮರಣಗಳು ನಿರಂತರ ಸಂಭವಿಸುತ್ತಿವೆ. ಒಂದೇ ಸವನೆ ಹೆಚ್ಚುತ್ತಿವೆ ಅನ್ನುವುದು ಕಳವಳಕಾರಿ ಮತ್ತು ವಿಷಾದನೀಯ ಸಂಗತಿ.

Advertisement

ಬೋರ್‌ವೆಲ್‌ಗ‌ಳ ಪ್ರಕರಣ ಇನ್ನೂ ಸಂಭವಿಸುತ್ತಿವೆ. ದಕ್ಷಿಣ ಕನ್ನಡ ಮತ್ತು ಉಡುಪಿ ಸಹಿತ ಅವಿಭಜಿತ “ಜಿಲ್ಲೆ’ಯಲ್ಲಿ ಇಂತಹ ದುರಂತಗಳು ಸಂಭವಿಸಿಲ್ಲ. ಆದರೆ ಎಳೆಯ ಜೀವಗಳನ್ನು ನುಂಗಬಹುದಾದ ತೆರೆದ ಕೊಳವೆ ಬಾವಿಗಳ ಪತ್ತೆಗೆ ಉಭಯ ಜಿಲ್ಲಾಧಿಕಾರಿ ಆದೇಶ ನೀಡಿದ್ದಾರೆ. ಮುಚ್ಚದೇ ಬಿಟ್ಟಿದ್ದರೆ ಕ್ರಿಮಿನಲ್‌ ಮೊಕದ್ದಮೆಗೆ ಆದೇಶಿಸಲಾಗಿದೆ.

ಕಲ್ಲಿನ ಕೋರೆಗಳಲ್ಲಿ
ಜಿಲ್ಲೆಯ ಕಲ್ಲಿನ ಕೋರೆಗಳಲ್ಲಿ ಪ್ರಾಣಾಪಾಯ ಸಂಭವಿಸುತ್ತಿರುವುದು ಗಮನಾರ್ಹ ದುರಂತ. ಅನೇಕ ಬಾರಿ ಕಾನೂನು ರಹಿತವಾಗಿ ಕಾರ್ಯಾಚರಿಸುತ್ತಿರುವ ಇಂತಹ ಕೋರೆಗಳು (ಆಂಗ್ಲದ ಕ್ವಾರಿ) ಸ್ಫೋಟಕ ಬಳಸಿ ಪರಿಸರದಲ್ಲಿ ದುರಂತಗಳನ್ನು ಸೃಷ್ಟಿಸುತ್ತವೆ.

ಕಲ್ಲು ತೆಗೆದ ಬಳಿಕ ಉಪೇಕ್ಷಿಸಲಾಗುವ ಇಂತಹ ಕೋರೆಗಳಲ್ಲಿ ಅನೇಕ ಬಾರಿ ನೈಸರ್ಗಿಕವಾಗಿ ನೀರು ತುಂಬಿಕೊಂಡಿರುತ್ತದೆ. ಇದು ಈಜು, ಬಟ್ಟೆ ಒಗೆತ ಇತ್ಯಾದಿ  ಸಂದರ್ಭ ನೀರಿನ ಆಳ ತಿಳಿಯದೆ ದುರಂತಗಳು ಸಂಭವಿಸುತ್ತಿವೆ. ಉಡುಯಲ್ಲಿ ಮಂಗಳವಾರ ತಾಯಿ-ಮಗು ಮೃತಪಟ್ಟ ದುರ್ಘ‌ಟನೆ ಸಂಭವಿಸಿದೆ.

ಉಭಯ ಜಿಲ್ಲೆಗಳಲ್ಲಿ ಇಂತಹ ಕೋರೆಗಳ ಪ್ರದೇಶಗಳನ್ನು ಕೂಡ ಸರ್ವೇ ನಡೆಸಬೇಕಾದ ಸಂದರ್ಭ ಉಂಟಾಗಿದೆ. ಅನುಮತಿ-ಅನುಮತಿ ರಹಿತ ಅಂಕಿ-ಅಂಶ ಕೂಡ ಇದರಿಂದ ದೊರೆಯಲಿದೆ.

Advertisement

ವಾಹನಾಪಘಾತ 
ಉಭಯ ಜಿಲ್ಲೆಗಳಲ್ಲೀಗ ನಿರಂತರ ಮಾರಣಾಂತಿಕ ವಾಹನಾಪಘಾತ. ರಾಷ್ಟ್ರೀಯ-ರಾಜ್ಯ ಹೆದ್ದಾರಿಗಳಲ್ಲೇ ಅಧಿಕ. ಹಾಗೆ ನೋಡಿದರೆ, ವಾಹನ ಚಾಲನೆಗೆ ಸಂಬಂಧಿಸಿ ಈಗ ಕಠಿನ ಕಾನೂನು ಕ್ರಮಗಳಿವೆ. ಆದರೆ ಈ ನಿಯಮಗಳ ಪಾಲನೆಯಾಗದಿರುವುದರಿಂದ ಹೆಚ್ಚಿನ ಅಪಘಾತಗಳಿಗೆ ಕಾರಣವಾಗುತ್ತಿವೆ.

ಓವರ್‌ಟೇಕ್‌ನ ಭರಾಟೆ, ಓವರ್‌ಸ್ಪೀಡ್‌ ಪ್ರವೃತ್ತಿ, ಸೆಲ್‌ಫೋನ್‌ ಸಂಭಾಷಣೆ ಸಹಿತ ವಾಹನ ಚಾಲನೆ, ಸರಿಯಾಗಿ ಡ್ರೈವಿಂಗ್‌ ತಿಳಿಯದ ಸವಾರರು, ಪಾನಮತ್ತರಾಗಿ ಚಾಲನೆ, ಸುಸ್ಥಿತಿಯಲ್ಲಿಲ್ಲದ ವಾಹನಗಳು ಈ ಕಾರಣಗಳಿಂದಾಗಿಯೇ ಹೆಚ್ಚಿನ ಅಪಾಘಾತಗಳು ಸಂಭವಿಸುತ್ತಿವೆ.

ಏನು ಪರಿಹಾರ ?
ಅಪಘಾತ ಅಂದರೆ ಅನಿರೀಕ್ಷಿತ; ದುರಂತಗಳು ಕೂಡ. ಆದರೆ ಈ ದುರಂತಗಳನ್ನು ಸಾಧ್ಯವಾದ ಮಟ್ಟಿಗೆ ನಿಯಂತ್ರಿಸಲು ಸಾಧ್ಯವಿದೆ. ಎಲ್ಲವನ್ನೂ ಕಾನೂನಿನಿಂದ ನಿಯಂತ್ರಿಸಲು ಅಸಾಧ್ಯ; ವಿವೇಚನೆಯಿಂದ ಖಂಡಿತವಾಗಿಯೂ ತಡೆಗಟ್ಟಬಹುದು.

ಜಿಲ್ಲೆಯಲ್ಲಿ ಸಮುದ್ರಕ್ಕೆ ಮೋಜಿಗಾಗಿ ಧುಮುಕಿ ಪ್ರಾಣ ಕಳೆದುಕೊಳ್ಳುವವರ ಸಂಖ್ಯೆಯೂ ಹೆಚ್ಚಿದೆ. (ಪಣಂಬೂರು, ಉಳ್ಳಾಲ ಮುಂತಾದ ಬೀಚ್‌ಗಳಲ್ಲಿ ಜೀವರಕ್ಷಕರ ಸೇವೆಯಿಂದ ಅನೇಕ ಮಂದಿ ಬದುಕಿಕೊಂಡಿದ್ದಾರೆ). ಇಲ್ಲಿಯೂ ಕೆಲವು ಪ್ರಕರಣಗಳು ದಾಖಲುಗೊಳ್ಳದೆ ನಿಖರ ಸಂಖ್ಯೆ ಲಭ್ಯವಿಲ್ಲ. ಈಜುವುದು ಅಪಾಯಕಾರಿ ಎಂಬ ಎಚ್ಚರಿಕೆ ಫಲಕಗಳ ಹೊರತಾಗಿಯೂ ಸಮುದ್ರದ ಆಕರ್ಷಣೆಗೆ ಬಲಿಯಾಗುತ್ತಿದ್ದಾರೆ.

ಇಂತಹ ಪ್ರಸಂಗಗಳಲ್ಲಿ ವಿವೇಚನೆಯೇ ಮುಖ್ಯವಾಗುತ್ತದೆ. ಬೋರ್‌ವೆಲ್‌ ದುರಂತಗಳಿಂದ ಜನತೆ ಇನ್ನೂ ಪಾಠ ಕಲಿತಿಲ್ಲ. ಕಾನೂನುಕ್ರಮ ಅನುಷ್ಠಾನವಾಗುತ್ತಿಲ್ಲ. ಕೋರೆಗಳ ಬಗ್ಗೆ ಜಿಲ್ಲಾಡಳಿತದಿಂದ ಕ್ರಮ ನಿರೀಕ್ಷಿಸಲಾಗುತ್ತಿದೆ. ವಾಹನಗಳ ಚಾಲನೆಯಲ್ಲಿ ಸಂಯಮ, ಕಾನೂನುಪಾಲನೆ ಮುಖ್ಯವಾಗುತ್ತದೆ. ಜತೆಗೆ ಕಾನೂನು ಉಲ್ಲಂ ಸಿದವರನ್ನು ದಂಡಿಸುವುದೂ ಅಗತ್ಯ.ಈ ಎಲ್ಲ ಹಿನ್ನೆಲೆಗಳಲ್ಲಿ “ಜೀವ ಉಳಿಸಿ’ ಎಂಬ ಜನಜಾಗೃತಿ ಅಭಿಯಾನ ಅತ್ಯಂತ ನಿರ್ಣಾಯಕವಾಗಬಹುದು.

ಕರ-ಶಿರಗಳಲ್ಲಿ  ಹೆಲ್ಮೆಟ್‌!
ಮಂಗಳೂರು ಮಹಾನಗರದಲ್ಲಿ (ಉಭಯ ಜಿಲ್ಲೆಗಳಲ್ಲೂ) ಹೆಲ್ಮೆಟ್‌ಗಳನ್ನು ಶಿರಕ್ಕೆ ಧರಿಸದೆ ಕೈಗಳಿಗೆ ಧರಿಸುವ ಕೆಲವು ಸವಾರರನ್ನು ನೋಡಬಹುದು! ಅನೇಕ ಹಿಂಬದಿ ಸವಾರರಲ್ಲೂ ಇದೇ “ಸ್ಟೈಲ್‌’ ಇರುತ್ತದೆ. ಪೊಲೀಸರನ್ನು ಕಂಡ ಕೂಡಲೇ ಈ ಹೆಲ್ಮೆಟ್‌ಗಳು ಶಿರಾರೋಹಣಗೊಳ್ಳುತ್ತವೆ! ನಗರದ ಪಿವಿಎಸ್‌ ವೃತ್ತದ ಬಳಿ (ಎಲ್ಲ ವೃತ್ತಗಳಲ್ಲಿಯೂ) ನೋಡಬಹುದಾದ ದೃಶ್ಯಗಳು:

ಅಲ್ಲಿ ಸಿಗ್ನಲ್‌ ಚಾಲೂ ಇದ್ದಾಗ ಇಂತಹ ಸವಾರರು ಹೆಲ್ಮೆಟ್‌ ಶಿರಕ್ಕೇರಿಸಿಕೊಳ್ಳುತ್ತಾರೆ. ಏಕೆಂದರೆ ಮುಂದಕ್ಕೆ ಪೊಲೀಸ್‌ ಇರುತ್ತಾರೆ. ಸಿಗ್ನಲ್‌ ದಾಟಿದ ಕೂಡಲೇ ಮತ್ತೆ ಕೈಗೆ ಹೆಲ್ಮೆಟ್‌! ಹೆಲ್ಮೆಟ್‌ ಇಲ್ಲದ ಹಿಂಬದಿ ಸವಾರರು ವಾಹನದಿಂದ ಇಳಿದು; ಸಿಗ್ನಲ್‌ ವೃತ್ತ- ಪೊಲೀಸರನ್ನು ದಾಟಿ ಮುಂದೆ ಹೋಗಿ ನಿಂತುಕೊಳ್ಳುತ್ತಾರೆ. ಬಳಿಕ ಆ ವಾಹನ ಚಾಲಕ ಬಂದಾಗ ಈ ಹಿಂಬದಿ ಸವಾರ (ರಿಣಿ) ಮತ್ತೆ ವಾಹನ ಏರುತ್ತಾನೆ(ಳೆ)! ಮುಂದಿನ ಸಿಗ್ನಲ್‌ನಲ್ಲಿ ಅಥವಾ ಪೊಲೀಸ್‌ ಇರುವಲ್ಲಿದು ಪುನರಾವರ್ತನೆಗೊಳ್ಳುತ್ತದೆ!

– ಮನೋಹರ ಪ್ರಸಾದ್‌

Advertisement

Udayavani is now on Telegram. Click here to join our channel and stay updated with the latest news.

Next