Advertisement

ದೇಸಾಯಿ “ಉದ್ಘರ್ಷ’: ಚಿತ್ರೀಕರಣ ಪೂರ್ಣ

07:36 AM Jan 07, 2019 | Team Udayavani |

ಕನ್ನಡ ಚಿತ್ರರಂಗದಲ್ಲಿ ಸಸ್ಪೆನ್ಸ್‌ ಥ್ರಿಲ್ಲರ್‌ ಚಿತ್ರ ಅಂದಾಕ್ಷಣ, ಥಟ್ಟನೆ ನೆನಪಾಗೋದೇ ಸುನೀಲ್‌ಕುಮಾರ್‌ ದೇಸಾಯಿ. ಈಗಾಗಲೇ “ತರ್ಕ’, “ಉತ್ಕರ್ಷ’, “ನಿಷ್ಕರ್ಷ’, “ಸಂಘರ್ಷ’, “ಮರ್ಮ’ ಮತ್ತು “ಕ್ಷಣ ಕ್ಷಣ’ ಸೇರಿದಂತೆ ಅನೇಕ ಸಸ್ಪೆನ್ಸ್‌ ಥ್ರಿಲ್ಲರ್‌ ಚಿತ್ರಗಳನ್ನು ಕೊಟ್ಟಿರುವ ಸುನೀಲ್ ಕುಮಾರ್‌ ದೇಸಾಯಿ, ಇದೀಗ “ಉದ್ಘರ್ಷ’ದೊಂದಿಗೆ ಕಮ್ ಬ್ಯಾಕ್ ಆಗಿದ್ದು, ಚಿತ್ರದ ಚಿತ್ರೀಕರಣ ಮುಗಿದಿದೆ.

Advertisement

ಈಗಾಗಲೇ ಚಿತ್ರದ ಎಡಿಟಿಂಗ್ ಕೂಡ ಮುಗಿಸಿರುವ ನಿರ್ದೇಶಕ ದೇಸಾಯಿ ಅವರು, ಸದ್ಯ ಕುಂಬಳಕಾಯಿ ಒಡೆದಿದ್ದಾರೆ. “ಉದ್ಘರ್ಷ’ ಚಿತ್ರ ಕನ್ನಡ ಮತ್ತು ತೆಲುಗಿನಲ್ಲಿ ಅದೇ ಹೆಸರಿನಿಂದ ತೆರೆಕಾಣಲಿದ್ದು, ತಮಿಳಿನಲ್ಲಿ “ಉಚ್ಚಕಟ್ಟಮ್’ ಎಂದು ಹೆಸರಿಡಲಾಗಿದೆ. ಚಿತ್ರದ ಬಹುತೇಕ ಚಿತ್ರೀಕರಣ ಮಡಿಕೇರಿಯಲ್ಲಿ ನಡೆದಿದ್ದು, ಬೆಂಗಳೂರು, ಹೈದರಾಬಾದ್ ಹಾಗೂ ಕೇರಳದಲ್ಲೂ ಕೆಲ ದೃಶ್ಯಗಳ ಚಿತ್ರೀಕರಣವಾಗಿದೆ. 

ಚಿತ್ರದಲ್ಲಿ “ಸಿಂಗಂ 3′ ಖ್ಯಾತಿಯ ಠಾಕೂರ್ ಅನೂಪ್​ ಸಿಂಗ್ ನಾಯಕ ನಟರಾಗಿ ನಟಿಸಿದ್ದು, ತಮಿಳಿನ “ಕಬಾಲಿ’ ಖ್ಯಾತಿಯ ಧನ್ಸಿಕಾ ಹಾಗೂ ನವ ನಟಿ ತಾನ್ಯಾ ಹೋಪ್ ನಾಯಕಿಯರಾಗಿ ಅಭಿನಯಿಸಿದ್ದಾರೆ. ಅಲ್ಲದೇ ಬಾಲಿವುಡ್​​ ವಿಲನ್ ಕಬೀರ್ ಸಿಂಗ್ ದುಹಾನ್, ತೆಲುಗಿನ “ಬಾಹುಬಲಿ’ ಖ್ಯಾತಿಯ ಪ್ರಭಾಕರ್, ಶ್ರವಣ್ ರಾಘವೇಂದ್ರ, ವಂಶಿ ಕೃಷ್ಣ, ಶ್ರದ್ಧಾ ದಾಸ್ ಮುಂತಾದವರು ಕೂಡ ಪ್ರಮುಖ ಪಾತ್ರದಲ್ಲಿ ನಟಿಸಿದ್ದಾರೆ. ಮುಖ್ಯವಾಗಿ ಬಹುಭಾಷಾ ನಟ ಕನ್ನಡಿಗ ಕಿಶೋರ್ ಚಿತ್ರದಲ್ಲಿ ವಿಶಿಷ್ಟ ಪಾತ್ರದಲ್ಲಿ ನಟಿಸಿದ್ದರೆ, ಹರ್ಷಿಕಾ ಪೂಣಚ್ಚ ಅತಿಥಿ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. 

ಡಿ. ಕ್ರಿಯೇಶನ್ಸ್​ ಬ್ಯಾನರ್​ ಅಡಿಯಲ್ಲಿ ತಯಾರಾಗಿರುವ ಈ ಚಿತ್ರಕ್ಕೆ ದೇವರಾಜ್ ನಿರ್ಮಾಪಕರು. ಇವರೊಂದಿಗೆ ಅವರ ಗೆಳೆಯರಾದ ಮಂಜುನಾಥ್‌, ತಿರುಮಲೈ, ರಾಜೇಂದ್ರ ಕುಮಾರ್‌ ಸಹ ನಿರ್ಮಾಪಕರರಾಗಿ ಕೈ ಜೋಡಿಸಿದ್ದಾರೆ. ಚಿತ್ರಕ್ಕೆ ಹಿಂದಿಯ ಖ್ಯಾತ ಮ್ಯೂಸಿಕ್​ ಡೈರೆಕ್ಟರ್ ಸಂಜೋಯ್ ಚೌಧರಿ ಸಂಗೀತ ಸಂಯೋಜಿಸಿದ್ದಾರೆ. ಪಿ.ರಾಜನ್ ಹಾಗೂ ದಿವಂಗತ ವಿಷ್ಣುವರ್ಧನ್ ಅವರ ಕ್ಯಾಮರಾ ಕೈಚಳಕ, ಕೆಂಪರಾಜು ಸಂಕಲನ, ರವಿವರ್ಮ ಸಾಹಸವಿದೆ. ಇನ್ನು ನಿರ್ದೇಶನದ ಜೊತೆಗೆ ದೇಸಾಯಿಯವರೇ ಚಿತ್ರಕ್ಕೆ ಕಥೆ ಮತ್ತು ಚಿತ್ರಕಥೆಯನ್ನು ರಚಿಸಿದ್ದು, ಸದ್ಯದಲ್ಲೇ ತೆರೆಗೆ ಬರಲು ಸಜ್ಜಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next