Advertisement

ಹೊಸಚಿತ್ರಕ್ಕೆ ಸಿದ್ದತೆ ಮಾಡಿಕೊಳ್ಳುತ್ತಿರುವ ನಿರ್ದೇಶಕ ನಾಗಶೇಖರ್

04:10 AM Jun 02, 2020 | Lakshmi GovindaRaj |

ಸಂಜು ವೆಡ್ಸ್ ಗೀತಾ, ಮೈನಾ ಮೊದಲಾದ ಮ್ಯೂಸಿಕಲ್ ಹಿಟ್ ಚಿತ್ರಗಳನ್ನು ಕನ್ನಡ ಸಿನಿಪ್ರಿಯರಿಗೆ ಕೊಟ್ಟಿರುವ ನಿರ್ದೇಶಕ ನಾಗಶೇಖರ್. ಕಳೆದ ವರ್ಷ ನಟ ರೆಬಲ್ ಸ್ಟಾರ್ ಅಂಬರೀಶ್ ಪುತ್ರ ಅಭಿಷೇಕ್ ಅಂಬರೀಶ್ ಚೊಚ್ಚಲ ಚಿತ್ರ ಅಮರ್ ಚಿತ್ರಕ್ಕೆ ಆ್ಯಕ್ಷನ್ – ಕಟ್ ಹೇಳಿದ್ದ ನಾಗಶೇಖರ್, ಬಳಿಕ ಕೆಲಕಾಲ ತಮಿಳಿನ ನವೆಂಬರ್ ಮಳೈಯಿಲ್ ನಾನುಂ ಅವಳುಂ ಚಿತ್ರದ ನಿರ್ದೇಶನದ ಜೊತೆಗೆ ಪ್ರಮುಖ ಪಾತ್ರದಲ್ಲೂ ಕಾಣಿಸಿಕೊಳ್ಳುತ್ತಿದ್ದಾರೆ. ಈಗಾಗಲೇ ಈ ಚಿತ್ರದ ಶೇಕಡಾ 60ರಷ್ಟು ಚಿತ್ರೀಕರಣ ಮುಗಿಸಿರುವ ನಾಗಶೇಖರ್ ಅಂಡ್ ಟೀಂ ಲಾಕ್ ಡೌನ್ ಮುಗಿಯುತ್ತಿದ್ದಂತೆ ಉಳಿದ ಭಾಗವನ್ನು ಪೂರ್ಣಗೊಳಿಸುವ ಯೋಚನೆಯಲ್ಲಿದೆ.

Advertisement

ಇದರ ನಡುವೆಯೇ ನಾಗಶೇಖರ್ ಸದ್ದಿಲ್ಲದೆ ಮತ್ತೊಂದು ಕನ್ನಡ ಚಿತ್ರವನ್ನು ತೆರೆಮೇಲೆ ತರುವ ತಯಾರಿ ಕೂಡ ಮಾಡಿಕೊಳ್ಳುತ್ತಿದ್ದಾರೆ. ಲಾಕ್ ಡೌನ್ ಸಮಯದಲ್ಲಿ ಹೊಸಕಥೆ ಸಿದ್ಧಮಾಡಿಕೊಂಡಿರುವ ನಾಗಶೇಖರ್, ನಟ ಡಾರ್ಲಿಂಗ್ ಕೃಷ್ಣ ಜೊತೆ ಹೊಸಚಿತ್ರ ಮಾಡಲು ತಯಾರಾಗಿದ್ದಾರೆ. ಈಗಾಗಲೆ ಸ್ಕ್ರಿಪ್ಟ್ ಕೆಲಸ ಮುಗಿಸಿರುವ ನಾಗಶೇಖರ್ ಲಾಕ್ ಡೌನ್ ಮುಗಿಯುತ್ತಿದ್ದಂತೆ ಚಿತ್ರೀಕರಣಕ್ಕೆ ಹೊರಡುವ ಪ್ಲಾನ್ ನಲ್ಲಿದ್ದಾರೆ.

ಇನ್ನು ಈ ಚಿತ್ರಕ್ಕೆ ರಾಧಿಕಾ ಕುಮಾರಸ್ವಾಮಿ ನಾಯಕಿಯಾಗಿ ಕಾಣಿಸಿಕೊಳ್ಳಲಿದ್ದಾರೆ ಎಂಬ ಸುದ್ದಿ ಕೂಡ ಗಾಂಧಿನಗರದಲ್ಲಿ ಹರಿದಾಡುತ್ತಿದೆ. ಈಗಾಗಲೆ ನಾಗಶೇಖರ್ ಮತ್ತು ಚಿತ್ರತಂಡ ರಾಧಿಕಾ ಜೊತೆ ಫೋನಿನಲ್ಲಿ ಮೊದಲ ಹಂತದ ಮಾತುಕತೆ ನಡೆಸಿದೆಯಂತೆ. ಮೂಲಗಳ ಪ್ರಕಾರ ನಾಗಶೇಖರ್ ಕಥೆ ಕೇಳಿ ರಾಧಿಕಾ ಗ್ರೀನ್ ಸಿಗ್ನಲ್ ನೀಡಿದ್ದು, ಚಿತ್ರದ ಬಗ್ಗೆ ಅಧಿಕೃತ ಘೋಷಣೆಯೊಂದೆ ಬಾಕಿ ಇದೆ. ಹಾಗೇನಾದರೂ ಆದರೆ ಮೊದಲ ಬಾರಿಗೆ ಕೃಷ್ಣ ಮತ್ತು ರಾಧಿಕಾ ಜೋಡಿ ತೆರೆಮೇಲೆ ಕಾಣಿಸಿಕೊಳ್ಳಲಿದ್ದು, ಸಿನಿಪ್ರಿಯರ ನಿರೀಕ್ಷೆ ಮತ್ತಷ್ಟು ಹೆಚ್ಚಿಸಲಿದೆ.

ಉಳಿದಂತೆ, ನಾಗಶೇಖರ್ ಚಿತ್ರಗಳಲ್ಲಿ ಸಂಗೀತಕ್ಕೆ ಹೆಚ್ಚು ಒತ್ತು ನೀಡುವುದರಿಂದ, ಈ ಚಿತ್ರದಲ್ಲೂ ಮೆಲೋಡಿಗಳ ಹಾಡುಗಳ ಅಬ್ಬರ ಜೋರಾಗಿಯೇ ಇರಲಿದೆ. ಈ ಹಿಂದೆ ಸಂಜು ವೆಡ್ಸ್ ಗೀತಾ ಮತ್ತು ಮೈನಾ ಸೇರಿದಂತೆ ನಾಗಶೇಖರ್ ಅವರ ಹಲವು ಚಿತ್ರಗಳಿಗೆ ಸಂಗೀತ ನೀಡಿದ್ದ ಜೆಸ್ಸಿ ಗಿಫ್ಟ್ ಈ ಚಿತ್ರಕ್ಕೆ ಸಂಗೀತ ನೀಡುತ್ತಿದ್ದಾರೆ. ಸತ್ಯಾ ಹೆಗ್ಡೆ ಛಾಯಾಗ್ರಹಣ ಚಿತ್ರಕ್ಕಿದೆ. ಒಟ್ಟಾರೆ ತೆರೆಮರೆಯಲ್ಲಿ ಒಂದಷ್ಟು ಕೆಲಸಗಳಲ್ಲಿ ನಿರತವಾಗಿರುವ ಈ ಚಿತ್ರದ ಬಗ್ಗೆ ಇನ್ನೂ ಹೆಚ್ಚಿನ ಮಾಹಿತಿಯನ್ನು ಶೀಘ್ರದಲ್ಲಿಯೇ ನಾಗಶೇಖರ್ ಆ್ಯಂಡ್ ಟೀಮ್ ಬಹಿರಂಗಪಡಿಸಲಿದೆ.

Advertisement

Udayavani is now on Telegram. Click here to join our channel and stay updated with the latest news.

Next