Advertisement

ಹರಿಪ್ರಿಯ ಜತೆ ದಿನಕರ್‌ ಸೆಲ್ಫಿ

10:46 AM Aug 03, 2017 | |

ನಿರ್ದೇಶಕ ದಿನಕರ್‌ ಆರು ವರ್ಷದ ಬಳಿಕ ಮತ್ತೆ ಆ್ಯಕ್ಷನ್‌-ಕಟ್‌ ಹೇಳ್ಳೋಕೆ ಅಣಿಯಾಗಿರುವ ವಿಷಯ ಗೊತ್ತೇ ಇದೆ. ಆ ಚಿತ್ರಕ್ಕೆ “ಲೈಫ್ ಜೊತೆ ಒಂದು ಸೆಲ್ಫಿ’ ಅಂತಲೂ, ನೆನಪಿರಲಿ ಪ್ರೇಮ್‌ ಹಾಗೂ ಪ್ರಜ್ವಲ್‌ ನಾಯಕರಂತಲೂ ಈ ಹಿಂದೆ ಹೇಳಲಾಗಿತ್ತು. ಆದರೆ, ಆ ಚಿತ್ರದ ನಾಯಕಿ ಯಾರೆಂಬುದನ್ನು ಮಾತ್ರ ಹೇಳಿರಲಿಲ್ಲ. ಈಗ ಆ ಚಿತ್ರಕ್ಕೆ ಹರಿಪ್ರಿಯ ನಾಯಕಿ ಎಂದಾಗಿದೆ. ನಿರ್ದೇಶಕ ದಿನಕರ್‌ ಈ ಮೂವರು ಕಲಾವಿದರನ್ನಿಟ್ಟುಕೊಂಡು ಸಿನಿಮಾ ಮಾಡೋಕೆ ರೆಡಿಯಾಗಿದ್ದಾರೆ.

Advertisement

ಅಂದಹಾಗೆ, “ಲೈಫ್ ಜೊತೆ ಒಂದು ಸೆಲ್ಫಿ’ ಚಿತ್ರಕ್ಕೆ ದಿನಕರ್‌ ಪತ್ನಿ ಮಾನಸ ದಿನಕರ್‌ ಕಥೆ ಬರೆದಿದ್ದಾರೆ. ಆ ಕಥೆಗೆ ಚಿತ್ರಕಥೆ ಬರೆದು ನಿರ್ದೇಶನ ಮಾಡುತ್ತಿದ್ದಾರೆ ದಿನಕರ್‌. ಇನ್ನು, ಈ ಚಿತ್ರಕ್ಕೆ ಚಿಂತನ್‌ ಹಾಗೂ ರಘುಶಾಸಿ ಸಂಭಾಷಣೆ ಬರೆಯುತ್ತಿದ್ದಾರೆ. “ಈಗಿನ ಟ್ರೆಂಡ್‌ಗೆ ತಕ್ಕಂತೆ ಕಥೆ ಇದ್ದು, ಹೊಸತನದ ನಿರೂಪಣೆಯಲ್ಲಿ ಚಿತ್ರ ಮೂಡಿಬರಲಿದೆ. 30 ದಿನಗಳ ಕಾಲ ಗೋವಾ ಹಾಗೂ 20 ದಿನ ಬ್ಯಾಂಕಾಕ್‌ನಲ್ಲಿ ಚಿತ್ರೀಕರಣ ನಡೆಯಲಿದೆ. ಚಿತ್ರಕ್ಕೆ ಹರಿಕೃಷ್ಣ ಸಂಗೀತ ನೀಡುತ್ತಿದ್ದು, ಐದು ಹಾಡುಗಳಿವೆ.

ನಾಗೇಂದ್ರ ಪ್ರಸಾದ್‌ ಗೀತೆಗಳನ್ನು ರಚಿಸಲಿದ್ದಾರೆ. ಎಂದಿನಂತೆ ಕೆ.ಎಂ. ಪ್ರಕಾಶ್‌ ಚಿತ್ರಕ್ಕೆ ಸಂಕಲನ ಮಾಡಿದರೆ, ಈಶ್ವರಿ ಕುಮಾರ್‌ ಅವರ ಕಲಾನಿರ್ದೇಶನವಿದೆ’ ಎಂದು ವಿವರ ಕೊಡುವ ದಿನಕರ್‌, “ಆರು ವರ್ಷದ ಬಳಿಕ ನಿರ್ದೇಶನಕ್ಕಿಳಿದರೂ, ಚಿತ್ರ ಚಟುವಟಿಕೆಯಲ್ಲೇ ಬಿಜಿಯಾಗಿದ್ದೆ. ಕವಿರಾಜ್‌ ನಿರ್ದೇಶನದ “ಮದುವೆಯ ಮಮತೆಯ ಕರೆಯೋಲೆ’ ಚಿತ್ರ ನಿರ್ಮಾಣದ ನಂತರ, “ಚಕ್ರವರ್ತಿ’ ಸಿನಿಮಾದಲ್ಲಿ ನಟಿಸಿದೆ. ಆ ಬಳಿಕ ಒಂದಷ್ಟು ಕಥೆಗಳನ್ನು ಮಾಡಿಕೊಂಡೆ.

ಈಗ ಮಾನಸ ಅವರ ಕಥೆ ಚೆನ್ನಾಗಿದ್ದರಿಂದ, ಅದನ್ನೇ ಇಟ್ಟುಕೊಂಡು ಒಳ್ಳೆಯ ಸಿನಿಮಾ ಮಾಡೋಕೆ ರೆಡಿಯಾಗಿದ್ದೇನೆ’ ಎನ್ನುತ್ತಾರೆ ದಿನಕರ್‌. ಹಾಗಾದರೆ, ದಿನಕರ್‌ ಈ ಚಿತ್ರದಲ್ಲಿ ಏನು ಹೇಳ್ಳೋಕೆ ಹೊರಟಿದ್ದಾರೆ ಎಂಬುದಕ್ಕೆ ಸಿನಿಮಾ ಬರೋವರೆಗೂ ಕಾಯಬೇಕು. ಅವರು ಈ ಹಿಂದೆ “ಒಂದೂರಲ್ಲಿ ಒಬ್ಬ ರಾಜ ಇದ್ದ’ ಸಿನಿಮಾ ಅನೌನ್ಸ್‌ ಮಾಡಿದ್ದರು.

ಆದರೆ, ಆ ಸಿನಿಮಾ ಯಾಕೋ ಸುದ್ದಿ ಆಗಲಿಲ್ಲ. ಆ ಬಗ್ಗೆ ಕೇಳಿದರೆ, ಅದು ಶುರುವಾಗುವುದಿಲ್ಲ ಎನ್ನುತ್ತಾರೆ ದಿನಕರ್‌. ಆದರೆ, “ಸರ್ವಾಂತರ್ಯಾಮಿ’ ಸಿನಿಮಾ ಮಾಡುವುದು ಖಚಿತ ಎನ್ನುವ ಅವರು, ಸದ್ಯಕ್ಕೆ ದರ್ಶನ್‌ “ಕುರುಕ್ಷೇತ್ರ’ ಮುಗಿಸಬೇಕು, ಅದಾದ ಮೇಲೆ ಸಂದೇಶ್‌ ನಾಗರಾಜ್‌ ಅವರ ಇನ್ನೊಂದು ಸಿನಿಮಾ ಮಾಡಬೇಕು. ಆ ಬಳಿಕ “ಸರ್ವಾಂತರ್ಯಾಮಿ’ ಕೈಗೆತ್ತಿಕೊಳ್ಳುವುದಾಗಿ ಹೇಳುತ್ತಾರೆ ಅವರು.

Advertisement
Advertisement

Udayavani is now on Telegram. Click here to join our channel and stay updated with the latest news.

Next