Advertisement

ದಿಮಾಪುರ ಭೀಮ ಚದುರಂಗವಾಡಿದ್ದು ಇಲ್ಲಿಯೇ

03:45 AM Apr 30, 2017 | Harsha Rao |

ಈ ಊರು ಎಲ್ಲಿದೆ ಎಂದು ನೋಡಲು ನಾವು ಈಶಾನ್ಯ ಭಾರತದ ಭೂಪಟ ತಿರುಗಿಸಬೇಕು. ಇದು ನಮ್ಮ ದೇಶದ ಅಷ್ಟ ಈಶಾನ್ಯ ರಾಜ್ಯಗಳಲ್ಲಿ ಒಂದಾದ ನಾಗಾಲ್ಯಾಂಡ್‌ನ‌ ರಾಜಧಾನಿ ಕೊಹಿಮಾಕ್ಕೆ ಹೋಗುವ ದಾರಿಯಲ್ಲಿ ಸಿಗುವ ಸ್ವಲ್ಪ ದೊಡ್ಡ ಪಟ್ಟಣ. ಗೌಹಾತಿಯಿಂದ ಸುಮಾರು ಐದು ಗಂಟೆ ಜನಶತಾಬ್ದಿ ರೈಲಿನಲ್ಲಿ ಹೋದರೆ ನಾಗಾಲ್ಯಾಂಡ್‌ ರಾಜ್ಯದ ಒಂದು ಮುಖ್ಯ ಪಟ್ಟಣದ ದಿಮಾಪುರ ಸಿಗುತ್ತದೆ. ಇದಕ್ಕೆ ಕೊಲ್ಕತಾ, ಗೌಹಾತಿಯಿಂದ ವಿಮಾನ ಸಂಪರ್ಕವಿದೆ. ನಾಗಾಲ್ಯಾಂಡ್‌ನ‌ ರಾಜಧಾನಿ ಕೊಹಿಮಾಕ್ಕೆ ಹೋಗಲು ಹತ್ತಿರದ ಏರ್‌ಪೋರ್ಟ್‌ ಅಂದರೆ ದಿಮಾಪುರ.

Advertisement

ಮೊದಲು ಅಸ್ಸಾಂ ರಾಜ್ಯದಲ್ಲಿದ್ದ ಇದು ಹೊಸತಾಗಿ ನಾಗಾಲ್ಯಾಂಡ್‌ ರಾಜ್ಯ ಸ್ಥಾಪನೆಯಾದಾಗ ಇದರ ಮುಖ್ಯ ವ್ಯಾಪಾರ ಕೇಂದ್ರವಾಗಿ ಇದು ಗುರುತಿಸಿಕೊಂಡಿದೆ. ನಾಗಾಲ್ಯಾಂಡ್‌ ರಾಜಧಾನಿ ಕೊಹಿಮಾ ಇಲ್ಲಿಂದ ಎಪ್ಪತ್ತೈದು ಕಿ.ಮೀ. ದೂರದಲ್ಲಿದೆ. ಈ ದಿಮಾಪುರಕ್ಕೆ ಇಲ್ಲಿಯ ಸ್ಥಳ ಪುರಾಣ ಪ್ರಕಾರ ಒಂದು ಕತೆಯೆ ಇದೆ. ಹಿಂದೆ ಮಹಾಭಾರತ ಕಾಲದಲ್ಲಿ ಪಾಂಡವರು ವನವಾಸಕ್ಕೆ ಬಂದಾಗ, ಭೀಮ, ಹಿಡಿಂಬೆಯನ್ನು ವಿವಾಹವಾಗಿ ವನಸಂಚಾರಕ್ಕೆ ಇಲ್ಲಿಗೆ ಇಬ್ಬರು ಬಂದಿದ್ದರಂತೆ. ಮುಂದೆ ಬೇಸರ ಕಳೆಯಲು ಇಲ್ಲಿಯೇ ಚದುರಂಗ (ಚೆಸ್‌) ಆಟ ಆಡಿದರಂತೆ. ಇದರ ಕುರುಹುಗಳೆಂಬಂತೆ ಆಳೆತ್ತರದ ಚದುರಂಗದ ಕಲ್ಲುಗಳನ್ನು ಇಲ್ಲಿ ಕಾಣಬಹುದು. ಜೊತೆಗೆ ಹಲವು ತುಂಡಾದ ಚದುರಂಗದಾಳದ ಕಲ್ಲುಗಳು ಇಲ್ಲಿ ಕಾಣಬಹುದು. ಇಲ್ಲಿ ಕಾಣುವ ಚದುರಂಗದ ಕಲ್ಲುಗಳನ್ನು ನೋಡಿದಾಗ ಮಹಾಭಾರತದ ಮನುಷ್ಯರು ಎಷ್ಟು ದೊಡ್ಡ ಗಾತ್ರದವರು ಎಂದು ಊಹಿಸಲು ಅಸಾಧ್ಯ. ಭೀಮ ಮತ್ತು ಹಿಡಿಂಬೆ ಆಟವಾಡಿದ ಈ ವನ ನಗರದಿಂದ ಎರಡು ಕಿ.ಮೀ. ದೂರದಲ್ಲಿದ್ದು , ಪ್ರಾಚ್ಯ ಇಲಾಖೆಯವರು ಬೇಲಿ ಹಾಕಿ ಇಡಿ ಸ್ಥಳ ಸುರಕ್ಷಿತವಾಗಿ ಇಟ್ಟಿದ್ದಾರೆ.

ಇನ್ನೊಂದು ಕಲೆಯ ಪ್ರಕಾರ, ಈ ಊರು ದಿನಾಸಿರಿ ನದಿಯ ಮೇಲೆ ಇರುವುದರಿಂದ ಈ ಊರಿಗೆ ದಿಮಾಪುರ ಹೆಸರು ಬಂತೆಂದು ಸ್ಥಳೀಯರು ಹೇಳುತ್ತಾರೆ. ಹಿಂದೆ ದಿಮಾಷಾ ರಾಜರ ರಾಜಧಾನಿಯಾದ ಇದು ಮುಂದೆ ರಾಣಿಯ ಪ್ರಿಯಕರನಾದ ರೆಂಗಮಾ ಮುಖಂಡನೆ ಈ ದಿಮಾಪುರದ ರಾಜನಾಗಿ ಈ ದಿಮಾಪುರವನ್ನು ಆಳಿದ ಎಂಬ ಇನ್ನೊಂದು ಸ್ಥಳೀಯ ಕತೆಯೂ ಇದೆ. 1898ರಲ್ಲಿ ಅಸ್ಸಾಂ ರಾಜ್ಯಕ್ಕೆ ಒಳಪಟ್ಟು ಇದು ಮುಂದೆ ಮೂರು ಹೊಸ ಈಶಾನ್ಯ ರಾಜ್ಯಗಳು ಹೊಸತಾಗಿ ಸ್ಥಾಪನೆಯಾದಾಗ ಈಗಿನ ನಾಗಾಲ್ಯಾಂಡ್‌ಗೆ ಸೇರಿಕೊಂಡಿತು.

ಬೆಳೆಯಲು ಬೇಕಾದಷ್ಟಿದೆ 
ದಿಮಾಪುರಕ್ಕೆ ಗೌಹಾತಿಯಿಂದ ಜನಶತಾಬ್ದಿ ಎಕ್ಸ್‌ಪ್ರೆಸ್‌ನಲ್ಲಿ ಹಿಂದೆ ಕಚೇರಿ ಕೆಲಸ ನಿಮಿತ್ತ ಹೋದಾಗ ಸಾಕಷ್ಟು ಹೆದರಿಕೊಂಡೇ ಹೋಗಬೇಕಾಯಿತು. ದಿಮಾಪುರ ಎಂದರೆ ಅದೇಕೋ ಎಲ್ಲರಿಗೂ ಭಯ. ರಾತ್ರಿ ಆರು ಗಂಟೆಯಾಗುತ್ತಲೆ ಇಲ್ಲಿಯ ರಸ್ತೆಗಳಲ್ಲಿ ಜನಸಂಚಾರ ಇರದು. ರಸ್ತೆಯಲ್ಲಿ ಒಬ್ಬಂಟಿಗರಾಗಿ ನಡೆದುಕೊಂಡು ಹೋದರೆ ಹೆದರಿಸಿ ದುಡ್ಡು ಕೇಳುವುದು, ಇಲ್ಲವೆ ಕೈಯಲ್ಲಿದ್ದಷ್ಟು ಕೊಡಲು ಒತ್ತಾಯಿಸುವುದು, ಜೊತೆಗೆ ಪ್ರಾಣಾಪಾಯ ಭೀತಿ ಸಹ ಇಲ್ಲಿದೆ. ಇಲ್ಲಿಯ ಸ್ಥಳೀಯರು ರಾತ್ರಿ ಹೊತ್ತು ಹೊರಗಡೆ ತಿರುಗಾಡುವುದು ಕಡಿಮೆ. ದಿಮಾಪುರ ನಗರದುದ್ದಕ್ಕೂ ವಿದ್ಯುದ್ದೀಪ. ದಾರಿದೀಪಗಳೇ  ಕಡಿಮೆ. ಆಗಾಗ್ಗೆ ಬಂದ್‌, ಹರತಾಳ, ಗುಂಡಿನ ಕಾಳಗ ಇವುಗಳು ನಡೆಯುತ್ತಲೆ ಇರುತ್ತವೆ. ಇತ್ತೀಚೆಗೆ ನಗರ ಕಾರ್ಪೊರೇಷನ್‌ ಕೆಲವು ದಿಟ್ಟ ಹೆಜ್ಜೆ ಇಟ್ಟು , ರಸ್ತೆ ಅಗಲೀಕರಣ, ಅನಧಿಕೃತ ಕಟ್ಟಡ ನೆಲಸಮ ಮಾಡಿ, ಜನೋಪಯೋಗಿ ಕಾರ್ಯ ಮಾಡುತ್ತಿದೆ.

ಮದ್ಯವರ್ಜಿತ ರಾಜ್ಯ
ನಾಗಾಲ್ಯಾಂಡ್‌ನ‌ಲ್ಲಿ ಮದ್ಯ ಮಾರಾಟ ಇಲ್ಲ. ಆದರೆ ಬ್ಲ್ಯಾಕ್‌ನಲ್ಲಿ ಸಿಗುತ್ತದೆ! ನಾಗಾಲ್ಯಾಂಡ್‌ನ‌ಲ್ಲಿ ನಾಯಿ ಮಾಂಸಕ್ಕೆ ತುಂಬಾ ಬೇಡಿಕೆ ಇರುವಂತೆ ಇಲ್ಲಿಯೂ ಇದೆ. ಮಾರ್ಕೆಟ್‌ನಲ್ಲಿ ಗೋಣಿಚೀಲದಲ್ಲಿ ನಾಯಿ ಇಟ್ಟು ತಲೆ ಮಾತ್ರ ತೋರುತ್ತಿರುವಂತೆ ಇಟ್ಟಿರುತ್ತಾರೆ. ಹಾಗೆಯೆ ಕಪ್ಪೆ , ಎರೆಹುಳ, ಹಾತೆ, ಮಾಂಸದಂತೆ ಮಾರಾಟವಾಗುವ ದೃಶ್ಯ ಮೈ ಜುಮ್ಮೆನ್ನುತ್ತದೆ. ಬುಧವಾರ ಮಾರ್ಕೆಟ್‌ ಇಲ್ಲಿ ಪ್ರಸಿದ್ಧವಾಗಿದ್ದು, ನಾಗಾ ತೊಡುಗೆಯಲ್ಲಿ ಹಳ್ಳಿಗಳಿಂದ ಜನರು ಬಂದು ತಮ್ಮ ತರಕಾರಿ ಹಾಗೂ ಇತರ ಸಾಮಾನುಗಳನ್ನು ಬಿಕರಿ ಮಾಡಿ ಹೋಗುತ್ತಾರೆ.

Advertisement

– ನಾಗ ಶಿರೂರು

Advertisement

Udayavani is now on Telegram. Click here to join our channel and stay updated with the latest news.

Next