Advertisement

ಆ ಐದು ರಾಜ್ಯಗಳಲ್ಲೂ ತಂತ್ರಗಾರಿಕೆ ನಡೆದೀತೇ?

11:16 PM May 21, 2023 | Team Udayavani |

ಈಗಷ್ಟೇ ಕರ್ನಾಟಕ ಚುನಾವಣೆ ಮುಗಿದು, ಕಾಂಗ್ರೆಸ್‌ ಸರಕಾರ ಅಧಿಕಾರಕ್ಕೆ ಬಂದಿದೆ. ಒಂದು ಲೆಕ್ಕಾಚಾರದಲ್ಲಿ ಹೇಳುವುದಾದರೆ ಕಾಂಗ್ರೆಸ್‌ಗೆ ಅಗತ್ಯವಾಗಿ ಬೇಕಾಗಿದ್ದ ಗೆಲುವು ಇದು. ಪಕ್ಷದ ಪ್ರಮುಖ ನಾಯಕ ರಾಹುಲ್‌ ಗಾಂಧಿಯವರ ಭಾರತ್‌ ಜೋಡೋ ಯಾತ್ರೆಯ ಯಶಸ್ಸನ್ನು ಜಗತ್ತಿಗೆ ತೋರಿಸಲೇಬೇಕಾಗಿದ್ದ ಅತೀದೊಡ್ಡ ಸವಾಲು ಕಾಂಗ್ರೆಸ್‌ ಮುಂದಿತ್ತು. ಅಲ್ಲದೆ ಭಾರತ್‌ ಜೋಡೋ ನಡೆಯತ್ತಿದ್ದ ವೇಳೆ, ಗುಜರಾತ್‌ ಚುನಾವಣೆ ನಡೆದಿತ್ತು. ಆದರೆ ಈ ಯಾತ್ರೆ ಗುಜರಾತ್‌ ಪ್ರವೇಶಿಸಿಯೇ ಇರಲಿಲ್ಲ. ಹೀಗಾಗಿ ಅಲ್ಲಿ ಸೋತರೂ ಕಾಂಗ್ರೆಸ್‌ ಅಥವಾ ರಾಹುಲ್‌ ಅವರ ಭಾರತ್‌ ಜೋಡೋಗೆ ಹಿನ್ನಡೆ ಅಂತ ಪರಿಗಣಿಸುವಂತಿರಲಿಲ್ಲ.

Advertisement

ಆದರೆ ಕರ್ನಾಟಕದಲ್ಲಿ ಭಾರತ್‌ ಜೋಡೋ ಯಾತ್ರೆ ಜೋರಾಗಿಯೇ ನಡೆದಿತ್ತು. ಇದಕ್ಕೆ ತಕ್ಕನಾಗಿ, ಭಾರತ್‌ ಜೋಡೋ ಯಾತ್ರೆ ಹೋಗಿದ್ದ ಶೇ.75ರಷ್ಟು ಕ್ಷೇತ್ರಗಳಲ್ಲಿ ಕಾಂಗ್ರೆಸ್‌ ಅಭ್ಯರ್ಥಿಗಳು ಗೆದ್ದಿದ್ದಾರೆ. ಹೀಗಾಗಿ ಈ ಚುನಾವಣೆ ಭಾರತ್‌ ಜೋಡೋ ಯಾತ್ರೆಯ ಯಶಸ್ಸಿನ ಸಾಕ್ಷಿ ಎಂಬುದು ಕಾಂಗ್ರೆಸ್‌ ನಾಯಕರ ಅಭಿಪ್ರಾಯ. ಫಲಿತಾಂಶ ಅವಲೋಕಿಸಿದರೆ ಇದನ್ನು ಒಪ್ಪಿಕೊಳ್ಳಬಹುದು.

ಹೀಗಾಗಿಯೇ ಕಾಂಗ್ರೆಸ್‌ ನಾಯಕರು, ಹರ್ಷದಲ್ಲೇ ಸಿದ್ದರಾಮಯ್ಯ ಮತ್ತವರ ಸಂಪುಟ ಸದಸ್ಯರ ಪ್ರಮಾಣ ವಚನ ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದಾರೆ. ಇಲ್ಲೇ ಬಿಜೆಪಿಯೇತರ ಪಕ್ಷಗಳ ಬಲಪ್ರದರ್ಶನವನ್ನೂ ನಡೆಸಿ 2024ರ ಚುನಾವಣೆಗೆ ನಾವು ಹೀಗೆಯೇ ಒಟ್ಟಾಗಿ ಹೋಗುತ್ತೇವೆ ಎಂಬುದನ್ನು ಸಾರಿದ್ದಾರೆ.

ಇರಲಿ, ಕರ್ನಾಟಕವಾದ ಮೇಲೆ ಕಾಂಗ್ರೆಸ್‌ ಮತ್ತು ಬಿಜೆಪಿ ಪಾಲಿಗೆ ಇನ್ನೂ ಪ್ರಮುಖ ಮೂರು ರಾಜ್ಯಗಳ ಚುನಾವಣೆಗಳು ಮುಂದಿವೆ. ಅಂದರೆ ಹಿಂದಿ ಹಾರ್ಟ್‌ಲ್ಯಾಂಡ್‌ನ‌ ಮಧ್ಯಪ್ರದೇಶ, ರಾಜಸ್ಥಾನ ಮತ್ತು ಛತ್ತೀಸ್‌ಗಢದಲ್ಲಿ ಇದೇ ಡಿಸೆಂಬ ರ್‌ನಲ್ಲಿ ಚುನಾವಣೆ ನಡೆಯಲಿದೆ. ಹಾಗೆಯೇ ತೆಲಂಗಾಣ ಮತ್ತು ಮಿಜೋರಾಂನಲ್ಲೂ ಇದೇ ವರ್ಷ ಚುನಾವಣೆಗಳು ಬರಲಿವೆ.

ಈ ರಾಜ್ಯಗಳಲ್ಲಿ ಮಧ್ಯಪ್ರದೇಶದಲ್ಲಿ ಮಾತ್ರ ಬಿಜೆಪಿ ಸರಕಾರವಿದೆ. ರಾಜಸ್ಥಾನ ಹಾಗೂ ಛತ್ತೀಸ್‌ಗಢದಲ್ಲಿ ಕಾಂಗ್ರೆಸ್‌ ಸರಕಾರವಿದ್ದರೆ, ತೆಲಂಗಾಣ ದಲ್ಲಿ ಬಿಆರ್‌ಎಸ್‌ ಸರಕಾರವಿದೆ. ಮಿಜೋ ರಾಂನಲ್ಲಿ ಬಿಜೆಪಿ ಮೈತ್ರಿ ಪಕ್ಷ ಮಿಜೋ ನ್ಯಾಶನಲ್‌ ಫ್ರಂಟ್‌ ಅಧಿಕಾರದಲ್ಲಿದೆ.

Advertisement

ಒಂದೊಂದೇ ರಾಜ್ಯಗಳ ಲೆಕ್ಕಾಚಾರಕ್ಕೆ ಬರುವುದಾದರೆ, ಹಿಂದಿ ಭಾಷಿಕ ರಾಜ್ಯಗಳಾದ ಮಧ್ಯಪ್ರದೇಶ, ರಾಜಸ್ಥಾನ ಮತ್ತು ಛತ್ತೀಸ್‌ಗಢಗಳು ಕಾಂಗ್ರೆಸ್‌ಗಾಗಲಿ ಅಥವಾ ಬಿಜೆಪಿ ಗಾಗಲಿ ಸುಲಭವಾಗಿ ದಕ್ಕುವಂಥವುಗಳಲ್ಲ. ಕಳೆದ ಬಾರಿ ಈ ಮೂರು ರಾಜ್ಯಗಳಲ್ಲಿ ಕಾಂಗ್ರೆಸ್‌ ಅತೀದೊಡ್ಡ ಪಕ್ಷವಾಗಿ ಅಧಿಕಾರಕ್ಕೆ ಬಂದಿತ್ತು. ಮಧ್ಯಪ್ರದೇಶದಲ್ಲಿ ಅನಂತರ ನಡೆದ ಬೆಳವಣಿಗೆಯಲ್ಲಿ ಆಪರೇಷನ್‌ ಕಮಲದಿಂದಾಗಿ ಬಿಜೆಪಿ ಅಧಿಕಾರಕ್ಕೆ ಬಂದಿತು. ಆದರೆ, ರಾಜಸ್ಥಾನ ಮತ್ತು ಛತ್ತೀಸ್‌ಗಢದಲ್ಲಿ ಕಾಂಗ್ರೆಸ್‌ ಆಡಳಿತವಿದೆ.

ಮಧ್ಯಪ್ರದೇಶ : ಮೊದಲೇ ಹೇಳಿದ ಹಾಗೆ ಇಲ್ಲಿ ಬಿಜೆಪಿ ಆಡಳಿತದಲ್ಲಿದೆ. ಕೈಬಿಟ್ಟು ಹೋಗಿರುವ ಈ ರಾಜ್ಯವನ್ನು ವಾಪಸ್‌ ಪಡೆಯಲೇಬೇಕು ಎಂಬ ದೃಢ ನಿಲುವು ಕಾಂಗ್ರೆಸ್‌ನದ್ದು. ಹೀಗಾಗಿಯೇ ಇಲ್ಲಿಗೆ ಕರ್ನಾಟಕ ಕಾಂಗ್ರೆಸ್‌ನಲ್ಲಿ ತಂತ್ರಗಾರಿಕೆ ಮಾಡಿದ್ದ ತಂಡವೇ ಹೋಗುತ್ತಿದೆ. ಕಾಂಗ್ರೆಸ್‌ ಪಾಲಿಗೆ ಈ ರಾಜ್ಯದಲ್ಲಿ ಅಷ್ಟಾಗಿ ನಾಯಕತ್ವದ ಸಮಸ್ಯೆ ಇಲ್ಲ. ಈಗ ಮಾಜಿ ಮುಖ್ಯಮಂತ್ರಿ ಕಮಲ್‌ನಾಥ್‌ ಅವರೊಬ್ಬರೇ ಮುಂಚೂಣಿಯಲ್ಲಿ ನಿಲ್ಲುತ್ತಿದ್ದಾರೆ. ದಿಗ್ವಿಜಯ್‌ ಸಿಂಗ್‌ ಇರುವರಾದರೂ ಇವರಿಗೆ ಸ್ಪರ್ಧೆಯೊಡ್ಡುತ್ತಿಲ್ಲ. ಬದಲಾಗಿ ಅವರ ಜತೆಯಲ್ಲೇ ನಿಂತು ಸಾಥ್‌ ನೀಡುತ್ತಿದ್ದಾರೆ. ಒಂದು ರೀತಿಯಲ್ಲಿ ಕಾಂಗ್ರೆಸ್‌ಗೆ ಇದು ಪ್ಲಸ್‌ ಪಾಯಿಂಟ್‌. ಅಲ್ಲದೆ ಹಿಂದಿನ ಚುನಾವಣೆಯಲ್ಲಿ ಕಮಲ್‌ನಾಥ್‌ ಅವರಿಗೆ ಸ್ಪರ್ಧೆ ನೀಡಿದ್ದ ಜ್ಯೋತಿರಾದಿತ್ಯ ಸಿಂಧಿಯಾ ಬಿಜೆಪಿಯಲ್ಲಿದ್ದಾರೆ. ಆದರೆ, ಬಿಜೆಪಿ ಯಲ್ಲಿ ಈ ಬಾರಿ ನಾಯಕತ್ವದ ಸಮಸ್ಯೆ ಕಾಣಿಸಿಕೊ ಳ್ಳುವುದು ಗ್ಯಾರಂಟಿ ಎಂಬ ಮಾತುಗಳಿವೆ.

ಇದೇ ಮೊದಲ ಬಾರಿಗೆ ಸಿಎಂ ಶಿವರಾಜ್‌ ಸಿಂಗ್‌ ಚೌಹಾಣ್‌, ಸ್ವಲ್ಪ ಮೆತ್ತಗಾದಂತೆ ಕಾಣಿಸುತ್ತಿದ್ದಾರೆ. ಅಲ್ಲದೆ ಈ ಬಾರಿ ಬಿಜೆಪಿ, ಶಿವರಾಜ್‌ ಸಿಂಗ್‌ ಚೌಹಾಣ್‌ ಅವರ ನೇತೃತ್ವದಲ್ಲಿ ಚುನಾವಣೆಗೆ ಹೋಗುವ ಸಾಧ್ಯತೆಗಳು ಕಡಿಮೆ ಇವೆ. ಜತೆಗೆ ಜ್ಯೋತಿರಾದಿತ್ಯ ಸಿಂಧಿಯಾ, ನರೇಂದ್ರ ಸಿಂಗ್‌ ಥೋಮರ್‌ ಸಹಿತ ಹಲವು ನಾಯಕ ರಿದ್ದಾರೆ.
ಕರ್ನಾಟಕ ಮತ್ತು ಹಿಮಾಚಲದಂತೆಯೇ, ಕಾಂಗ್ರೆಸ್‌ ಇಲ್ಲಿಯೂ ಉಚಿತ ಕೊಡುಗೆಗಳ ಬೆನ್ನತ್ತಿ ಹೋಗಿದೆ. ಹಾಗೆಯೇ ಬಿಜೆಪಿಯ ಹಿಂದುತ್ವಕ್ಕೆ ಪ್ರತಿಯಾಗಿ, ಕಳೆದ ಬಾರಿಯಂತೆ ಈ ಬಾರಿಯೂ ಕಾಂಗ್ರೆಸ್‌ ಅದೇ ಅಸ್ತ್ರ ಹೂಡಿದೆ. ಕಾಂಗ್ರೆಸ್‌ ಕಾರ್ಯಕರ್ತರಿಗೆ ರಾಮನವಮಿ ಮತ್ತು ಹನುಮ ಜಯಂತಿಯನ್ನು ಆಚರಿಸುವಂತೆ ಸ್ವತಃ ಕಮಲ್‌ನಾಥ್‌ ಸೂಚನೆ ನೀಡಿದ್ದು, ಹಿಂದುತ್ವದ ಹಾದಿಯಲ್ಲೇ ನಡೆಯುತ್ತಿದ್ದಾರೆ.

ಇಲ್ಲಿ ಬಿಜೆಪಿ ನಾಯಕತ್ವ ಸವಾಲು ಬಗೆಹರಿಸಿ ಕೊಂಡು ಮುಂದಡಿ ಇಡಬೇಕಾಗಿದೆ. ಅಲ್ಲದೆ ಆಡಳಿತ ವಿರೋಧಿ ಅಲೆಯೂ ಇದ್ದು, ಅದನ್ನೂ ಮೀರಿ ಸಾಗುವ ಸವಾಲೂ ಬಿಜೆಪಿಗಿದೆ.

ರಾಜಸ್ಥಾನ: ಹಿಂದಿ ಭಾಷಿಕ ರಾಜ್ಯಗಳಲ್ಲಿ ಪ್ರಮು ಖವಾದ ಇಲ್ಲಿ ಪ್ರತೀ 5 ವರ್ಷಗಳಿಗೊಮ್ಮೆ ಸರಕಾರ ಬದಲಾಗುವುದು ರೂಢಿ. ಕಳೆದ ಬಾರಿ ಬಿಜೆಪಿಯನ್ನು ಸೋಲಿಸಿ ಕಾಂಗ್ರೆಸ್‌ ಅಧಿಕಾರಕ್ಕೆ ಬಂದಿತ್ತು. ಈ ಬಾರಿಯೂ ಇದು ಮುಂದುವರಿಯುತ್ತಾ? ಗೊತ್ತಿಲ್ಲ. ಇಲ್ಲಿ ಕಾಂಗ್ರೆಸ್‌ನಲ್ಲಿ ಹೆಚ್ಚು ಸಮಸ್ಯೆಗಳಿವೆ. ಸಿಎಂ ಅಶೋಕ್‌ ಗೆಹ್ಲೋಟ್‌ ಮತ್ತು ಪಕ್ಷದ ಮತ್ತೂಬ್ಬ ನಾಯಕ ಸಚಿನ್‌ ಪೈಲಟ್‌ ನಡುವೆ ಎಲ್ಲವೂ ಸರಿ ಇಲ್ಲ. ಈ ಹಿಂದೆ ಅವರು ಸರಕಾರದ ವಿರುದ್ಧವೇ ಬಂಡೆದ್ದಿ ದ್ದರು. ಇತ್ತೀಚೆಗಷ್ಟೇ, ತಮ್ಮ ಸರಕಾರದ ವಿರುದ್ಧವೇ ಪಾದಯಾತ್ರೆ ನಡೆಸಿದ್ದಾರೆ. ಇದಕ್ಕೆ ಉತ್ತಮ ಸ್ಪಂದನೆಯೂ ಸಿಕ್ಕಿದೆ.

ಕಾಂಗ್ರೆಸ್‌ ಆಂತರಿಕ ಮಟ್ಟದಲ್ಲಿ ಭಾರೀ ಸಮಸ್ಯೆಗಳಿದ್ದರೂ, ಇದುವರೆಗೂ ಹೈಕ ಮಾಂಡ್‌ಗೆ ನಿವಾರಣೆ ಮಾಡಲು ಆಗಿಲ್ಲ. ಸಚಿನ್‌ ಪೈಲಟ್‌ ತಮ್ಮ ಹಠ ಬಿಡುತ್ತಿಲ್ಲ. ಅಶೋಕ್‌ ಗೆಹ್ಲೋಟ್‌, ಇದನ್ನು ಸವಾಲಾಗಿ ಸ್ವೀಕಾರ ಮಾಡುತ್ತಲೇ ಇಲ್ಲ. ಇವರಿಬ್ಬರ ಬಂಡಾಯ ಹೈಕಮಾಂಡ್‌ಗೆ ಒಂದು ರೀತಿಯ ತಲೆನೋವಾಗಿದೆ. ಬಿಜೆಪಿಯಲ್ಲಿ ಇನ್ನೂ ವಸುಂಧರಾ ರಾಜೇ ಅವರು ಅಗ್ರಗಣ್ಯ ನಾಯಕಿ. ಸದ್ಯ ಇವರಿಗೆ ಪ್ರತಿಸ್ಪರ್ಧಿಯಾಗುವ ಸಾಧ್ಯತೆಗಳಿ ರುವವರು ಕಡಿಮೆ. ಹೀಗಾಗಿ ಬಿಜೆಪಿ ಹೈಕ ಮಾಂಡ್‌ ಯಾವ ರೀತಿ ಇಲ್ಲಿ ತಂತ್ರಗಾರಿಕೆ ನಡೆ ಸುತ್ತದೆ ಎಂಬುದನ್ನು ಕಾದು ನೋಡಬೇಕಾಗಿದೆ.

ಛತ್ತೀಸ್‌ಗಢ: ಸತತ 15 ವರ್ಷಗಳ ಕಾಲ ಆಡಳಿತ ನಡೆಸಿದ್ದ ರಮಣ್‌ ಸಿಂಗ್‌ ಅವರ ಸರಕಾರಕ್ಕೆ 2018ರಲ್ಲಿ ಭೂಪೇಶ್‌ ಬಘೇಲ್‌ ಮತ್ತು ಸಿಂಗ್‌ ದಿಯೋ ಜೋಡಿ ಸೋಲುಣಿಸಿತ್ತು. ಅಷ್ಟೇ ಅಲ್ಲ, ಅಭೂತಪೂರ್ವವೆಂಬಂತೆ ಕಾಂಗ್ರೆಸ್‌ ಅನ್ನು ಈ ಜೋಡಿ ಅಧಿಕಾರಕ್ಕೆ ತಂದಿತ್ತು. ವಿಶೇಷವೆಂದರೆ ಈ ರಾಜ್ಯದಲ್ಲಿ ಪ್ರತೀ 5 ವರ್ಷಗಳಿಗೊಮ್ಮೆ ಸರಕಾರ ಬದಲಾಗುವ ಪದ್ಧತಿ ಇಲ್ಲ. ಇಲ್ಲಿ ಸುಭದ್ರ ಮತ್ತು ಉತ್ತಮ ಆಡಳಿತ ಕೊಟ್ಟರೆ ಮತದಾರ ಪದೇ ಪದೆ ಕೈಹಿಡಿಯುತ್ತಾರೆ. ಇದಕ್ಕೆ ರಮಣ್‌ ಸಿಂಗ್‌ ಅವರ ಆಡಳಿತ ಸಾಕ್ಷಿ. ಹೀಗಾಗಿ, ಕಾಂಗ್ರೆಸ್‌ ಮತ್ತೆ ತಾನೇ ಅಧಿಕಾರಕ್ಕೆ ಬರುವ ತಂತ್ರಗಾರಿಕೆ ನಡೆಸುತ್ತಿದೆ. ಆದರೆ ಇಲ್ಲಿ ಕಾಂಗ್ರೆಸ್‌ಗೆ ನಾಯಕತ್ವದ ಸಮಸ್ಯೆ ಇದೆ. ಅಧಿಕಾರ ಹಂಚಿಕೆಯ ಸೂತ್ರದ ಆಧಾರದ ಮೇಲೆ 2018ರಲ್ಲಿ ಸರಕಾರ ರಚನೆಯಾಗಿದ್ದು, ಭೂಪೇಶ್‌ ಬಘೇಲ್‌ ಅವರು, ಸಿಂಗ್‌ ದಿಯೋ ಅವರಿಗೆ ಅಧಿಕಾರ ಬಿಟ್ಟುಕೊಡದೇ ಇರುವುದು ಒಂದಷ್ಟು ತಿಕ್ಕಾಟಗಳಿಗೆ ಕಾರಣವಾಗಿದೆ. ಇವ ರಿ ಬ್ಬರೂ ಒಂದಾಗಿ ಹೋದರೆ, ಪರ್ವಾ ಗಿಲ್ಲ. ಆದರೆ ಇವ ರನ್ನು ಒಂದು ಮಾಡು ವುದು ಹೇಗೆ ಎಂಬುದು ಹೈಕ ಮಾಂಡ್‌ಗೆ ಸವಾಲಾಗಿದೆ.

ಇನ್ನು ಬಿಜೆಪಿ ಮತ್ತೆ ರಮಣ್‌ ಸಿಂಗ್‌ ಅವರ ನಾಯಕತ್ವದಲ್ಲೇ ಚುನಾವಣೆ ಎದುರಿಸ ಬೇಕಾಗಿದೆ. ಇಲ್ಲಿ ಅವರಿಗೆ ಬದಲಿ ನಾಯಕತ್ವ ಕಾಣಿಸಿಕೊಂಡಿಲ್ಲ. ರಮಣ್‌ ಸಿಂಗ್‌ ಅವರ ಕಾಲದಲ್ಲಿ ನಡೆಸಲಾಗಿದ್ದ ಅಭಿವೃದ್ಧಿ ಯೋಜನೆಗಳನ್ನು ಮುಂದಿಟ್ಟುಕೊಂಡೇ ಮತ ಕೇಳಬೇಕಾಗಿದೆ. ಕಾಂಗ್ರೆಸ್‌ಗೆ ಒಂದಷ್ಟು ಆಡಳಿತ ವಿರೋಧಿ ಅಲೆಯ ಸಮಸ್ಯೆಯೂ ಇದೆ.

ತೆಲಂಗಾಣ: ಇಲ್ಲಿ ಭಾರತ ರಾಷ್ಟ್ರ ಸಮಿತಿ ಪಕ್ಷದ ಕೆ.ಸಿ.ಚಂದ್ರಶೇಖರ ರಾವ್‌ ಆಡಳಿತ ನಡೆಸು ತ್ತಿದ್ದಾರೆ. ಸದ್ಯದ ಮಟ್ಟಿಗೆ ಇವರಿಗೆ ಸವಾಲಾಗು ವವರು ಕಡಿಮೆ. ಆದರೆ ನಿಧಾನಗತಿಯಲ್ಲಿ ಬಿಜೆಪಿ ತನ್ನ ವ್ಯಾಪ್ತಿ ಹೆಚ್ಚಿಸಿಕೊಂಡು ಬಂದಿದ್ದು, ಇದು ಚಂದ್ರಶೇಖರ ರಾವ್‌ ಅವರಿಗೆ ತಲೆಬಿಸಿ ಯಾಗಿದೆ. ಹೈದರಾಬಾದ್‌ ಮಹಾನಗರ ಪಾಲಿಕೆ ಚುನಾವಣೆ, ಲೋಕಸಭೆ ಚುನಾವಣೆ ಮತ್ತು ಇತ್ತೀಚೆಗೆ ನಡೆದ ಕೆಲವು ಉಪಚುನಾವಣೆಗಳು ಬಿಜೆಪಿ ಸಾಮರ್ಥ್ಯವನ್ನು ಬಹಿರಂಗಪಡಿಸಿವೆ. ಇದು ಒಂದು ರೀತಿಯಲ್ಲಿ ಚಂದ್ರಶೇಖರ ರಾವ್‌ ಅವರ ತಲೆಬಿಸಿಗೆ ಕಾರಣವಾಗಿದೆ. ಸದ್ಯ ಇಲ್ಲಿ ಕಾಂಗ್ರೆಸ್‌ ಗಟ್ಟಿಯಾಗಿಲ್ಲ. ಇವರ ಮತಗಳನ್ನು ಬಿಜೆಪಿ ಕೀಳುವಲ್ಲಿ ಯಶಸ್ವಿಯಾಗುತ್ತಿದೆ. ಆದರೂ ಈ ಚುನಾವಣೆಯಲ್ಲಿ ಹೊಸ ತಂತ್ರಗಾರಿಕೆ ನಡೆ ಸಲು ಮುಂದಾಗಿದೆ ಕಾಂಗ್ರೆಸ್‌. ಬಿಜೆಪಿಯಲ್ಲಿ ನಾಯಕತ್ವದ ಸಮಸ್ಯೆ ಇದ್ದರೂ, ಕೇಂದ್ರ ಮತ್ತು ರಾಜ್ಯ ಘಟಕದ ಸಮನ್ವಯದಲ್ಲಿ ಕೆಲಸ ಮಾಡುತ್ತಿದ್ದಾರೆ.

ಸೋಮಶೇಖರ ಸಿ.ಜೆ.

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

Advertisement

Udayavani is now on Telegram. Click here to join our channel and stay updated with the latest news.

Next