Advertisement

ವರುಣಾ ಕ್ಷೇತ್ರದಲ್ಲಿ ಧ್ರುವ ಬಿರುಸಿನ ಪ್ರಚಾರ

10:16 PM Apr 03, 2019 | Team Udayavani |

ತಿ.ನರಸೀಪುರ: ವರುಣಾ ವಿಧಾನಸಭಾ ಕ್ಷೇತ್ರದಾದ್ಯಂತ ಕಾಂಗ್ರೆಸ್‌ ಅಭ್ಯರ್ಥಿ, ಸಂಸದ ಆರ್‌.ಧ್ರುವನಾರಾಯಣ ಅವರು ಶಾಸಕ ಡಾ.ಎಸ್‌.ಯತೀಂದ್ರ ಜೊತೆ ಬುಧವಾರ ಬಿರುಸಿನ ಮತಯಾಚನೆ ನಡೆಸಿದರು.

Advertisement

ಗ್ರಾಪಂ ಮಟ್ಟದಲ್ಲಿ ಪಕ್ಷದ ಮುಖಂಡರು, ಕಾರ್ಯಕರ್ತರು, ಜನಪ್ರತಿನಿಧಿಗಳು ಹಾಗೂ ಮತದಾರನ್ನು ಭೇಟಿ ಬೆಂಬಲ ಕೋರಿದರು. ಸಂಸದರು, ಶಾಸಕರ ಬರುಕೆಗಾಗಿಯೇ ಕಾದು ಕುಳಿತಿದ್ದ ಜನರಿಂದಲೂ ಉತ್ತಮ ಪ್ರತಿಕ್ರಿಯೆ ದೊರೆಯಿತು. ಕಳೆದೆರಡು ಲೋಕಸಭಾ ಚುನಾವಣೆಗಿಂತಲೂ ಈ ಬಾರಿ ವರುಣಾ ಕ್ಷೇತ್ರದಿಂದ ಅತ್ಯಧಿಕ ಮತಗಳ ಅಂತರವನ್ನು ನೀಡುವುದಾಗಿ ಕಾರ್ಯಕರ್ತರು ಭರವಸೆ ನೀಡಿದರು.

ನಂಜನಗೂಡು ತಾಲೂಕಿನ ರಾಂಪುರ ಗ್ರಾಪಂ ಕೇಂದ್ರದಿಂದ ಆರಂಭಗೊಂಡ ಚುನಾವಣಾ ಪ್ರಚಾರ ಮರಳೂರು, ಗೊದ್ದನಪುರ, ತಾಂಡವಪುರ, ಕೆಂಪಸಿದ್ದನಹುಂಡಿ, ಹುಳಿಮಾವು, ಹದಿನಾರು, ತಾಯೂರು, ಬಿಳೆಗೆರೆ, ಸುತ್ತೂರು, ನಗರ್ಲೆ, ಆಲಂಬೂರು, ಮಲ್ಲೂಪುರ, ತಗಡೂರು, ಕಾರ್ಯ, ದಾಸನೂರು ಹಾಗೂ ಕೋಣನೂರು ಗ್ರಾಮಗಳಲ್ಲಿ ನಡೆಯಿತು.

ಮೋದಿ ವಿಫ‌ಲ: ಈ ವೇಳೆ ಶಾಸಕ ಡಾ.ಎಸ್‌.ಯತೀಂದ್ರ ಮಾತನಾಡಿ, ಪ್ರಧಾನಿ ನರೇಂದ್ರ ಮೋದಿ ಜನರಿಗೆ ನೀಡಿದ್ದ ಭರವಸೆಗಳನ್ನು ಈಡೇರಿಸುವಲ್ಲಿ ಸಂಪೂರ್ಣವಾಗಿ ವಿಫ‌ಲರಾಗಿದ್ದಾರೆ. ದುಡಿಯುವ ಯುವಕರ ಕೈಗೆ ಕೆಲಸವನ್ನೂ ಕೊಡಲಿಲ್ಲ. ರೈತರ ಆದಾಯವನ್ನೂ ವೃದ್ಧಿಗೊಳಿಸಲಿಲ್ಲ.

ಬದಲಿಗೆ ಹಿಂದುತ್ವ, ದೇಶಭಕ್ತಿಯ ನೆಪದಲ್ಲಿ ಜನರನ್ನು ವಿಭಜಿಸಿ, ಭಾವನಾತ್ಮಕವಾಗಿ ಕೆರಳಿಸಿ ಮತ್ತೆ ಅಧಿಕಾರ ಹಿಡಿಯಲು ಹುನ್ನಾರ ನಡೆಸುತ್ತಿದ್ದಾರೆ. 10 ವರ್ಷಗಳ ಕಾಲ ಸಂಸದರಾಗಿ ಜನಮೆಚ್ಚುವ ಕೆಲಸವನ್ನು ಮಾಡಿರುವ ಆರ್‌.ಧ್ರುವನಾರಾಯಣ ಅಭಿವೃದ್ಧಿಗೆ ಹಗಲಿರುಳುತ್ತಿದ್ದಾರೆ. ಕೇಂದ್ರದಲ್ಲಿ ಯುಪಿಎ ಸರ್ಕಾರ ಅಧಿಕಾರಕ್ಕೆ ಬಂದರೆ ಸಚಿವರಾಗುವ ಅವಕಾಶರುವುದರಿಂದ ಈ ಬಾರಿಯೂ ಕಾಂಗ್ರೆಸ್‌ ಬೆಂಬಲಿಸಬೇಕೆಂದು ಮನವಿ ಮಾಡಿದರು.

Advertisement

ಮತ್ತಷ್ಟು ಅಭಿವೃದ್ಧಿ: ಕಾಂಗ್ರೆಸ್‌ ಅಭ್ಯರ್ಥಿ ಆರ್‌.ಧ್ರುವನಾರಾಯಣ ಮಾತನಾಡಿ, ಹಿಂದಿನ ಯುಪಿಎ ಕೇಂದ್ರ ಸರ್ಕಾರ ಹಾಗೂ ಮಾಜಿ ಸಿಎಂ ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್‌ ಸರ್ಕಾರ ಜನರ ಬದುಕನ್ನು ಹಸನುಗೊಳಿಸಲು ಜಾರಿಗೆ ತಂದಂತಹ ಹತ್ತಾರು ಶಾಶ್ವತ ಯೋಜನೆಗಳನ್ನು ಜನರ ಮುಂದಿಡುವ ಮೂಲಕ ಮತದಾರರ ಮನವೊಲಿಸುವ ಕೆಲಸವನ್ನು ಕಾರ್ಯಕರ್ತರು ಮಾಡಬೇಕು.

ಚುನಾವಣೆಯ ನಂತರ ಮುಂದಿನ ದಿನಗಳಲ್ಲಿಯೂ ಶಾಸಕರ ಜೊತೆಗೂಡಿ ಅಭಿವೃದ್ಧಿ ಕೆಲಸವನ್ನು ಮಾಡುತ್ತೇವೆ. ಚಾಮರಾಜನಗರ ಲೋಕಸಭಾ ಕ್ಷೇತ್ರದ ಮತದಾರರು ಬೆಂಬಲ ನೀಡಬೇಕೆಂದು ಕೋರಿದರು. ಈ ವೇಳೆ ವಿಧಾನ ಪರಿಷತ್‌ ಸದಸ್ಯ ಆರ್‌.ಧರ್ಮಸೇನಾ, ಮಾಜಿ ಸಂಸದ ಕಾಗಲವಾಡಿ ಶಿವಣ್ಣ, ಜಿಪಂ ಮಾಜಿ ಅಧ್ಯಕ್ಷ ಬಿ.ಎಂ.ರಾಮು,

ಮಾಜಿ ಸದಸ್ಯ ಎಂ.ಸುಧಾ ಮಹದೇವಯ್ಯ, ವಾಲ್ಮೀಕಿ ಅಭಿವೃದ್ಧಿ ನಿಗಮದ ಮಾಜಿ ಅಧ್ಯಕ್ಷ ಎಸ್‌.ಸಿ.ಬಸವರಾಜು, ಜೆಡಿಎಸ್‌ ಕ್ಷೇತ್ರಾಧ್ಯಕ್ಷ ತಾಯೂರು ಪ್ರಕಾಶ್‌, ಮಹದೇವ, ಕೆಂಪಯ್ಯನಹುಂಡಿ ಎಂ.ಶಿವಪ್ರಸಾದ್‌, ಚನ್ನೇಗೌಡ, ಬೀರಿಹುಂಡಿ ಚಿನ್ನಸ್ವಾಮಿ, ಟಿ.ಸಿ.ಮಾದೇಶ್‌, ಲಾರಿ ಸ್ವಾಮಿ, ಬಸವರಾಜು, ಸಿದ್ದರಾಜು, ರಾಜನಾಯಕ, ದೊರೆಸ್ವಾಮಿಗೌಡ, ಮುದ್ದಬೀರನಹುಂಡಿ ನಿಂಗರಾಜು ಇತರರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next