Advertisement

ಧೂಳ್‌ ಎಬ್ಬಿಸೋ ಹುಮ್ಮಸ್ಸಿನಲ್ಲಿ ಧೂಮ್‌

10:13 AM Dec 21, 2019 | Suhan S |

ಬಾಲಿವುಡ್‌ ಅಂಗಳದಲ್ಲಿ ಧೂಳೆಬ್ಬಿಸಿದ್ದ “ಧೂಮ್‌’ ಸರಣಿಯ ಚಿತ್ರಗಳು ನಿಮಗೆ ಗೊತ್ತಿರಬಹುದು. ಈಗ ಅದೇ ಶೈಲಿಯಲ್ಲಿ “ಧೂಮ್‌ ಅಗೈನ್‌’ ಚಿತ್ರ ತಯಾರಾಗುತ್ತಿದೆ.

Advertisement

ಅಂದಹಾಗೆ, “ಧೂಮ್‌ ಅಗೈನ್‌’ ಚಿತ್ರ ಕೂಡ ಪಕ್ಕಾ ಆ್ಯಕ್ಷನ್‌-ಥ್ರಿಲ್ಲರ್‌ ಕಥಾಹಂದರ, ಬೈಕ್‌ ಚೇಸಿಂಗ್‌ನಂತಹ ಅಂಶಗಳನ್ನು ಹೊಂದಿದ್ದರೂ, ಹಿಂದೆ ಬಂದಿರುವ “ಧೂಮ್‌’ ಸರಣಿಯ ಚಿತ್ರಗಳಿಗೂ ಇದಕ್ಕೂ ಯಾವುದೇ ಸಂಬಂಧವಿಲ್ಲವಂತೆ. ಈಗಾಗಲೇ ಮೊದಲ ಹಂತದ ಚಿತ್ರೀಕರಣವನ್ನು ಯಶಸ್ವಿಯಾಗಿ ಪೂರ್ಣಗೊಳಿಸಿರುವ “ಧೂಮ್‌ ಅಗೈನ್‌’ ಚಿತ್ರತಂಡ, ಯು. ಕೆ, ಯೂರೋಪ್‌ ಮೊದಲಾದ ಕಡೆಗಳಲ್ಲಿ ಎರಡನೇ ಹಂತದ ಚಿತ್ರೀಕರಣಕ್ಕೆ ಪ್ಲಾನ್‌ ಹಾಕಿಕೊಂಡಿದೆ. ಇದೇ ವೇಳೆ ಪತ್ರಕರ್ತರು ಮತ್ತು ಮಾಧ್ಯಮಗಳ ಮುಂದೆ ಬಂದಿದ್ದ ಚಿತ್ರತಂಡ, “ಧೂಮ್‌ ಅಗೈನ್‌’ ಬಗ್ಗೆ ಚಿತ್ರದ ಬಗ್ಗೆ ಒಂದಷ್ಟು ಮಾಹಿತಿ ನೀಡಿದೆ.

“”ಧೂಮ್‌’ ಅಂದ್ರೆ ಮೊದಲು ಪ್ರೇಕ್ಷಕರಿಗೆ ನೆನಪಿಗೆ ಬರುವುದು ದುಬಾರಿ ಬೈಕ್‌ಗಳು, ಚೇಸಿಂಗ್‌ ದೃಶ್ಯಗಳು, ಸ್ಟೈಲಿಶ್‌ ಮತ್ತು ಗ್ಲಾಮರ್‌ ಲುಕ್‌ಗಳು. ಇನ್ನು ಈ ಚಿತ್ರದಲ್ಲಿ “ಧೂಮ್‌ ಅಗೈನ್‌’ ಅಂಥಇರುವುದರಿಂದ,ಹೆಸರಿಗೆ ತಕ್ಕಂತೆ ದುಬಾರಿ ಬೈಕ್‌ಗಳು, ಚೇಸಿಂಗ್‌ ದೃಶ್ಯಗಳು, ಸ್ಟೈಲಿಶ್‌ ಮತ್ತು ಗ್ಲಾಮರ್‌ ಲುಕ್‌ಗಳು ಈ ಚಿತ್ರದಲ್ಲೂ ನೋಡಬಹುದು. ಹಾಗಂತ ಬಾಲಿವುಡ್‌ನ‌ಲ್ಲಿ ಈಗಾಗಲೇ ಬಂದಿರುವ ಚಿತ್ರಗಳಿಗೂ ಇದಕ್ಕೂ ಯಾವುದೇ ಸಂಬಂಧವಿಲ್ಲ’ ಎಂದು ಟೈಟಲ್‌ ಮತ್ತು ಕಂಟೆಂಟ್‌ ಎರಡರ ಬಗ್ಗೆಯೂ ಸ್ಪಷ್ಟೀಕರಣ ಕೊಡುತ್ತದೆ ಚಿತ್ರತಂಡ. ನಿರ್ದೇಶಕ ರಾಜೇಶ್‌ ವರ್ಮ “ಧೂಮ್‌ ಅಗೈನ್‌’ ಚಿತ್ರವನ್ನು ನಿರ್ದೇಶಿಸುತ್ತಿದ್ದಾರೆ.

ಚಿತ್ರದ ಬಗ್ಗೆ ಮಾತನಾಡುವ ರಾಜೇಶ್‌ ವರ್ಮ, “ಚಿತ್ರದ ಟೈಟಲ್‌ ಕೇಳಿದಾಕ್ಷಣ ಇದೊಂದು ಬೈಕ್‌ ಅಥವಾ ಕಾರ್‌ ರೇಸ್‌ ಕುರಿತಾದ ಕಥೆ ಇರಬಹುದೆಂಬ ಕುತೂಹಲ ಪ್ರೇಕ್ಷಕರಲ್ಲಿ ಮೂಡುತ್ತದೆ. ಆದ್ರೆ ಚಿತ್ರದಲ್ಲಿ ಅದರ ಜೊತೆಗೆ ಬೇರೆ ಏನೇನು ಇರಲಿವೆ ಅನ್ನೋದೆ ಸಸ್ಪೆನ್ಸ್‌. ನಾಲ್ಕು ಯುವಕರ ಸುತ್ತ ಚಿತ್ರದ ಕಥೆ ಸಾಗಲಿದ್ದು, ಈ ಯುವಕರು ತಮ್ಮ ಬುದ್ದಿವಂತಿಕೆ ಉಪಯೋಗಿಸಿಕೊಂಡು ಮುಂದೆ ಬಂದು ಸಮಾಜಕ್ಕೆ ಏನು ಮಾಡುತ್ತಾರೆ ಅನ್ನೋದು ಚಿತ್ರದ ಕಥೆ’ ಎಂದು ವಿವರಣೆ ಕೊಡುತ್ತಾರೆ. ಇನ್ನು ಮಾಜಿ ಕ್ರಿಕೆಟಿಗ ಶ್ರೀಶಾಂತ್‌ ಈ ಚಿತ್ರದಲ್ಲಿ ಎಸಿಪಿ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ. ಈಗಾಗಲೇ ಶ್ರೀಶಾಂತ್‌ ಅವರ ಪಾತ್ರದ ಚಿತ್ರೀಕರಣ ಪೂರ್ಣಗೊಂಡಿದೆ ಯಂತೆ. ಉಳಿದಂತೆ ನಾಲ್ವರು ಯುವಕರ ಪಾತ್ರಗಳಲ್ಲಿ ವಾಸು, ರಾಕೇಶ್‌, ಭರತ್‌ ಮತ್ತು ಪ್ರವೀರ್‌ ಶೆಟ್ಟಿ ಅಭಿನಯಿಸುತ್ತಿದ್ದಾರೆ. ಈ ಯುವಕರಿಗೆ ಲೀಡರ್‌ ಆಗಿ ಹಾಲಿವುಡ್‌ ನಟಿ ಹೆನ್ನಾ ಕ್ರಿಸ್ಟನೆ ಮತ್ತು ಅರ್ಜುನ್‌ ಶೆಟ್ಟಿ ನಟಿಸುತ್ತಿದ್ದಾರೆ. ಸ್ಪೇನ್‌ ಮೂಲದ ಜನೀರಾ ಐದರ್‌ ಚಿತ್ರದಲ್ಲಿ ನಾಯಕಿಯಾಗಿ ಅಭಿನಯಿಸುತ್ತಿದ್ದಾರೆ.

ಇದೇ ಡಿಸೆಂಬರ್‌ ಕೊನೆಯಿಂದ ಯು.ಕೆ, ಯುರೋಪ್‌, ಬೆಂಗಳೂರಿನಲ್ಲಿ ಬಾಕಿಯಿರುವ ಎರಡನೇ ಹಂತದ ಚಿತ್ರೀಕರಣಕ್ಕೆ ಚಿತ್ರತಂಡ ಪ್ಲಾನ್‌ ಹಾಕಿಕೊಂಡಿದೆ. ಚಿತ್ರದ ಹಾಡುಗಳಿಗೆ ಗುರು ಕಿರಣ್‌ ಸಂಗೀತ ಸಂಯೋಜನೆಯಿದ್ದು, ಅಣಜಿ ನಾಗರಾಜ್‌ ಚಿತ್ರಕ್ಕೆ ಛಾಯಾಗ್ರಹಣ ಮಾಡುತ್ತಿದ್ದಾರೆ. ಕನ್ನಡದ ಜೊತೆ ಜೊತೆಗೆ ಹಿಂದಿ, ತೆಲುಗು, ತಮಿಳು, ಮತ್ತು ಮಲೆಯಾಳಂ ಭಾಷೆಗಳಲ್ಲಿ ಏಕಕಾಲದಲ್ಲಿ “ಧೂಮ್‌ ಅಗೈನ್‌’ ಚಿತ್ರ ನಿರ್ಮಾಣವಾಗುತ್ತಿದೆ. “ಪರಮಾತ್ಮ ಕ್ರಿಯೇಶನ್ಸ್‌’ ಬ್ಯಾನರ್‌ನಲ್ಲಿ ನಿರ್ಮಾಣವಾಗುತ್ತಿರುವ ಈ ಚಿತ್ರವನ್ನು ಶ್ಯಾಂ ಕಪೂರ್‌-ಸುಜಿತ್‌ ಶೆಟ್ಟಿ, ರಾಜ್‌ ಸೇಠಿಯಾ ಜಂಟಿಯಾಗಿ ನಿರ್ಮಿಸುತ್ತಿದ್ದಾರೆ. ಒಟ್ಟಾರೆ ಬಹುತೇಕ ಹೊಸ ಪ್ರತಿಭೆಗಳ “ಧೂಮ್‌ ಅಗೈನ್‌’ ಸ್ಯಾಂಡಲ್‌ವುಡ್‌ ಅಂಗಳದಲ್ಲಿ ಎಷ್ಟರ ಮಟ್ಟಿಗೆ ಧೂಳೆಬ್ಬಿಸುತ್ತದೆ ಅನ್ನೋದು ಚಿತ್ರ ತೆರೆಗೆ ಬಂದ ಮೇಲಷ್ಟೆ ಗೊತ್ತಾಗಲಿದೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next