Advertisement

ಧರ್ಮಸ್ಥಳದ ವಿರಾಟ್‌ ಸಾಧನೆ ಪುಸ್ತಕ ರೂಪದಲಿ

06:13 PM Dec 06, 2020 | Adarsha |

ಹೊನ್ನಾವರ: ಕಾಲಚಕ್ರದಲ್ಲಿ ದಂತಕಥೆ ಆಗಬಹುದಾಗಿದ್ದ ಧರ್ಮಸ್ಥಳ ನಡೆಸಿದ ಸಾಮಾಜಿಕ, ಧಾರ್ಮಿಕ ಕ್ರಾಂತಿ ಅಧಿಕೃತ ವಿವರಗಳನ್ನು ಪ್ರಕಟಿಸುವ ಕಾರ್ಯ ಮುಕ್ತಾಯವಾಗಿದೆ. ಶ್ರೀ ಕ್ಷೇತ್ರದ ಧರ್ಮಾಧಿಕಾರಿಗಳಾಗಿ ವೀರೇಂದ್ರ ಹೆಗ್ಗಡೆಯವರು ಪಟ್ಟಕ್ಕೇರಿದ ಮೇಲೆ ನಿರಂತರ ನೂರಾರು ಕ್ಷೇತ್ರಗಳಲ್ಲಿ ನಡೆಸಿದ ಜನೋಪಯೋಗಿ ಕಾರ್ಯಗಳು, ಜನರ ಒಳಗೊಳ್ಳುವಿಕೆ, ಹೆಗ್ಗಡೆಯವರಿಂದ ಆರಂಭಿಸಿ ಕ್ಷೇತ್ರದ ಸಾಮಾನ್ಯ ಕಾರ್ಮಿಕನವರೆಗೆ ತಪಸ್ಸಿನಂತೆ ದುಡಿದ ಪರಿ, ಇದರಿಂದ ಕರ್ನಾಟಕದಲ್ಲಾದ ಬದಲಾವಣೆಗಳು ಇವುಗಳನ್ನು ಈ ಕೃತಿಗಳಲ್ಲಿ ದಾಖಲಿಸಲಾಗಿವೆ.

Advertisement

25 ಸಂಪುಟಗಳ ಈ ಸುವರ್ಣ ಸಂಚಯ ಮಾಲಿಕೆಯನ್ನು ಹೆಗ್ಗಡೆಯವರ ಪಟ್ಟಾಭಿಷೇಕದ ಸುವರ್ಣ ಸಂದರ್ಭದಲ್ಲಿ ಸಂಕಲ್ಪಿಸಲಾಗಿತ್ತು. ಡಿ. ಹರ್ಷೇಂದ್ರಕುಮಾರ ಸಂಪಾದಕತ್ವದಲ್ಲಿ ತುಂಬ ಜವಾಬ್ದಾರಿಯುತ ಬರಹಗಾರರು ಅಷ್ಟೇ ಜವಾಬ್ದಾರಿಯಿಂದ ಭಾವೋದ್ವೇಗಕ್ಕೊಳಗಾಗದೆ ಐತಿಹಾಸಿಕ ದಾಖಲೆಯನ್ನಾಗಿಸಿದ್ದಾರೆ. ಹೆಗ್ಗಡೆಯವರ ಸಾರಥ್ಯದಲ್ಲಿ ನಡೆದ ಸಾಧನೆ ಎಂಥವರನ್ನೂ ಬೆರಗುಗೊಳಿಸುತ್ತದೆ, ಮಂತ್ರಮುಗ್ಧರನ್ನಾಗಿಸುತ್ತದೆ.

ಸುಂದರ ಮುದ್ರಣ, ದಪ್ಪ ಕಾಗದ, ವರ್ಣಚಿತ್ರಗಳ ಸಹಿತ ಕೃತಿಗಳು ಹೊರಬಂದಿವೆ. ಹೆಗ್ಗಡೆಯವರ ಅಭಿನಂದನಾ ಬೃಹತ್‌ ಗ್ರಂಥ ಧರ್ಮಯಾನದೊಂದಿಗೆ ಮುಕ್ತಾಯವಾಗುತ್ತದೆ. ಇದೀಗ ಕೈ ಸೇರಿರುವ ಜ್ಞಾನಯಜ್ಞ ಕೃತಿಯಲ್ಲಿ ಎಸ್‌ಡಿಎಂ ಶಿಕ್ಷಣ ಸಂಸ್ಥೆ ನಡೆಸುವ 9 ಶಾಲೆ, 5 ಪದವಿ ಮತ್ತು ಪ ಪೂ ಮಹಾವಿದ್ಯಾಲಯ, 6 ವೃತ್ತಿಪರ ಶಿಕ್ಷಣ ಸಂಸ್ಥೆ, 8 ತಾಂತ್ರಿಕ ವೃತ್ತಿಪರ ಶಿಕ್ಷಣ ಕೇಂದ್ರ, 8 ಆರೋಗ್ಯ ಶಿಕ್ಷಣ ಮಹಾವಿದ್ಯಾಲಯ, 10 ಬೋಧಕ ಆಸ್ಪತ್ರೆ, 3 ವೃತ್ತಿ ಕೌಶಲ್ಯ ತರಬೇತಿ ಸಂಸ್ಥೆ, 3 ಸಂಶೋಧನಾ ಕೇಂದ್ರ, ಜೆಎಸ್‌ ಎಸ್‌ ಜೊತೆಯಲ್ಲಿ 8 ಶಿಕ್ಷಣ ಸಂಸ್ಥೆ, 18 ಮಹಾವಿದ್ಯಾಲಯ, ಇತರ ಸಂಸ್ಥೆಗಳಿಂದ ಬಂದ 6 ಶಿಕ್ಷಣ ಸಂಸ್ಥೆ ಸಹಿತ ವಿವರಗಳಿದ್ದು ಹೆಗ್ಗಡೆಯವರ ಶಿಕ್ಷಣ ಪ್ರೇಮಕ್ಕೆ ಸಾಕ್ಷಿಯಾಗಿದ್ದು ದೇಶದಲ್ಲೇ ಎಲ್ಲವೂ ಮಾದರಿ ಶಿಕ್ಷಣ ಸಂಸ್ಥೆ ಎಂದು ಕರೆಸಿಕೊಂಡಿದ್ದು ಧರ್ಮಸ್ಥಳದ ಸಂಸ್ಥೆಯಲ್ಲಿ ಕಲಿತವರಿಗೆ ಮೊದಲ ಉದ್ಯೋಗ ಎಂಬ ಮಾತು ಚಾಲ್ತಿಯಲ್ಲಿ ಬಂದಿದೆ.

ಡಾ| ಚಂದ್ರಶೇಖರ ದಾಂಬ್ಲೆ, ಡಾ| ಆರ್‌.ಟಿ. ಜಂತಲಿ ಈ ಕೃತಿ ರಚಿಸಿದ್ದಾರೆ. ಜಲ ಗಣ ಮನ ಧರ್ಮಸ್ಥಳದ ಕೆರೆ ತುಂಬಿಸುವ ಯೋಜನೆಯ ಯಶೋಗಾಥೆಯಾಗಿದ್ದು ಖ್ಯಾತ ಪರಿಸರವಾದಿ ಶಿವಾನಂದ ಕಳವೆ ಇದರ  ಮಹತ್ವವನ್ನು ಹೇಳುವುದರ ಜೊತೆ ಜನರ ಸಹಭಾಗಿತ್ವದಲ್ಲಿ ಧರ್ಮಸ್ಥಳ ಕೆರೆ ತುಂಬಿಸುವ ಯೋಜನೆಯ ವಿವರ ನೀಡಿದ್ದಾರೆ. ರಾಜ್ಯದ 30 ಜಿಲ್ಲೆಗಳ 11 ತಾಲೂಕುಗಳ 193 ಕೆರೆಗಳಿಗೆ 15 ಕೋಟಿ ರೂ. ವೆಚ್ಚದಲ್ಲಿ ಕಾಯಕಲ್ಪ ಮಾಡಿದ್ದು 79 ಸಾವಿರ ಜನ ಇದರಿಂದ ಪ್ರಯೋಜನ ಪಡೆದಿದ್ದಾರೆ.

11ಲಕ್ಷ ಟ್ರಾಕ್ಟರ್‌ ಲೋಡು ಹೂಳನ್ನು 22 ಸಾವಿರ ರೈತರು ಒಯ್ದಿರುವ ವಿವರ ಕೃತಿಯಲ್ಲಿದ್ದು ಕೆರೆ ಹೂಳೆತ್ತಿದ್ದರಿಂದ ಪ್ರಯೋಜನ ಪಡೆದ ರೈತರ ಮಾತುಗಳು ಇದರಲ್ಲಿದೆ. ಹೆಸರಾಂತ ಬರಹಗಾರ ಪ್ರೊ| ಎಂ. ರಾಮಚಂದ್ರ ಧರ್ಮಸ್ಥಳದ ಬಹುಮುಖ ಎಂಬ ಕೃತಿ ರಚಿಸಿದ್ದಾರೆ. ಹೆಗ್ಗಡೆಯವರ ಕುಟುಂಬದ ಮೂರು ತಲೆಮಾರನ್ನು ಪರಿಚಯಿಸುತ್ತ ಧರ್ಮಸ್ಥಳದ ಪರಂಪರಾಗತ ಸಂಪ್ರದಾಯಗಳನ್ನು, ಸಾಮೂಹಿಕ ವಿವಾಹದಂತಹ ಆಧುನಿಕ ಚಿಂತನೆಗಳನ್ನು ಹೇಳುತ್ತ ಎಲ್ಲ ಕೃತಿ ಓದಲಾಗದವರಿಗೆ ಧರ್ಮಸ್ಥಳದ ಹಿರಿಮೆಯನ್ನು ಇಲ್ಲಿ ಕಿರಿದಾಗಿ ಕಟ್ಟಿಕೊಟ್ಟಿದ್ದಾರೆ.

Advertisement

ಇದನ್ನೂ ಓದಿ:   ಬೆಳಗಾವಿ ನಾಗನೂರು ಮಠಕ್ಕೆ ಸಚಿವ ಪ್ರಹ್ಲಾದ ಜೋಶಿ ಭೇಟಿ

ದೇಶದ ಬಹುಪಾಲು ಧಾರ್ಮಿಕ ಸ್ಥಳಗಳನ್ನು ಆದಾಯ ಮೂಲವನ್ನಾಗಿಸಿಕೊಂಡಿರುವವರು, ಮೂಢನಂಬಿಕೆ ಬಿತ್ತಿ ಜನರ ಮುಗ್ಧತೆಯನ್ನು ದುರುಪಯೋಗ ಮಾಡಿಕೊಳ್ಳುತ್ತಿರುವವರು, ಪ್ರವಾಸಿ ಮತ್ತು ಮನರಂಜನೆಯ ತಾಣವನ್ನಾಗಿಸಿದವರು, ಧರ್ಮವನ್ನು ರಾಜಕೀಯಕ್ಕೆ ಬಳಸಿಕೊಳ್ಳುತ್ತಿರುವಂತವರಿಗೆ ಎಂದಾದರೂ ನಿಜವಾದ ಅರ್ಥದಲ್ಲಿ ಧರ್ಮ ಮತ್ತು ದೇವಾಲಯವನ್ನು, ಅದರ ಆದಾಯವನ್ನು ಜನಪರವಾಗಿ ಸದ್ಬಳಕೆ ಮಾಡಬೇಕು ಎಂದಿದ್ದರೆ. ಅವರಿಗೆ ಧರ್ಮಸ್ಥಳದ ಈ ಕೃತಿಗಳು ಪಠ್ಯವಾಗುತ್ತವೆ.

ಜೀಯು, ಹೊನ್ನಾವರ

Advertisement

Udayavani is now on Telegram. Click here to join our channel and stay updated with the latest news.

Next