Advertisement

ಧರ್ಮ ಸಂಸದ್‌ ಇಂದು ಆರಂಭ

06:00 AM Nov 24, 2017 | Team Udayavani |

ಉಡುಪಿ: ರಾಕ್ಷಸರು ಋಷಿಮುನಿಗಳಿಗೆ, ಸಮಾಜಕ್ಕೆ ತೊಂದರೆ ಕೊಡುತ್ತಿದ್ದಾಗ ಋಷಿಮುನಿಗಳು ಸಭೆ ಸೇರಿ ಕೆಲವು ನಿರ್ಣಯಗಳನ್ನು ತೆಗೆದುಕೊಂಡ ಉದಾಹರಣೆಗಳು ಪುರಾಣಗಳಲ್ಲಿ ಕಂಡುಬರುತ್ತವೆ. ಮುಖ್ಯವಾಗಿ ಇಂತಹ ಸಭೆ ಸೇರುತ್ತಿದ್ದುದು ನೈಮಿಷಾರಣ್ಯದಲ್ಲಿ ಎಂಬ ಉಲ್ಲೇಖಗಳಿವೆ. ಸಾಮಾಜಿಕ ಸಮಸ್ಯೆಗಳಿಗೂ ಧಾರ್ಮಿಕ ವಿಧಿವಿಧಾನಗಳ ಬಗೆಗೂ ಇಂತಹ ಸಭೆ ನಡೆಯುತ್ತಿತ್ತು. ಸುಮಾರು ಸಾವಿರ ವರ್ಷಗಳ ಹಿಂದೆ ಇಂತಹ ಧಾರ್ಮಿಕ ಚೌಕಟ್ಟಿನ ಸಭೆ ನಡೆಯುತ್ತಿದ್ದ ಜಾಗಗಳಲ್ಲಿ ಉಡುಪಿಯ ಶ್ರೀ ಅನಂತೇಶ್ವರ ದೇವಸ್ಥಾನದ ಹೆಬ್ಟಾಗಿಲೂ ಒಂದು. ಇಂತಹ ವಿದ್ವತ್ಸಭೆಗಳಿಗೆ ಸಂವಾದಿಯಾಗಬಲ್ಲ ಸಾಧುಸಂತರ ಸಭೆ ಈಗ ಉಡುಪಿಯಲ್ಲಿ  ನಡೆಯುತ್ತಿದೆ.

Advertisement

1964ರಲ್ಲಿ: 1964ರ ಆಗಸ್ಟ್‌ 29ರಂದು ಸ್ಥಾಪನೆಗೊಂಡ ವಿಶ್ವ ಹಿಂದೂ ಪರಿಷದ್‌ ಇಟ್ಟ ಬಹು ಹೆಜ್ಜೆಗಳಲ್ಲಿ ಸಾಧುಸಂತರನ್ನು ಸೇರಿಸಿ ಚರ್ಚಿಸಿ ತಳೆಯುವ ನಿರ್ಣಯಗಳೂ ಒಂದು. ಆರೆಸ್ಸೆಸ್‌ ಸರಸಂಘಚಾಲಕ ಗುರೂಜಿ ಗೋಳವಲ್ಕರ್‌ ಅವರು ಹಿಂದೂ ಸಮಾಜದ ವಿವಿಧ ಸಮಸ್ಯೆ, ಹಿಂದೂ ಸಮಾಜದಲ್ಲಿ ಸ್ವಾಮೀಜಿ ಯವರ ಬಗೆಗಿನ ಗೌರವಗಳನ್ನು ಗಮನಿಸಿ ಇವುಗಳ ನಡುವೆ ಒಂದು ಕೊಂಡಿ ಏರ್ಪಡಿಸಲು ನಡೆಸಿದ ಚಿಂತನೆಯ ಫ‌ಲಶ್ರುತಿಯೇ ವಿಹಿಂಪ. ತಮ್ಮ ಮಠ, ಸಂಪ್ರದಾಯಗಳಿಗಷ್ಟೇ ತಮ್ಮನ್ನು ಸೀಮಿತ ಗೊಳಿಸಿದ್ದ ಧರ್ಮಾಚಾರ್ಯರು ವ್ಯಾಪಕವಾದ ಸಾಮಾಜಿಕ ದೃಷ್ಟಿ ಬೆಳೆಸಿಕೊಂಡು ಒಟ್ಟು ಹಿಂದೂ ಸಮಾಜದ ಪರವಾಗಿ ಕೆಲಸ ಮಾಡಿದರೆ ಅದ್ಭುತ ಪ್ರಗತಿ ಸಾಧ್ಯ ಎನ್ನುವುದನ್ನು ಗೋಳವಲ್ಕರ್‌ ಅವರು ಮನಗಂಡರು. ಟ್ರಿನಿಡಾಡ್‌ನ‌ ಸಂಸದ ಶಂಭುನಾಥ ಕಪಿಲದೇವ್‌ ಅವರು 1963ರಲ್ಲಿ ಗೋಳವಲ್ಕರ್‌ ಅವರನ್ನು ಭೇಟಿ ಮಾಡಿ ವಿದೇಶಗಳಲ್ಲಿ ಧಾರ್ಮಿಕ ವಿಷಯಗಳಿಗೆ ಮಾರ್ಗದರ್ಶನದ ಕೊರತೆ ಇರುವುದನ್ನು ಮನಗಾಣಿಸಿದರು. ಇನ್ನೊಂದು ಕಡೆ ಭಾರತದಲ್ಲಿಯೇ ಮತಾಂತರವಾದವರನ್ನು ವಾಪಸು ಕರೆತರುವ ವ್ಯವಸ್ಥೆಯ ಅಗತ್ಯವನ್ನೂ ಮನಗಂಡರು.

ಈ ಮೂರು ಚಿಂತನೆಗಳಿಗೆ ಉತ್ತರರೂಪವಾಗಿ ಹೊರಹೊಮ್ಮಿದ ವಿಹಿಂಪ ಅನಂತರದ ಕಾಲಘಟ್ಟಗಳಲ್ಲಿ ವಿವಿಧ ಸಂಪ್ರದಾಯಗಳ ಧರ್ಮಾಚಾರ್ಯರನ್ನು ಒಂದು ವೇದಿಕೆಯಲ್ಲಿ ಒಂದುಗೂಡಿಸಿ ಚರ್ಚಿಸುವ ಪ್ರಯತ್ನದಲ್ಲಿ ಸಫ‌ಲವಾಯಿತು.

1972ರಲ್ಲಿ : 1972ರಲ್ಲಿ ವಿಹಿಂಪಕ್ಕೆ ಧರ್ಮಾಚಾರ್ಯರನ್ನು ಒಳ ಗೊಂಡ ಮಾರ್ಗದರ್ಶಕ ಮಂಡಲವನ್ನು ರಚಿಸಿತು. ಹಿಂದೂ ಸಮಾಜಕ್ಕೆ ಅನ್ವಯವಾಗುವ ಸಮಾನ ಆಚಾರ ಸಂಹಿತೆ ರೂಪಿಸುವ ಕೆಲಸವನ್ನು ಮಾಡಿತು. ಪ್ರತಿವರ್ಷ ಮಾರ್ಗದರ್ಶಕ ಮಂಡಲ ಸಭೆ ನಡೆಯಲಿದ್ದು, ಈ ವಿದ್ವತ್‌ ಸಭೆಯಲ್ಲಿ ಮಂಡಿತವಾದ ವಿಚಾರಗಳನ್ನು ಅನುಷ್ಠಾನಗೊಳಿಸಲು ಅಗತ್ಯದ ಕಾರ್ಯಕ್ರಮಗಳನ್ನು ಆಯೋಜಿಸಲು ಧರ್ಮಸಂಸದ್‌ ಎಂಬ ವಿಶೇಷ ಕಾರ್ಯಾಂಗವನ್ನು 1984ರಲ್ಲಿ ಆರಂಭಿಸಲಾಯಿತು.

12ನೇ ಧರ್ಮಸಂಸದ್‌: ಅಗತ್ಯಕ್ಕೆ ತಕ್ಕಂತೆ ಒಂದೆಡೆ ಸೇರಿ ವ್ಯಾಪಕ ಚರ್ಚೆ ನಡೆಸಿ ಮೂಡಿ ಬರುವ ವಿಚಾರಗಳನ್ನು ಜಾರಿಗೊಳಿಸಲು ಹಿಂದೂ ಸಮಾಜಕ್ಕೆ ಧರ್ಮಸಂಸದ್‌ ಆದೇಶ ನೀಡುತ್ತದೆ. ಮಾರ್ಗದರ್ಶಕ ಮಂಡಲಕ್ಕಿಂತ ಹೆಚ್ಚಿನ ಧರ್ಮಾಚಾರ್ಯರು ಇದರಲ್ಲಿ ಪಾಲ್ಗೊಳ್ಳುವ ಕಾರಣ ಪ್ರಾತಿನಿಧಿಕ ಸ್ವರೂಪ ಅಧಿಕವಿರುತ್ತದೆ. ಇದುವರೆಗೆ 11 ಬಾರಿ ಧರ್ಮಸಂಸದ್‌ ಸಭೆ ಸೇರಿದೆ. ಈಗ 12ನೇ ಧರ್ಮಸಂಸದ್‌ ಸಭೆ 1964ರಲ್ಲಿ ವಿಹಿಂಪ ಸ್ಥಾಪನಾ ಸಭೆಯಲ್ಲಿದ್ದ ಪೇಜಾವರ ಶ್ರೀಗಳ ಐದನೆಯ ಪರ್ಯಾಯದಲ್ಲಿ ಸಂಪನ್ನಗೊಳ್ಳುತ್ತಿದೆ. 1969ರಲ್ಲಿ ಉಡುಪಿಯಲ್ಲಿ ಪೇಜಾವರ ಶ್ರೀಗಳ ನೇತೃತ್ವದಲ್ಲಿ ನಡೆದ ಪ್ರಥಮ ವಿಹಿಂಪ ಸಮ್ಮೇಳನ ಪ್ರಾಂತ ಮಟ್ಟದ್ದಾದರೂ ಅದು ಅಸ್ಪೃಶ್ಯತೆ ವಿರುದ್ಧ ತಳೆದ ನಿರ್ಣಯ, ಪೇಜಾವರ ಶ್ರೀಗಳ ಘೋಷಣೆ, ಅನಂತರ ಶ್ರೀಗಳೇ ಸ್ವತಃ ವಿಹಿಂಪ ಜತೆ ದಲಿತರ ಕೇರಿಗಳಿಗೆ ಹೆಜ್ಜೆ ಹಾಕಿದ್ದು ರಾಷ್ಟ್ರ ಮಟ್ಟದಲ್ಲಿ ಪ್ರಭಾವ ಬೀರಿತು.

Advertisement
Advertisement

Udayavani is now on Telegram. Click here to join our channel and stay updated with the latest news.

Next