Advertisement

ಇಷ್ಟಾರ್ಥ ಸಿದ್ಧಿಗೆ ಯಲ್ಲಮ್ಮ ದೇವಿಗೆ ಪತ್ರ ಬರೆದ ಭಕ್ತರು!

02:35 PM Mar 25, 2022 | Team Udayavani |

ಉಗರಗೋಳ: ತಾಯಿ ನನ್ನ ಮಗಳಿಗೆ ನಮಗಿಂತ 100 ಪಟ್ಟು ಅಧಿಕ ಆಸ್ತಿಯಿರುವ ಯುವಕನೊಂದಿಗೆ ಕಲ್ಯಾಣ ಪ್ರಾಪ್ತಿಗೊಳಿಸು, ತಾಯಿ ನನಗೆ ಪಿಎಸ್‌ಐ ಹುದ್ದೆ ಕರುಣಿಸು, ಅಮ್ಮ ನನ್ನ ಬಳಿ ಸಾಲ ಪಡೆದವರು ನಿನ್ನ ದಯೆಯಿಂದ ಮರಳಿಸುವಂತೆ ಮಾಡು, ತಾಯಿ ನಾನು ಇಷ್ಟಪಟ್ಟವರೊಂದಿಗೆ ನನಗೆ ವಿವಾಹವಾಗಿಸು ಮೊದಲಾದ ಪ್ರಾರ್ಥನೆಯ ಪತ್ರಗಳು ಯಲ್ಲಮ್ಮ ದೇವಸ್ಥಾನದ ಹುಂಡಿಯಲ್ಲಿ ಪತ್ತೆಯಾಗಿವೆ.

Advertisement

ಕಳೆದ 2-3 ದಿನಗಳಿಂದ ಸುಕ್ಷೇತ್ರ ಯಲ್ಲಮ್ಮ ದೇವಸ್ಥಾನದಲ್ಲಿ ಹುಂಡಿ ಎಣಿಕೆ ಕಾರ್ಯ ಆರಂಭವಾಗಿದ್ದು, ದೇಶದ ನಾನಾ ಭಾಗಗಳಿಂದ ಯಲ್ಲಮ್ಮನ ಗುಡ್ಡಕ್ಕೆ ಆಗಮಿಸಿದ ಭಕ್ತರು, ತಮ್ಮ ಇಷ್ಟಾರ್ಥಗಳನ್ನು ಈಡೇರಿಸುವಂತೆ ಹಾಳೆಗಳಲ್ಲಿ ಬರೆದು ಹುಂಡಿಯಲ್ಲಿ ಹಾಕಿದ್ದಾರೆ. ಅವುಗಳನ್ನು ಈಡೇರಿಸಿದರೆ ಹರಕೆ ತೀರಿಸುವುದಾಗಿಯೂ ತಿಳಿಸಿದ್ದಾರೆ.

ಹೆಚ್ಚಿನವರು ತಮ್ಮ ಮಗ ಅಥವಾ ಮಗಳಿಗೆ ಉತ್ತಮ ವಧು-ವರನನ್ನು ಕರುಣಿಸುವಂತೆ ಕೇಳಿಕೊಂಡಿರುವ ಪತ್ರಗಳು ಇವೆ. ನಾಲ್ಕು ದಿನಗಳ ಎಣಿಕೆ ವೇಳೆ ಯಲ್ಲಮ್ಮಾ ದೇವಸ್ಥಾನ ಹುಂಡಿಯಲ್ಲಿ 1.30 ಕೋಟಿ ರೂ. ನಗದು ಸಂಗ್ರಹವಾಗಿದೆ ಎಂದು ಯಲ್ಲಮ್ಮಾ ದೇವಸ್ಥಾನ ಪ್ರಭಾರಿ ಕಾರ್ಯನಿರ್ವಾಹಕ ಅಧಿಕಾರಿ ಈಶ್ವರ ಉಳ್ಳಾಗಡ್ಡಿ ತಿಳಿಸಿದರು.

ಗುರುವಾರ ಸುದ್ದಿಗಾರರಿಗೆ ಈ ಕುರಿತು ಮಾಹಿತಿ ನೀಡಿದ ಅವರು, 12.45 ಲಕ್ಷ ರೂ ಮೌಲ್ಯದ ಚಿನ್ನ ಹಾಗೂ 3.08 ಲಕ್ಷದ ಬೆಳ್ಳಿ ಆಭರಣವನ್ನು ಭಕ್ತರು ದೇವಿಗೆ ಕಾಣಿಕೆಯಾಗಿ ನೀಡಿದ್ದಾರೆ.

ಹಲವರು ತಮ್ಮ ಇಷ್ಟಾರ್ಥಗಳನ್ನು ಈಡೇರಿಸುವಂತೆ ದೇವಿಗೆ ಪತ್ರವನ್ನು ಬರೆದು ಹುಂಡಿಯಲ್ಲಿ ಹಾಕಿದ್ದಾರೆ. ಮುಂದಿನ ವಾರ ಇನ್ನೂ ಎರಡು ದಿನಗಳ ಕಾಲ ಹುಂಡಿ ಎಣಿಕೆ ಕಾರ್ಯ ನಡೆಯಲಿದೆ ಎಂದರು.

Advertisement

ದೇವಸ್ಥಾನ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಬಸಯ್ಯ ಹಿರೇಮಠ, ಸದಸ್ಯರಾದ ಕೋಳ್ಳಪ್ಪಗೌಡ ಗಂದಿಗವಾಡ, ವಾಯ್‌ ವಾಯ್‌ ಕಾಳಪ್ಪನ್ನವರ, ಪುಂಡಲೀಕ ಮೇಟಿ, ರಾಜೇಶ್ವರಿ ಚಂದರಗಿ, ಲಕ್ಷ್ಮಿ ಹೂಲಿ, ಬೆಳಗಾವಿ ಸಹಾಯಕ ಧಾರ್ಮಿಕ ಧತ್ತಿ ಇಲಾಖೆ ಬಸವರಾಜ ಜಿರಗಾಳ, ಸವದತ್ತಿ ತಹಶೀಲ್ದಾರ ಪ್ರಶಾಂತ ಪಾಟೀಲ, ಸವದತ್ತಿ ಪುರಸಭೆ ಮುಖ್ಯಾಧಿಕಾರಿ ಪ್ರಕಾಶ ಚನ್ನಪ್ಪನವರ, ದೇವಸ್ಥಾನ ಸಹಾಯಕ ಕಾರ್ಯನಿರ್ವಾಹಕ ಅಧಿಕಾರಿ ಅರವಿಂದ ಮಳಗೆ, ನಾಗರತ್ನಾ ಚೋಳಿನ, ಅಭಿಯಂತರ ಎ ವ್ಹಿ ಮೂಳ್ಳೂರ, ಕಿರಿಯ ಅಭಿಯಂತರ ಡಿ ಆರ್‌ ಚವ್ಹಾಣ, ಎಸ್‌ ಎಲ್‌ ಯಲಿಗಾರ, ಎಎಸ್‌ಆಯ್‌ ಎನ್‌ ವ್ಹಿ ಧಾರವಾಡ, ಪಿ ಎಫ್‌ ಗೋವನಕೊಪ್ಪ ಇದ್ದರು.

Advertisement

Udayavani is now on Telegram. Click here to join our channel and stay updated with the latest news.

Next