Advertisement

ಧಾರವಾಡ: ನವದುರ್ಗೆಯರ ಆರಾಧನೆಗೆ ಭಕ್ತ ಗಣ ಸಜ್ಜು

03:28 PM Sep 25, 2022 | Team Udayavani |

ಧಾರವಾಡ: ಪ್ರತಿವರ್ಷ ಪ್ರತ್ಯೇಕ ದಿನಗಳಲ್ಲಿ ಎರಡು ಜಂಬೂ ಸವಾರಿ ಉತ್ಸವ ನಡೆಯುತ್ತಿತ್ತು. ಈಗ ಎರಡು ಬಣ ಒಗ್ಗೂಡಿ ಒಂದೇ ಉತ್ಸವ ಮಾಡಲು ಅಣಿಯಾಗಿವೆ ಎಂದು ಧಾರವಾಡ ದಸರಾ ಜಂಬೂಸವಾರಿ ಉತ್ಸವ ಸಮಿತಿ ಅಧ್ಯಕ್ಷ ಗುರುರಾಜ ಹುಣಸಿಮರದ ಹೇಳಿದರು.

Advertisement

ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಅ. 4ರಂದು ಜಂಬೂ ಸವಾರಿ ನಡೆಯಲಿದ್ದು, ಅಂದು ಮಧ್ಯಾಹ್ನ 2:30 ಗಂಟೆಗೆ ಗಾಂಧಿನಗರದ ಬಂಡೆಮ್ಮ ದೇವಸ್ಥಾನದಿಂದ ಆರಂಭಗೊಳ್ಳಲಿದೆ. ಮಸಲಗಾರ ಓಣಿ, ಮಾರುತಿ ದೇವಸ್ಥಾನ, ರಾಯರಮಠ, ರಾಮ ಮಂದಿರ, ಹೊಸಯಲ್ಲಾಪುರ, ಗಾಂಧಿಚೌಕ್‌ ಮಾರ್ಗವಾಗಿ ಕಲಾಭವನದಲ್ಲಿ ಸಂಪನ್ನಗೊಳ್ಳಲಿದೆ.

ಐದು ಆನೆ, ಕುದುರೆಗಳು, ಕಲಾತಂಡ, ದಸರಾ ಬೊಂಬೆ ಕುಣಿತ, ಕರಡಿ ಮಜಲು, ಜಗ್ಗಲಿಗೆ ಮೇಳ ಸೇರಿ 25 ಸ್ಥಳೀಯ, 10 ಹೊರಜಿಲ್ಲೆ ಒಟ್ಟು 35 ಕಲಾತಂಡಗಳು ಮೆರಗು ತುಂಬಲಿವೆ. ಅ.5ರಂದು ರಾತ್ರಿ 9:30 ಗಂಟೆಗೆ ದೇವಿಮೂರ್ತಿ ವಿಸರ್ಜನೆ ಜರುಗಲಿದೆ ಎಂದರು.

26ರಿಂದ 5ರವರೆಗೆ ವಿವಿಧ ಕಾರ್ಯಕ್ರಮ: ದಸರಾ ಪ್ರಯುಕ್ತ ಸೆ.26ರಿಂದ ಅ. 5ರವರೆಗೆ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮ ಆಯೋಜಿಸಲಾಗಿದೆ. 26ರಂದು ಸಂಜೆ 6:30 ಗಂಟೆಗೆ ವಿದ್ಯಾಗಿರಿ ಗಣೇಶ ದೇವಸ್ಥಾನದಿಂದ ತರುವ ದುರ್ಗಾದೇವಿ ಮೂರ್ತಿ ಪ್ರತಿಷ್ಠಾಪನೆ, ಮಂಜುಳಾ ಮುಂಜಿ ಮೂರ್ತಿ ಸೇವೆ ನೀಡಲಿದ್ದು, ನಂತರ ಪೂಜೆ, ಪ್ರಸಾದ ವಿತರಣೆ ನಡೆಯಲಿದೆ.

ಸೆ.27ರಿಂದ ಸೆ. 29ರವರೆಗೆ ನಿತ್ಯ ಬೆಳಗ್ಗೆ 8 ಗಂಟೆಗೆ ದೇವಿಮೂರ್ತಿಗೆ ಭಕ್ತರಿಂದ ವಿಶೇಷ ಪೂಜೆ, ಸಂಜೆ 4 ಗಂಟೆಗೆ ವಿವಿಧ ಭಜನಾ ಮಂಡಳ ಸದಸ್ಯರಿಂದ ಭಜನೆ, ದೇವಿಯ ಪುರಾಣ ಪಠಣದ ನಂತರ ಪ್ರಸಾದ ವಿತರಣೆ ನಡೆಯಲಿದೆ.

Advertisement

ಸೆ.30ರಂದು ಬೆಳಗ್ಗೆ 8 ಗಂಟೆಗೆ ಭಕ್ತರಿಂದ ಪೂಜೆ, ಬೆಳಗ್ಗೆ 9 ಗಂಟೆಗೆ ಉತ್ಸವ ಸಮಿತಿ ಸದಸ್ಯರು ಹಾಗೂ ಗಾಂಧಿನಗರ ಯುವಜನ ಸಂಘದಿಂದ ದುರ್ಗಾ ಹೋಮ ನಡೆಯಲಿದೆ. ಸಂಜೆ 4 ಗಂಟೆಗೆ ಸಾಯಿ ಲಲಿತ ಭಜನಾ ಮಂಡಳಿಯಿಂದ ಕುಂಕುಮಾರ್ಚನೆ ಜರುಗಲಿದೆ ಎಂದು ತಿಳಿಸಿದರು.

ಸೆ.30ರಂದು ಯುವ ಜನೋತ್ಸವ-ಮಕ್ಕಳ ವಿವಿಧ ಸ್ಪರ್ಧೆಗೆ ಕವಿಸಂನಲ್ಲಿ ಬೆಳಗ್ಗೆ 10 ಗಂಟೆಗೆ ಚಾಲನೆ ನೀಡಲಾಗುತ್ತದೆ. ಅ.1ರಂದು ಸಂಗೀತ, ಹಾಸ್ಯ, ನೃತ್ಯ ನಡೆಯಲಿದೆ. ಬಾಡಿ ಬಿಲ್ಡರ್ಸ್‌ ಅಸೋಸಿಯೇಶನ್‌, ದಸರಾ ಉತ್ಸವ ಸಮಿತಿ ಸಹಯೋಗದಲ್ಲಿ ಅ.2ರ ಸಂಜೆ 4 ಗಂಟೆಗೆ “ದೇಹದಾರ್ಡ್ಯ ಸ್ಪರ್ಧೆ: ದಸರಾಶ್ರೀ-2020′ ನಡೆಯಲಿದೆ. ವಿಜೇತರಿಗೆ ಪ್ರಥಮ 7,500 ರೂ., ದ್ವಿತೀಯ 3,000 ರೂ. ಬಹುಮಾನ-ಟ್ರೋಫಿ ನೀಡಲಾಗುತ್ತದೆ.

ಇನ್ನು ಯುವಜನೋತ್ಸವ-ಮಕ್ಕಳ ಸ್ಪರ್ಧೆಗೆ ಭಾಗವಹಿಸಲು ಮೊ:7411131983 ಮತ್ತು 8050421364, ಮಹಿಳಾ ಸ್ಪರ್ಧೆಗೆ ಪಾಲ್ಗೊಳ್ಳಲು ಮೊ:9449049380 ಮತ್ತು 9448861500, ದೇಹದಾರ್ಡ್ಯ ಸ್ಪರ್ಧೆಗೆ ಭಾಗವಹಿಸುವವರು ಮೊ:9141028473ಕ್ಕೆ ಸಂಪರ್ಕಿಸಬಹುದು ಎಂದರು.

ಅ.1 ರಿಂದ 3ರವರೆಗೆ ಲಿಂಗಾಯತ ಭವನದಲ್ಲಿ ಮಹಿಳೆಯರಿಗೆ ವಿವಿಧ ಸ್ಪರ್ಧೆ ಏರ್ಪಡಿಸಲಾಗಿದೆ. ಅ.1 ರಂಗೋಲಿ ಮತ್ತು ಅಡುಗೆ ಸ್ಪರ್ಧೆ, ಅ.2 ನಾಡಗೀತೆ ಸಮೂಹ ಗಾಯನ ಮತ್ತು ದೇವಿ ನೃತ್ಯ ಸ್ಪರ್ಧೆ, ಅ.3ರಂದು ಫ್ಯಾಷನ್‌ ಶೋ, ಕಿರು ಆಟೋಟà ಸ್ಪರ್ಧೆ ಜರುಗಲಿದೆ. ಪ್ರತಿದಿನ ಸಂಜೆ 7 ಗಂಟೆಗೆ ಗಾಂಧಿನಗರದ ಈಶ್ವರ ದೇವಸ್ಥಾನದಲ್ಲಿ ಜನಪದ ಗೀತೆ, ಕರೋಕೆ, ಪದ್ಮಶ್ರೀ ಪಂ| ವೆಂಕಟೇಶಕುಮಾರ ಸಂಗೀತೋತ್ಸವ, ಝೀ ಕನ್ನಡ ಕಾಮಿಡಿ ಕಿಲಾಡಿಗಳ ಹಾಸ್ಯೋತ್ಸವ, ನೃತ್ಯ, ವಿವಿಧ ಕಾರ್ಯಕ್ರಮಗಳು ದಸರಾ ಉತ್ಸವಕ್ಕೆ ಮೆರಗು ತುಂಬಲಿದೆ ಎಂದರು.

ಪತ್ರಿಕಾಗೋಷ್ಠಿಯಲ್ಲಿ ಮಂಜುಗೌಡ ಪಾಟೀಲ, ನಾರಾಯಣ ಕೋರ್ಪಡೆ, ವಿಲಾಸ ತಿಬೇಲಿ, ಯಶವಂತರಾವ್‌, ಭೀಮಣ್ಣ ಮಲ್ಲಿಗವಾಡ ಇದ್ದರು.

Advertisement

Udayavani is now on Telegram. Click here to join our channel and stay updated with the latest news.

Next